ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಹಿರಿಯ ವಕೀಲ ಉಜ್ವಲ್ ನಿಕಮ್, ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್ ಮತ್ತು ರಾಜಕೀಯ ದಾಳಿಯಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಕೇರಳ ಬಿಜೆಪಿ ನಾಯಕ ಸಿ. ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
ಇದರೊಂದಿಗೆ, ರಾಜ್ಯಸಭೆಯ ನಾಮನಿರ್ದೇಶಿತ ವರ್ಗದ ಎಲ್ಲಾ 12 ಸ್ಥಾನಗಳು ಭರ್ತಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ನಾಲ್ಕು ಸ್ಥಾನಗಳು ಮತ್ತು ಹರಿಯಾಣದ ಒಂದು ಸ್ಥಾನ ಖಾಲಿಯಿದೆ. 240 ಸದಸ್ಯರ ಸದನದಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ 135 ಸಂಸದರ ಬೆಂಬಲವನ್ನು ಹೊಂದಿದೆ, ಇದರಲ್ಲಿ ಸಾಮಾನ್ಯವಾಗಿ ಸರ್ಕಾರವನ್ನು ಬೆಂಬಲಿಸುವ ಎಲ್ಲಾ 12 ನಾಮನಿರ್ದೇಶಿತ ಸಂಸದರು ಮತ್ತು ಒಬ್ಬ ಸ್ವತಂತ್ರ ಸದಸ್ಯ ಸೇರಿದ್ದಾರೆ.
ರಾಜ್ಯಸಭೆಗೆ ಹೊಸದಾಗಿ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡುವ ಬಗ್ಗೆ ಗೃಹ ಸಚಿವಾಲಯ (ಎಂಎಚ್ಎ) ಶನಿವಾರ ರಾತ್ರಿ ಅಧಿಸೂಚನೆ ಹೊರಡಿಸಿದೆ.
ವಿದೇಶಾಂಗ ವ್ಯವಹಾರಗಳಲ್ಲಿ ಪರಿಣತಿ ಹೊಂದಿದ್ದಕ್ಕಾಗಿ ಶ್ರಿಂಗ್ಲಾ ಅವರನ್ನು ರಾಜ್ಯಸಭೆಗೆ ಕರೆತರಲಾಗಿದೆ. ವಿದೇಶಾಂಗ ಕಾರ್ಯದರ್ಶಿಯಾಗುವ ಮೊದಲು ಅಮೆರಿಕದ ಮಾಜಿ ರಾಯಭಾರಿಯಾಗಿದ್ದ ಶ್ರಿಂಗ್ಲಾ, 2023ರಲ್ಲಿ ಭಾರತದ ಜಿ 20 ಅಧ್ಯಕ್ಷತೆಯ ಮುಖ್ಯ ಸಂಯೋಜಕರಾಗಿದ್ದರು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಇತ್ತೀಚಿನ ಜಾಗತಿಕ ಸಂಪರ್ಕದ ಭಾಗವಾಗಿದ್ದರು.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಗೂ ಮುನ್ನ, ಶ್ರಿಂಗ್ಲಾ ಅವರು ರಾಜಕೀಯಕ್ಕೆ ಧುಮುಕುತ್ತಾರೆ ಮತ್ತು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಿಂದ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಊಹಾಪೋಹಗಳಿದ್ದವು. 2023ರ ಕೊನೆಯಲ್ಲಿ ಮತ್ತು 2024ರ ಆರಂಭದಲ್ಲಿ, ಅವರು ತಮ್ಮ ‘ಡಾರ್ಜಿಲಿಂಗ್ ವೆಲ್ಫೇರ್ ಸೊಸೈಟಿ’ ಮೂಲಕ ಆ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಹೆಸರುವಾಸಿಯಾಗಿದ್ದ ಹಿರಿಯ ವಕೀಲ ಉಜ್ವಲ್ ನಿಕಮ್, 2016ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್ನ ವರ್ಷಾ ಗಾಯಕ್ವಾಡ್ ವಿರುದ್ಧ ಸೋಲನುಭವಿಸಿದ್ದರು.
ಗುಲ್ಶನ್ ಕುಮಾರ್ ಮತ್ತು ಪ್ರಮೋದ್ ಮಹಾಜನ್ ಅವರ ಕೊಲೆ ಪ್ರಕರಣಗಳಲ್ಲಿ, 1993ರ ಮುಂಬೈ ಸರಣಿ ಸ್ಫೋಟಗಳು ಮತ್ತು 2003 ರ ಗೇಟ್ವೇ ಆಫ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು.
ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್ ದೆಹಲಿಯ ಗಾರ್ಗಿ ಕಾಲೇಜಿನ ಮಾಜಿ ಅಸೋಸಿಯೇಟ್ ಪ್ರೊಫೆಸರ್. ಇವರು 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಭಾಜನರಾಗಿದ್ದಾರೆ. ಡಾ. ಜೈನ್ ಒಬ್ಬರು ಪ್ರಸಿದ್ಧ ರಾಜಕೀಯ ತಜ್ಞೆಯೂ ಹೌದು. ಟೈಮ್ಸ್ ಆಫ್ ಇಂಡಿಯಾದ ಮಾಜಿ ಸಂಪಾದಕ ಗಿರಿಲಾಲ್ ಜೈನ್ ಅವರ ಪುತ್ರಿಯಾಗಿರುವ ಜೈನ್ ಅವರನ್ನು, 2014ರಲ್ಲಿ ನರೇಂದ್ರ ಮೋದಿ ಸರ್ಕಾರವು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಗೆ ನಾಮನಿರ್ದೇಶನ ಮಾಡಿತ್ತು.
ಶಿಕ್ಷಕರಾಗಿರುವ ಸದಾನಂದನ್ ಮಾಸ್ಟರ್, ಕೇರಳದಲ್ಲಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. 1994ರಲ್ಲಿ ಸಿಪಿಐ(ಎಂ) ಕಾರ್ಯಕರ್ತರ ದಾಳಿಯಲ್ಲಿ ಇವರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಂಘ ಪರಿವಾರದ ಹಿರಿಯ ನಾಯಕರು ನಡೆಸುತ್ತಿರುವ ಬಲಪಂಥೀಯ ಚಿಂತಕರ ಚಾವಡಿಯಾದ ‘ಭಾರತೀಯ ವಿಚಾರ ಕೇಂದ್ರ’ದೊಂದಿಗೆ ಸದಾನಂದನ್ ಮಾಸ್ಟರ್ ನಿಕಟ ಸಂಬಂಧ ಹೊಂದಿದ್ದಾರೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುವ ಒಂದು ವಾರ ಮೊದಲು ಆರು ವರ್ಷಗಳ ಅವಧಿಗೆ ಹೊಸ ಸದಸ್ಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಈ ಸಂಸದರು ನಾಮನಿರ್ದೇಶನಗೊಂಡ ಆರು ತಿಂಗಳೊಳಗೆ ಒಂದು ಪಕ್ಷವನ್ನು ಸೇರಬಹುದು.
ಪ್ರಸ್ತುತ ಎಂಟು ನಾಮನಿರ್ದೇಶಿತ ಸಂಸದರಲ್ಲಿ, ಗುಲಾಮ್ ಅಲಿ (ಸೆಪ್ಟೆಂಬರ್ 2028 ರವರೆಗೆ ಅಧಿಕಾರಾವಧಿ) ಮತ್ತು ಸತ್ನಮ್ ಸಿಂಗ್ ಸಂಧು (ಜನವರಿ 2030) ಬಿಜೆಪಿಗೆ ಸೇರಿದ್ದಾರೆ. ಮುಂದಿನ ವರ್ಷ ಮಾರ್ಚ್ನಲ್ಲಿ ನ್ಯಾಯಮೂರ್ತಿ (ನಿವೃತ್ತ) ರಂಜನ್ ಗೊಗೊಯ್ ಅವರ ಅಧಿಕಾರಾವಧಿ ಮುಗಿದಾಗ ಒಂದು ನಾಮನಿರ್ದೇಶಿತ ಸ್ಥಾನ ಖಾಲಿಯಾಗಲಿದೆ.
ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ, ವಿಜಯೇಂದ್ರ ಪ್ರಸಾದ್, ಪಿಟಿ ಉಷಾ (ಜುಲೈ 2028 ರವರೆಗೆ), ಮತ್ತು ಸುಧಾ ಮೂರ್ತಿ (ಮಾರ್ಚ್ 2030 ರವರೆಗೆ ಅವಧಿ) ಇತರ ನಾಮನಿರ್ದೇಶಿತ ಸದಸ್ಯರು.


