ಉತ್ತರ ಪ್ರದೇಶ ಭಯೋತ್ಪಾದನಾ ವಿರೋಧಿ ದಳ(ಎಟಿಎಸ್)ವು ಸೆಪ್ಟೆಂಬರ್ 21 ರ ಮಂಗಳವಾರದಂದು, ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಕಲೀಂ ಸಿದ್ದಿಕಿ ಅವರನ್ನು ಮೀರತ್ನಿಂದ ಧಾರ್ಮಿಕ ಮತಾಂತರ ಆರೋಪದ ಮೇಲೆ ಬಂಧಿಸಲಾಗಿದೆ. ಮೌಲಾನಾ ಅವರು ಗ್ಲೋಬಲ್ ಪೀಸ್ ಸೆಂಟರ್ ಮತ್ತು ಜಮೀಯತ್-ಎ-ವಲಿಯುಲ್ಲಾ ಇದರ ಅಧ್ಯಕ್ಷರೂ ಆಗಿದ್ದಾರೆ.
“ಭಾರತದ ಅತಿದೊಡ್ಡ ಧಾರ್ಮಿಕ ಮತಾಂತರ ಗುಂಪಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಎಟಿಎಸ್, ಮುಜಫರ್ನಗರದ ನಿವಾಸಿ ಮೌಲಾನಾ ಕಲೀಂ ಸಿದ್ದಿಕಿ ಅವರನ್ನು ಬಂಧಿಸಿದೆ. ಅವರು ಜಮಿಯಾ ಇಮಾಮ್ ವಲಿಯುಲ್ಲಾ ಟ್ರಸ್ಟ್ ನಡೆಸುತ್ತಿದ್ದರು. ಈ ಟ್ರಸ್ಟ್ ವಿದೇಶಗಳಿಂದ ಧನಸಹಾಯ ಪಡೆದು ಹಲವಾರು ಮದರಸಾಗಳಿಗೆ ಧನಸಹಾಯ ನೀಡುತ್ತಿತ್ತು” ಎಂದು ಪೊಲೀಸರು ಹೇಳಿದ್ದಾರೆಂದು ANI ವರದಿ ಮಾಡಿದೆ.
ಮೌಲಾನಾ ಅವರು ಮಂಗಳವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮುಜಾಫರ್ ನಗರಕ್ಕೆ ಹಿಂದಿರುಗುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತೆಯ ಭೇಟಿ – ಮುಸ್ಲಿಂ ಯುವಕನನ್ನು ಥಳಿಸಿದ ಬಜರಂಗದಳ ಕಾರ್ಯಕರ್ತರು
“ಮೌಲಾನಾ ಕಲೀಂ ಸಿದ್ದಿಕಿ ಅವರ ಟ್ರಸ್ಟ್ ಬಹರೇನ್ನಿಂದ ರೂ 1.5 (ಕೋಟಿ) ಸೇರಿದಂತೆ ಒಟ್ಟು 3 ಕೋಟಿ ವಿದೇಶಿ ಧನಸಹಾಯ ಪಡೆದಿದೆ. ಈ ಪ್ರಕರಣದ ತನಿಖೆಗಾಗಿ ಎಟಿಎಸ್ನ ಆರು ತಂಡಗಳನ್ನು ರಚಿಸಲಾಗಿದೆ” ಎಂದು ಉತ್ತರ ಪ್ರದೇಶ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಉತ್ತರ ಪ್ರದೇಶದ ಎಟಿಎಸ್ ಇನ್ಸ್ಪೆಕ್ಟರ್ ಜನರಲ್ ಜಿಕೆ ಗೋಸ್ವಾಮಿ ಅವರು, ಈ ಗುಂಪು ಭಾರತದಲ್ಲಿ ಸುಮಾರು 1000 ಜನರನ್ನು ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ, ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ಬಂಧನವನ್ನು ರಾಜಕೀಯ ನಡೆ ಎಂದು ಕರೆದಿದ್ದಾರೆ.
“ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಕಲೀಂ ಸಿದ್ದಿಕಿ ಸಾಹಬ್ ಅವರನ್ನು ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಮುಂಚಿತವಾಗಿ ಬಂಧಿಸಲಾಗಿದೆ. ಮುಸ್ಲಿಮರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಈ ವಿಷಯಗಳಲ್ಲಿ ಜಾತ್ಯತೀತ ಪಕ್ಷಗಳ ಮೌನವು ಬಿಜೆಪಿಗೆ ಹೆಚ್ಚಿನ ಬಲವನ್ನು ನೀಡುತ್ತದೆ. ಬಿಜೆಪಿ ಗೆಲ್ಲಲು ಇನ್ನು ಎಷ್ಟು ಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು – ಮುಸ್ಲಿಂ ಪತ್ರಕರ್ತನಿಗೆ ಥಳಿಸಿದ ಹಿಂದೂ ಜಾಗರಣೆ ವೇದಿಕೆಯ ಕಾರ್ಯಕರ್ತರು


