Homeಅಂಕಣಗಳುರಣಹದ್ದು ಮತ್ತು ಪತ್ರಕರ್ತರು : ತಣ್ಣನೆ ಹೆಸರಿನ ಪುಣ್ಯಾತ್ಮ ಹಸೀ ಸುಳ್ಳನ್ನ ಸುಡು ಬಿಸಲಿನ್ಯಾಗ ಹೇಳಿದ್ದು...

ರಣಹದ್ದು ಮತ್ತು ಪತ್ರಕರ್ತರು : ತಣ್ಣನೆ ಹೆಸರಿನ ಪುಣ್ಯಾತ್ಮ ಹಸೀ ಸುಳ್ಳನ್ನ ಸುಡು ಬಿಸಲಿನ್ಯಾಗ ಹೇಳಿದ್ದು…

ಆಸ್ಥಾನ ಪಂಡಿತರು ತಮ್ಮ ಬ್ಯಾಳೆ ಬೇಯಿಸಿಕೊಳ್ಳಲಿಕ್ಕೆ ಆಳುವವರನ್ನ ಇಂದ್ರ - ಚಂದ್ರ ಅಂತ ಕರೀತಿರಬಹುದು. ಇದು ಗೊತ್ತಾಗದೇ ಹೋದರ ಸರಕಾರ ಜನರ ಮನಸ್ಸಿನಿಂದ ದೂರ ಹೋಗಬೇಕಾಗತದ. ಉನ್ನತ ಸ್ಥಾನದಲ್ಲಿ ಇರೋ ನಮ್ಮ ಪಂಥ ಪ್ರಧಾನ ಸೇವಕರು ಇಂಥವರಿಂದ ದೂರ ಇರಬೇಕು.

- Advertisement -
- Advertisement -

ಹಿರಿಯ ಲೇಖಕಿ ಗೀತಾ ನಾಗಭೂಷಣ ಅವರ ಹಸಿ ಮಾಂಸ ಮತ್ತು ಹದ್ದುಗಳು ಎನ್ನುವುದು ಕನ್ನಡದ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಜಮೀನುದಾರಿ ವ್ಯವಸ್ಥೆಯ ಶೋಷಣೆ, ಜಾತಿಯತೆ, ಹೆಣ್ಣಿನ ದುರವಸ್ಥೆ ಮುಂತಾದ ವಿಷಯಗಳ ಸುತ್ತ ಹೆಣೆದದ್ದು.

ಗುಲಬರ್ಗಾದ ಈ ಲೇಖಕರಿಗೆ ರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಈ ಕಾದಂಬರಿಯ ಹೆಸರು ಓದುಗರನ್ನು ಸೆಳೆಯುವಂಥದ್ದು. ಅದು ಈ ಕಾಲದಾಗ ಯಾಕ ನೆನಪು ಮಾಡಿಕೊಟ್ಟವರು ಯಾರಪಾ ಅಂದರ ನಮ್ಮ ತುಷಾರ ಮೆಹತಾ ಸಾಹೇಬರು.

ಅವರು ಯಾರಂತೀರಿ? ಅವರು ನಮ್ಮ ಕೇಂದ್ರ ಸರಕಾರದ ವಕೀಲರು. ಅವರು ಸುಪ್ರೀಂ ಕೋರ್ಟಿನಾಗ ಕೇಂದ್ರ ಸರಕಾರವು ಎಷ್ಟು ಚನ್ನಾಗಿ ವಲಸೆ ಕಾರ್ಮಿಕರ ಕಾಳಜಿ ಮಾಡಿದೆ ಅಂತ ಹೇಳೋ ಭರಾಟೆಯೊಳಗ ಪತ್ರಕರ್ತರು ರಣಹದ್ದುಗಳು ಅಂತ ಅಪ್ಪಣೆ ಕೊಡಿಸಿದರು.
ಅವರಿಗೆ ಸರಕಾರದ ಒಳ್ಳೆ ಕೆಲಸಗಳು ಕಾಣಲ್ಲ. ಅವರಿಗೆ ಬರೀ ಕೆಟ್ಟದ್ದೇ ಕಾಣುತ್ತದೆ. ಹದ್ದುಗಳಿಗೆ ಬರೀ ಹೆಣ ಕಾಣತದೆ, ಅಂತೆಲ್ಲಾ ಹೇಳಿ ಕೆವಿನ್ ಕಾರ್ಟರ್ ಅನ್ನೋ ಹೆಸರಿನ ದಕ್ಷಿಣ ಆಫ್ರಿಕದ ಛಾಯಾ ಚಿತ್ರ ವರದಿಗಾರರ ಬಗ್ಗೆ ಒಂದು ಖೊಟ್ಟಿ ಸುದ್ದಿ (ಫೇಕು ನ್ಯೂಸು) ಹೇಳಿದರು.

ಕಾರ್ಟರ್ ಅವರು ತೆಗೆದ ಒಂದು ಚಿತ್ರ ವಿಶ್ವಖ್ಯಾತಿ ಗಳಿಸಿತ್ತು. ಅದೇನಪಾ ಅಂದರ ಸುಡಾನ್ ದೇಶದಲ್ಲಿ ಕ್ಷಾಮ ಆದಾಗ ಒಂದು ಹಸಿದ ಹುಡುಗ (ಮೆಹತಾ ಸಾಬ್ ಅವರು ತಿಳಕೊಂಡಂಗ ಹುಡುಗಿ ಅಲ್ಲ) ಗಂಜಿ ಕೇಂದ್ರದ ಕಡೆ ತೆವಳಿಕೊಂಡು ಹೋಗುತ್ತಾ ಇರೋ ಚಿತ್ರ. ಅದರ ಹಿಂದೆ ಒಂದು ಹದ್ದು ಆ ಮಗುವನ್ನು ಹಿಂಬಾಲಿಸಿಕೊಂಡು ಬರೋ ಚಿತ್ರ ನೋಡಿದವರ ಕಣ್ಣಾಗ ನೀರು ತರಿಸಿತು. `ಆ ಹದ್ದು ಆ ಕೂಸು ಸಾಯೋದನ್ನ ಕಾಯ್ದುಕೊಂಡು ಕೂತಂಗ, ಅದು ಸತ್ತರ ತಾನು ತಿಂದು ಮೇಜವಾನಿ ಮಾಡಲಿಕ್ಕೆ ತಯಾರಿ ಮಾಡಿಕೋತದೇನೋ’ ಅಂತ ಜನರಿಗೆ ಅನ್ನಿಸಿತು.

ಪ್ರತಿ ಚಿತ್ರದ ಹಿಂದೆ ಐಟಿ ಸೆಲ್ಲಿನ ಕಾಣದ ಕೈಗಳು ಕೆಲಸಾ ಮಾಡೋಹಂಗ, ಇದರ ಹಿಂದನೂ ಕೆಲಸ ಮಾಡಿದವು. ಆ ಚಿತ್ರ ತೆಗೆದ ಛಾಯಾಗ್ರಾಹಕ ಆತ್ಮಹತ್ಯೆ ಮಾಡಿಕೊಂಡ ಅನ್ನೋದು ಎಲ್ಲಾರಿಗೂ ಗೊತ್ತಿತ್ತು. ಆದರ ಕಾರಣ ಗೊತ್ತಿರಲಿಲ್ಲ. ಈ ಐಟಿಕೋರರು ಅದಕ್ಕ ಒಂದು ಕತಿ ಕಟ್ಟಿ ಸುಳ್ಳ- ಸುಳ್ಳ ಕಾರಣ ಕೊಟ್ಟರು. ಆ ಫೋಟೋ ತೆಗದ ಕೆಲವೇ ಕ್ಷಣದೊಳಗ ಆ ಹುಡುಗಿ ಹಸಿವಿನಿಂದ ಸತ್ತು ಹೋತು, ಅದನ್ನ ತಗದ ದುಃಖ ತಾಳಲಾರದ ಫೋಟೋಗ್ರಾಫರ ಕೆಲವೇ ತಿಂಗಳಿಗೆ ಸತ್ತು ಹೋದ ಅಂತ.

ಇನ್ನೂ ಏನಪಾ ಅಂದರ ಒಬ್ಬ ಅಮೇರಿಕಾದ ವರದಿಗಾರ ಆ ಛಾಯಾಗ್ರಾಹಕನನ್ನ ಕೇಳಿದನಂತ – `ನೀ ಬರೇ ಫೋಟೋ ತೆಗೆದ್ಯೋ ಅಥವಾ ಆ ಮಗುವಿಗೆ ಏನಾದರೂ ಸಹಾಯ ಮಾಡಿದ್ಯೋ’ ಅಂತ. `ಇಲ್ಲಾ ನಾ ಬರೇ ಫೋಟೋ ತೆಗೆದೆ’ ಅಂತ ಇವಾ ಅಂದನಂತ. ಅದಕ್ಕ ಅವಾ- ಆ ಕಾಲ್ಪನಿಕ ವರದಿಗಾರ ಇವನಿಗೆ ಬೈದನಂತ. `ಹೌದಪಾ, ದೊಡ ಮನಿಷಾ, ನೀ ಯಾಕ ಸಹಾಯ ಮಾಡತೀದಿ? ನೀ ಬರೇ ನಿನ್ನ ಲಾಭ ಅಷ್ಟ ನೋಡಿಕೊಂಡಿ. ಯಾಕಂದರ ಅಲ್ಲೆ ಎರಡು ರಣಹದ್ದು ಇದ್ದವು. ಒಂದು ಆ ಮಗುವಿನ ಹಿಂದ ಹೊಂಟಿತ್ತು, ಇನ್ನೊಂದು ಕೈಯಾಗ ಕ್ಯಾಮೆರಾ ಹಿಡಕೊಂಡಿತ್ತು’.

ತುಷಾರ ಮೆಹತಾ ಅಂದರ ಚಳಿಗಾಲದ ನಾಯಕ ಅಂತ ಅರ್ಥ. ಇಂತಾ ತಣ್ಣನೆ ಹೃದಯದ ಪುಣ್ಯಾತ್ಮ ತುಷಾರ ಮೆಹತಾ ಅವರು ಈ ಹಸೀ ಸುಳ್ಳನ್ನ ಮೇ ತಿಂಗಳ ಸುಡು ಬಿಸಲಿನ್ಯಾಗ ಕೇಂದ್ರ ಸರಕಾರದ ಪರ ವಾದ ಮಾಡುವಾಗ ನ್ಯಾಯಮೂರ್ತಿಗಳ ಎದುರಿಗೆ ಹೇಳಿದರು. ಒಂದು ಚೂರೂ ಬಿಡದೇ. ಅವರಿಗೆ ಒಂದು ಸಲೆನೂ ಇದು ಸುಳ್ಳು ಇರಬಹುದು ಅಂತ ಸಂದೇಹ ಕಾಡಲಿಲ್ಲ. ಅವರಿಗೆ ಸಂದೇಹ ಬಂದಿರಲಿಕ್ಕಿಲ್ಲ ಅಥವಾ ಸುಳ್ಳು ಅಂತ ಗೊತ್ತಿದ್ದರೂ ಇಡೀ ದೇಶವನ್ನು ನಂಬಿಸಲಿಕ್ಕೆ ಹೇಳಿರಬಹುದು.

ಇದರಾಗ ಸುಳ್ಳು ಏನಪಾ ಅಂದರ, ಅದು ಹುಡುಗಿ ಅಲ್ಲ- ಹುಡುಗ. ಆ ಹುಡುಗ ಕೆಲವೇ ಕ್ಷಣದೊಳಗ ಹಸಿವಿನಿಂದ ಸಾಯಲಿಲ್ಲ. ಆ ಹುಡುಗ 12 ವರ್ಷಗಳ ನಂತರ ಮಲೇರಿಯಾದಿಂದ ಸತ್ತು ಹೋದ. ಇನ್ನ ಕಾರ್ಟರ್ ಆ ಫೋಟೋ ತೆಗೆಯೋವಾಗ ಬರೀ ದೂರದಿಂದ ಆ ಕೆಟ್ಟ ದೃಶ್ಯವನ್ನ ನೋಡಿ ಆನಂದ ಪಡಲಿಲ್ಲ. ಅದರಿಂದ ಅವನಿಗೆ ಸಂಕಟ ಆತು. ಆತ ಆ ಹದ್ದನ್ನು ಓಡಿಸಿ ಆ ಹುಡುಗನ ಜೀವ ಉಳಿಸಿದ. ಆ ನಂತರ ತನ್ನ ಕುಟುಂಬದ ಸಮಸ್ಯೆ, ಸಾಲ, ಮಾದಕ ಪದಾರ್ಥದ ಚಟ ಇತ್ಯಾದಿ ಕಾರಣಗಳಿಂದ ಹಾಗೂ ಸ್ವಲ್ಪ ಮಟ್ಟಿನ ದುಃಖದಿಂದ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡ.

ಆದರ ಸಮಸ್ಯೆ ಇದಲ್ಲ. ಸಮಸ್ಯೆ ಪತ್ರಕರ್ತರನ್ನ ರಣ ಹದ್ದುಗಳು ಅಂತ ನೋಡೊ ಮನಸ್ಥಿತಿಯದ್ದು. ಸರಕಾರ ಮಾಡಿದ್ದೇ ಸರಿ, ಆಳುವ ಪಕ್ಷ ಆಡಿದ್ದೇ ಆಟ ಅಂತ ಹೇಳಿ ಚಪ್ಪಾಳೆ ತಟ್ಟುವವರು ಮಾತ್ರ ವರದಿಗಾರರು, ಬೇರೆಯವರು ರಣಹದ್ದುಗಳು ಅಂತ ತೀರ್ಮಾನಕ್ಕೆ ಬರೋದು. ಪ್ರಜಾಪ್ರಭುತ್ವಕ್ಕ ಇದು ಬಹಳ ಅಪಾಯಕಾರಿ.

ಸರಕಾರ ನಡೆಸುವವರು ಮೈ ಎಲ್ಲಾ ಕಣ್ಣಾಗಿ- ಕಿವಿಯಾಗಿ ಇರಬೇಕು. ತಮ್ಮ ಸರಿ- ತಪ್ಪುಗಳನ್ನು ಎತ್ತಿ ತೋರಿಸುವವರನ್ನು ಗೌರವದಿಂದ ನೋಡಬೇಕು. ಅವರ ಮಾತು ಕೇಳಿಸಕೋಬೇಕು. ಇಲ್ಲದಿದ್ದರೆ ತಮ್ಮ ಆಸ್ಥಾನ ಪಂಡಿತರು ಹೇಳಿದ್ದನ್ನೇ ಕೇಳಿಸಿಕೊಂಡು ಚಕ್ಕಡಿಗೆ ಕಟ್ಟಿದ ಎತ್ತಿನ ಹಂಗ ಕಣ್ಣು ಕಟಿಗೊಂಡು ಮುಂದ ಹೋಗಬೇಕಾಗತದ.

ಆಸ್ಥಾನ ಪಂಡಿತರು ತಮ್ಮ ಬ್ಯಾಳೆ ಬೇಯಿಸಿಕೊಳ್ಳಲಿಕ್ಕೆ ಆಳುವವರನ್ನ ಇಂದ್ರ – ಚಂದ್ರ ಅಂತ ಕರೀತಿರಬಹುದು. ಇದು ಗೊತ್ತಾಗದೇ ಹೋದರ ಸರಕಾರ ಜನರ ಮನಸ್ಸಿನಿಂದ ದೂರ ಹೋಗಬೇಕಾಗತದ. ಉರ್ದು ಕವಿ ಹಬೀಬ್ ಜಾಲಿಬ್ ಅವರು ಇಂಥಾ ಆಸ್ಥಾನ ಪಂಡಿತರ ಬಗ್ಗೆ “ನಾನು ಅವರಿಗೆ ಹಿಂಗಂದೆ” (`ಮೈನೆ ಉಸ್ಸೆ ಎ ಕಹಾ’) ಅಂತ ಒಂದು ಹಾಡು ಬರದಾರ.
ಅದರಾಗ ಈ ಸಾಲು ಬರತಾವು-

ಮೆಹರಬಾನ್ ಸಾಹೇಬರೇ,
ನಿಮ್ಮ ಸರಕಾರ ಎಷ್ಟು ಒಳ್ಳೆಯದು
ಅಂದರ, ಜನ ನಿಮ್ಮ ಕಾಲದಾಗ
ತಮ್ಮ ಖರ್ಚಿನ್ಯಾಗ ಜೈಲು ಸೇರಾಕ ಹತ್ಯಾರು

ಉನ್ನತ ಸ್ಥಾನದಲ್ಲಿ ಇರೋ ನಮ್ಮ ಪಂಥ ಪ್ರಧಾನ ಸೇವಕರು ಇಂಥವರಿಂದ ದೂರ ಇರಬೇಕು. ತಮ್ಮ ಮುಖಕ್ಕೆ ಕನ್ನಡಿ ಹಿಡಿಯೋವಂಥವರನ್ನ ಇಟ್ಟು ಕೊಳ್ಳಬೇಕು, ತಮ್ಮ ಫೋಟೋ ತಗದು ಫೋಟೋ ಶಾಪು ಮಾಡೋರನ್ನಲ್ಲ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನ ಇಡೀ ದೇಶದ ಮೇಲೆ ಹೇರಿದರು. ಇದರಿಂದ ಪೊಲಿಸರು ಹಾಗೂ ಇತರ ಸರಕಾರಿ ಅಧಿಕಾರಿಗಳು ಜನ ಸಾಮಾನ್ಯರ ಮ್ಯಾಲೆ ಘೋರ ದಬ್ಬಾಳಿಕೆ ನಡೆಸಿದರು. ಇಲ್ಲದವರು ಅತೀವ ಹಿಂಸೆ ಅನುಭವಿಸಿದರು. ಇದು ಆಧುನಿಕ ಭಾರತೀಯ ಇತಿಹಾಸದಲ್ಲಿನ ಅತ್ಯಂತ ಕಹಿ ಘಟನೆಗಳಲ್ಲಿ ಒಂದು. ಅದು ಸುಮಾರು 18 ತಿಂಗಳು ಎಗ್ಗಿಲ್ಲದೇ ಮುನ್ನಡೆಯಿತು. ಅದೆಲ್ಲಾ ಮುಗದು ಹೋಗಿ ಐದಾರು ವರ್ಷ ಆದ ಮ್ಯಾಲೆ ಅವರು ಖುಷವಂತಸಿಂಗ್ ಅವರಿಗೆ ಹೇಳಿದರಂತೆ- “ ತುರ್ತು ಪರಿಸ್ಥಿತಿಯ ಸಮಯದಲ್ಲಿ ನಮಗೆ ಫೀಡಬ್ಯಾಕು (ಮರುಮಾಹಿತಿ, ಟೀಕೆ ಟಿಪ್ಪಣಿ) ಸಿಗಲೇ ಇಲ್ಲ. ಸಿಕ್ಕಿದ್ದರೆ, ಜನರ ಕಷ್ಟ ನಮಗೆ ಅರ್ಥ ವಾಗುತ್ತಿತ್ತು. ಅದನ್ನು ಇನ್ನಷ್ಟು ಬೇಗ ಹಿಂತೆಗೆಯಬಹುದಾಗಿತ್ತು. ಜನ ಸುಮ್ಮನೇ ಇದ್ದದ್ದು ನೋಡಿ ನಾವು ಅವರು ಖುಷಿಯಾಗಿದ್ದಾರೆ ಅಂದುಕೊಂಡೆವು” ಅಂತ. ನಮ್ಮೂರ ಕಡೆ ಇದಕ್ಕ ‘ರೊಟ್ಟಿ ಸುಟ್ಟ ಮ್ಯಾಲೆ ಒಲಿ ಆರಿಸಿದ್ದರಂತ’ ಅಂತ ಅಂತಾರ. ಇಂದಿರಾಗಾಂಧಿ ಅವರು ತಮ್ಮನ್ನು ಟೀಕೆ ಮಾಡಿದ ಏಳು ಸಾವಿರಕ್ಕೂ ಹೆಚ್ಚು ಜನ ಪತ್ರಕರ್ತರನ್ನ ಜೈಲಿಗೆ ಹಾಕಿದ್ದರು. ಬಿಬಿಸಿ ಯಂಥಾ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಮೇಲೆ ಒತ್ತಡ ಹೇರಿದ್ದರು. ಜನರ ದನಿಯಾದ ಮಾಧ್ಯಮವನ್ನು ಕಟ್ಟಿ ಹಾಕಿ ನಮಗೆ ಅವರ ದನಿ ಕೇಳಲಿಲ್ಲ ಅಂದರ ಹೆಂಗ?

ಈಗ ನಮ್ಮನ್ನು ಆಳುವವರಿಗೂ ಈ ಸುಬುದ್ಧಿ ಸಕಾಲದಲ್ಲಿ ಬರಲಿ, ಅಲ್ಲವೇ ಮನೋಲ್ಲಾಸಿನಿ?


ಇದನ್ನು ಓದಿ: ಸತತ ಮೂರನೇ ಬಾರಿಗೆ ಜಾಮಿಯಾ ಸಮನ್ವಯ ಸಮಿತಿ ಸದಸ್ಯೆ ಸಫೂರಾ ಜರ್ಗರ್‌ಗೆ ಜಾಮೀನು ನಿರಾಕರಣೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...