ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಶ್ರೀನಿವಾಸಮೂರ್ತಿ ಕನ್ನಡ ಚಿತ್ರರಂಗದ ನಾಯಕನಟನಾಗಿ ಗುರುತಿಸಿಕೊಳ್ಳಬೇಕಿತ್ತು. ಪ್ರತಿಭೆ ಜೊತೆಗೆ ಅಗತ್ಯವಿದ್ದ ಅದೃಷ್ಟ ಅವರಿಗೆ ಪೂರ್ಣ ಪ್ರಮಾಣದಲ್ಲಿ ಒಲಿಯಲಿಲ್ಲವೇನೋ? ಇದರ ಲಾಭವಾಗಿದ್ದು ಮಾತ್ರ ಪೋಷಕ ಪಾತ್ರಗಳಿಗೆ! ತಾವು ನಿರ್ವಹಿಸಿದ ಪೋಷಕ ಪಾತ್ರಗಳಿಗೆ ಅವರು ಜೀವ ತುಂಬಿದರು. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ದಟ್ಟ ಅನುಭವದ ಹಿನ್ನೆಲೆ ಅವರದು. ಇಂದು ಅವರು 72ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ‘ಕವಿರತ್ನ ಕಾಳಿದಾಸ’ ಚಿತ್ರದ ಚಿತ್ರೀಕರಣ ಸಂದರ್ಭವೊಂದನ್ನು ಅವರಿಲ್ಲಿ ನೆನಪು ಮಾಡಿಕೊಂಡಿದ್ದಾರೆ.
***
- ಶ್ರೀನಿವಾಸಮೂರ್ತಿ
ನಿರೂಪಣೆ: ಶಶಿಧರ ಚಿತ್ರದುರ್ಗ
‘ಕವಿರತ್ನ ಕಾಳಿದಾಸ’ ಚಿತ್ರದ ಸಂದರ್ಭ. ಭೋಜರಾಜನ ಪಾತ್ರಕ್ಕೆ ಪ್ರಮುಖ ನಟರ ಹೆಸರುಗಳ ಪ್ರಸ್ತಾಪವಾದ ನಂತರ ಅಂತಿಮವಾಗಿ ನಾನು ಆಯ್ಕೆಯಾದೆ. ನಾಟಕಗಳಲ್ಲಿ ನನ್ನನ್ನು ನೋಡಿದ್ದ ವರದಪ್ಪನವರು (ರಾಜ್ ಸಹೋದರ) ಪಾತ್ರಕ್ಕೆ ನಾನೇ ಸೂಕ್ತವೆಂದು ನನ್ನ ಆಯ್ಕೆಗೆ ಬಲವಾದ ಶಿಫಾರಸು ಮಾಡಿದ್ದರು. ಮದರಾಸಿನ ಸ್ಟುಡಿಯೋವೊಂದರ ಬಿ ಫ್ಲೋರ್’ನಲ್ಲಿ ‘ಕವಿರತ್ನ ಕಾಳಿದಾಸ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಪಕ್ಕದ ಎಫ್ ಫ್ಲೋರ್’ನಲ್ಲಿ ಎನ್.ಟಿ.ರಾಮರಾವ್ ಅವರ ’ವೈಯಾರಿ ಭಾಮಲು ವಗಲಮಾರಿ ಭರ್ತಲು’ ಶೂಟಿಂಗ್ ನಡೆಯುತ್ತಿತ್ತು.
ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಎನ್ಟಿಆರ್ ಅವರನ್ನು ನೋಡಲು ರಾಜ್ ಅಲ್ಲಿಗೆ ಹೋಗಿದ್ದರು. ನಮ್ಮ ಚಿತ್ರದ ಬಗ್ಗೆ ವಿಚಾರಿಸಿಕೊಂಡ ಎನ್ಟಿಆರ್, ಭೋಜರಾಜನ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ವಿಚಾರಿಸಿದ್ದಾರೆ. ’ಶ್ರೀನಿವಾಸಮೂರ್ತಿ ಅಂತ ಸ್ಟೇಜ್ ಆ್ಯಕ್ಟರ್ರು..’ ಎಂದಿದ್ದಾರೆ ರಾಜ್. ’ಐ ವಾಂಟ್ ಟು ಸೀ ಹಿಮ್’ ಎಂದು ಎನ್ಟಿಆರ್, ರಾಜ್ ಜೊತೆಗೂಡಿ ನಮ್ಮ ಫ್ಲೋರ್’ ಗೆ ಬಂದಿದ್ದಾರೆ. ನಾನು ದರ್ಬಾರ್ ಸೆಟ್ನ ಕಂಬದ ಹಿಂದೆ ಅಡಗಿಕೊಂಡು ಲೆಜೆಂಡರಿ ನಟ ಎನ್ಟಿಆರ್ ಅವರನ್ನು ನೋಡುತ್ತಾ ನಿಂತಿದ್ದೆ. ಅವರಿಗೆ ನನ್ನನ್ನು ಪರಿಚಯಿಸಲು ರಾಜ್ ಕರೆಯುತ್ತಿದ್ದಂತೆ, ಸಂಕೋಚದಿಂದ ಬಂದು ಎನ್ಟಿಆರ್ ಕಾಲಿಗೆರಗಿ ತೆಲುಗಿನಲ್ಲೇ ಮಾತನಾಡಿಸಿದೆ.
’ತೆಲುಗಿನಲ್ಲಿ ಕಾಳಿದಾಸ ಪಾತ್ರವನ್ನು ನಾಗೇಶ್ವರರಾವ್ ಮಾಡಿದ್ದಾರೆ. ಭೋಜರಾಜನ ಪಾತ್ರವನ್ನು ರಂಗರಾಯರು ಮಾಡಿದ್ದರು. ಅವರು ಬಹಳ ದೊಡ್ಡ ನಟ. ಅಂಥ ಪಾತ್ರವನ್ನು ಕನ್ನಡದಲ್ಲಿ ನೀವು ಮಾಡುತ್ತಿದ್ದೀರಿ. ಐ ವಾಂಟೆಂಡ್ ಟು ಕಂಗ್ರಾಚ್ಯುಯೇಟ್ ಯೂ. ಕಮ್, ಲೆಟ್ ಅಸ್ ಹ್ಯಾವ್ ಎ ಸ್ನ್ಯಾಪ್’ ಎಂದು ಎನ್ಟಿಆರ್ ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ. ಕಲಾವಿದನಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೇನಿದೆ ಎಂದುಕೊಳ್ಳುತ್ತಾ ಫೋಟೋಗೆಂದು ಅವರ ಹಿಂದೆ ನಿಂತೆ!
***
ಇದನ್ನೂ ಓದಿ: ಸ್ಯಾಂಡಲ್ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ ‘ಅಮ್ಮ’