ದೊಡ್ಡಮಟ್ಟದ ಗಟ್ಟಿಮುಟ್ಟಾದ ಸೈನ್ಯವೊಂದು ಸಂವಿಧಾನ ರಕ್ಷಣೆಗೆ ನಿಂತಿರುವುದನ್ನು ಇಂದು ನಾನು ಇಲ್ಲಿ ಕಾಣುತ್ತಿದ್ದೇನೆ ಎಂದು ಆರ್ಥಿಕ ಚಿಂತಕರಾದ ಪರಕಾಲ ಪ್ರಭಾಕರ್ ಪ್ರಶಂಸೆ ವ್ಯಕ್ತಪಡಿಸಿದರು.
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸಂವಿಧಾನದ ರಕ್ಷಣೆಗೆಂದೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದನ್ನು ನಾನು ಈವರೆಗೆ ನೋಡಿಲ್ಲ. ಆದರೆ, ನೀವು ಇಲ್ಲಿ ಸೇರಿದ್ದೀರಿ, ಅದಕ್ಕಾಗಿ ಇಲ್ಲಿ ಸೇರಿರುವ ಎಲ್ಲರಿಗೂ ನೂರು ನಮಸ್ಕಾರಗಳು” ಎಂದು ಪ್ರಭಾಕರ್ ಸಂತಸ ವ್ಯಕ್ತಪಡಿಸಿದರು.
“ಹಲವಾರು ವರ್ಷಗಳಿಂದ ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಿರುವ ಜನರಿದ್ದಾರೆ, ಸಂವಿಧಾದ ಆಶಯಗಳ ವಿರುದ್ಧ ಕೆಲಸ ಮಾಡಲು ದೇಶದಲ್ಲಿ ಒಂದು ಸೈನ್ಯವೇ ಇದೆ. ಇಷ್ಟು ದಿನ ಸಂವಿಧಾನದ ಮೇಲಿನ ದಾಳಿಯ ವಿರುದ್ಧ ರಕ್ಷಿಸಿಕೊಳ್ಳಲು ಸೈನ್ಯ ಇರಲಿಲ್ಲ ಎಂಬ ಕೊರಗು ಕಾಡುತ್ತಿತ್ತು. ಆದರೆ, ಇಂದು ನಿಮ್ಮೆಲ್ಲರನ್ನೂ ನೋಡಿದ ಮೇಲೆ ಆ ಚಿಂತೆ ಹೊರಟು ಹೋಯಿತು. ಕಾರಣವೇನೆಂದರೆ, ಇಂದು ನಾನು ದೊಡ್ಡದೊಂದು ಗಟ್ಟಿಮುಟ್ಟಾದ ಸೇನೆಯೊಂದು ಸಂವಿಧಾನದ ರಕ್ಷಣೆಗೆ ನಿಂತಿರುವುದನ್ನು ಕಾಣುತ್ತಿದ್ದೇನೆ” ಎಂದರು.
“ಇಲ್ಲಿ ರಾಜಕೀಯ ವ್ಯಕ್ತಿಗಳೂ ಇದ್ದಾರೆ. ಆದರೆ, ಅವರನ್ನು ನಂಬಬೇಡಿ ಎಂದು ಹೇಳುತ್ತಿದ್ದೇನೆ. ಸಾಮಾನ್ಯ ಜನರು, ನಮ್ಮಂತಹವರು ನಿಮ್ಮಂತಹವು, ನಾವು ಎಂಎಲ್ಎ ಮುಖ್ಯಮಂತ್ರಿ ಆಗಬೇಕೆಂದಿಲ್ಲ. ನಮಗೆ ಕೇವಲ ಸಂವಿಧಾನ ಬೇಕಿದೆ. ಏಕೆಂದರೆ, ಸಂವಿಧಾನ ಇಲ್ಲದಿದ್ದರೆ ಒಂದು ಜಾತಿಯಲ್ಲಿ ಹುಟ್ಟಿದ್ದಕ್ಕೆ ನಾನು ಮೇಲಿನವನಾಗಿ, ಬೇರೊಂದು ಜಾತಿಯಲ್ಲಿ ಹುಟ್ಟಿದ್ದಕ್ಕೆ ಇನ್ನೊಬ್ಬರನ್ನು ಕೆಳಗಿನವರಾಗಿ ಮಾಡಲಾಗುತ್ತದೆ” ಎಂದು ಹೇಳಿದರು.
“ಕೇವಲ ಸಂವಿಧಾನ ಮಾತ್ರ ನಮ್ಮನ್ನು ಸಮಾನರನ್ನಾಗಿಸುತ್ತದೆ. ಯಾರು ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೋ ಅವರು ದೇಶವನ್ನು ನೂರು, ಇನ್ನೂರು, ಐನೂರು ವರ್ಷ ಹಿಂದಕ್ಕೊಯ್ಯಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ, ನಾವು ಇಂದು ಸಂವಿಧಾನವನ್ನು ರಕ್ಷಿಸಲಿಕ್ಕಾಗಿ ಇಲ್ಲಿದ್ದೇವೆ, ನಮ್ಮನ್ನು ನಾವು ಒಂದು ಪಡೆಯನ್ನಾಗಿ ರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ” ಎಂದರು.
ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಪಡೆ ಅತ್ಯಗತ್ಯ: ಗುರುಪ್ರಸಾದ್ ಕೆರಗೋಡು