- Advertisement -
- Advertisement -
ಕಳೆದ ಎರಡು ತಿಂಗಳಿನಿಂದ ಕೊರೊನಾ ಎರಡನೆ ಅಲೆಯ ಉಲ್ಬಣಕ್ಕೆ ಸಿಲುಕಿಕೊಂಡಿದ್ದ ದೇಶದ ಹಲವಾರು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ಇದೀಗ ಈ ರಾಜ್ಯಗಳು ಸೋಂಕಿನ ಕಾರಣಕ್ಕೆ ಹೇರಿದ್ದ ಲಾಕ್ಡೌನ್ ಅನ್ನು ತೆರವುಗೊಳಿಸಿ ಅನ್ಲಾಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.
ಈ ಬಗ್ಗೆ 10 ಪಾಯಿಂಟ್ಗಳು ಇಲ್ಲಿದೆ
- ದೆಹಲಿಯಲ್ಲಿ, ಮಾಲ್ಗಳು, ಮಾರುಕಟ್ಟೆಗಳು, ಮಾರುಕಟ್ಟೆ ಕಾಂಪ್ಲೆಕ್ಸ್ಗಳು, ಸ್ವತಂತ್ರವಾಗಿರುವ ಅಂಗಡಿಗಳು ಮತ್ತು ಅಕ್ಕಪಕ್ಕ ಇರುವ ಅಂಗಡಿಗಳು ಬೆಸ-ಸಮ ಆಧಾರದಲ್ಲಿ ಹಾಗೂ ಸಮಯದ ನಿರ್ಬಂಧಗಳೊಂದಿಗೆ ತೆರೆಯಲ್ಪಡುತ್ತವೆ. ಮೇ 10 ರಿಂದ ಸ್ಥಗಿತಗೊಂಡಿದ್ದ ದೆಹಲಿ ಮೆಟ್ರೋ ಕೂಡಾ 50% ದಷ್ಟು ಸಾಮರ್ಥ್ಯದೊಂದಿಗೆ ಸೇವೆಗಳನ್ನು ಪುನರಾರಂಭಿಸಲಿದೆ. ಖಾಸಗಿ ಕಚೇರಿಗಳಿಗೆ 50% ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
- ಸೋಂಕಿನ ಪ್ರಮಾಣ ಮತ್ತು ಆಸ್ಪತ್ರೆಯ ಹಾಸಿಗೆಗೆ ಅನುಗುಣವಾಗಿ ನಿರ್ಬಂಧಗಳನ್ನು ತೆರವುಗೊಳಿಸುವ ಐದು ಹಂತದ ಯೋಜನೆಯನ್ನು ಮಹಾರಾಷ್ಟ್ರ ಹಮ್ಮಿಕೊಂಡಿದೆ.
- ಮುಂಬೈಯಲ್ಲಿ, ರೆಸ್ಟೋರೆಂಟ್ಗಳು, ಅತ್ಯಗತ್ಯವಲ್ಲದ(ನಾನ್-ಎಷೆನ್ಸಿಯಲ್) ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಇಂದು ತೆರೆಯಲಾಗುತ್ತದೆ. ಆದರೆ ಮಾಲ್ಗಳು, ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ಗಳ ಮೇಲಿನ ನಿರ್ಬಂಧ ಹಾಗೆ ಇದೆ. ನಗರದ ಸ್ಥಳೀಯ ರೈಲುಗಳಿಗೆ ಅಗತ್ಯ ಕಾರ್ಮಿಕರನ್ನು ಮಾತ್ರ ಸಾಗಿಸಲು ಅನುಮತಿ ನೀಡಲಾಗಿದೆ. ಬಸ್ಸುಗಳಿಗೆ ತಮ್ಮ ಸೀಟುಗಳ ಪೂರ್ಣ ಸಾಮರ್ಥ್ಯದೊಂದಿಗೆ ಚಲಾಯಿಸಲು ಅನುಮತಿಸಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಕರು ನಿಂತು ಪ್ರಯಾಣಿಸುವಂತೆ ಇಲ್ಲ.
ಇದನ್ನೂ ಓದಿ: ರೈತರಿಂದ ಕ್ರಾಂತಿ ದಿವಸ್ ಆಚರಣೆ; ಕೃಷಿ ಕಾನೂನಿನ ಪ್ರತಿ ಸುಡುವ ಮೂಲಕ ದೇಶಾದ್ಯಂತ ಪ್ರತಿಭಟನೆ
- ಉತ್ತರ ಪ್ರದೇಶ ಸರ್ಕಾರವು ವಾರಣಸಿ, ಮುಜಫರ್ನಗರ, ಗೌತಮ್ ಬುದ್ಧ ನಗರ ಮತ್ತು ಗಾಜಿಯಾಬಾದ್ ಜಿಲ್ಲೆಗಳಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 600 ಕ್ಕಿಂತ ಕಡಿಮೆಯಿರುವ ಕಂಟೈನ್ಮೆಂಟ್ ವಲಯಗಳ ಹೊರಗಿನ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಇಂದಿನಿಂದ ವಾರದಲ್ಲಿ ಐದು ದಿನಗಳವರೆಗೆ ತೆರೆಯಲು ಅನುಮತಿ ನೀಡಿದೆ. ಈ ಲಾಕ್ಡೌನ್ ತೆರವು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರವಾಗಿದೆ. ಆದಾಗ್ಯೂ, ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂಗಳು ಮುಂದುವರಿಯಲಿವೆ.
- ಹರಿಯಾಣದಲ್ಲಿ ಜೂನ್ 14 ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದ್ದರೂ, ಹಲವಾರು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ ಮಾಲ್ಗಳನ್ನು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ತೆರೆಯಲು ಅನುಮತಿಸಲಾಗಿದೆ. ಒಂದು ಸಮಯದಲ್ಲಿ ಗರಿಷ್ಠ 21 ಜನರಿಗೆ ಧಾರ್ಮಿಕ ಸ್ಥಳಗಳಲ್ಲಿ ಸೇರಲು ಅನುಮತಿ ನೀಡಲಾಗಿದೆ. ಕಾರ್ಪೊರೇಟ್ ಕಚೇರಿಗಳು 50% ಹಾಜರಾತಿಯೊಂದಿಗೆ ತೆರೆಯಬಹುದು. ರೆಸ್ಟೋರೆಂಟ್ಗಳು, ಬಾರ್ಗಳು ಮತ್ತು ಕ್ಲಬ್ಗಳನ್ನು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಕೊರೊನಾ ಮಾರ್ಗಸೂಚಿಗಳೊಂದಿಗೆ 50% ಆಸನ ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿಸಲಾಗಿದೆ.
- ಸಿಕ್ಕಿಂನಲ್ಲಿ, ದಿನಸಿ ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಅಂಗಡಿಗಳು ಮತ್ತು ಹಾರ್ಡ್ವೇರ್ ಅಂಗಡಿಗಳು ಇಂದಿನಿಂದ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ತೆರೆದಿಡಬಹುದು. ಆದಾಗ್ಯೂ, ರಾಜ್ಯವ್ಯಾಪಿ ಲಾಕ್ಡೌನ್ ಅನ್ನು ಜೂನ್ 14 ರವರೆಗೆ ವಿಸ್ತರಿಸಲಾಗಿದೆ.
- ಜಮ್ಮು ಕಾಶ್ಮೀರ ಆಡಳಿತವು ಲಾಕ್ಡೌನ್ ಅನ್ನು ಜೂನ್ 15 ರವರೆಗೆ ವಿಸ್ತರಿಸಿದೆ. ಆದಾಗ್ಯೂ, ಸುಮಾರು ಒಂದು ತಿಂಗಳ ಲಾಕ್ಡೌನ್ ನಂತರ ಜಮ್ಮು ತನ್ನ ಅನ್ಲಾಕ್ ಪ್ರಕ್ರಿಯೆಯನ್ನು ಹಂತಹಂತವಾಗಿ ಭಾನುವಾರದಿಂದ ಪ್ರಾರಂಭಿಸಿದೆ.
ಇದನ್ನೂ ಓದಿ: ಕೇರಳ ಮೂಲದ ನರ್ಸ್ಗಳನ್ನು ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದ ದೆಹಲಿ ಆಸ್ಪತ್ರೆ
- ತಮಿಳುನಾಡು ತನ್ನ ಲಾಕ್ಡೌನ್ ಅನ್ನು ಇನ್ನೊಂದು ವಾರ ವಿಸ್ತರಿಸಿದೆ. ಕೊಯಮತ್ತೂರು ಸೇರಿದಂತೆ 11 ಹಾಟ್ಸ್ಪಾಟ್ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಭಾಗಗಳಲ್ಲಿ, ಸ್ವತಂತ್ರ ದಿನಸಿ ಸರಬರಾಜು ಮಳಿಗೆಗಳನ್ನು ಇಂದು ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಮನೆಗೆಲಸದ ಸಿಬ್ಬಂದಿಗಳು ಅಪಾರ್ಟ್ಮೆಂಟ್ ಮತ್ತು ಕಚೇರಿ ಕಾಂಪ್ಲೆಕ್ಸ್ಗಳಿಗೆ ಕೆಲಸಕ್ಕೆ ತೆರಳಬಹುದಾಗಿದೆಯಾದರೂ ಇದಕ್ಕೆ ಇ-ನೋಂದಣಿ ಅಗತ್ಯವಿದೆ. ಈ ಪಾಸ್ ಇರುವ ಇಬ್ಬರು ಪ್ರಯಾಣಿಕರನ್ನು ಹೊಂದಿರುವ ಆಟೊಗಳು ಮತ್ತು ಮೂವರೊಂದಿಗೆ ಕ್ಯಾಬ್ಗಳಿಗೆ ಕೂಡಾ ಅನುಮತಿಸಲಾಗಿದೆ.
- ಕೊರೊನಾ ಪಾಸಿಟಿವಿಟಿ ಪ್ರಮಾಣವು 5% ಕ್ಕಿಂತ ಕಡಿಮೆಯಾದ ನಂತರ ಮಾತ್ರ ನಿರ್ಬಂಧಗಳನ್ನು ಸರಾಗಗೊಳಿಸುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ ತನ್ನ ಲಾಕ್ಡೌನ್ ಅನ್ನು ಇತ್ತೀಚೆಗೆ ಜೂನ್ 14 ರವರೆಗೆ ವಿಸ್ತರಿಸಿದೆ. ಆದರೆ ಯಾವುದೆ ವಿನಾಯಿಯನ್ನು ನೀಡಿಲ್ಲ.
- ದೇಶದಲ್ಲಿ ಕಳೆದ ಎರಡು ತಿಂಗಳ ನಂತರ 1 ಲಕ್ಷಕ್ಕಿಂತಲೂ ಕಡಿಮೆ ದೈನಂದಿನ ಕೊರೊನಾ ಪ್ರಕರಣಗಳು ವರದಿಯಾಗಿದೆ. ಹೊಸ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಾ ಇರುವುದರಿಂದ ದೇಶಾದ್ಯಂತ ಲಾಕ್ಡೌನ್ ತೆರವುಗೊಳಿಸುವ ಭರವಸೆಯನ್ನು ಹುಟ್ಟುಹಾಕಿದೆ. ಇದರಿಂದಾಗಿ ಷೇರುಗಳು ಇಂದು ಬೆಳಿಗ್ಗೆ ಹೆಚ್ಚಿನ ಮಟ್ಟದಲ್ಲಿ ಏರಿದ್ದು, ಇದು ದಾಖಲೆಯ ಗರಿಷ್ಠ ಮಟ್ಟದಲ್ಲಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಪಿಜ್ಜಾ, ಬರ್ಗರ್, ಸ್ಮಾರ್ಟ್ಫೋನ್ ಮನೆ ಬಾಗಿಲಿಗೆ ಬರುವುದಾದರೇ, ಪಡಿತರವೇಕೆ ಬೇಡ? ಕೇಂದ್ರಕ್ಕೆ ಕೇಜ್ರಿವಾಲ್ ಪ್ರಶ್ನೆ