“ಛೇ ಏನೂ ಮಾಡೋಕೆ ಆಗಲ್ಲ ಬಿಡು ಹೋಗ್ಲಿ” ಈ ವಾಕ್ಯವನ್ನು ತಾತನ ಬಾಯಲ್ಲಿ ಯಾರೂ ಕೇಳಿರಲಿಕ್ಕೆ ಸಾಧ್ಯವಿಲ್ಲ. ಅವರು ಎಂದೂ ನಿರಾಶವಾದಿಯಾಗಿದ್ದವರಲ್ಲ. ತಾತನ ಭೇಟಿ ಮಾಡಿದ ಪ್ರತಿ ಬಾರಿಯೂ ಎನರ್ಜಿ ಡಬಲ್ ಆಗುತ್ತಿದ್ದದ್ದು ನಿಜ. 103 ವಯಸ್ಸನ್ನು ದಾಟಿದ ವ್ಯಕ್ತಿಯೊಬ್ಬರು ಎಂಥ ಕೆಟ್ಟ ಸಂದರ್ಭದಲ್ಲಿಯೂ ನಿರಾಸರಾಗಾದೆ ಸ್ಫೂರ್ತಿಯ ಚಿಲುಮೆಯಂತೆ ಇರುವುದು ನಿಜಕ್ಕೂ ಅಚ್ಚರಿಯೇ ಹೌದು. ಸಂಘಟನೆಯ ಯಾವುದೇ ವ್ಯಕ್ತಿ ಅವರನ್ನು ಭೇಟಿ ಮಾಡಿದಾಗ “ಏನ್ ನಡೀತಿದೆ”? ಆ ಹೋರಾಟ ಏನ್ ಆಗ್ತಿದೆ, ಇದೇನಾಯಿತು, ನೋಡಿ ಹೀಗೆ ಮಾಡಿ, ಇಲ್ಲ ಅಂದ್ರೆ ಹಾಗೆ ಮಾಡಿ ಎನ್ನುತ್ತಾ ಸದಾ ಪರಿಹಾರವನ್ನು ಹೇಳುತ್ತಿದ್ದರೆ ಹೊರತು. ಕೇವಲ ದೂರುತ್ತಾ ಎಂದೂ ಕೂತವರಲ್ಲ.
ಫುಲ್ಟೈಮರ್ಗಳಿಗೆ ಫುಲ್ಖುಷ್
ಸಂಘಟನೆಯಲ್ಲಿ ಫುಲ್ಟೈಮರ್ ಆಗಿ ಕೆಲಸ ಮಾಡುತ್ತಿರುವ ಹಲವರು ಇದ್ದೇವೆ. ನಮ್ಮ ಬಗ್ಗೆ, ಅದೆಷ್ಟೋ ಹಿರಿಯರು, ಸಮಾಜದಲ್ಲಿ ಹೆಸರುವಾಸಿಯಾದವರು, ಸಾಹಿತಿಗಳು, ಈ ಎಲ್ಲರೂ ಸರ್ವೇ ಸಾಮಾನ್ಯವಾಗಿ ಹೇಳುವ ಮಾತೆಂದರೆ – “ಇದೆಲ್ಲಾ ಎಷ್ಟು ದಿನ ಅಂತ ಮಾಡ್ತೀರ, ನಿಮ್ಮ ಜೀವನ ನೀವು ನೋಡ್ಕಳಿ” ಎಂದು. ಆದರೆ ತಾತನ ಜೊತೆ ಮೊದಲ ಬಾರಿಗೆ ಒಂದು ದಿನ ಕಳೆಯುವ ಸಂದರ್ಭ ಬಂದಾಗ “ನೀನು ಏನು ಕೆಲಸ ಮಾಡುತ್ತೀಯಪ್ಪ” ಎಂದು ಕೇಳಿದಾಗ, ಅಂಜಿಕೆಯಿಂದಲೇ ಸಂಘಟನೆಯಲ್ಲೇ ಫುಲ್ಟೈಮರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಉತ್ತರಿಸಿದೆ. ಅದಕ್ಕೆ ಅವರು ಬಹಳ ಖುಷಿ ವ್ಯಕ್ತಪಡಿಸಿ, ಊರು, ವಿದ್ಯಾಭ್ಯಾಸ ಎಲ್ಲವನ್ನೂ ವಿಚಾರಿಸಿಕೊಂಡು ಹಲವಾರು ಸಲಹೆಗಳನ್ನು ನೀಡಿದರು. “ನಿಮ್ಮ ಜೀವನ ನೋಡ್ಕಳಿ” ಎನ್ನುವುದಕ್ಕೆ ವಿರುದ್ಧವಾಗಿ ತಾತ “ಸಂಘಟನೆಯಲ್ಲಿ ಕೆಲಸ ಮಾಡುವುದು ಸಾರ್ಥಕತೆಯ ಜೀವನ ನಡೆಸಿದಂತೆ ಎಂದು ನನ್ನಲ್ಲಿ ಹೆಮ್ಮೆ ಮೂಡುವಂತೆ ಮಾಡಿದವರು. ಅಲ್ಲದೆ ಸಮಾಜ ಸೇವೆ ಮಾಡುವುದೆಂದರೆ ಸ್ವಯಂ ಪ್ರೇರಣೆಯಿಂದ ಬಡತನವನ್ನು ಅಪ್ಪಿಕೊಳ್ಳುವುದು ಎಂದು ಯಾವಾಗಲೂ ಹೇಳುತ್ತಾ ನಮ್ಮನ್ನು ಗಟ್ಟಿ ಮಾಡುತ್ತಿದ್ದರು. ಕರಾಳ ಕೃಷಿ ಕಾಯ್ದೆ ವಿರೋಧಿಸಿ ನವೆಂಬರ್ 2020ರಲ್ಲಿ ಪ್ರತಿಭಟನೆಯ ಮಾಹಿತಿಯನ್ನು ಆಸ್ಪತ್ರೆಯಿಂದಲೇ ಮಾಹಿತಿ ಪಡೆಯುತ್ತಿದ್ದ ಅವರು ಕಾರ್ಯಕರ್ತರ ಬಂಧನವಾಗಿದೆ ಎಂದು ತಿಳಿದಮೇಲೆ “ಹೌದ, ಒಳ್ಳೇದು ಇದರಿಂದ ಹುಡುಗರೆಲ್ಲಾ ಗಟ್ಟಿಯಾಗುತ್ತಾರೆ, ಒಂದೆರೆಡು ಲಾಠಿ ಏಟು ಬಿದ್ದರೆ ರಾಜಕೀಯವಾಗಿ ಮತ್ತಷ್ಟು ಗಟ್ಟಿಯಾಗುತ್ತಾರೆ” ಎಂದು ಹೇಳಿ ನಮ್ಮಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಿದ್ದರು.

ಕಾರ್ಯಕರ್ತರ ಶ್ರಮವನ್ನು ಗುರುತಿಸಿ ಗೌರವಿಸುವ ಅಪರೂಪದ ವ್ಯಕ್ತಿ
ನಾಯಕರು ಎಂದರೆ ಕಾರ್ಯಕರ್ತರಿಗಿಂತ ಭಿನ್ನ ಮತ್ತು ಅವರಿಗಿಂತ ಮೇಲೆ ಎನ್ನುವ ಧೋರಣೆ ಈಗ ಸಾಮಾನ್ಯವಾಗಿರುವುದು ದುರಂತ. ದೊರೆಸ್ವಾಮಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿ ಮನೆಗೆ ಬಂದ ಸಂದರ್ಭದಲ್ಲಿ, ಅವರ ಮನೆಯಲ್ಲಿ ಉಳಿದುಕೊಂಡು ರಾತ್ರಿ ಶೌಚಕ್ಕೆ ಹೋಗುವಾಗ ಸಹಾಯ ಮಾಡಲು ನನಗೆ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ತಿಳಿಸಿದ್ದರು. ಅಂತೆಯೇ ಮೊದಲ ಬಾರಿಗೆ ತಾತನ ಮನೆಗೆ ಹೋದ ದಿನ, ನಾನು ಅನ್ನಭಾಗ್ಯ ಲೋಡಿಂಗ್ ಅನ್ಲೋಡಿಂಗ್ ಕಾರ್ಮಿಕರ ಪ್ರತಿಭಟನೆಯ ಕೆಲಸ ಮುಗಿಸಿಕೊಂಡು ಹೋಗಿದ್ದನ್ನು ತಾತ ತಿಳಿದುಕೊಂಡರು. ರಾತ್ರಿ ಅಲ್ಲಿಯೇ ಮಲಗಿ ಬೆಳಿಗ್ಗೆ ಸ್ವಲ್ಪ ತಡವಾಗಿ ಎದ್ದೆ. ತಾತ ಅದಾಗಲೇ ಪೇಪರ್ ಓದುತ್ತಾ ಕುಳಿತಿದ್ದರು. ನಾನು ಎಚ್ಚರವಾಗಿದ್ದು ಗಮನಿಸಿ “ನೀವು ತುಂಬಾ ಸುಸ್ತಾಗಿದ್ರಿ ಅನಿಸುತ್ತೆ, ಅದಕ್ಕೆ ಎಬ್ಬಿಸಲಿಲ್ಲ. ಮಲಗಿದ ತಕ್ಷಣ ಗೊರಕೆ ಹೊಡಿಯೋಕೆ ಶುರು ಮಾಡಿದ್ರಿ, ಪ್ರತಿಭಟನೆಯ ಕೆಲಸ ಜಾಸ್ತಿ ಇತ್ತು ಅನಿಸುತ್ತೆ, ಅದಕ್ಕೆ ರಾತ್ರಿ ಟಾಯ್ಲೆಟ್ಗೆ ಒಬ್ಬನೇ ಹೋಗಿಬಂದೆ ನಿಮ್ಮನ್ನು ಎಬ್ಬಿಸಲಿಲ್ಲ” ಎಂದರು. ಅವರು ಆ ಹೊತ್ತಲ್ಲಿ ಸಹಾಯವಿಲ್ಲದೆ ಒಬ್ಬರೆ ನಡೆಯುವುದು ಕಷ್ಟದ ಕೆಲಸವಾಗಿತ್ತು. ಆ ಕಾರಣಕ್ಕಾಗಿಯೇ ನಾನು ಅಲ್ಲಿಗೆ ಹೋಗಿದ್ದರೂ ಕೂಡ, ದಣಿದುಕೊಂಡ ಬಂದಿದ್ದಾನೆ ಎಂದು ತಿಳಿದು, ತಾವೇ ನಡೆದು ಶೌಚಕ್ಕೆ ಹೋಗಿಬಂದಿದ್ದರು! ಎಲ್ಲರನ್ನೂ ಅವರು ಅತ್ಯಂತ ಮಾನವೀಯ ದೃಷ್ಟಿಯಿಂದ ನೋಡುತ್ತಿದ್ದರು ಅನ್ನುವುದಕ್ಕೆ ಇದು ಉದಾಹರಣೆ. ಆದರೆ ಅಂದು ರಾತ್ರಿ ನಾನು ಎದ್ದು ಅವರಿಗೆ ಸಹಾಯ ಮಾಡಲಿಲ್ಲ ಎನ್ನುವುದು ಇಂದಿಗೂ ಕಾಡುತ್ತದೆ.
ನಮಗೆಲ್ಲಾ ತಿಳಿದಿರುವಂತೆ ತಾತ ನಿತ್ಯ ಐದು ದಿನಪತ್ರಿಕೆಗಳನ್ನು ತಪ್ಪದೇ ಓದುತ್ತಿದ್ದರು. ಆಸ್ಪತ್ರೆಯಲ್ಲಿ ಇದ್ದಾಗಲೂ ಸಹ ನಮ್ಮಲ್ಲಿ ಕೇಳಿ ಪತ್ರಿಕೆಗಳನ್ನು ತರಿಸಿಕೊಳ್ಳುತ್ತಿದ್ದರು. ಅಲ್ಲದೆ ಅವರೊಡನೆ ಇರುವವರನ್ನು ಒದುವಂತೆ ಒತ್ತಾಯಿಸುತ್ತಿದ್ದರು. ಓದಿನ ನಂತರ ಚರ್ಚೆ ಮಾಡುತ್ತಿದ್ದರು. ಹಲವು ಬಾರಿ ಗಂಭೀರವಾದ ಸೈದ್ಧಾಂತಿಕ ಚರ್ಚೆಯನ್ನು ನಡೆಸುತ್ತಿದ್ದರು. ತಾವು ಒಪ್ಪದ ವಿಚಾರವನ್ನು ಸೂಕ್ಷ್ಮವಾಗಿ ತಿಳಿಸಿ ಅದಕ್ಕೆ ಪರ್ಯಾಯ ವಿಚಾರವನ್ನು ಮುಂದಿಡುತ್ತಿದ್ದರು. ಇಂತಹ ಅಪರೂಪದ ಸ್ಫೂರ್ತಿಯ ಚಿಲುಮೆಯ ಜೊತೆ ಹೋರಾಟಗಳಲ್ಲಿ ಭಾಗಿಯಾಗಿದ್ದು, ಅವರ ಜೊತೆ ಕೆಲವು ದಿನಗಳು ಕಳೆದದ್ದು ನಿಜಕ್ಕು ನಮ್ಮಂಥವರ ಭಾಗ್ಯವೇ ಹೌದು. ಕೊನೆಯವರೆಗೂ ನಿಜಕ್ಕೂ ಸ್ಫೂರ್ತಿಯಿಂದ ಬದುಕಿದ್ದವರು ಅವರು. ಅವರು ಮುದಕರು ಆಗಲೇ ಇಲ್ಲ 103 ವರ್ಷದ ಯುವಕರಾಗಿಯೇ ದೈಹಿಕವಾಗಿ ನಮ್ಮಿಂದ ಅಗಲಿದ್ದಾರೆ. ಬದುಕಿದರೆ ನಿಮ್ಮಂಥೆ ಬದುಕಬೇಕು. ಶ್ರದ್ಧಾಂಜಲಿಗಳು ತಾತ.



ಮೇಡಂ ದಯವಿಟ್ಟು ನನಗೆ ಒಂದು ಮಾಹಿತಿ ಬೇಕಿದೆ ಅದೇನು ಅಂದರೆ. ಇಂದಿರಾ ಗಾಂಧಿ ಅವರ ಕುಟುಂಬದ ಜಾತಿ ಅವರ ಧರ್ಮ ಅವರು ಎಲ್ಲಿಂದ ವಲಸೆ ಬಂದಿದ್ದು. ಅವರಿಗೆ ಗಾಂಧಿ ಅನ್ನೋ ಮನೆತನ ಹೇಗಾಯಿತು ಮತ್ತು ಅವರು ಭಾರತ ದೇಶದ ಸದಸ್ಯತ್ವ ಪಡೆದಿದ್ದು ಹೇಗೆ ದಯಮಾಡಿ ನನಗೆ ಈ ಎಲ್ಲಾ ಮಾಹಿತಿ ಬೇಕಿದೆ ದಯವಿಟ್ಟು ಆದಷ್ಟು ಬೇಗ ನಿಮ್ಮ ಮಾಹಿತಿಗಾಗಿ ಕಾದಿರುತ್ತೇನೆ