ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ನಡೆದ ಮೂರು ವರ್ಗಾವಣೆಗಳು ಮತ್ತು ಎರಡು ನಿವೃತ್ತಿಗಳೊಂದಿಗೆ ದೆಹಲಿ ಹೈಕೋರ್ಟ್ನ ಕಾರ್ಯನಿರತ ನ್ಯಾಯಾಧೀಶರ ಸಂಖ್ಯೆ 36 ಕ್ಕೆ ಇಳಿದಿದ್ದು, ಶೇಕಡ 40 ರಷ್ಟು ಹುದ್ದೆಗಳು ಖಾಲಿಯಾಗಿವೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. 3 ವರ್ಗಾವಣೆ
ಈ ವರ್ಷದ ಕೊನೆಯಲ್ಲಿ ಇನ್ನೂ ಇಬ್ಬರು ನ್ಯಾಯಾಧೀಶರು – ನ್ಯಾಯಮೂರ್ತಿಗಳಾದ ಧರ್ಮೇಶ್ ಶರ್ಮಾ ಮತ್ತು ಶಾಲಿಂದರ್ ಕೌರ್ – ನಿವೃತ್ತರಾಗಲಿದ್ದಾರೆ. ಆ ವೇಳೆ ಕೂಡಾ ಯಾವುದೇ ನೇಮಕಾತಿಗಳನ್ನು ಮಾಡದಿದ್ದರೆ, 60 ಜನರ ಅನುಮೋದಿತ ಬಲವನ್ನು ಹೊಂದಿರುವ ಹೈಕೋರ್ಟ್ನಲ್ಲಿ ಕೇವಲ 34 ನ್ಯಾಯಾಧೀಶರು ಮಾತ್ರ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿ ಹೇಳಿದೆ.
ಮಾರ್ಚ್ನಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ನೋಟುಗಳ ರಾಶಿ ಪತ್ತೆಯಾಗಿದೆ ಎಂಬ ಆರೋಪ ದೆಹಲಿ ಹೈಕೋರ್ಟ್ ಅನ್ನು ಬೆಚ್ಚಿಬೀಳಿಸಿತ್ತು. ಮಾರ್ಚ್ 24 ರಂದು, ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರನ್ನು ಅವರ ಮಾತೃ ಕೋರ್ಟ್ ಆದ ಅಲಹಾಬಾದ್ ಹೈಕೋರ್ಟ್ಗೆ ವಾಪಸ್ ಕಳುಹಿಸಲು ಆದೇಶಿಸಿತು. ಸರ್ಕಾರ ಕೂಡಾ ದೆಹಲಿಯ ಹೈಕೋರ್ಟ್ನ ಮೂರನೇ ಹಿರಿಯ ನ್ಯಾಯಾಧೀಶರಾಗಿದ್ದ ಅವರ ವರ್ಗಾವಣೆಯನ್ನು ತಕ್ಷಣವೇ ಅನುಮೋದಿಸಿತ್ತು.
ಮೂರು ದಿನಗಳ ನಂತರ, ಕೊಲಿಜಿಯಂ ನ್ಯಾಯಮೂರ್ತಿ ಡಿ.ಕೆ. ಶರ್ಮಾ ಅವರನ್ನು ಕಲ್ಕತ್ತಾಗೆ ವರ್ಗಾಯಿಸಲು ಆದೇಶಿಸಿತು. ಈ ವರ್ಗಾವಣೆಗೆ ಯಾವುದೇ ಕಾರಣವನ್ನು ನೀಡದಿದ್ದರೂ, ಕೋಲ್ಕತ್ತಾದ ವಕೀಲರ ಸಂಘಟನೆಗಳು ಈ ಶಿಫಾರಸನ್ನು ಆಕ್ಷೇಪಿಸಿದವು. ಆದಾಗ್ಯೂ, ನ್ಯಾಯಮೂರ್ತಿ ಶರ್ಮಾ ತಮ್ಮ ವಿದಾಯ ಭಾಷಣದಲ್ಲಿ ಈ ಆತಂಕಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, “ನನ್ನ ಸಾಮರ್ಥ್ಯ ಮತ್ತು ಉದ್ದೇಶಗಳಿಗೆ ತಕ್ಕಂತೆ ಸಂಸ್ಥೆಗೆ ಸೇವೆ ಸಲ್ಲಿಸುತ್ತೇನೆ” ಎಂದು ಹೇಳಿದ್ದರು.
ಮಾರ್ಚ್ 28 ರಂದು ಕೇಂದ್ರವು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರನ್ನು ಅಲಹಾಬಾದ್ಗೆ ವಾಪಸ್ ಕಳುಹಿಸಲು ಅನುಮತಿ ನೀಡಿದಾಗ ದೆಹಲಿ ಹೈಕೋರ್ಟ್ನಿಂದ ಮತ್ತೊಂದು ವರ್ಗಾವಣೆ ನಡೆಯಿತು. ಸುಪ್ರೀಂ ಕೋರ್ಟ್ ಕೊಲಿಜಿಯಂ ನವೆಂಬರ್ನಲ್ಲಿ ವರ್ಗಾವಣೆಯನ್ನು ಶಿಫಾರಸು ಮಾಡಿತ್ತು. ಆದಾಗ್ಯೂ, ಸರ್ಕಾರವು ತನ್ನ ನಿರ್ಧಾರ ತೆಗೆದುಕೊಳ್ಳಲು ನಾಲ್ಕು ತಿಂಗಳುಗಳನ್ನು ತೆಗೆದುಕೊಂಡಿತು.
ಮಾರ್ಚ್ನ ಆರಂಭದಲ್ಲಿ, ನ್ಯಾಯಮೂರ್ತಿಗಳಾದ ರೇಖಾ ಪಲ್ಲಿ ಮತ್ತು ಅನೂಪ್ ಕುಮಾರ್ ಮೆಂಡಿರಟ್ಟ ನಿವೃತ್ತರಾಗಿದ್ದರು.
ಕಾನೂನು ಮತ್ತು ನ್ಯಾಯ ಸಚಿವಾಲಯವು ಏಪ್ರಿಲ್ 15 ರವರೆಗೆ ಒದಗಿಸಿದ ಮಾಹಿತಿಯ ಪ್ರಕಾರ, ದೆಹಲಿ ಹೈಕೋರ್ಟ್, 40% ಖಾಲಿ ಹುದ್ದೆಗಳನ್ನು ಹೊಂದಿದ್ದು, ಹೈಕೋರ್ಟ್ನ ಹುದ್ದೆಗಳ ಪರಿಸ್ಥಿತಿ ರಾಷ್ಟ್ರೀಯ ಸರಾಸರಿಗಿಂತ ಕೆಟ್ಟದಾಗಿದೆ. ಒಟ್ಟಾರೆ ದೇಶದ 25 ಹೈಕೋರ್ಟ್ಗಳಲ್ಲಿ 1,122 ನ್ಯಾಯಾಧೀಶರ ಹುದ್ದೆಗಳಿದ್ದು, ಅದರಲ್ಲಿ 357 (31.8%) ಖಾಲಿ ಇದ್ದವು.
ದೆಹಲಿ ಈ ಹೈಕೋರ್ಟ್ಗಳಲ್ಲಿ ನಾಲ್ಕನೇ ಕೆಟ್ಟ ಸ್ಥಾನದಲ್ಲಿದೆ. ಅಲಹಾಬಾದ್ ಹೈಕೋರ್ಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲಿ ನ್ಯಾಯಾಧೀಶರ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ಇದರ ನಂತರ ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಮತ್ತು ಒರಿಸ್ಸಾ ಹೈಕೋರ್ಟ್ 44% ಮತ್ತು 42% ಹುದ್ದೆಗಳೊಂದಿಗೆ ಇವೆ. ರಾಷ್ಟ್ರ ರಾಜಧಾನಿ ದೆಹಲಿ, ಜಾರ್ಖಂಡ್ ಮತ್ತು ಮಣಿಪುರ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದೆ.
ಹೈಕೋರ್ಟ್ ನ್ಯಾಯಾಧೀಶರನ್ನು ಹೇಗೆ ನೇಮಿಸಲಾಗುತ್ತದೆ?
ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ 217 ಮತ್ತು 224 ನೇ ವಿಧಿಗಳ ಅಡಿಯಲ್ಲಿ ಮತ್ತು 1998 ರಲ್ಲಿ ಸಿದ್ಧಪಡಿಸಲಾದ ಕಾರ್ಯವಿಧಾನದ ಜ್ಞಾಪಕ ಪತ್ರದಲ್ಲಿ (MoP) ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ ನೇಮಕ ಮಾಡಲಾಗುತ್ತದೆ. ಅಕ್ಟೋಬರ್ 6, 1993 ರ ಸುಪ್ರೀಂ ಕೋರ್ಟ್ ತೀರ್ಪು, ಎರಡನೇ ನ್ಯಾಯಾಧೀಶರ ಪ್ರಕರಣ ಮತ್ತು ಅಕ್ಟೋಬರ್ 28, 1998 ರ ಮೂರನೇ ನ್ಯಾಯಾಧೀಶರ ಪ್ರಕರಣದ ನಂತರ ಎಂಒಪಿಯನ್ನು ಸಿದ್ಧಪಡಿಸಲಾಗಿತ್ತು.
ಎಂಒಪಿ ಪ್ರಕಾರ, ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಪ್ರಸ್ತಾವನೆಯನ್ನು ಪ್ರಾರಂಭಿಸುವುದು ಸಂಬಂಧಪಟ್ಟ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರ ಬಳಿ ಇರುತ್ತದೆ. ಹೈಕೋರ್ಟ್ ನ್ಯಾಯಾಧೀಶರ ಹುದ್ದೆ ಖಾಲಿಯಾಗುವ ಆರು ತಿಂಗಳ ಮೊದಲು ಭರ್ತಿ ಮಾಡುವ ಪ್ರಸ್ತಾವನೆಯನ್ನು ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ಪ್ರಾರಂಭಿಸಬೇಕಾಗುತ್ತದೆ.
ಆದಾಗ್ಯೂ, ಈ ಕಾಲಮಿತಿಯನ್ನು ಹೈಕೋರ್ಟ್ಗಳು ಹೆಚ್ಚಾಗಿ ಪಾಲಿಸುವುದಿಲ್ಲ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಹೇಳುತ್ತದೆ.
ಹೈಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಎಲ್ಲಾ ಹೆಸರುಗಳನ್ನು ಸರ್ಕಾರದ ಅಭಿಪ್ರಾಯಗಳೊಂದಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಸಲಹೆಗಾಗಿ ಕಳುಹಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಹೆಸರುಗಳ ಬಗ್ಗೆ ಚರ್ಚಿಸುತ್ತದೆ ಮತ್ತು ಸುಪ್ರೀಂ ಕೋರ್ಟ್ನ ಕೊಲಿಜಿಯಂ ಶಿಫಾರಸು ಮಾಡಿದ ವ್ಯಕ್ತಿಗಳನ್ನು ಮಾತ್ರ ನ್ಯಾಯಾಧೀಶರನ್ನಾಗಿ ನೇಮಿಸಲಾಗುತ್ತದೆ. 3 ವರ್ಗಾವಣೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದೇ ಸ್ಮಶಾನ ಬಳಸುವಂತೆ ಹಿಂದೂಗಳಿಗೆ ಭಾಗವತ್ ಕರೆ
ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದೇ ಸ್ಮಶಾನ ಬಳಸುವಂತೆ ಹಿಂದೂಗಳಿಗೆ ಭಾಗವತ್ ಕರೆ

