ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ನಲ್ಲಿ ದ್ವೇಷ ಭಾಷಣ ಮಾಡಿದ್ದ ಪ್ರಕರಣದ ಆರೋಪಿಯನ್ನು ಬಂಧಿಸುವಾಗ ’ನೀವೆಲ್ಲರೂ ಸಾಯುತ್ತೀರಿ’ (ತುಮ್ ಸಬ್ ಮಾರೋಗೆ) ಎಂದು ಪೊಲೀಸರಿಗೆ ವಿವಾದಿತ ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ ಬೆದರಿಕೆ ಹಾಕಿದ್ದಾರೆ.
ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರ್ಮಿಕ ಮುಖಂಡರಲ್ಲಿ ಒಬ್ಬರಾದ ಯತಿ ನರಸಿಂಗಾನಂದ, ನಿನ್ನೆ ಪ್ರಕರಣದ ಸಹ ಆರೋಪಿ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿಯನ್ನು ಬಂಧಿಸಿದಾಗ ಪೊಲೀಸ್ ಅಧಿಕಾರಿಗಳಿಗೆ ಅಡ್ಡಿಪಡಿಸಿ ಹೀಗೆ ಬೆದರಿಕೆ ಹಾಕಿದ್ದಾರೆ.
ಜಿತೇಂದ್ರ ತ್ಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಮೊದಲು ವಸೀಂ ರಿಜ್ವಿ ಆಗಿದ್ದರು. “ಧರ್ಮ ಸಂಸದ್” ನಲ್ಲಿ ಮುಸ್ಲಿಮರ ಹತ್ಯಾಕಾಂಡಕ್ಕೆ, ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದ ದ್ವೇಷ ಭಾಷಣ ಪ್ರಕರಣದಲ್ಲಿ ಬಂಧಿತರಾದ ಮೊದಲ ಆರೋಪಿಯಾಗಿದ್ದಾರೆ. ಉತ್ತರಾಖಂಡ ಪೊಲೀಸರು ಯತಿ ನರಸಿಂಗಾನಂದ್ ಮತ್ತು ಇನ್ನೋರ್ವ ಆರೋಪಿ ಸಾಧ್ವಿ ಅನ್ನಪೂರ್ಣಗೂ ಸಮನ್ಸ್ ನೀಡಿದ್ದಾರೆ.
ಇದನ್ನೂ ಓದಿ: ‘ಧರ್ಮ ಸಂಸತ್’ ದ್ವೇಷ ಭಾಷಣ ಕುರಿತ ಪ್ರಶ್ನೆಗೆ ಸಿಟ್ಟಾಗಿ ಸಂದರ್ಶನ ಅರ್ಧಕ್ಕೆ ನಿಲ್ಲಿಸಿದ ಯುಪಿ ಉಪಮುಖ್ಯಮಂತ್ರಿ
ಪೊಲೀಸ್ ಅಧಿಕಾರಿಗಳು ಗುರುವಾರ ಆರೋಪಿ ಜಿತೇಂದ್ರ ತ್ಯಾಗಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವಾಗ ನರಸಿಂಗಾನಂದರಿಗೆ ಸಹಕರಿಸುವಂತೆ ವಿನಂತಿಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ನೋಡಬಹುದು.
ಕಾರಿನಲ್ಲಿ ಕುಳಿತ ನರಸಿಂಗಾನಂದ, ’ತ್ಯಾಗಿಯನ್ನು ಏಕೆ ಬಂಧಿಸಿದ್ದೀರಿ? ಮೂರು ಪ್ರಕರಣಗಳಲ್ಲಿ ನಾನು ಅವರೊಂದಿಗೆ ಸಹ ಆರೋಪಿ, ಅವರು ಒಬ್ಬನೇ ಎಲ್ಲವನ್ನೂ ಮಾಡಿದ್ದಾನೆಯೇ?’ ಎಂದು ಪ್ರಶ್ನಿಸಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರೂ ಕೂಡ ಒಪ್ಪದೆ ಕಾರಿನಲ್ಲಿಯೇ ಕುಳಿತುಕೊಳ್ಳುತ್ತಾರೆ.
“ತ್ಯಾಗಿ ಅವರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ” ಎಂದು ಅಧಿಕಾರಿಗಳು ಹೇಳುತ್ತಿದ್ದಂತೆ, ನರಸಿಂಹಾನಂದ, “ಆದರೆ ನಾನು ಮಾಡುತ್ತಿಲ್ಲ. ನಮ್ಮ ಬೆಂಬಲದ ಮೇಲೆ ಅವರು ಹಿಂದೂ ಆಗಿದ್ದಾರೆ” ಎಂದು ಪೊಲೀಸರಿಗೆ ಉತ್ತರಿಸುತ್ತಾರೆ. ಅಧಿಕಾರಿಗಳ ಒತ್ತಡ ಹೆಚ್ಚಾದಂತೆ, “ನೀವೆಲ್ಲರೂ ಸಾಯುತ್ತೀರಿ, ನಿಮ್ಮ ಮಕ್ಕಳೂ ಸಹ…”(ತುಮ್ ಸಬ್ ಮಾರೋಗೇ, ಅಪ್ನೆ ಬಚ್ಚೋ ಕೋ ಭೀ..) ಎಂದು ನರಿಂಸಿಂಗಾನಂದ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ದ್ವೇಷ ಭಾಷಣ, ಜಾತಿ ಆಧಾರಿತ ಹಿಂಸಾಚಾರದ ವಿರುದ್ಧ ಮಾತನಾಡುವಂತೆ ಪ್ರಧಾನಿ ಮೋದಿಗೆ ಐಐಎಂ ವಿದ್ಯಾರ್ಥಿಗಳು, ಅಧ್ಯಾಪಕರ ಪತ್ರ
ಆರೋಪಿ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿರನ್ನು ರೂರ್ಕಿಯಲ್ಲಿ ಬಂಧಿಸಲಾಗಿದೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ರಾವತ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಕಳೆದ ತಿಂಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಜಿತೇಂದ್ರ ಸಿಂಗ್ ನಾರಾಯಣ್ ತ್ಯಾಗಿ ಎಂಬ ಹೆಸರನ್ನು ಪಡೆದಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಗಾಜಿಯಾಬಾದ್ನ ದಸ್ನಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹಾನಂದ ಧರ್ಮ ಸಂಸದ್ ಸಮಾರಂಭವನ್ನು ಆಯೋಜಿಸಿದ್ದರು.
ಮುಸ್ಲಿಮರ ಹತ್ಯಾಕಾಂಡ ಮತ್ತು ಅವರ ವಿರುದ್ಧ ಶಸ್ತ್ರಾಸ್ತ್ರಗಳ ಬಳಕೆಗೆ ಕರೆ ನೀಡಿದ್ದ ಯತಿ ನರಸಿಂಗಾನಂದ, ಜಿತೇಂದ್ರ ಸಿಂಗ್ ನಾರಾಯಣ್ ತ್ಯಾಗಿ ಮತ್ತು ಅನ್ನಪೂರ್ಣ ಸೇರಿದಂತೆ 10 ಕ್ಕೂ ಹೆಚ್ಚು ಜನರನ್ನು ಎಫ್ಐಆರ್ನಲ್ಲಿ ಹೆಸರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತು 10 ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದ ನಂತರ ಪ್ರಕರಣದಲ್ಲಿ ಮೊದಲ ಬಂಧನವಾಗಿದೆ.