Homeಮುಖಪುಟಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಗಾಂಧಿಯವರ ಅಹಿಂಸೆಯ ದಾರಿಯಿಂದ ಸ್ವಾತಂತ್ರ‍್ಯ ಬರಲಿಲ್ಲ ಎಂಬ ಮಾತನ್ನು ಅವರು 21ನೆಯ ಶತಮಾನದಲ್ಲೂ ಮತ್ತೆ ಮತ್ತೆ ಯುವಪೀಳಿಗೆಗಳ ಮನಸ್ಸಿನಲ್ಲಿ ತುಂಬಲು ಶ್ರಮಿಸುತ್ತಿದ್ದಾರೆ.

- Advertisement -
- Advertisement -

ನಾಜಿ ಜರ್ಮನಿಯನ್ನು ಕಟ್ಟಿದ ಪ್ರಮುಖ ರೂವಾರಿ ಅಡಾಲ್ಪ್ ಹಿಟ್ಲರ್ ಎಷ್ಟು ಮುಖ್ಯನೋ, ಅವನ ಸಚಿವ ಸಂಪುಟದಲ್ಲಿ ಪ್ರಪೊಗಾಂಡ ಸಚಿವನಾಗಿದ್ದ ಗೊಬೆಲ್ಸ್ ಕೂಡ ಅಷ್ಟೇ ಪ್ರಮುಖ. ಆ ಕಾಲದ ಜರ್ಮನಿಯ, ಜರ್ಮನಿಯ ಜನಸಮುದಾಯಗಳ ವಿವೇಕ ಮತ್ತು ಸಾಮಾಜಿಕ ಸಾಮರಸ್ಯದ ಅವಸಾನಕ್ಕೂ ಇವರಿಬ್ಬರೂ ಮುಖ್ಯ ರೂವಾರಿಗಳು ಎಂದು ಬಿಡಿಸಿ ಹೇಳಬೇಕಿಲ್ಲ. ಸರಳವಾಗಿ ಹೇಳುವುದಾದರೆ, ಹಿಟ್ಲರ್‌ನ ಬಲಗೈ ಭಂಟನಾಗಿದ್ದ ಗೊಬೆಲ್ಸ್.

ನಾಜಿ ಜರ್ಮನಿಯ ರೇಡಿಯೋ, ಪತ್ರಿಕೆಗಳು, ರಂಗಭೂಮಿ, ಸಾಹಿತ್ಯ, ಸಂಗೀತ, ಪಿಲ್ಮ್‌ಗಳು ಎಲ್ಲವನ್ನೂ ಬಹಳ ಪರಿಣಾಮಕಾರಿಯಾಗಿ ಬಳಸಿ, ನಿಭಾಯಿಸಿ ಜ್ಯೂಗಳ ವಿರುದ್ಧ ಜನಾಂಗೀಯ ದ್ವೇಷದ ಮನೋಭಾವವನ್ನು ಬಹುಸಂಖ್ಯಾತ ಜರ್ಮನ್ನರಿಗೆ ಸಮರ್ಥವಾಗಿ ತುಂಬಲು ಸಫಲನಾಗಿದ್ದ. ಜರ್ಮನ್ ವಿರೋಧಿ ಸಾಹಿತ್ಯ ಎಂದು ವಿಂಗಡಿಸಿ ಸಾವಿರಾರು ಪುಸ್ತಕಗಳನ್ನು ನಡುರಸ್ತೆಯಲ್ಲಿ ಸುಟ್ಟ ದುಷ್ಕೃತ್ಯದ ಶ್ರೇಯಸ್ಸು ಇವನದ್ದೇ. ಇವತ್ತಿಗೂ ವಿಶ್ವದಾದ್ಯಂತ ಬಲಪಂಥೀಯ ಸಂಘಟನೆಗಳಿಗೆ, ಸರ್ವಾಧಿಕಾರದ ಧೋರಣೆಯ ಸರ್ಕಾರಗಳಿಗೆ ಇವನು ದ್ರೋಣಾಚಾರ್ಯ. ಇವನು ತನ್ನ ಸಿದ್ಧಾಂತಗಳನ್ನು ಪ್ರಚಾರ ನಡೆಸಲು ತೊಡಗಿಸಿಕೊಂಡ ದಾರಿಗಳನ್ನು ಇವತ್ತಿಗೂ ಇವರೆಲ್ಲಾ ಅನುಕರಿಸುತ್ತಾರೆ.

ಗೊಬೆಲ್ಸ್

ಆಸಕ್ತಿದಾಯಕವಾಗಿ ಗೊಬೆಲ್ಸ್ ತನ್ನ ಕೊನೆಯ ವರ್ಷಗಳಲ್ಲಿ ದಿನಚರಿಯನ್ನು ಬರೆದುಕೊಳ್ಳುತ್ತಿದ್ದ. ಆ ದಿನಚರಿಗಳಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಕೆಲವು ಸಾಲುಗಳನ್ನು ಮೂರು ವಿಭಿನ್ನ ದಿನಾಂಕಗಳಂದು ದಾಖಲಿಸಿದ್ದಾನೆ. ಮಹಾತ್ಮ ಗಾಂಧಿಯವರ ಬಗ್ಗೆ ಅವನಿಗಿದ್ದ ಅಸಹನೆಗೂ, ಅವನ ಕಾಲಕ್ಕೆ ಗಾಂಧಿಯವರ ಬಗ್ಗೆ ಭಾರತದಲ್ಲಿ ಆರ್.ಎಸ್.ಎಸ್ ಸಂಘಟನೆ ಮತ್ತು ಹಿಂದು ಮಹಾಸಭಾದ ಮುಖಂಡರು ತೋರಿಸುತ್ತಿದ್ದ ಅಸಹನೆ, ದ್ವೇಷಕ್ಕೂ ಬಹಳ ಹತ್ತಿರದ ಹೋಲಿಕೆಗಳಿವೆ. ಇಟಲಿಯ ಫ್ಯಾಸಿಸ್ಟ್‌ಗಳಿಂದ, ಜರ್ಮನಿಯ ನಾಜಿಗಳಿಂದ ಅಂದಿನ ಆರ್‌ಎಸ್‌ಎಸ್ ಮತ್ತು ಹಿಂದು ಮಹಾಸಭಾದ ನಾಯಕರು ಉಗ್ರ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿದ್ದು, ಮುಸ್ಲಿಮರ ವಿರುದ್ಧ ಜನಾಂಗೀಯ ದ್ವೇಷವನ್ನು ತೀವ್ರತರಕ್ಕೆ ತೆಗೆದುಕೊಂಡು ಹೋಗಿದ್ದು ಈಗಾಗಲೇ ಹಲವು ಬಾರಿ ದಾಖಲು ಆಗಿದೆ. ಗಾಂಧಿಯ ಬಗ್ಗೆ ದ್ವೇಷವನ್ನೂ ನಾಜಿಗಳು ಕಲಿಸಿಕೊಟ್ಟರೇ?

ಏಪ್ರಿಲ್ 6, 1942ರಂದು ತನ್ನ ಡೈರಿಯಲ್ಲಿ ಗೋಬೆಲ್ಸ್ ಗಾಂಧಿ ಬಗ್ಗೆ ಹೀಗೆ ನಮೂದಿಸಿದ್ದಾನೆ.
“… ಗಾಂಧಿ ಇಂದು ಮುದ್ರಣ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬ್ರಿಟಿಷರ ಶೋಷಣೆಯ ವಿರುದ್ಧ ಸಂದರ್ಶನ ಪ್ರಕಟಿಸಿದ್ದಾರೆ. ಶಾಂತಿಯುತ ಪ್ರತಿಭಟನೆಯ ಹೊರತಾಗಿ ಇವರು ಬೇರೆ ಯಾವ ತಂತ್ರಗಳನ್ನು ಮುಂದುಮಾಡಿಲ್ಲ. ಶಾಂತಿಯುತ ಪ್ರತಿಭಟನೆ ಇಂಗ್ಲಿಷ್‌ ಜನಗಳಿಗೆ ಸ್ವಾಭಾವಿಕವಾಗಿ ಯಾವುದೇ ತೊಂದರೆ ನೀಡುವುದಿಲ್ಲ. ಗಾಂಧಿ ನೀತಿಗಳು ಭಾರತಕ್ಕೆ ದುರದೃಷ್ಟವನ್ನು ಹೊರತುಪಡಿಸಿ ಬೇರೇನೂ ತಂದುಕೊಟ್ಟಿಲ್ಲ. ಈ ನಾಲ್ಕು ನೂರ ಐವತ್ತು ದಶಲಕ್ಷ ಜನ ಶಕ್ತಿಯುತವಾದ ರಾಷ್ಟ್ರೀಯತೆಯ, ಭಾರತ ಸ್ವಾತಂತ್ರ‍್ಯ ಸಂಗ್ರಾಮದ ರಾಜಕೀಯವನ್ನು ಕಟ್ಟಿದ್ದರೆ ಇವತ್ತಿಗೆ ಇರುವ ಸ್ಥಿತಿಗಿಂತಲೂ ಎಷ್ಟೋ ಮುಂದೆ ಇರುತ್ತಿದ್ದರು”

ಇದು ಇವತ್ತಿಗೂ ಸಂಘ ಪರಿವಾರದವರು ಉಚ್ಚರಿಸುವ ಮಾತುಗಳು. ಗಾಂಧಿಯವರ ಅಹಿಂಸೆಯ ದಾರಿಯಿಂದ ಸ್ವಾತಂತ್ರ‍್ಯ ಬರಲಿಲ್ಲ ಎಂಬ ಮಾತನ್ನು ಅವರು 21ನೆಯ ಶತಮಾನದಲ್ಲೂ ಮತ್ತೆ ಮತ್ತೆ ಯುವಪೀಳಿಗೆಗಳ ಮನಸ್ಸಿನಲ್ಲಿ ತುಂಬಲು ಶ್ರಮಿಸುತ್ತಿದ್ದಾರೆ. ಉಗ್ರ ರಾಷ್ಟ್ರೀಯತೆಯ ಪ್ರತಿಪಾದನೆಯಿಂದ, ಜನಾಂಗೀಯ ದ್ವೇಷಗಳಿಂದ, ಹಿಂಸೆಯಿಂದ ಜರ್ಮನಿ ಮತ್ತು ಇತರ ಯೂರೋಪ್ ದೇಶಗಳು ಸರ್ವನಾಶವಾಗಿ ಹೋಗಿದ್ದರೂ, ಭಾರತದಲ್ಲಿ ಇಂದಿಗೂ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ, ಸಾಹಿತ್ಯ ಸಿನೆಮಾಗಳಲ್ಲಿ ಇಂತಹ ಪ್ರತಿಪಾದನೆಗಳು ಪಡೆಯುತ್ತಿರುವ ಸ್ಥಾನ ಆತಂಕ ಮೂಡಿಸುತ್ತದೆ.

ಏಪ್ರಿಲ್ 20, 1942ರಂದು ಮತ್ತೆ ಗಾಂಧಿ ಅವರ ಅಹಿಂಸಾಮಾರ್ಗವನ್ನು ಛೇಡಿಸಿ ತನ್ನ ದಿನಚರಿಯಲ್ಲಿ ಗೋಬೆಲ್ಸ್ ಈ ರೀತಿ ದಾಖಲಿಸಿಕೊಂಡಿದ್ದಾನೆ.

“ಗಾಂಧಿ ಇವತ್ತು ನೀಡಿದ ಸಂದರ್ಶನದಲ್ಲಿ ಮತ್ತೆ ಅಹಿಂಸೆಯನ್ನು ಆಚರಿಸುವಂತೆ ಕರೆಕೊಟ್ಟಿದ್ದಾರೆ. ಭಾರತವನ್ನು ಇನ್ನೂ ಹೆಚ್ಚಿನ ಸಮಸ್ಯೆಗೆ ಎಳೆಯುವುದಕ್ಕೆ ಲೆಕ್ಕಾಚಾರದ ನಡೆ ಇದು”

ಅಂದೇ ತನ್ನ ದಿನಚರಿಯಲ್ಲಿ ಹಿಟ್ಲರ್ ಹುಟ್ಟುಹಬ್ಬವನ್ನು ಆಚರಿಸಿದ ಬಗ್ಗೆ, ಅಲ್ಲಿ ತಾನು ಕೊಟ್ಟ ಭಾಷಣದ ಬಗ್ಗೆ ಬರೆದುಕೊಳ್ಳುತ್ತಾನೆ. ಅಂದರೆ ತನ್ನ ಸರ್ವಾಧಿಕಾರಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯ ದಿನವೂ ಗಾಂಧಿ ಮತ್ತು ಅಹಿಂಸೆಯ ಬಗೆಗಿನ ಗಾಂಧಿ ಮಾತುಗಳು ಈ ಕ್ರೂರಿಯನ್ನು ಕಾಡಿವೆ. ಇವತ್ತಿಗೂ ಗಾಂಧಿ ಮತ್ತು ಗಾಂಧಿ ಹೇಳಿಕೊಟ್ಟ ಪ್ರತಿಭಟನೆಯ ಪಾಠಗಳು ಸರ್ವಾಧಿಕಾರವನ್ನು ಬಯಸುವ ವರ್ಗಕ್ಕೆ ಭೂತವಾಗಿ ಕಾಡುತ್ತಲೇ ಇದೆ. ಆದುದರಿಂದಲೇ ಗಾಂಧಿಯನ್ನು, ಗಾಂಧಿ ಹೇಳಿಕೊಟ್ಟ ಪಾಠವನ್ನು ಅನುಸರಿಸುವ ಯಾರನ್ನೇ ಆಗಲಿ, ಅವರ ಚಾರಿತ್ರ‍್ಯಹರಣಕ್ಕೆ ಈ ಗುಂಪು ಸದಾಕಾಲ ಸಿದ್ಧರಾಗಿ ಕಾದಿರುತ್ತಾರೆ.

ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ, ನಡೆದ ಘರ್ಷಣೆಗಳಿಗೆ ಗಾಂಧಿಯವರ ಮೇಲೆ ನೇರ ಆರೋಪ ಹೊರಿಸಿ ಬಂಧಿಸಿದಾಗ, ಗಾಂಧಿ ಆತ್ಮಶುದ್ಧಿಗಾಗಿ ಜೈಲಿನಲ್ಲಿಯೇ 21 ದಿನಗಳ ಉಪವಾಸ ಮಾಡುತ್ತಾರೆ. ಗಾಂಧಿಯವರು ಉಪವಾಸ ಅಂತ್ಯ ಮಾಡಿದ ನಂತರ ಮಾರ್ಚ್ 5, 1943 ರಂದು ಗೊಬೆಲ್ಸ್ ತನ್ನ ದಿನಚರಿಯಲ್ಲಿ ಹೀಗೆ ದಾಖಲಿಸಿದ್ದಾನೆ.

“ಗಾಂಧಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಅವರು ಇಡೀ ಪ್ರಪಂಚಕ್ಕೆ ತಮಾಷೆ ತೋರಿಸಿದ್ದಾರೆ ಎಂಬುದು ನನ್ನ ನಂಬಿಕೆ. ಇಂಗ್ಲಿಷ್‌ ದಿನಪತ್ರಿಕೆಗಳು ಇದನ್ನು ವರದಿ ಮಾಡಿ ತಮ್ಮದೇ ಆದ ವ್ಯಂಗ್ಯವನ್ನು ಮತ್ತು ಲೇವಡಿ ಮಾಡುವ ಭಾಷೆಯನ್ನು ಸೇರಿಸಿದ್ದಾರೆ. ಗಾಂಧಿ ಸಿಕ್ಕಾಪಟ್ಟೆ ಬುದ್ಧಿವಂತ. ಆತ ಸಂತ ಎಂದು ನಾನು ಯಾವುದೇ ಕಾರಣಕ್ಕೂ ನಂಬುವುದಿಲ್ಲ. ಆದರೆ ಈ ಬಾರಿ ಆತನ ನಾಟಕೀಯ ಉಪವಾಸದಿಂದ ಇಂಗ್ಲಿಷರು ಮೋಸಹೋಗಲಿಲ್ಲ”

ಗಾಂಧಿ ಉಪವಾಸದ ಬಗ್ಗೆ, ಗಾಂಧಿ ಅವರು ಬಯಸುತ್ತಿದ್ದ ಹಿಂದೂ-ಮುಸ್ಲಿಮ್ ಸಾಮರಸ್ಯದ ಬಗ್ಗೆ ಆರ್‌ಎಸ್‌ಎಸ್ ಕೂಡ ಹಲವು ಬಾರಿ ಮೂದಲಿಸಿರುವುದು ದಾಖಲಾಗಿದೆ. ಬಂಗಾಳದಲ್ಲಿ ಹಿಂದೂ ಮುಸ್ಲಿಮರ ಕೋಮುಗಲಭೆಯನ್ನು ಕೊನೆಗಾಣಿಸಲು ಕೊನೆಯ ಅಸ್ತ್ರ ಎಂಬುವಂತೆ ಗಾಂಧಿ ಅವರು ಉಪವಾಸ ಕೂತಾಗ, ಆರ್‌ಎಸ್‌ಎಸ್ ಮುಖವಾಣಿ ಪತ್ರಿಕೆ ಆರ್ಗನೈಸರ್‌ನಲ್ಲಿ “ರೋಮ್ ಹತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ” ಎಂದಿದ್ದಲ್ಲದೆ “ಇತಿಹಾಸ ನಮ್ಮ ಕಣ್ಣೆದುರಿಗೆ ಇಲ್ಲಿ ಮರುಕಳಿಸುತ್ತಿದೆ. ಕಲ್ಕತ್ತಾದಿಂದ ಮಹಾತ್ಮ ಗಾಂಧಿ ಇಸ್ಲಾಮ್‌ನನ್ನು ಹಾಡಿಹೊಗಳುತ್ತಾ, ಅಲ್ಲ ಓ ಅಕ್ಬರ್ ಕೂಗುತ್ತಿದ್ದಾರೆ ಮತ್ತು ಹಿಂದೂಗಳನ್ನು ಅದನ್ನೇ ಮಾಡಲು ಪ್ರೇರೇಪಿಸುತ್ತಿದ್ದಾರೆ ಆದರೆ ಪಂಜಾಬ್ ಮತ್ತು ಇತರೆಡೆಗಳಲ್ಲಿ ಇಸ್ಲಾಮ್ ಮತ್ತು ಅಲ್ಲ ಓ ಅಕ್ಬರ್ ಕೂಗಿನ ಹೆಸರಿನಲ್ಲಿ ಸ್ವಲ್ಪವೂ ನಾಚಿಕೆಯಿಲ್ಲದ ಬರ್ಬರ ಕ್ರೌರ್ಯ ಮತ್ತು ದೌರ್ಜನ್ಯ ನಡೆಯುತ್ತಿದೆ” ಎಂದು ಬರೆದು ಕೋಮುದಳ್ಳುರಿಯ ಬೆಂಕಿಯನ್ನು ಕಾರಿಕೊಂಡಿತ್ತು.

ಹೀಗೆ ಗಾಂಧಿ ದ್ವೇಷ, ಹಿಂಸೆಯ ಬಗ್ಗೆ ಅತಿರೇಕದ ಪ್ರತಿಪಾದನೆ, ಉಗ್ರ ಧಾರ್ಮಿಕ ರಾಷ್ಟ್ರೀಯತೆ ಮತ್ತು ಜನಾಂಗೀಯ ದ್ವೇಷಗಳು ಗಾಂಧಿ ಕೊಲೆಗೂ ಪ್ರೇರೇಪಿಸಿದ್ದಲ್ಲದೆ, ಹಲವು ಪೀಳಿಗೆಗಳ ಮನಸ್ಸುಗಳನ್ನು ಭ್ರಷ್ಟಗೊಳಿಸಿತು.

ಇಂತಹ ಚಿಂತನೆಗಳನ್ನು ಜರ್ಮನಿಯಲ್ಲಿ ಹರಡಿದ ಗೊಬೆಲ್ಸ್, ಗಾಂಧಿ ಬಗ್ಗೆ ತನ್ನ ದಿನಚರಿಯಲ್ಲಿ ಮೇಲಿನ ಹೇಳಿಕೆ ದಾಖಲಿಸಿದ ಮೇಲೆ ಸುಮಾರು ಎರಡು ವರ್ಷಗಳ ಕಾಲ ಬದುಕಿದ್ದ. ಹಿಟ್ಲರ್ ತನ್ನ ಪಿಸ್ತೂಲಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಆಗ ಜರ್ಮನಿಯ ಚಾನ್ಸಲರ್ ಆಗಿ ನೇಮಕಗೊಂಡ ಗೊಬೆಲ್ಸ್ ಸರ್ವಾಧಿಕಾರ ನಡೆಸಿದ್ದು ಕೇವಲ ಒಂದು ದಿನ. ಅಂದೇ ತನ್ನ ಆರು ಜನ ಮಕ್ಕಳು ಮತ್ತು ಪತ್ನಿಗೆ ವಿಷ ಉಣ್ಣಿಸಿ ತಾನು ವಿಷ ಕುಡಿದು ಏಪ್ರಿಲ್ 30, 1945ರಂದು ತಾನಿದ್ದ ಬಂಕರ್ ನಲ್ಲಿಯೇ ಆತ್ಮಹತ್ಯೆಗೆ ಶರಣಾದ.

ಹಿಟ್ಲರ್, ಗೊಬೆಲ್ಸ್ ಮತ್ತು ಇತರ ನಾಜಿಗಳು ಸೃಷ್ಟಿಸಿದ ಕ್ರೌರ್ಯದ ಪಾಠಗಳನ್ನು ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ಈಗಲೂ ಅನುಕರಿಸುವ ಜನ ಇರುವುದು ದುರಂತ. ಇನ್ನಾದರೂ ಗಾಂಧಿ ಚಿಂತನೆಗಳಿಗೆ ಪ್ರಚಾರ ಸಿಕ್ಕಿ, 21ನೆಯ ಶತಮಾನದ ಅವಸಾನವನ್ನು ತಡೆಯಬೇಕಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮನೆಗೆ ಬರುವ ಸಂದರ್ಶಕರೊಂದಿಗೆ ಪಿಎಸ್‌ಐ ‘ಅಸಭ್ಯ’ ವರ್ತನೆ; ಆಕ್ರೋಶ ವ್ಯಕ್ತಪಡಿಸಿದ ಅಭಿಜೀತ್ ದಿಪ್ಕೆ

ಛತ್ರಪತಿ ಸಂಭಾಜಿನಗರದಲ್ಲಿರುವ ತಮ್ಮ ಮನೆಯಲ್ಲಿ ಭದ್ರತಾ ಪಡೆಯ ಭಾಗವಾಗಿ ನಿಯೋಜಿಸಲಾದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಅವರು, ಜನರು ನಮ್ಮನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದಿಪ್ಕೆ...

ಮೋಹನ್ ಭಾಗವತ್‌ ದೇಶಪ್ರವೇಶ ನಿಷೇಧಿಸುವಂತೆ ಕೆನಡಾದ 40ಕ್ಕೂ ಹೆಚ್ಚು ಸಂಘಟನೆಗಳಿಂದ ಸರ್ಕಾರಕ್ಕೆ ಒತ್ತಾಯ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್‌ ದೇಶದೊಳಗೆ ಪ್ರವೇಶಿಸುವುದನ್ನು ತಡೆಯುವಂತೆ ಕೆನಡಾದ 40ಕ್ಕೂ ಹೆಚ್ಚು ನಾಗರಿಕ, ಮಾನವ ಹಕ್ಕುಗಳು, ಕಾರ್ಮಿಕ ಮತ್ತು ಧಾರ್ಮಿಕ ಸಂಘಟನೆಗಳು ಅಲ್ಲಿನ ಸಾರ್ವಜನಿಕ ಸುರಕ್ಷತಾ ಸಚಿವರಿಗೆ...

SIR: BLO ಮನೆ-ಮನೆ ಭೇಟಿ ಗಡುವು ಆಗಸ್ಟ್‌ 17ರವರೆಗೆ ವಿಸ್ತರಣೆ!

ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ECI) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮನೆ-ಮನೆ ಗಣತಿ ಪ್ರಕ್ರಿಯೆಯ ಗಡುವನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದ್ದು,...

ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲ್ಲ: ತಮಿಳುನಾಡು ಸಿಎಂ ವಿಜಯ್

ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ವಿಚಾರವಾಗಿ ತಮಿಳುನಾಡಿನಲ್ಲಿ ರಾಜಕೀಯ ಕಾವು ಏರುತ್ತಿರುವ ಬೆನ್ನಲ್ಲೇ, ಈ ಕುರಿತು ತಕ್ಷಣವೇ ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಯಾವುದೇ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ....

ಬೆಂಗಳೂರಿನ ಜಕ್ಕೂರಿನಲ್ಲಿ 22-23 ವರ್ಷದ ಇಬ್ಬರು ನೇಪಾಳಿ ಯುವತಿಯರ ಶವಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಜಕ್ಕೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಸೀರೆಯಿಂದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಮೃತರನ್ನು ನೇಪಾಳ...

NEET Paper Leak: ಒಂದೇ ಒಂದು CCTV ಇರಲಿಲ್ಲ, ಚೆಕಿಂಗ್ ಇರಲಿಲ್ಲ! ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಹೇಗೆ? CBI ವರದಿ ಇಲ್ಲಿದೆ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA)...

ಉತ್ತರಾಖಂಡ : ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ SIR ನೋಟಿಸ್

ಉತ್ತರಾಖಂಡದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ತಲುಪಿದೆ. ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ),...

SIR: ಗಣತಿ ನಮೂನೆ ವಾಪಸ್‌ಗೆ ನಾಳೆಯೇ ಅಂತಿಮ ಗಡುವು, 1.10 ಕೋಟಿ ಮತದಾರರ ಹೆಸರು ಡಿಲೀಟ್‌!

ರಾಜ್ಯಾದ್ಯಂತ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮೊದಲ ಹಂತವಾದ ಗಣತಿ ನಮೂನೆಗಳನ್ನು ಭರ್ತಿ ಮಾಡಿ ವಾಪಸ್ ನೀಡಲು ನಾಳೆ (ಆಗಸ್ಟ್ 8) ಕೊನೆಯ ದಿನವಾಗಿದೆ. ಈ ನಡುವೆ...

ಕರ್ನಾಟಕ ಎಸ್ಐಆರ್: ಬೆಂಗಳೂರಿನ ಅರ್ಧದಷ್ಟು ಮತದಾರರು ‘ಹೊರಕ್ಕೆ’: ರಾಜ್ಯದಲ್ಲಿ 1.11 ಕೋಟಿ ಜನರು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ

ಕರ್ನಾಟಕದಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಕೈಗೊಂಡಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯು ರಾಜ್ಯದ ಕೋಟ್ಯಂತರ ನಾಗರಿಕರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಭೀತಿಯನ್ನು ಹುಟ್ಟುಹಾಕಿದೆ. ಪ್ರಜಾಪ್ರಭುತ್ವ...

ಎರಡು ನ್ಯೂಸ್ ಚಾನೆಲ್‌ಗಳಿಗೆ ಉದಯನಿಧಿ ಲೀಗಲ್ ನೋಟಿಸ್ : ಸಾರ್ವಜನಿಕ ಕ್ಷಮೆಯಾಚನೆ, 100 ಕೋಟಿ ಪರಿಹಾರಕ್ಕೆ ಆಗ್ರಹ-ವರದಿ

ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ತಮ್ಮ ಇತ್ತೀಚಿನ ಹೇಳಿಕೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾನನಷ್ಟ ಆರೋಪ ಮಾಡಿ ಎರಡು ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ...