ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಬಂದಿಸಲ್ಪಟ್ಟಿದ್ದ ಎಲ್ಲರನ್ನೂ ಕಡೂಲೇ ಬಿಡುಗಡೆ ಮಾಡಬೇಕು ಮತ್ತು ಇಂಟರ್ ನೆಟ್ಸೇವೆಗಳನ್ನು ಆರಂಭಿಸಬೇಕು ಎಂದು ಅಮೆರಿಕಾದ ರಾಜತಾಂತ್ರಿಕ ಅಧಿಕಾರಿಗಳು ಆಗ್ರಹಿಸಿದ್ದಾರೆ.
ರೈಸಿನಾ ಮಾತುಕತೆ ನಡೆಸಲು ಕೆಲವೇ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕಾ ಅಧಿಕಾರಿಗಳು ನಾವು ಭಾರತಕ್ಕೆ ಭೇಟಿ ನೀಡುವ ಮೊದಲು ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಹೇಳಿದ್ದಾರೆ.
ಸಹಾಯಕ ರಾಜ್ಯ ಕಾರ್ಯದರ್ಶಿ ಅಲೀಸ್ ವೆಲ್ಸ್ ಮಾತನಾಡಿ, ಜಮ್ಮುಕಾಶ್ಮೀರದ ಕುರಿತು ಕೇಂದ್ರ ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕು. ನಾವು ಬರುವ ಮೊದಲು ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಇಂಟರೆ ನೆಟ್ ಸೇವೆ ಒದಗಿಸಬೇಕು. ಬಂಧಿತರ ಮೇಲೆ ಯಾವುದೇ ಆಪಾದನೆ ಹೊರಿಸದೆ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ.
ಅಮೆರಿಕಾ ಅಧಿಕಾರಿಗಳು ಹೇಳಿಕೆ ನೀಡುವ ಒಂದು ದಿನ ಮೊದಲೇ ಜಮ್ಮುಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆ ಆರಂಭಿಸಲಾಗಿದ್ದು ಸಾಮಾಜಿಕ ಜಾಲ ತಾಣಗಳಿಗೆ ಮತ್ತೆ ನಿರ್ಬಂಧ ಹೇರಲಾಗಿದೆ. ಇಂಟರ್ ನೆಟ್ ಸೇವೆ ಮತ್ತು ಬಂಧಿತರ ಬಿಡುಗಡೆಗೆ ಭಾರತದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಒತ್ತಡ ಹೇರಲಾಗುತ್ತಿದೆ.
ಜಮ್ಮುಕಾಶ್ಮೀರದಲ್ಲಿ ವಿಶೇಷ ಕಾನೂನುಗಳು ಜಾರಿಯಲ್ಲಿವೆ. ಹಾಗಾಗಿ ಅಲ್ಲಿ ಪ್ರಜಾಪ್ರಭುತ್ವದ ಪರಿಶೀಲನೆ ನಡೆಯಬೇಕು. ದೇಶದ ಕಾನೂನಿನಡಿ ಎಲ್ಲರಿಗೂ ಸಮಾನ ರಕ್ಷಣೆಯ ತತ್ವಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂದು ವೆಲ್ಸ್ ಹೇಳಿದ್ದಾರೆ.
ಭಾರತ ಮತ್ತು ಅಮೇರಿಕಾ ನಡುವೆ ರಕ್ಷಣಾ ಸಹಕಾರ, ಶಾಂತಿಪಾಲನೆಯ ಕಾರ್ಯಾಚರಣೆ, ಬಾಹ್ಯಾಕಾಶ, ಭಯೋತ್ಪಾದನೆಯ ನಿಗ್ರಹ, ವಾಣಿಜ್ಯ, ಮನುಷ್ಯ-ಮನುಷ್ಯರ ನಡುವಿನ ಸಂಬಂಧ ವೃದ್ಧಿ, ನೌಕಾ ಸಹಕಾರ ಕುರಿತು ಮಾಹಿತಿ ಹಂಚಿಕೆ ಮೊದಲಾದವುಗಳು ಮುಂದುವರಿಯಲಿವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಂಖದಿಂದ ಬಂದರೇನೆ ತೀರ್ಥ ಎಂಬಂತೆ ವಿದೇಶೀಯರಿಂದ ಕಪಾಳಮೋಕ್ಷ ಮಾಡಿಸಿಕೊಂಡ ನಂತರವಾದರೂ ಮೋದಿ-ಶಾ ಜೋಡಿಗೆ ಬುದ್ದಿಬರಲಿ.