ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ತನ್ನ ಸಚಿವ ಸಂಪುಟದಿಂದ ಇಂದು ಮೂರನೇ ಸಚಿವ ಮತ್ತು ಹಿಂದುಳಿದ ವರ್ಗದ ನಾಯಕ ಧರಂ ಸಿಂಗ್ ಸೈನಿ ಅವರನ್ನು ಕಳೆದುಕೊಂಡಿದೆ. ಬಿಜೆಪಿಯನ್ನು ಬಿಡುವುದಿಲ್ಲ ಎಂದು ಹೇಳಿದ 24 ಗಂಟೆಯಲ್ಲೇ ರಾಜೀನಾಮೆ ನೀಡಿದ್ದಾರೆ.
ಮುಂದಿನ ತಿಂಗಳು ಚುನಾವಣೆ ಎದುರಿಸಲು ಸಿದ್ಧವಾಗಿರುವ ಬಿಜೆಪಿಗೆ ಮೂರು ದಿನಗಳಿಂದ ದೊಡ್ಡ ಆಘಾತ ಉಂಟಾಗುತ್ತಲೇ ಇದೆ. ಉತ್ತರ ಪ್ರದೇಶ ಬಿಜೆಪಿಗೆ ರಾಜೀನಾಮೆ ನೀಡಿರುವ ಎಂಟನೇ ನಾಯಕ ಇವರಾಗಿದ್ದಾರೆ. ಇವರೆಲ್ಲರೂ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರುವ ಸಾಧ್ಯತೆ ಇದೆ.
ಕೇವಲ 24 ಗಂಟೆಗಳ ಹಿಂದೆ ಮಾತನಾಡಿದ್ದ ಧರಂ ಸಿಂಗ್ ಸೈನಿ, ಬಿಜೆಪಿಗೆ ರಾಜೀನಾಮೆ ನೀಡುವ ವದಂತಿಗಳನ್ನು ತಳ್ಳಿಹಾಕಿದ್ದರು.
ಇದನ್ನೂ ಓದಿ: ಯುಪಿ ಬಿಜೆಪಿಗೆ ಮತ್ತೊಂದು ಆಘಾತ: ಮತ್ತೊಬ್ಬ ಒಬಿಸಿ ನಾಯಕ ಮುಖೇಶ್ ವರ್ಮಾ ರಾಜೀನಾಮೆ
ಪ್ರಮುಖ ಒಬಿಸಿ (ಹಿಂದುಳಿದ ವರ್ಗ) ನಾಯಕರಾದ ಧರಂ ಸಿಂಗ್ ಸೈನಿ, ಸಹರಾನ್ಪುರದ ನಕುಡ್ನಿಂದ ನಾಲ್ಕು ಬಾರಿ ಶಾಸಕರಾಗಿದ್ದರು. ಈ ಹಿಂದೆ ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದಲ್ಲಿದ್ದ ಅವರು ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ 2016 ರಲ್ಲಿ ಬಿಜೆಪಿ ಸೇರಿದ್ದರು.
ಬುಧವಾರವಷ್ಟೇ ಬಿಜೆಪಿ ತೊರೆದಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಕಿಡಿಕಾರಿದ್ದರು. “ನಾನು ಬಿಜೆಪಿಯಲ್ಲಿದ್ದೇನೆ ಮುಂದೆಯೂ ಇರುತ್ತೇನೆ. ನಾನು ಪಕ್ಷವನ್ನು ತೊರೆಯುವುದಿಲ್ಲ” ಎಂದು ವಿಡಿಯೊದಲ್ಲಿ ಹೇಳಿದ್ದರು.
ಈಗ ರಾಜೀನಾಮೆ ಸಲ್ಲಿಸಿರುವ ಅವರು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದಾರೆ.
ಟ್ವೀಟ್ನಲ್ಲಿ ಫೋಟೋ ಹಂಚಿಕೊಡಿರುವ ಅಖಿಲೇಶ್ ಯಾದವ್, ‘ಸಾಮಾಜಿಕ ನ್ಯಾಯ’ದ ಮತ್ತೋರ್ವ ಯೋಧ ಡಾ.ಧರಂ ಸಿಂಗ್ ಸೈನಿ ಜಿ ಅವರ ಆಗಮನದಿಂದ ನಮ್ಮ ‘ಸಕಾರಾತ್ಮಕ ಮತ್ತು ಪ್ರಗತಿಪರ ರಾಜಕಾರಣ’ಕ್ಕೆ ಇನ್ನಷ್ಟು ಉತ್ಸಾಹ, ಶಕ್ತಿ ಬಂದಿದೆ. ಅವರಿಗೆ ಹೃತ್ಪೂರ್ವಕ ಸ್ವಾಗತ ಮತ್ತು ಶುಭಾಶಯಗಳು!’ ಎಂದಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ಏಳು ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 10 ರಿಂದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.