ನಿಮ್ಹಾನ್ಸ್ ಆಸ್ಪತ್ರೆಯ ಅಧಿಕಾರಿಗಳು ನಮ್ಮನ್ನು ಕಾನೂನುಬಾಹಿರವಾಗಿ ಸೇವೆಯಿಂದ ವಜಾ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಮುದಾಯಕ್ಕೆ ಸೇರಿದ 15 ಮಹಿಳೆಯರು ಸೇರಿದಂತೆ ಒಟ್ಟು 19 ಮಂದಿ ಬೆಂಗಳೂರಿನಲ್ಲಿ ಜುಲೈ 9 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ತಮ್ಮನ್ನು ಮತ್ತೆ ಸೇವೆಗೆ ತೆಗೆದುಕೊಳ್ಳುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.
ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (ಎಐಸಿಸಿಟಿಯು) ಗೆ ಸಂಯೋಜಿತವಾಗಿರುವ ನಿಮ್ಹಾನ್ಸ್ ಪ್ರಗತಿಪರ ವರ್ಕರ್ಸ್ ಯೂನಿಯನ್ (ಎನ್ಪಿಡಬ್ಲ್ಯುಯು) ಅಡಿಯಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಾರ್ಮಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲೇ ಲಸಿಕೆ ನೀಡಲು ಒತ್ತಾಯಿಸಿ ರಾಜ್ಯವ್ಯಾಪಿ ಪ್ರತಿಭಟನೆ
ಕೊರೊನಾ ನೈಟ್ ಕರ್ಫ್ಯೂ ಇದ್ದಂತಹ (ಎರಡು ತಿಂಗಳ ಹಿಂದೆ) ಸಮಯಲ್ಲಿ ನೌಕರರಿಗೆ ರಾತ್ರಿ 9:30 ವರೆಗೆ ಕೆಲಸ ನಿರ್ವಹಿಸುವಂತೆ ನಿಮ್ಹಾನ್ಸ್ ಆಡಳಿತ ಮಂಡಳಿಯು ನಿರ್ದೇಶಿಸಿತ್ತು. ಆದರೆ ಕಾರ್ಮಿಕರು ರಾತ್ರಿ ಹೊತ್ತು ಬಸ್ಸುಗಳು ಇಲ್ಲದಿರುವ ಕಾರಣ, ತಮಗೆ ವಾಹನಗಳನ್ನು ವ್ಯವಸ್ಥೆ ಮಾಡಿಕೊಡಿ ಎಂದು ಕೋರಿದ್ದರು. ಇಷ್ಟಕ್ಕೆ ಆಡಳಿತ ಮಂಡಳಿ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿದೆ ಎಂದು ಎನ್ಪಿಡಬ್ಲ್ಯುಯು ಆರೋಪಿಸಿದೆ.
ಪ್ರತಿಭಟನಾ ಸ್ಥಳಕ್ಕೆ ಸಾಮಾಜಿಕ ಹೋರಾಟಗಾರರಾಗಿರುವ ವಿನಯ್ ಶ್ರೀನಿವಾಸ್ ಅವರು ಭೇಟಿ ನೀಡಿ ಕಾರ್ಮಿಕರಿಗೆ ಬೆಂಬಲ ನೀಡಿದ್ದಾರೆ.
ಪ್ರತಿಭಟನಾ ನಿರತ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದು, ನಾವು ಯಾವುದೆ ತಪ್ಪನ್ನು ಮಾಡಿಲ್ಲ. ಕೊರೊನಾದಂತಹ ಸಂಕಷ್ಟದಲ್ಲಿ ಕೂಡಾ ನಾವು ಕೆಲಸ ಮಾಡಿದ್ದೇವೆ. ಕೆಲಸದ ಸಮಯ ಬದಲಾಯಿಸದ್ದನ್ನು ಪ್ರಶ್ನಿಸಿರುವುದಕ್ಕೆ ನಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ನಮಗೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ. ವಿಡಿಯೊವನ್ನು ಕೆಳಗೆ ನೋಡಬಹುದು.
ಇದನ್ನೂ ಓದಿ: ಹೆಣ್ಣು ಮಕ್ಕಳ ಆಕ್ರಂದನ ಕೇಳುತ್ತಿಲ್ಲವೇ? ದೆಹಲಿಯ ದಲಿತ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ
“ವಿಕಿರಣಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಕೆಲಸದ ಸಮಯವನ್ನು ಬದಲಾಯಿಸಲಾಗಿದೆ. ಈ ವಿಭಾಗದಲ್ಲಿ ಹೆಚ್ಚಿನ ಆಸ್ಪತ್ರೆ ಸಹಾಯಕರು ಮಹಿಳೆಯರೇ ಆಗಿರುವುದರಿಂದ, ಕಾರ್ಮಿಕರು ತಮ್ಮ ಸುರಕ್ಷತೆ ಬಗ್ಗೆ ಆತಂಕಗಳನ್ನು ವ್ಯಕ್ತಪಡಿಸಿದ್ದರು. ಜೊತೆಗೆ ಕನಿಷ್ಠ ಸಾರಿಗೆ ವ್ಯವಸ್ಥೆಯನ್ನಾದರೂ ಮಾಡಿ ಎಂದು ಕೋರಿದ್ದರು. ಆದಾಗ್ಯೂ, ಅವರನ್ನು ಜುಲೈ 9 ರಂದು ಸೇವೆಯಿಂದ ವಜಾಗೊಳಿಸಲಾಯಿತು” ಎಂದು ಎನ್ಪಿಡಬ್ಲ್ಯುಯು ಪ್ರಧಾನ ಕಾರ್ಯದರ್ಶಿ ಎಂ.ಬಸವರಾಜ್ ಹೇಳಿದ್ದಾರೆ.
“ನಾವು ಹೊರಗುತ್ತಿಗೆ ಏಜೆನ್ಸಿಯಿಂದ ಬಂದವರಾಗಿದ್ದರೂ, ನಿಮ್ಹಾನ್ಸ್ ಅಧಿಕಾರಿಗಳ ಸೂಚನೆ ಮೇರೆಗೆ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ನಮ್ಮನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಆದರೆ ಪ್ರತಿಭಟನಾಕಾರ ಕಾರ್ಮಿಕರ ಆರೋಪಗಳನ್ನು ನಿಮ್ಹಾನ್ಸ್ ರಿಜಿಸ್ಟ್ರಾರ್ ಬಿ.ಎಸ್. ಶಂಕರನಾರಾಯಣ ರಾವ್ ಅವರು ನಿರಾಕರಿಸಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. ಅವರು ಹೇಳುವಂತೆ, “ಎಲ್ಲಾ ಕಾರ್ಮಿಕರು ಹೊರಗುತ್ತಿಗೆ ಏಜೆನ್ಸಿಗೆ ಸೇರಿದವರು. ಯಾರೂ ನಿಮ್ಹಾನ್ಸ್ನಿಂದ ನೇರವಾಗಿ ಕೆಲಸ ಮಾಡುತ್ತಿಲ್ಲ. ಈ ಕಾರ್ಮಿಕರ ಮೇಲೆ ನಮಗೆ ಯಾವುದೇ ನಿಯಂತ್ರಣವಿಲ್ಲ. ಅವರ ಕೆಲಸದ ಸ್ವರೂಪವನ್ನು ತೀರ್ಮಾನಿಸಲು ಏಜೆನ್ಸಿಗೆ ಅಧಿಕಾರವಿದೆ” ಎಂದು ಅವರು ದಿ ಹಿಂದೂಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಏಕಾಂಗಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕ: ಧರಣಿ ಬಳಿಕ ಸಿದ್ದರಾಮಯ್ಯ ಭೇಟಿ