2018 ರಲ್ಲಿ ನಡೆಸಿದ ಪ್ರತಿಭಟನೆಗಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷೆ ಘೋಷ್ ಮತ್ತು ಇನ್ನೊಬ್ಬ ವಿದ್ಯಾರ್ಥಿಗೆ ವಿಶ್ವವಿದ್ಯಾಲಯ ಶೋಕಾಸ್ ನೋಟಿಸ್ ನೀಡಿದ್ದು, ಪ್ರತಿಭಟನೆಯನ್ನು “ಅಶಿಸ್ತು ಮತ್ತು ದುಷ್ಕೃತ್ಯ” ಎಂದು ಕರೆದಿದೆ.
ನೋಟಿಸ್ಗೆ ಪ್ರತಿಕ್ರಿಯಿಸಿದ ಆಯಿಷೆ ಘೋಷ್, ಕೊರೊನಾ ಸಾಂಕ್ರಾಮಿಕದಿಂದಾಗಿ ವಿಶ್ವವಿದ್ಯಾಲಯದ ಹಲವಾರು ಆಡಳಿತ ಕಚೇರಿಗಳನ್ನು ಮುಚ್ಚಿದರೂ, ವಿಶ್ವವಿದ್ಯಾಲಯದ ಮುಖ್ಯ ಪ್ರೊಕ್ಟರ್ ಕಚೇರಿಯು, “ವಿದ್ಯಾರ್ಥಿಗಳನ್ನು ಬೆದರಿಸಲು ಮತ್ತು ಶಿಕ್ಷಿಸಲು ಮಾತ್ರ ನಿಯಮಿತವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2018 ರಲ್ಲಿ ವಿಶ್ವವಿದ್ಯಾಲಯವು ಏಕಾಏಕಿ ಶುಲ್ಕ ಹೆಚ್ಚಿಸಿದ್ದು, ಇದರ ವಿರುದ್ದ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆಯನ್ನು ನಡೆಸಿದ್ದರು.
ಇದನ್ನೂ ಓದಿ: ರಾಮ ಮಂದಿರ ಹಗರಣ: ಮಾನನಷ್ಟ ಮೊಕದ್ದಮೆ ಹೂಡಲು ಸೂಚಿಸಿದ ವಿಎಚ್ಪಿ!
ಜೂನ್ 11 ರಂದು ಆಯಿಷೆ ಅವರಿಗೆ ನೋಟಸ್ ನೀಡಲಾಗಿದ್ದು, ಕಳೆದ ವರ್ಷದ ಡಿಸೆಂಬರ್ 5 ರಂದು ನಡೆದ ಅಧ್ಯಯನ ಮಂಡಳಿ (ಬಿಒಎಸ್) ಸಭೆಯನ್ನು ಅವರು ಅಡ್ಡಿಪಡಿಸಿದ್ದಾರೆ ಎಂದು ಹೇಳಲಾಗಿದೆ.
ವಿಶ್ವವಿದ್ಯಾಲಯದ ಮುಖ್ಯ ಪ್ರೊಕ್ಟರ್ ಪ್ರೊಫೆಸರ್ ರಜನೀಶ್ ಕುಮಾರ್ ಮಿಶ್ರಾ ಅವರು ಈ ಬೆಳವಣಿಗೆಯನ್ನು ದೃಡಪಡಿಸಿದ್ದಾರೆ ಎಂದು ಇಂಡಿಯಾ ಟುಡೆ ಉಲ್ಲೇಖಿಸಿದೆ.
ಪ್ರತಿಭಟನೆ ನಡೆದು ಸುಮಾರು ಮೂರು ವರ್ಷಗಳ ನಂತರ ಯಾಕೆ ನೋಟಿಸ್ ನೀಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಶುಲ್ಕ ಹೆಚ್ಚಿಸುವ ವಿಶ್ವವಿದ್ಯಾಲಯದ ನಿರ್ದಾರವನ್ನು ವಿರೋಧಿಸಿ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯವನ್ನು ದೀರ್ಘಕಾಲದವರೆಗೆ ನಿರ್ಬಂಧಿಸಿದ್ದರು, ನಂತರ ಮಧ್ಯಂತರ ಅಡಚಣೆಗಳು ಉಂಟಾದವು. 2020 ರಲ್ಲಿ ಸಾಂಕ್ರಾಮಿಕ ಪ್ರಾರಂಭವಾಯಿತು, ಆದ್ದರಿಂದ ನಾವು ಈಗ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಅವರ ಪ್ರತಿಭಟನೆಯನ್ನು ಅಶಿಸ್ತು ಮತ್ತು ದುಷ್ಕೃತ್ಯ ಎಂದು ವಿಶ್ವವಿದ್ಯಾಲಯ ಕರೆದಿದ್ದು, “ತಮ್ಮ ವಿರುದ್ದ ಯಾಕೆ ಶಿಸ್ತು ಕ್ರಮವನ್ನು ಪ್ರಾರಂಭಿಸಬಾರದು” ಎಂದು ವಿವರಣೆ ನೀಡುವಂತೆ ಕೋರಿದೆ. ನೋಟಿಸ್ಗೆ ಉತ್ತರಿಸಲು ಆಯಿಷೆ ಘೋಷ್ ಅವರಿಗೆ ಜೂನ್ 21 ರವರೆಗೆ ಕಾಲಾವಕಾಶ ನೀಡಲಾಗಿದೆ. “ಉತ್ತರಿಸಲು ವಿಫಲವಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ನೋಟಿಸ್ ಎಚ್ಚರಿಸಿದೆ.
ಇದನ್ನೂ ಓದಿ: ಕೊರೊನಾ ನಿರ್ವಹಣೆ ಟೀಕೆಗಳಿಂದ ಬಚಾವಾಗಲು ಬಿಜೆಪಿಯ ಹೊಸ ಯೋಜನೆ
ನೋಟಿಸ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಆಯಿಷೆ ಘೋಷ್, ಜೆಎನ್ಯು ಆಡಳಿತಕ್ಕೆ ಮಾಡಲು ಕೆಲಸವಿಲ್ಲದಿದ್ದರೆ ನಮ್ಮಲ್ಲಿ ಒಂದು ಪಟ್ಟಿಯಿದೆ ಎಂದು ಹೇಳಿದ್ದಾರೆ. ಅವರು, “ಕೋವಿಡ್ ಆರೈಕೆ ಕೇಂದ್ರವನ್ನು ನಿರ್ಮಿಸಿ. ಕ್ಯಾಂಪಸ್ನಲ್ಲಿ ನೀರಿನ ಬಿಕ್ಕಟ್ಟನ್ನು ನಿಭಾಯಿಸಿ. ಫೆಲೋಶಿಪ್ ಅನ್ನು ಸರಿಯಾಗಿ ವಿತರಿಸಿ, ಎಲ್ಲರಿಗೂ ಲಸಿಕೆ ನೀಡಿ” ಎಂದು ಬರೆದಿದ್ದಾರೆ.
If the JNU Admin is not finding work, we have a list :
-Build COVID Care centre
-Tackle water crisis in campus
-Disburse fellowships
-Provide vaccination for allServing notices and intimidating students won't stop us from raising our voices. https://t.co/iS5yAUKx3O
— Aishe (ঐশী) (@aishe_ghosh) June 15, 2021
“ಇಷ್ಟೆಲ್ಲಾ ಸಮಸ್ಯೆ ಇರುವಾಗ ಮುಖ್ಯ ಕಚೇರಿ ವಿದ್ಯಾರ್ಥಿಗಳನ್ನು ಬೆದರಿಸಲು ಮತ್ತು ಶಿಕ್ಷಿಸಲು ನಿಯಮಿತವಾಗಿ ಕಾರ್ಯನಿರ್ವಹಿಸುತ್ತಿದೆ. ನೋಟಿಸ್ಗಳನ್ನು ನೀಡುವುದು ಮತ್ತು ವಿದ್ಯಾರ್ಥಿಗಳನ್ನು ಬೆದರಿಸುವುದರ ಮೂಲಕ ನಾವು ಧ್ವನಿ ಎತ್ತುದನ್ನು ತಡೆಯಲು ಸಾಧ್ಯವಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಂಗಾಳ ರಾಜ್ಯಪಾಲರ ಭೇಟಿಗೆ 24 ಬಿಜೆಪಿ ಶಾಸಕರ ಗೈರು: ಟಿಎಂಸಿಗೆ ವಲಸೆ ತಡೆಯಲು ಬಿಜೆಪಿ ಹರಸಾಹಸ