Homeಮುಖಪುಟಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಗಾಂಧಿಯವರ ಅಹಿಂಸೆಯ ದಾರಿಯಿಂದ ಸ್ವಾತಂತ್ರ‍್ಯ ಬರಲಿಲ್ಲ ಎಂಬ ಮಾತನ್ನು ಅವರು 21ನೆಯ ಶತಮಾನದಲ್ಲೂ ಮತ್ತೆ ಮತ್ತೆ ಯುವಪೀಳಿಗೆಗಳ ಮನಸ್ಸಿನಲ್ಲಿ ತುಂಬಲು ಶ್ರಮಿಸುತ್ತಿದ್ದಾರೆ.

- Advertisement -
- Advertisement -

ನಾಜಿ ಜರ್ಮನಿಯನ್ನು ಕಟ್ಟಿದ ಪ್ರಮುಖ ರೂವಾರಿ ಅಡಾಲ್ಪ್ ಹಿಟ್ಲರ್ ಎಷ್ಟು ಮುಖ್ಯನೋ, ಅವನ ಸಚಿವ ಸಂಪುಟದಲ್ಲಿ ಪ್ರಪೊಗಾಂಡ ಸಚಿವನಾಗಿದ್ದ ಗೊಬೆಲ್ಸ್ ಕೂಡ ಅಷ್ಟೇ ಪ್ರಮುಖ. ಆ ಕಾಲದ ಜರ್ಮನಿಯ, ಜರ್ಮನಿಯ ಜನಸಮುದಾಯಗಳ ವಿವೇಕ ಮತ್ತು ಸಾಮಾಜಿಕ ಸಾಮರಸ್ಯದ ಅವಸಾನಕ್ಕೂ ಇವರಿಬ್ಬರೂ ಮುಖ್ಯ ರೂವಾರಿಗಳು ಎಂದು ಬಿಡಿಸಿ ಹೇಳಬೇಕಿಲ್ಲ. ಸರಳವಾಗಿ ಹೇಳುವುದಾದರೆ, ಹಿಟ್ಲರ್‌ನ ಬಲಗೈ ಭಂಟನಾಗಿದ್ದ ಗೊಬೆಲ್ಸ್.

ನಾಜಿ ಜರ್ಮನಿಯ ರೇಡಿಯೋ, ಪತ್ರಿಕೆಗಳು, ರಂಗಭೂಮಿ, ಸಾಹಿತ್ಯ, ಸಂಗೀತ, ಪಿಲ್ಮ್‌ಗಳು ಎಲ್ಲವನ್ನೂ ಬಹಳ ಪರಿಣಾಮಕಾರಿಯಾಗಿ ಬಳಸಿ, ನಿಭಾಯಿಸಿ ಜ್ಯೂಗಳ ವಿರುದ್ಧ ಜನಾಂಗೀಯ ದ್ವೇಷದ ಮನೋಭಾವವನ್ನು ಬಹುಸಂಖ್ಯಾತ ಜರ್ಮನ್ನರಿಗೆ ಸಮರ್ಥವಾಗಿ ತುಂಬಲು ಸಫಲನಾಗಿದ್ದ. ಜರ್ಮನ್ ವಿರೋಧಿ ಸಾಹಿತ್ಯ ಎಂದು ವಿಂಗಡಿಸಿ ಸಾವಿರಾರು ಪುಸ್ತಕಗಳನ್ನು ನಡುರಸ್ತೆಯಲ್ಲಿ ಸುಟ್ಟ ದುಷ್ಕೃತ್ಯದ ಶ್ರೇಯಸ್ಸು ಇವನದ್ದೇ. ಇವತ್ತಿಗೂ ವಿಶ್ವದಾದ್ಯಂತ ಬಲಪಂಥೀಯ ಸಂಘಟನೆಗಳಿಗೆ, ಸರ್ವಾಧಿಕಾರದ ಧೋರಣೆಯ ಸರ್ಕಾರಗಳಿಗೆ ಇವನು ದ್ರೋಣಾಚಾರ್ಯ. ಇವನು ತನ್ನ ಸಿದ್ಧಾಂತಗಳನ್ನು ಪ್ರಚಾರ ನಡೆಸಲು ತೊಡಗಿಸಿಕೊಂಡ ದಾರಿಗಳನ್ನು ಇವತ್ತಿಗೂ ಇವರೆಲ್ಲಾ ಅನುಕರಿಸುತ್ತಾರೆ.

ಗೊಬೆಲ್ಸ್

ಆಸಕ್ತಿದಾಯಕವಾಗಿ ಗೊಬೆಲ್ಸ್ ತನ್ನ ಕೊನೆಯ ವರ್ಷಗಳಲ್ಲಿ ದಿನಚರಿಯನ್ನು ಬರೆದುಕೊಳ್ಳುತ್ತಿದ್ದ. ಆ ದಿನಚರಿಗಳಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಕೆಲವು ಸಾಲುಗಳನ್ನು ಮೂರು ವಿಭಿನ್ನ ದಿನಾಂಕಗಳಂದು ದಾಖಲಿಸಿದ್ದಾನೆ. ಮಹಾತ್ಮ ಗಾಂಧಿಯವರ ಬಗ್ಗೆ ಅವನಿಗಿದ್ದ ಅಸಹನೆಗೂ, ಅವನ ಕಾಲಕ್ಕೆ ಗಾಂಧಿಯವರ ಬಗ್ಗೆ ಭಾರತದಲ್ಲಿ ಆರ್.ಎಸ್.ಎಸ್ ಸಂಘಟನೆ ಮತ್ತು ಹಿಂದು ಮಹಾಸಭಾದ ಮುಖಂಡರು ತೋರಿಸುತ್ತಿದ್ದ ಅಸಹನೆ, ದ್ವೇಷಕ್ಕೂ ಬಹಳ ಹತ್ತಿರದ ಹೋಲಿಕೆಗಳಿವೆ. ಇಟಲಿಯ ಫ್ಯಾಸಿಸ್ಟ್‌ಗಳಿಂದ, ಜರ್ಮನಿಯ ನಾಜಿಗಳಿಂದ ಅಂದಿನ ಆರ್‌ಎಸ್‌ಎಸ್ ಮತ್ತು ಹಿಂದು ಮಹಾಸಭಾದ ನಾಯಕರು ಉಗ್ರ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿದ್ದು, ಮುಸ್ಲಿಮರ ವಿರುದ್ಧ ಜನಾಂಗೀಯ ದ್ವೇಷವನ್ನು ತೀವ್ರತರಕ್ಕೆ ತೆಗೆದುಕೊಂಡು ಹೋಗಿದ್ದು ಈಗಾಗಲೇ ಹಲವು ಬಾರಿ ದಾಖಲು ಆಗಿದೆ. ಗಾಂಧಿಯ ಬಗ್ಗೆ ದ್ವೇಷವನ್ನೂ ನಾಜಿಗಳು ಕಲಿಸಿಕೊಟ್ಟರೇ?

ಏಪ್ರಿಲ್ 6, 1942ರಂದು ತನ್ನ ಡೈರಿಯಲ್ಲಿ ಗೋಬೆಲ್ಸ್ ಗಾಂಧಿ ಬಗ್ಗೆ ಹೀಗೆ ನಮೂದಿಸಿದ್ದಾನೆ.
“… ಗಾಂಧಿ ಇಂದು ಮುದ್ರಣ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬ್ರಿಟಿಷರ ಶೋಷಣೆಯ ವಿರುದ್ಧ ಸಂದರ್ಶನ ಪ್ರಕಟಿಸಿದ್ದಾರೆ. ಶಾಂತಿಯುತ ಪ್ರತಿಭಟನೆಯ ಹೊರತಾಗಿ ಇವರು ಬೇರೆ ಯಾವ ತಂತ್ರಗಳನ್ನು ಮುಂದುಮಾಡಿಲ್ಲ. ಶಾಂತಿಯುತ ಪ್ರತಿಭಟನೆ ಇಂಗ್ಲಿಷ್‌ ಜನಗಳಿಗೆ ಸ್ವಾಭಾವಿಕವಾಗಿ ಯಾವುದೇ ತೊಂದರೆ ನೀಡುವುದಿಲ್ಲ. ಗಾಂಧಿ ನೀತಿಗಳು ಭಾರತಕ್ಕೆ ದುರದೃಷ್ಟವನ್ನು ಹೊರತುಪಡಿಸಿ ಬೇರೇನೂ ತಂದುಕೊಟ್ಟಿಲ್ಲ. ಈ ನಾಲ್ಕು ನೂರ ಐವತ್ತು ದಶಲಕ್ಷ ಜನ ಶಕ್ತಿಯುತವಾದ ರಾಷ್ಟ್ರೀಯತೆಯ, ಭಾರತ ಸ್ವಾತಂತ್ರ‍್ಯ ಸಂಗ್ರಾಮದ ರಾಜಕೀಯವನ್ನು ಕಟ್ಟಿದ್ದರೆ ಇವತ್ತಿಗೆ ಇರುವ ಸ್ಥಿತಿಗಿಂತಲೂ ಎಷ್ಟೋ ಮುಂದೆ ಇರುತ್ತಿದ್ದರು”

ಇದು ಇವತ್ತಿಗೂ ಸಂಘ ಪರಿವಾರದವರು ಉಚ್ಚರಿಸುವ ಮಾತುಗಳು. ಗಾಂಧಿಯವರ ಅಹಿಂಸೆಯ ದಾರಿಯಿಂದ ಸ್ವಾತಂತ್ರ‍್ಯ ಬರಲಿಲ್ಲ ಎಂಬ ಮಾತನ್ನು ಅವರು 21ನೆಯ ಶತಮಾನದಲ್ಲೂ ಮತ್ತೆ ಮತ್ತೆ ಯುವಪೀಳಿಗೆಗಳ ಮನಸ್ಸಿನಲ್ಲಿ ತುಂಬಲು ಶ್ರಮಿಸುತ್ತಿದ್ದಾರೆ. ಉಗ್ರ ರಾಷ್ಟ್ರೀಯತೆಯ ಪ್ರತಿಪಾದನೆಯಿಂದ, ಜನಾಂಗೀಯ ದ್ವೇಷಗಳಿಂದ, ಹಿಂಸೆಯಿಂದ ಜರ್ಮನಿ ಮತ್ತು ಇತರ ಯೂರೋಪ್ ದೇಶಗಳು ಸರ್ವನಾಶವಾಗಿ ಹೋಗಿದ್ದರೂ, ಭಾರತದಲ್ಲಿ ಇಂದಿಗೂ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ, ಸಾಹಿತ್ಯ ಸಿನೆಮಾಗಳಲ್ಲಿ ಇಂತಹ ಪ್ರತಿಪಾದನೆಗಳು ಪಡೆಯುತ್ತಿರುವ ಸ್ಥಾನ ಆತಂಕ ಮೂಡಿಸುತ್ತದೆ.

ಏಪ್ರಿಲ್ 20, 1942ರಂದು ಮತ್ತೆ ಗಾಂಧಿ ಅವರ ಅಹಿಂಸಾಮಾರ್ಗವನ್ನು ಛೇಡಿಸಿ ತನ್ನ ದಿನಚರಿಯಲ್ಲಿ ಗೋಬೆಲ್ಸ್ ಈ ರೀತಿ ದಾಖಲಿಸಿಕೊಂಡಿದ್ದಾನೆ.

“ಗಾಂಧಿ ಇವತ್ತು ನೀಡಿದ ಸಂದರ್ಶನದಲ್ಲಿ ಮತ್ತೆ ಅಹಿಂಸೆಯನ್ನು ಆಚರಿಸುವಂತೆ ಕರೆಕೊಟ್ಟಿದ್ದಾರೆ. ಭಾರತವನ್ನು ಇನ್ನೂ ಹೆಚ್ಚಿನ ಸಮಸ್ಯೆಗೆ ಎಳೆಯುವುದಕ್ಕೆ ಲೆಕ್ಕಾಚಾರದ ನಡೆ ಇದು”

ಅಂದೇ ತನ್ನ ದಿನಚರಿಯಲ್ಲಿ ಹಿಟ್ಲರ್ ಹುಟ್ಟುಹಬ್ಬವನ್ನು ಆಚರಿಸಿದ ಬಗ್ಗೆ, ಅಲ್ಲಿ ತಾನು ಕೊಟ್ಟ ಭಾಷಣದ ಬಗ್ಗೆ ಬರೆದುಕೊಳ್ಳುತ್ತಾನೆ. ಅಂದರೆ ತನ್ನ ಸರ್ವಾಧಿಕಾರಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯ ದಿನವೂ ಗಾಂಧಿ ಮತ್ತು ಅಹಿಂಸೆಯ ಬಗೆಗಿನ ಗಾಂಧಿ ಮಾತುಗಳು ಈ ಕ್ರೂರಿಯನ್ನು ಕಾಡಿವೆ. ಇವತ್ತಿಗೂ ಗಾಂಧಿ ಮತ್ತು ಗಾಂಧಿ ಹೇಳಿಕೊಟ್ಟ ಪ್ರತಿಭಟನೆಯ ಪಾಠಗಳು ಸರ್ವಾಧಿಕಾರವನ್ನು ಬಯಸುವ ವರ್ಗಕ್ಕೆ ಭೂತವಾಗಿ ಕಾಡುತ್ತಲೇ ಇದೆ. ಆದುದರಿಂದಲೇ ಗಾಂಧಿಯನ್ನು, ಗಾಂಧಿ ಹೇಳಿಕೊಟ್ಟ ಪಾಠವನ್ನು ಅನುಸರಿಸುವ ಯಾರನ್ನೇ ಆಗಲಿ, ಅವರ ಚಾರಿತ್ರ‍್ಯಹರಣಕ್ಕೆ ಈ ಗುಂಪು ಸದಾಕಾಲ ಸಿದ್ಧರಾಗಿ ಕಾದಿರುತ್ತಾರೆ.

ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ, ನಡೆದ ಘರ್ಷಣೆಗಳಿಗೆ ಗಾಂಧಿಯವರ ಮೇಲೆ ನೇರ ಆರೋಪ ಹೊರಿಸಿ ಬಂಧಿಸಿದಾಗ, ಗಾಂಧಿ ಆತ್ಮಶುದ್ಧಿಗಾಗಿ ಜೈಲಿನಲ್ಲಿಯೇ 21 ದಿನಗಳ ಉಪವಾಸ ಮಾಡುತ್ತಾರೆ. ಗಾಂಧಿಯವರು ಉಪವಾಸ ಅಂತ್ಯ ಮಾಡಿದ ನಂತರ ಮಾರ್ಚ್ 5, 1943 ರಂದು ಗೊಬೆಲ್ಸ್ ತನ್ನ ದಿನಚರಿಯಲ್ಲಿ ಹೀಗೆ ದಾಖಲಿಸಿದ್ದಾನೆ.

“ಗಾಂಧಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಅವರು ಇಡೀ ಪ್ರಪಂಚಕ್ಕೆ ತಮಾಷೆ ತೋರಿಸಿದ್ದಾರೆ ಎಂಬುದು ನನ್ನ ನಂಬಿಕೆ. ಇಂಗ್ಲಿಷ್‌ ದಿನಪತ್ರಿಕೆಗಳು ಇದನ್ನು ವರದಿ ಮಾಡಿ ತಮ್ಮದೇ ಆದ ವ್ಯಂಗ್ಯವನ್ನು ಮತ್ತು ಲೇವಡಿ ಮಾಡುವ ಭಾಷೆಯನ್ನು ಸೇರಿಸಿದ್ದಾರೆ. ಗಾಂಧಿ ಸಿಕ್ಕಾಪಟ್ಟೆ ಬುದ್ಧಿವಂತ. ಆತ ಸಂತ ಎಂದು ನಾನು ಯಾವುದೇ ಕಾರಣಕ್ಕೂ ನಂಬುವುದಿಲ್ಲ. ಆದರೆ ಈ ಬಾರಿ ಆತನ ನಾಟಕೀಯ ಉಪವಾಸದಿಂದ ಇಂಗ್ಲಿಷರು ಮೋಸಹೋಗಲಿಲ್ಲ”

ಗಾಂಧಿ ಉಪವಾಸದ ಬಗ್ಗೆ, ಗಾಂಧಿ ಅವರು ಬಯಸುತ್ತಿದ್ದ ಹಿಂದೂ-ಮುಸ್ಲಿಮ್ ಸಾಮರಸ್ಯದ ಬಗ್ಗೆ ಆರ್‌ಎಸ್‌ಎಸ್ ಕೂಡ ಹಲವು ಬಾರಿ ಮೂದಲಿಸಿರುವುದು ದಾಖಲಾಗಿದೆ. ಬಂಗಾಳದಲ್ಲಿ ಹಿಂದೂ ಮುಸ್ಲಿಮರ ಕೋಮುಗಲಭೆಯನ್ನು ಕೊನೆಗಾಣಿಸಲು ಕೊನೆಯ ಅಸ್ತ್ರ ಎಂಬುವಂತೆ ಗಾಂಧಿ ಅವರು ಉಪವಾಸ ಕೂತಾಗ, ಆರ್‌ಎಸ್‌ಎಸ್ ಮುಖವಾಣಿ ಪತ್ರಿಕೆ ಆರ್ಗನೈಸರ್‌ನಲ್ಲಿ “ರೋಮ್ ಹತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ” ಎಂದಿದ್ದಲ್ಲದೆ “ಇತಿಹಾಸ ನಮ್ಮ ಕಣ್ಣೆದುರಿಗೆ ಇಲ್ಲಿ ಮರುಕಳಿಸುತ್ತಿದೆ. ಕಲ್ಕತ್ತಾದಿಂದ ಮಹಾತ್ಮ ಗಾಂಧಿ ಇಸ್ಲಾಮ್‌ನನ್ನು ಹಾಡಿಹೊಗಳುತ್ತಾ, ಅಲ್ಲ ಓ ಅಕ್ಬರ್ ಕೂಗುತ್ತಿದ್ದಾರೆ ಮತ್ತು ಹಿಂದೂಗಳನ್ನು ಅದನ್ನೇ ಮಾಡಲು ಪ್ರೇರೇಪಿಸುತ್ತಿದ್ದಾರೆ ಆದರೆ ಪಂಜಾಬ್ ಮತ್ತು ಇತರೆಡೆಗಳಲ್ಲಿ ಇಸ್ಲಾಮ್ ಮತ್ತು ಅಲ್ಲ ಓ ಅಕ್ಬರ್ ಕೂಗಿನ ಹೆಸರಿನಲ್ಲಿ ಸ್ವಲ್ಪವೂ ನಾಚಿಕೆಯಿಲ್ಲದ ಬರ್ಬರ ಕ್ರೌರ್ಯ ಮತ್ತು ದೌರ್ಜನ್ಯ ನಡೆಯುತ್ತಿದೆ” ಎಂದು ಬರೆದು ಕೋಮುದಳ್ಳುರಿಯ ಬೆಂಕಿಯನ್ನು ಕಾರಿಕೊಂಡಿತ್ತು.

ಹೀಗೆ ಗಾಂಧಿ ದ್ವೇಷ, ಹಿಂಸೆಯ ಬಗ್ಗೆ ಅತಿರೇಕದ ಪ್ರತಿಪಾದನೆ, ಉಗ್ರ ಧಾರ್ಮಿಕ ರಾಷ್ಟ್ರೀಯತೆ ಮತ್ತು ಜನಾಂಗೀಯ ದ್ವೇಷಗಳು ಗಾಂಧಿ ಕೊಲೆಗೂ ಪ್ರೇರೇಪಿಸಿದ್ದಲ್ಲದೆ, ಹಲವು ಪೀಳಿಗೆಗಳ ಮನಸ್ಸುಗಳನ್ನು ಭ್ರಷ್ಟಗೊಳಿಸಿತು.

ಇಂತಹ ಚಿಂತನೆಗಳನ್ನು ಜರ್ಮನಿಯಲ್ಲಿ ಹರಡಿದ ಗೊಬೆಲ್ಸ್, ಗಾಂಧಿ ಬಗ್ಗೆ ತನ್ನ ದಿನಚರಿಯಲ್ಲಿ ಮೇಲಿನ ಹೇಳಿಕೆ ದಾಖಲಿಸಿದ ಮೇಲೆ ಸುಮಾರು ಎರಡು ವರ್ಷಗಳ ಕಾಲ ಬದುಕಿದ್ದ. ಹಿಟ್ಲರ್ ತನ್ನ ಪಿಸ್ತೂಲಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಆಗ ಜರ್ಮನಿಯ ಚಾನ್ಸಲರ್ ಆಗಿ ನೇಮಕಗೊಂಡ ಗೊಬೆಲ್ಸ್ ಸರ್ವಾಧಿಕಾರ ನಡೆಸಿದ್ದು ಕೇವಲ ಒಂದು ದಿನ. ಅಂದೇ ತನ್ನ ಆರು ಜನ ಮಕ್ಕಳು ಮತ್ತು ಪತ್ನಿಗೆ ವಿಷ ಉಣ್ಣಿಸಿ ತಾನು ವಿಷ ಕುಡಿದು ಏಪ್ರಿಲ್ 30, 1945ರಂದು ತಾನಿದ್ದ ಬಂಕರ್ ನಲ್ಲಿಯೇ ಆತ್ಮಹತ್ಯೆಗೆ ಶರಣಾದ.

ಹಿಟ್ಲರ್, ಗೊಬೆಲ್ಸ್ ಮತ್ತು ಇತರ ನಾಜಿಗಳು ಸೃಷ್ಟಿಸಿದ ಕ್ರೌರ್ಯದ ಪಾಠಗಳನ್ನು ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ಈಗಲೂ ಅನುಕರಿಸುವ ಜನ ಇರುವುದು ದುರಂತ. ಇನ್ನಾದರೂ ಗಾಂಧಿ ಚಿಂತನೆಗಳಿಗೆ ಪ್ರಚಾರ ಸಿಕ್ಕಿ, 21ನೆಯ ಶತಮಾನದ ಅವಸಾನವನ್ನು ತಡೆಯಬೇಕಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್: ಗಾಳಿಪಟದ ದಾರ ಕುತ್ತಿಗೆ ಸೀಳಿ ಸ್ಥಳದಲ್ಲಿ ಪ್ರಾಣ ಬಿಟ್ಟ 48 ವರ್ಷದ ಬೈಕ್ ಸವಾರ

ಬೀದರ್ ಜಿಲ್ಲೆಯ ತಲಮಡಗಿ ಸೇತುವೆ ಬಳಿಯ ರಸ್ತೆಯಲ್ಲಿ ಮಗಳನ್ನು ಕರೆತರಲು ಬೈಕ್ ನಲ್ಲಿ ತೆರಳುತ್ತಿದ್ದ 48 ವರ್ಷದ ವ್ಯಕ್ತಿ ಕೊರಳಿಗೆ ಗಾಳಿ ಪಟದ ದಾರ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.  ಮೃತ...

ಐ-ಪ್ಯಾಕ್ ಮೇಲಿನ ದಾಳಿ: ಟಿಎಂಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಐ-ಪಿಎಸಿಗೆ ಸಂಬಂಧಿಸಿದ ಇತ್ತೀಚಿನ ದಾಳಿಗಳ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪಕ್ಷದ ಫೈಲ್‌ಗಳು ಮತ್ತು ಚುನಾವಣಾ ಸಂಬಂಧಿತ ಡೇಟಾವನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್...

ತೆಲಂಗಾಣ| ಪಂಚಾಯತ್ ಚುನಾವಣೆಯ ನಂತರ 500 ಬೀದಿ ನಾಯಿಗಳ ಸಾಮೂಹಿಕ ಕೊಲೆ; ‘ನಾಯಿ ಮುಕ್ತ ಗ್ರಾಮ’ದ ಭರವಸೆ ನೀಡಿದ್ದ ಅಭ್ಯರ್ಥಿಗಳು

ತೆಲಂಗಾಣದ ಹನಮಕೊಂಡ ಮತ್ತು ಕಾಮರೆಡ್ಡಿ ಜಿಲ್ಲೆಗಳಿಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಜನವರಿಯ ಮೊದಲ ಎರಡು ವಾರಗಳಲ್ಲಿ ಸುಮಾರು 500 ನಾಯಿಗಳನ್ನು ವಿಷ ಹಾಕಿ ಕೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ....

ಕಾನ್ಪುರ ದೇಹತ್‌ನಲ್ಲಿ ನೆರೆಯವರ ಹಲ್ಲೆಯಿಂದ ದಲಿತ ರೈತ ಸಾವು; ಆರು ಮಂದಿ ಬಂಧನ

ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಲ್ಲಿ 50 ವರ್ಷದ ದಲಿತ ರೈತನೊಬ್ಬ ತನ್ನ ನೆರೆಹೊರೆಯವರು ಮತ್ತು ಅವರ ಸಂಬಂಧಿಕರಿಂದ ಥಳಿತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮತ್ತು ಆತನ...

ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ‘ಹರಿಜನ-ಗಿರಿಜನ’ ಪದಗಳನ್ನು ನಿಷೇಧಿಸಿದ ಹರಿಯಾಣ ಸರ್ಕಾರ

ಹರಿಯಾಣ ಸರ್ಕಾರವು ತನ್ನ ಎಲ್ಲಾ ಅಧಿಕೃತ ಸಂವಹನಗಳಲ್ಲಿ 'ಹರಿಜನ' ಮತ್ತು 'ಗಿರಿಜನ' ಪದಗಳ ಬಳಕೆಯನ್ನು ನಿಷೇಧಿಸಿದೆ. ಇಲಾಖೆಗಳು 'ಪರಿಶಿಷ್ಟ ಜಾತಿ (ಎಸ್‌ಸಿ)' ಮತ್ತು 'ಪರಿಶಿಷ್ಟ ಪಂಗಡ (ಎಸ್‌ಟಿ)' ಅಥವಾ ಅವುಗಳ ಸಮಾನ ಪದಗಳನ್ನು...

ಐಎಎಸ್ ಅಧಿಕಾರಿ ಮಾನನಷ್ಟ ಮೊಕದ್ದಮೆ ಪ್ರಕರಣ: ಎನ್‌ಟಿವಿ ಸಂಪಾದಕ, ಇಬ್ಬರು ಪತ್ರಕರ್ತರ ಬಂಧನ

ತೆಲಂಗಾಣ ಸರ್ಕಾರದ ರಸ್ತೆ ಮತ್ತು ಕಟ್ಟಡಗಳ ಸಚಿವ ಕೋಮತಿರೆಡ್ಡಿ ವೆಂಕಟ್ ರೆಡ್ಡಿ ಹಾಗೂ ಮಹಿಳಾ ಐಎಎಸ್ ಅಧಿಕಾರಿ ಅವರ ಕುರಿತು ವಿವಾದಾತ್ಮಕ ಸುದ್ದಿ ವರದಿಗೆ ಸಂಬಂಧಿಸಿದಂತೆ, ಹೈದರಾಬಾದ್ ಕೇಂದ್ರ ಅಪರಾಧ ಠಾಣೆ...

ಇರಾನ್: ಪ್ರತಿಭಟನಾಕಾರರ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವಿನ ಸಂಖ್ಯೆ 2571ಕ್ಕೆ ಏರಿಕೆ 

ಇರಾನ್‌ನಲ್ಲಿ ಪ್ರತಿಭಟನೆಗಳ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 2,571 ಕ್ಕೆ ಏರಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಬುಧವಾರ ತಿಳಿಸಿದ್ದಾರೆ. ಈ ಅಂಕಿ ಅಂಶವು ಅಮೆರಿಕ ಮೂಲದ ಮಾನವ ಹಕ್ಕುಗಳ...

ಕಾಂಗ್ರೆಸ್‌ ಮುಖಂಡನ ಗೂಂಡಾವರ್ತನೆ : ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ಪೌರಾಯುಕ್ತೆಗೆ ಧಮ್ಕಿ, ಅವಾಚ್ಯ ಶಬ್ದಗಳಿಂದ ನಿಂದನೆ

ಸಚಿವ ಝಮೀರ್ ಅಹ್ಮದ್ ಅವರ ಮಗ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತಗೌಡ ಅವರೊಂದಿಗೆ ಗೂಂಡಾವರ್ತನೆ...

ಹಿಂದಿ ಶೈಕ್ಷಣಿಕ ಪದ್ಧತಿ ಹೇರಿಕೆಯಿಂದ ಉತ್ತರದ ಜನರಿಂದ ದಕ್ಷಿಣಕ್ಕೆ ವಲಸೆ: ಮಾರನ್

ಇಂಗ್ಲಿಷ್ ಶಿಕ್ಷಣವನ್ನು ನಿರುತ್ಸಾಹಗೊಳಿಸುತ್ತಾ, ವಿದ್ಯಾರ್ಥಿಗಳು ಹಿಂದಿ ಮಾತ್ರ ಕಲಿಯಲು ಪ್ರೋತ್ಸಾಹಿಸುತ್ತಿದ್ದಾರೆ. ಉತ್ತರ ರಾಜ್ಯಗಳ ಈ ನೀತಿಗಳಿಂದ ಉದ್ಯೋಗ ಸಿಗದೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ...

ಚಿಕ್ಕಮಗಳೂರು| ದಲಿತರ ಜಮೀನಿಗೆ ನುಗ್ಗಿ ಬೆಳೆ ನಾಶ; ಪ್ರಬಲ ಜಾತಿ ಜನರಿಂದ ವಿನಾಕಾರಣ ತೊಂದರೆ

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಸತ್ತಿಹಳ್ಳಿ ಗ್ರಾಮದ ದಲಿತ ಸಮುದಾಯದ ರೈತರಿಗೆ ಅದೇ ಊರಿನ ಪ್ರಬಲ ಜಾತಿಗೆ ಸೇರಿದ ಜನರು ವಿನಾಕಾರಣ ತೊಂದರೆ ನಿಡುತ್ತಿದ್ದು, ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ್ದಾರೆ ಎಂಬ...