ಮುಂಬೈನಲ್ಲಿ ಕುಳಿತು ‘ನಾವ್ ಮನೆಗ್ ಹೋಗೋದಿಲ್ಲ, ನಾವ್ ಮನೆಗೆ ಹೋಗೋದಿಲ್ಲ’ ಅಂತಾ ಮಜಾ ಮಾಡುತ್ತಿರುವ ಶಾಸಕರು ಈಗ ಟಿವಿ ನೋಡಿ ಬೆಚ್ಚಿ ಬಿದ್ದಿರುವುದಂತೂ ಹಂರ್ಡೆಂಡ್ ಪರ್ಸೆಂಟ್ ಪಕ್ಕಾ.
ವಿಶ್ವಾಸಮತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅರ್ಜಿದಾರ ಶಾಸಕರಿಗೆ (ಮುಂಬೈನಲ್ಲಿರುವ ಅತೃಪ್ತರು) ಒತ್ತಾಯ ಮಾಡುವಂತಿಲ್ಲ ಎಂಬ ಸುಪ್ರಿಂಕೋರ್ಟಿನ ಆದೇಶ ಇಟ್ಟುಕೊಂಡು ನಿರಾಳವಾಗಿದ್ದ ಶಾಸಕರಿಗೆ ಸ್ಪೀಕರ್ ರಮೇಶಕುಮಾರ್ ಸಿದ್ದರಾಮಯ್ಯ ಎತ್ತಿದ ಕ್ರಿಯಾಲೋಪದ ಬಗ್ಗೆ ಕೇವಲ ಮೂರು ವಾಕ್ಯಗಳಲ್ಲಿ ನೀಡಿದ ರೂಲಿಂಗ್ ಅತೃಪ್ತ ಶಾಸಕರುಗೆ ಮರ್ಮಾಘಾತ ಉಂಟು ಮಾಡಿದೆ.
ಜೊತೆಗೆ, ‘ಆ ನನ್ಮಕ್ಳು ಅನರ್ಹಗೊಂಡರೆ ಇನ್ನೂ ಒಳ್ಳೇದು’ ಎಂದು ಕಾದಿರುವ ಬಿಜೆಪಿಗೂ ಇದು ಒಳಗೊಳಗೇ ಖುಷಿ ಕೊಟ್ಟಿರಬಹುದು. ಆದರೆ ಈಗ ಕೃಷ್ಣ ಬೈರೆಗೌಡರು ಅತೃಪ್ತ ಶಾಸಕರಾದ ಗೋಕಾಕಿನ ರಮೇಶ ಜಾರಕಿಹೊಳಿ ಮತ್ತು ಹೀರೆಕೆರೂರಿನ ಬಿ.ಸಿ. ಪಾಟೀಲರು ಬಿಜೆಪಿ ಜೊತೆ ಇಟ್ಟುಕೊಂಡಿರುವ ನಂಟನ್ನು ಎತ್ತುವ ಮೂಲಕ, ಇಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ, ಅದರ ಹಿಂದೆ ಬಿಜೆಪಿ ಇದೆ ಎಂಬುದನ್ನು ಮನದಟ್ಟು ಮಾಡಲು ಪ್ರಯತ್ನಿಸುತ್ತಿದ್ದಾರೆ.
ಈ ಹಿಂದೆ ಬಿ.ಸಿ. ಪಾಟೀಲ್ ಮತ್ತು ಬಿಜೆಪಿ ನಾಯಕರ ( ಶ್ರೀರಾಮುಲು ಮತ್ತು ಬಿಜೆಪಿ ರಾಷ್ಟ್ರೀಯ ನಾಯಕ ಮುರಳೀಧರರಾವ್, ಈ ಹೆಸರನ್ನು ಕೃಷ್ಣ ಬೈರೆಗೌಡ ಪ್ರಸ್ತಾಪಿಸಿದೇ ಹೇಳಿದರು) ನಡುವೆ ನಡೆದ ಸಂಭಾಷಣೆಯ ಆಡಿಯೋ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಈ ಚರ್ಚೆ ನಾಳೆಗೂ ಮುಂದಕ್ಕೆ ಹೋಗಬಹುದು ಎಂಬ ಪೂರ್ವ ಸೂಚನೆಯೊಂದನ್ನೂ ಅವರು ನೀಡಿದ್ದಾರೆ. ಬಿಜೆಪಿಯ ವಿಪರೀತ ಆಕ್ಷೇಪದ ನಡುವೆಯೂ ಅವರು ಮತ್ತೆ ಮಾತು ಮುಂದುವರೆಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಬಿ.ಸಿ. ಪಾಟೀಲರಿಗೆ 25 ಕೋಟಿ ರೂ ಮತ್ತು ಸಚಿವ ಸ್ಥಾನ, ಅವರ ಜೊತೆಗಿರುವ ಮೂರು ನಾಲ್ಕು ಶಾಸಕರಿಗೆ 15 ಕೋಟಿ ರೂ ಮತ್ತು ಸಚಿವ ಸ್ಥಾನದ ಆಫರ್ ನೀಡುರುವುದನ್ನು ಕೃಷ್ಣ ಬೈರೇಗೌಡ ಉಲ್ಲೇಖಿಸಿದ್ದಾರೆ. ಹಾಗೆಯೇ 2018ರ ಅಗಸ್ಟ್ ನಿಂದ ಗೋಕಾಕಿನ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಎಂಬುದಕ್ಕೆ ಹಲವು ಉದಾಹರಣೆಗಳನ್ನು ನೀಡಿದ್ದಾರೆ.
ಈಗ ಬೈರೇಗೌಡರ ವಾದ ಮುಂದುವರೆದಿದೆ. ನಂತರ ಎಚ್. ಕೆ. ಪಾಟೀಲ್ ಮತ್ತೆ ಕಾನೂನಾತ್ಮಕ, ಸಂವಿಧಾನಾತ್ಮಕ ವಿಷಯಗಳನ್ನು ಎತ್ತಿ, ಅದರ ನಂತರ ಸಿದ್ದರಾಮಯ್ಯ ಮತ್ತೊಂದು ಶಾಕಿಂಗ್ ಭಾಷಣ ಮಾಡುವ ಸಾಧ್ಯತೆಗಳಿವೆ ಎಂಬ ಮಾಹಿತಿಯಿದೆ.
ಇವತ್ತೇನಾದರೂ ವಿಶ್ವಾಸಮತವನ್ನು ಮುಂದೂಡಲು ಸಾಧ್ಯವಾದರೆ, ಕೆಲ ಅತೃಪ್ತ ಶಾಸಕರು ಮತ್ತೆ ತಮ್ಮ ಗೂಡಿಗೆ ಸೇರಿಕೊಳ್ಳುವುದಂತೂ ಗ್ಯಾರಂಟಿ ಅನಿಸುತ್ತಿದೆ. ಆದರೂ ಟಿವಿ ಚಾನೆಲ್ಗಳಂತೆ ಹೀಗೇ ಆಗುತ್ತದೆ ಎಂದು ನಮ್ಮ ಪೋರ್ಟಲ್ ಹೇಳುವುದಿಲ್ಲ. ಆದರೆ ಒಂದು ಕಾಮನ್ ಸೆನ್ಸ್ ಮತ್ತು ತಜ್ಞರ ಅಭಿಪ್ರಾಯದ ಲೆಕ್ಕದಲ್ಲಿ ನಾವಿದನ್ನೆಲ್ಲ ನಿಮ್ಮ ಮುಂದೆ ಇಡುತ್ತ ಹೋಗುತ್ತಾ ಇದ್ದೇವೆ. ಸಾರ್ವಜನಿಕರ ಧ್ವನಿಯಾಗುವುದು ನಮ್ಮ ಕರ್ತವ್ಯವೂ ಆಗಿದೆ.