ಪ್ರಚಾರದ ಹುಚ್ಚಿಗಾಗಿ ತಹಶೀಲ್ದಾರ್ ಜೊತೆ ಫೋಟೊ ತೆಗೆಸಿಕೊಂಡಿದ್ದ ವ್ಯಕ್ತಿಯೊರ್ವ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ಗೆ ಒಳಗಾಗಿರುವ ಘಟನೆ ಇಂದು ಜರುಗಿದೆ.
ತುಮಕೂರಿನ ಯುವ ರಾಜಕಾರಣಿಗೆ ತಾನು ಫೋಟೋದಲ್ಲಿ ಕಾಣಿಕೊಳ್ಳಬೇಕು, ಎಲ್ಲರ ಜೊತೆ ಗುರುತಿಸಿಕೊಳ್ಳಬೇಕು ಎಂಬ ಆಸೆ. ಅದೇ ಕಾರಣಕ್ಕಾಗಿ ತುಮಕೂರು ಗಡಿಯ ಆಂದ್ರದ ತಹಶೀಲ್ದಾರ್ ಹಿಂದೆ ಸುತ್ತುತ್ತಾ ಅವರು ಹೋದಲೆಲ್ಲಾ ಹೋಗಿ ಮಾಸ್ಕ್ ಮತ್ತು ಆಹಾರ ಕಿಟ್ ಹಂಚುತ್ತಿದ್ದ. ಪತ್ರಿಕೆಯವರು ಬಂದಾಗ ತಹಶೀಲ್ದಾರ್ ಜೊತೆಗೆ ಫೋಟೊ ತೆಗೆಸಿಕೊಳ್ಳುತ್ತಿದ್ದ. ಇದೆಲ್ಲ ಮುಗಿದ ನಂತರ ತುಮಕೂರಿನ ಯಲ್ಲಾಪುರದಲ್ಲಿ ನೆಲೆಸಿದ್ದ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ರೊಳ್ಳೆ ಮಂಡಲ್ ನಲ್ಲಿ ಮಹಿಳಾ ತಹಶೀಲ್ದಾರ್ ಒಬ್ಬರು ಮಾಸ್ಕ್ ಮತ್ತು ಆಹಾರ ಕಿಟ್ ಹಂಚಿದ್ದರು. ನಂತರ ಅವರಲ್ಲಿ ಕೊರೊನಾ ಸೋಂಕು ಇರುವುದು ಪರೀಕ್ಷೆಯಿಂದ ಕಂಡುಬಂದಿತ್ತು. ಹೀಗಾಗಿ ತಹಶೀಲ್ದಾರ್ ಜೊತೆ ಓಡಾಡಿದ್ದ ಎಲ್ಲಾ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಆರಂಭಿಸಿದ್ದರು. ತಹಶೀಲ್ದಾರ್ ಜೊತೆ ಹಲವು ಫೋಟೊಗಳಲಿದ್ದ ಆ ವ್ಯಕ್ತಿಯು ತುಮಕೂರಿನ ಯಲ್ಲಾಪುರದಲ್ಲಿರುವುದು ತಿಳಿದ ಪೋಲಿಸರು ಮತ್ತು ಆರೋಗ್ಯ ಅಧಿಕಾರಿಗಳು ಇಂದು ಬೆಳಿಗ್ಗೆ ಆತನನ್ನು ಪತ್ತೆಹಚ್ಚಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ದಾಖಲಿಸಿದ್ದಾರೆ.
ಆರೋಗ್ಯ ಅಧಿಕಾರಿಗಳು ಈ ಯುವ ರಾಜಕಾರಣಿಯ ಗಂಟಲುದ್ರವ ಮತ್ತು ರಕ್ತದ ಮಾದರಿಯನ್ನು ತೆಗೆದುಕೊಂಡು ಬೆಂಗಳೂರಿನ ವೈರಾಲಜಿ ವಿಭಾಗಕ್ಕೆ ಕಳಿಸಲಾಗಿದ್ದು ಕೊರೊನಾ ವರದಿಗಾಗಿ ನಿರೀಕ್ಷೆ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಇಬ್ಬರು ಪಾಸಿಟಿವ್ ಪ್ರಕರಣಗಳಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಸೋಂಕಿತ ಯುವಕ ಗುಣಮುಖನಾಗಿ ಮನೆ ಸೇರಿದ್ದಾನೆ.
ಇದನ್ನೂ ಓದಿ: ಕೊರೊನ ವೈರಸ್ಗೆ ತುಮಕೂರು ಜಿಲ್ಲೆಯಲ್ಲಿ ಮೊದಲ ಸಾವು
ಮತ್ತೊಬ್ಬ ವ್ಯಕ್ತಿ ಶ್ರೀರಂಗಪಟ್ಟಣದಿಂದ ಗೂಳೂರಿಗೆ ಕಾಲ್ನಡಿಗೆಯಲ್ಲಿ ಬಂದಿದ್ದು, ಅವರನ್ನು ಕೂಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಶ್ರೀರಂಗಪಟ್ಟಣದಲ್ಲಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ತುಮಕೂರಿನಲ್ಲಿ 118 ಮಂದಿಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎನ್ನಲಾಗಿದೆ. ಪಾವಗಡ, ಶಿರಾ ಮತ್ತು ಮಧುಗಿರಿ ತಾಲೂಕುಗಳ ಮೇಲೆ ತೀವ್ರ ನಿಗಾ ಇಡಲಾಗಿದೆ.
ವಿಡಿಯೊ ನೋಡಿ: ನಿಮಗೆ ಕೊರೊನಾ ಸೋಂಕು ಬಂದರೆ ಏನು ಮಾಡಬೇಕು?