ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ನಡೆದಿರುವ ಚುನಾವಣಾ ವಂಚನೆ ಸಾಕ್ಷಿ ಸಮೇತ ಬಯಲಾಗಿದೆ.
ಅಕ್ರಮದಲ್ಲಿ ಭಾಗಿಯಾದ ಅಧಿಕಾರಗಳನ್ನು ಅಮಾನತುಗೊಳಿಸಿ ಸಮಗ್ರ ತನಿಖೆಗೆ ಆದೇಶಿಸಬೇಕು.
ಎಲ್ಲಾ ಲೋಕಸಭಾ ಕ್ಷೇತ್ರಗಳ ಡಿಜಿಟಲ್ ಡಾಟಾವನ್ನು ಅಭ್ಯರ್ಥಿಗಳಿಗೆ ಒದಗಿಸಬೇಕು.
ಚುನಾವಣಾ ಆಯೋಗ ಸಾರ್ವಜನಿಕ ಕ್ಷಮೆ ಕೇಳಿ ರಾಜಿನಾಮೆ ನೀಡಬೇಕು.
…………………………………………………………….
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವ ಕುರಿತು ರಾಹುಲ್ ಗಾಂಧಿ ಮಾಡಿರುವ ಆರೋಪಗಳಿಗೆ ಹಲವು ಸಾಕ್ಷ್ಯಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮರು ಚುನಾವಣೆ ನಡೆಸಬೇಕು, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ, ತನಿಖೆ ನಡೆಸಬೇಕು ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯು, ಇತ್ತೀಚೆಗೆ ರಾಹುಲ್ ಗಾಂಧಿ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮಹದೇವಪುರ ವಿಧಾನಸಭಾ ವಲಯದಲ್ಲಿ ನಡೆದಿರುವ ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ಹೇಳಿದೆ. ಈ ಆರೋಪಗಳು ಸಾಕ್ಷ್ಯಾಧಾರ ಸಮೇತ ಇವೆ ಎಂದು ಸಂಘಟನೆ ತಿಳಿಸಿದೆ.
ರಾಹುಲ್ ಗಾಂಧಿ ಮಾಡಿದ ಪತ್ರಿಕಾ ಗೋಷ್ಟಿ ಮತ್ತು ಬಿಚ್ಚಿಟ್ಟ ಮಾಹಿತಿಗಳು ಅನುಮಾನಕ್ಕಾಸ್ಪದವಿಲ್ಲದಂತೆ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ವಲಯದ ಮತದಾರರ ಪಟ್ಟಿಯಲ್ಲಿ ನಡೆದಿರುವ ಅಪರಾಧಿ ಚಟುವಟಿಕೆಗಳು ಸಾಬೀತಾಗಿವೆ. ಇದು ಆರೋಪವಲ್ಲ, ಸಾಕ್ಷ್ಯ. ಐದು ಬಗೆಯ ಅಕ್ರಮಗಳ ಕುರಿತು ಒಂದಲ್ಲ, ಸಾವಿರಾರು ಸಾಕ್ಷಿಗಳನ್ನು ಒದಗಿಸಲಾಗಿದೆ. ನಕಲಿ ಮತದಾರರನ್ನು ಸೃಷ್ಟಿಸಿರುವ, ತಂದೆಯ ಹೆಸರಿಲ್ಲದ, ವಿಳಾಸವಿಲ್ಲದ ಮತಚೀಟಿಗಳನ್ನು ವಿತರಿಸಿರುವ, ಭಾವಚಿತ್ರವೇ ಇಲ್ಲದಂತೆ ಅಥವಾ ಕಾಣದಂತೆ ಮತ ಚೀಟಿ ನೀಡಿರುವ, ಒಂದೇ ವಿಳಾಸದಲ್ಲಿ 40, 80 ಜನರಿಗೆ ಮತಚೀಟಿ ಸೃಷ್ಟಿಸಿರುವ, ಹೊಸ ಮತದಾರರಿಗೆ ನೀಡಬೇಕಾದ ನಮೂನೆ 6ನ್ನು ದುರುಪಯೋಗಪಡಿಸಿಕೊಂಡಿರುವ, ಅಪರಾಧ ಸಾಕಷ್ಟು ಸಾಕ್ಷ್ಯಗಳ ಮೂಲಕ ಸಾಬೀತಾಗಿದೆ ಎಂದು ಎದ್ದೇಳು ಕರ್ನಾಟಕ ಹೇಳಿದೆ.
ಇದು ಒಂದು ಲೋಕಸಭಾ ಕ್ಷೇತ್ರದ, ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ನಡೆದಿರುವ ಅಕ್ರಮ. ಇಡೀ ದೇಶದಲ್ಲಿ ನೂರಾರು ಕಡೆ ಇದು ನಡೆದಿರುವ ಎಲ್ಲಾ ಸಾಧ್ಯತೆಗಳೂ ಇವೆ. ಚುನಾವಣಾ ಫಲಿತಾಂಶ ಬಂದ ಕೂಡಲೇ ಅಕ್ರಮ ನಡೆದಿರುವ ಸಾಧ್ಯತೆಗಳ ಬಗ್ಗೆ ಎದ್ದೇಳು ಕರ್ನಾಟಕ ಹೇಳಿಕೆ ನೀಡಿತ್ತು. ಮರು ಮತದಾನಕ್ಕೆ ಹಾಕವಂತೆ ಬೆಂಗಳೂರು ಕೇಂದ್ರದ ಅಭ್ಯರ್ಥಿಯನ್ನೂ ಒತ್ತಾಯಿಸಿತ್ತು. ಜುಲೈ 2024 ರಲ್ಲಿ Vote For Democracy ಎಂಬ ಸಂಸ್ಥೆ ವರದಿಯೊಂದನ್ನು [Conduct of Lok sabha elections 2024] ಬಿಡುಗಡೆ ಮಾಡಿ, ಅದರಲ್ಲಿ ದೇಶದ 79 ಕ್ಷೇತ್ರಗಳಲ್ಲಿ ಮತಕಳವು ನಡೆದಿರುವುದಕ್ಕೆ ಸಾಂದರ್ಭಿಕ ಸಾಕ್ಷ್ಯವನ್ನು ಮುಂದಿಟ್ಟಿತ್ತು. ಚುನಾವಣಾ ಆಯೋಗವು ಎಷ್ಟು ಮತದಾನ ನಡೆದಿದೆ ಎಂಬ ಬಗ್ಗೆ ನೀಡಿದ ಎರಡು ಸಂಖ್ಯೆಗಳ ನಡುವಿನ ಅಂತರ ಆ ಕ್ಷೇತ್ರದ ಗೆಲುವಿನ ಅಂತರಕ್ಕಿಂತ ಹೆಚ್ಚಿರುವುದನ್ನು ಗುರುತಿಸಿ ಈ ಕ್ಷೇತ್ರಗಳಲ್ಲಿ ಕಳುವಾಗಿರುವ ಎಲ್ಲಾ ಸಾಧ್ಯತೆಗಳಿವೆ ಎಂದು ಆರೋಪಿಸಿತ್ತು. ಆ 79 ಕ್ಷೇತ್ರಗಳ ಪಟ್ಟಿಯನ್ನು ಒದಗಿಸಿತ್ತು. ಅದರಲ್ಲಿ ಕರ್ನಾಟಕದ 6 ಕ್ಷೇತ್ರಗಳ ಹೆಸರುಗಳು ಇದ್ದವು. ಅದರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರವೂ ಇತ್ತು. ಈಗ ಈ 79 ಕ್ಷೇತ್ರದ ಪೈಕಿ ಒಂದು ಕ್ಷೇತ್ರದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದು ಅದು ಹೇಳಿದೆ.
ಈ ಸಾಕ್ಷ್ಯವನ್ನು ಹೊರತೆಗೆಯಲು ನಡೆದಿರುವ ಪರಿಶ್ರಮ ಅಪಾರವಾದುದು, ಶ್ಲಾಘನೀಯವಾದುದು. ಚುನಾವಣಾ ಆಯೋಗವು ಡಿಜಿಟಲ್ ಡಾಟಾವನ್ನು ಒದಗಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಹಸ್ರಾರು ಪುಟಗಳ ಮುದ್ರಿತ ದಾಖಲೆಯನ್ನು ಒಂದೊಂದಾಗಿ ಪರಿಶೀಲಿಸಿ, ತಾಳೆ ಹಾಕಿ, ಈ ಬೃಹತ್ ಸಾಕ್ಷ್ಯವನ್ನು ಸಿದ್ಧಪಡಿಸಲಾಗಿದೆ. ಇದನ್ನು ಸಿದ್ಧಪಡಿಸಿದ ತಂಡಕ್ಕೆ, ಅದಕ್ಕೆ ಬೆಂಬಲ ನೀಡಿದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ, ಅದನ್ನು ದಿಟ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಮುಂದಿಟ್ಟ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು ಎಂದು ಎದ್ದೇಳು ಕರ್ನಾಟಕ ತಿಳಿಸಿದೆ.
ಸಂವಿಧಾನ ಪದ್ದತಿಗೆ ವಿರುದ್ಧವಾಗಿ ಚುನಾವಣಾ ಆಯೋಗವನ್ನು ತಾನೇ ನೇಮಿಸಿರುವ ಬಿಜೆಪಿ ಸರ್ಕಾರ, ಅದನ್ನು ಬಳಸಿಕೊಂಡು ಪ್ರಜಾತಂತ್ರವನ್ನು ಕೊಲೆ ಮಾಡಲು ಹೊರಟಿದೆ. ಜನಾಕ್ರೋಶ ಬೆಳೆಯುತ್ತಿದ್ದು, ಚುನಾವಣೆಗಳಲ್ಲಿ ಸೋಲುವ ಭೀತಿ ಹೆಚ್ಚಿರುವುದರಿಂದ, ಮತಗಳನ್ನು ಅಪಹರಿಸುವ ಮತ್ತು ಕಳ್ಳ ಮತಗಳನ್ನು ಬರೆಸುವ ಮತ ಮಾಫಿಯಾ ಕೆಲಸಕ್ಕೆ ಕೈಹಾಕಿದೆ ಎಂದು ಅದು ಆರೋಪಿಸಿದೆ.
ಸಾಕ್ಷ್ಯಗಳನ್ನು ಮುಂದಿಟ್ಟಾಗ ಮೌನ ಧರಿಸುವುದು ಅಪರಾಧವನ್ನು ಮುಚ್ಚಿಡುವ ತಂತ್ರವಾಗುತ್ತದೆ. ಚುನಾವಣ ಆಯೋಗವು ಮಾತನಾಡಬೇಕು ಎಂದು ನಾವು ಆಗ್ರಹಿಸುತ್ತೇವೆ. ಒಂದು ವೇಳೆ ರಾಹುಲ್ ಗಾಂಧಿ ಬಿಚ್ಚಿಟ್ಟ ಸತ್ಯ ಸತ್ಯವಲ್ಲ ಎಂಬುದಾದರೆ ಅದನ್ನು ಚುನಾವಣಾ ಆಯೋಗವು ತಡಮಾಡದೆ ಜನತೆಯ ಮುಂದಿಡಬೇಕು. ಅಥವಾ ತಾನು ಮಾಡಿದ ತಪ್ಪಿಗಾಗಿ ಜನತೆಯ ಮುಂದೆ ಕ್ಷಮೆಯಾಚಿಸಬೇಕು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಈ ಅಕ್ರಮದ ತನಿಖೆಯಾಗಬೇಕು. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮರುಮತದಾನಕ್ಕೆ ಆದೇಶ ಹೊರಡಿಸಬೇಕು. ಕೊನೆಯದಾಗಿ ಮತದಾರರ ಪಟ್ಟಿ ಮತ್ತು ಮತದಾನ ನಡೆದ ವಿಧಾನಕ್ಕೆ ಸಂಬಂಧಪಟ್ಟಂತೆ ಇರುವ ಎಲ್ಲಾ ಡಿಜಿಟಲ್ ಡಾಟಾವನ್ನು ಬಿಡುಗಡೆ ಮಾಡಬೇಕು. ಇದನ್ನು ಮಾಡದಿದ್ದರೆ ನಾಗರೀಕರಾದ ನಾವು ಸುಮ್ಮನೆ ಕೂರುವುದಿಲ್ಲ ರಾಜ್ಯವ್ಯಾಪಿ ಪ್ರತಿಭಟನೆ ಆರಂಭಿಸುತ್ತೇವೆ ಎಂದು ಎದ್ದೇಳು ಕರ್ನಾಟಕ ಎಚ್ಚರಿಕೆ ನೀಡಿದೆ
‘ಎದ್ದೇಳು ಕರ್ನಾಟಕ’ ಸಂಘಟನೆಯ ಆಗ್ರಹಗಳು:
*ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕು
* ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ, ಸಮಗ್ರ ತನಿಖೆ ನಡೆಸಬೇಕು
* ಎಲ್ಲಾ ಲೋಕಸಭಾ ಕ್ಷೇತ್ರಗಳ ಡಿಜಿಟಲ್ ಡೇಟಾವನ್ನು ಅಭ್ಯರ್ಥಿಗಳಿಗೆ ಒದಗಿಸಬೇಕು
* ಚುನಾವಣಾ ಆಯೋಗವು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ರಾಜೀನಾಮೆ ನೀಡಬೇಕು
ಈಗಾಗಲೇ ಸಾಕ್ಷ್ಯಾಧಾರಗಳು ಲಭ್ಯವಿದ್ದರೂ ಮೌನವಾಗಿರುವುದು ಅಪರಾಧವನ್ನು ಮುಚ್ಚಿಡುವ ತಂತ್ರ ಎಂದು ಸಂಘಟನೆ ಹೇಳಿದೆ. ಒಂದು ವೇಳೆ ಈ ಆರೋಪಗಳು ಸುಳ್ಳಾಗಿದ್ದರೆ ಚುನಾವಣಾ ಆಯೋಗವು ಸ್ಪಷ್ಟೀಕರಣ ನೀಡಬೇಕು, ಇಲ್ಲವಾದರೆ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಈ ಹೇಳಿಕೆಯನ್ನು ತಾರಾ ರಾವ್, ಮೊಹಮ್ಮದ್ ಕುನ್ನಿ, ಫಾ.ಅರುಣ್ ಲೂಯಿಸ್, ಕೆ.ಎಲ್.ಅಶೋಕ್ ಮತ್ತು ಜಿ.ಎಂ.ವೀರಸಂಗಯ್ಯ ಅವರು ‘ಎದ್ದೇಳು ಕರ್ನಾಟಕ’ದ ಪರವಾಗಿ ನೀಡಿದ್ದಾರೆ.


