Homeಅಂಕಣಗಳುಹಿಂದೂಗಳ ಕಣ್ಣಿಗೆ ದಲಿತರು ಮನುಷ್ಯರಂತೆ ಕಾಣುವುದೆಂದು? - ಡಿ.ಉಮಾಪತಿ

ಹಿಂದೂಗಳ ಕಣ್ಣಿಗೆ ದಲಿತರು ಮನುಷ್ಯರಂತೆ ಕಾಣುವುದೆಂದು? – ಡಿ.ಉಮಾಪತಿ

ಬಿಸಿಯೂಟದ ಅಡುಗೆ ಮಾಡುವ ಹೆಣ್ಣುಮಕ್ಕಳು ದಲಿತರೆಂಬ ಕಾರಣಕ್ಕೆ ಪೋಷಕರು ಊಟಕ್ಕೇ ಬಹಿಷ್ಕಾರ ಹಾಕಿದ್ದ ಘಟನೆಗಳು ನಮ್ಮದೇ ಕರ್ನಾಟಕದಿಂದ ವರದಿಯಾಗಿ ತಣ್ಣಗಾಗಿವೆ.

- Advertisement -
- Advertisement -

ಮತ್ತೊಬ್ಬ ದಲಿತ ಮಗಳು ಮೇಲ್ಜಾತಿಯ ಅಹಂಕಾರದ ಬರ್ಬರ ಬೆಂಕಿಯಲ್ಲಿ ಬೆಂದು ಬೂದಿಯಾಗಿ ಮಣ್ಣು ಸೇರಿದ್ದಾಳೆ. ಸದ್ಯದಲ್ಲೇ ಅಂಕಿ ಸಂಖ್ಯೆಯಾಗಿ ಮಾತ್ರವೇ ಇತಿಹಾಸದಲ್ಲಿ ದಾಖಲಾಗಿಬಿಡುತ್ತಾಳೆ.

ದೇಶದ ರಾಜಧಾನಿ ದೆಹಲಿಯಿಂದ ಹೆಚ್ಚು ದೂರವೇನೂ ಇಲ್ಲದ ಹಾಥ್ರಸ್‍ನ ಈ ಮಗಳು ಎದುರಿಸಿದ ಹಿಂಸೆ ಪೈಶಾಚಿಕ ಸ್ವರೂಪದ್ದು. ಹದಿನೈದು ದಿನಗಳ ಕಾಲ ಆಕೆಗೆ ವೈದ್ಯಕೀಯ ಚಿಕಿತ್ಸೆ ನೀಡದೆ ಅಕ್ಷರಶಃ ಕೊಂದ ಕಾರಸ್ಥಾನದಲ್ಲಿ ಸರ್ಕಾರ- ಸಮಾಜದ ಕೈಗಳು ರಕ್ತಸಿಕ್ತವಾಗಿವೆ.

ತನುಶ್ರೀ ಪಾಂಡೆ ಎಂಬ ದೆಹಲಿಯ ಎಳೆಯ ಉತ್ಸಾಹಿ ಟಿವಿ ವರದಿಗಾರ್ತಿಯ ಕಳಕಳಿಯ ಕಸಬುದಾರಿಕೆಯು ಈ ಕೊಲೆಗಡುಕತನವನ್ನು ಬೆತ್ತಲಾಗಿಸಿತು. ಇಲ್ಲದೆ ಹೋಗಿದ್ದರೆ ಹಳ್ಳಿಗಾಡುಗಳಲ್ಲಿ ಸಮಾಧಿಯಾಗುವ ಇಂತಹದೇ ಸಾವಿರಾರು ಪ್ರಕರಣಗಳ ಸಾಲಿಗೆ ಈ ಪ್ರಕರಣವೂ ಸೇರಿ ಹೋಗುತ್ತಿತ್ತು.

ತನುಶ್ರೀ ಪಾಂಡೆ : Photo Courtesy: SheThePeopleTv

ಸಮೂಹ ಮಾಧ್ಯಮಗಳ ಪ್ರಚಾರದ ಮುಂಬೆಳಕು ಬೀಳದ ಹತ್ತಾರು ಸಾವಿರ ನತದೃಷ್ಟ ಪ್ರಕರಣಗಳು ದಶಕಗಳಿಂದ ಕೊಳೆಯುತ್ತಿವೆ. ಸಾಮಾಜಿಕ ಕಳಂಕದ ಕ್ರೂರ ಹೊರೆ ಹೊತ್ತು ದೇಶದ ನಾನಾ ನ್ಯಾಯಾಲಯಗಳಲ್ಲಿ ಧೂಳು ಹಿಡಿದಿರುವ ಕಡತಗಳಲ್ಲಿ ಹೂತು ಹೋಗಿರುವ ಲಕ್ಷಾಂತರ ಹೆಣ್ಣು ಜೀವಗಳ ಮೊರೆಯನ್ನು ಕೇಳುವವರು ಯಾರು?

ಕೊಂಬೆ ಕೊಂಬೆಗಳಲ್ಲಿ ಚಿನ್ನದ ಹಕ್ಕಿಗಳು ಕೂಗುತ್ತಿದ್ದವೆಂದು ಹೇಳಲಾಗುವ ಭವ್ಯ ಇತಿಹಾಸದ ಭಾರತ ದೇಶದ ಹಿಂದೂಗಳಿಗೆ ದಲಿತರು ಮನುಷ್ಯರಂತೆ ಯಾವ ಕಾಲಕ್ಕೆ ಕಾಣಬಹುದು ಎಂಬ ಪ್ರಶ್ನೆ ನಿರಂತರ ಪ್ರಶ್ನೆಯಾಗಿಯೇ ಉಳಿಯಲಿದೆ. ರಕ್ತದಲ್ಲಿ ಬೆರೆತು ಹೋಗಿರುವ ಈ ಅಸಮಾನತೆ ಅಳಿಯುವ ಸಾಧ್ಯತೆ ದೂರ ದಿಗಂತದ ಚುಕ್ಕೆಯಾಗಿಯೂ ಕಾಣಬರುತ್ತಿಲ್ಲ.

photo courtesy : Pratirodh

ಇಂಡಿಯಾ ದೇಶದಲ್ಲಿ ನೀವು ಸವರ್ಣೀಯರಾಗಿದ್ದರೆ, ದಲಿತ ಸಮುದಾಯದಿಂದ ಬಂದ ವ್ಯಕ್ತಿಯೊಬ್ಬನಿಗೆ ಏನಾಗುತ್ತಿದೆಯೆಂದು ಅರಿಯುವುದು ನಿಮಗೆ ಸಾಧ್ಯವೇ ಇಲ್ಲ. ದಲಿತರನ್ನು ಹೇಗೆ ಕಾಣಲಾಗುತ್ತಿದೆ ಮತ್ತು ಅವರ ಜಗತ್ತು ವಾಸ್ತವದಲ್ಲಿ ಹೇಗಿದೆ ಎಂಬ ಸಂಗತಿಯನ್ನು ಬೆರಳೆಣಿಕೆಯ ಜನರಷ್ಟೇ ಬಲ್ಲರು ಎನ್ನುತ್ತಾರೆ ಸಂವೇದನಾಶೀಲ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್.

ನಖಶಿಖಾಂತ ಮೇಲು ಕೀಳನ್ನು ಸಾರಿ ಹೇಳುವ ವರ್ಣವ್ಯವಸ್ಥೆಯು ಇಂಡಿಯಾದ ಕೆಳವರ್ಗಗಳ ದಿಕ್ಕೆಟ್ಟ ಬದುಕುಗಳಿಗೆ ಬೀಸಿ ಬಡಿಯುತ್ತಲೇ ಇರುವ ತೀರದ ಶಾಪ. ಈ ವ್ಯವಸ್ಥೆಯನ್ನು ಅನವರತ ಜೀವಂತ ಇರಿಸುವುದನ್ನೇ ಪರಮವೈಭವ ಎಂದು ಭಾವಿಸುತ್ತಾರೆ ಯಥಾಸ್ಥಿತಿವಾದಿಗಳು. ನಾವೆಲ್ಲ ಒಂದು ಎಂದು ಹೇಳುತ್ತಲೇ ವಂಚಿತ ಸಮುದಾಯಗಳ ಇಹದ ಬದುಕನ್ನು ನರಕ ಆಗಿಸುತ್ತಿದ್ದಾರೆ. ಇಲ್ಲವೇ ಅವರನ್ನು ಕೊಂದು ನಿವಾರಿಸಿ ಭರತಭೂಮಿಗೆ ಅಂಟಿರುವ ‘ಪಾಪ’- ‘ಕಳಂಕ’ವನ್ನು ತೊಳೆಯತೊಡಗಿದ್ದಾರೆ.

ಅವಮಾನಿತ ಕೆಳಜಾತಿಗಳ ದಮನದ ಅಮಾನುಷ ಮುಖಗಳು ಹತ್ತು ಹಲವು. ದಲಿತರು ಚಪ್ಪಲಿ ಧರಿಸುವುದನ್ನು ನಿಷೇಧಿಸಿರುವ, ಊರು ಪ್ರವೇಶ ಮಾಡುವ ಮುನ್ನ ಚಪ್ಪಲಿಯನ್ನು ಕಳಚಿ ಕೈಲಿ ಹಿಡಿದು ನಡೆಯಬೇಕಾದ, ಏರಿದ್ದ ಸೈಕಲ್ಲನ್ನು ಇಳಿದು ಅದನ್ನು ತಳ್ಳಿಕೊಂಡೇ ಮೇಲ್ಜಾತಿಗಳ ವಸತಿಯನ್ನು ಹಾದು ಹೋಗಬೇಕಾದ ರೂಢಿ ಇಂದಿಗೂ ಜಾರಿಯಲ್ಲಿರುವ ಸಾವಿರಾರು ಹಳ್ಳಿಗಳಿವೆ.

ಉತ್ತರಭಾರತದ ಮದುವೆಗಳಲ್ಲಿ ವರ ಕುದುರೆಯೇರಿ ದಿಬ್ಬಣ ಹೊರಡುವ ರಿವಾಜಿದೆ. ದಲಿತರು ಕುದುರೆ ಏರುವಂತಿಲ್ಲ. ಆನೆ ಕುದುರೆ ಎತ್ತಿನ ಗಾಡಿ ಏರಿದ ದಲಿತ ಮದುಮಕ್ಕಳನ್ನು ಮೇಲು ಜಾತಿಗಳು ಥಳಿಸಿ ರಂಪ ಮಾಡುವ ವಿದ್ಯಮಾನಗಳು ಇಂದಿಗೂ ಅಳಿದಿಲ್ಲ.

ಮೋಟರ್ ಸೈಕಲ್ ಸವಾರಿ ಮಾಡುವ ದಲಿತ ಯುವಕನ ಮೂಗು ಕತ್ತರಿಸುವ, ಅಂಬೇಡ್ಕರ್ ರಿಂಗ್‍ಟೋನನ್ನು ತೆಗೆದು ಹಾಕಲಿಲ್ಲವೆಂದು ದಲಿತ ತರುಣನ ಪ್ರಾಣವನ್ನೇ ತೆಗೆಯುವ, ದಲಿತ ಪ್ರೊಫೆಸರಿಗೆ ಬಾಡಿಗೆ ಮನೆ ನಿರಾಕರಿಸುವ, ಮೂರು ವರ್ಷದ ದಲಿತ ಹಸುಳೆಗೆ ಕ್ಷೌರ ಮಾಡಲು ನಿರಾಕರಿಸುವ, ಮೇಲ್ಜಾತಿಯ ಮಕ್ಕಳ ತಟ್ಟೆ ಮುಟ್ಟಿದನೆಂದು ಎಳೆಯ ದಲಿತ ಜೀವವನ್ನು ಥಳಿಸುವ ಘಟನೆಗಳು ಈ ಸಮಾಜದ ಆತ್ಮಸಾಕ್ಷಿಯನ್ನು ಕಲಕುವುದೇ ಇಲ್ಲ.

ಅತ್ಯಾಚಾರವನ್ನು ಪ್ರತಿಭಟಿಸಿದ ದಲಿತ ಬಾಲಕಿಯೊಬ್ಬಳ ಮೂಗು, ಕಿವಿ ಹಾಗೂ ತೋಳನ್ನು ಕತ್ತರಿಸಿ ಒಗೆದವರು ಮೇಲ್ಚಾತಿಗಳ ಬಲಾತ್ಕಾರಿಗಳು. ಆಕೆಯ ದುಪಟ್ಟಾದಿಂದಲೇ ಬಾಲೆಯ ಕಣ್ಣು ಕಟ್ಟಿದ ಧೂರ್ತರು ಮೂಗು ಕಿವಿ ತೋಳನ್ನು ಕೊಡಲಿಯಿಂದ ಕತ್ತರಿಸಿ ಒಗೆದ ಘಟನೆ ನಡೆದದ್ದು ಮಧ್ಯಪ್ರದೇಶದಲ್ಲಿ.

ಛತ್ತೀಸ್‍ಗಢದ ಬಡ ಓರಾನ್ ಆದಿವಾಸಿ ಕುಟುಂಬದ ಮಗಳು ಹದಿನಾರರ ಮೀನಾ ಖಾಲ್ಕೋ. ಒಂದು ಸಂಜೆ ಸೈಕಲ್ ಹತ್ತಿ ಗೆಳತಿಯ ಮನೆಗೆ ತೆರಳಿದವಳು ಪತ್ತೆಯಾದದ್ದು ಆಸ್ಪತ್ರೆಯಲ್ಲಿ. ಸಾವು ಬದುಕಿನ ನಡುವಣ ಹೋರಾಟದಲ್ಲಿ. ಬಾಲೆಯನ್ನು ಅಪಹರಿಸಿದ ಪೊಲೀಸರು ಸಾಮೂಹಿಕ ಬಲಾತ್ಕಾರ ಎಸಗಿ ಗುಂಡು ಹೊಡೆದು ಆಕೆಗೆ ಮಾವೋವಾದಿಯ ಹಣೆಪಟ್ಟಿ ಕಟ್ಟಿದ್ದರು.

ಮಧ್ಯಾಹ್ನದ ಬಿಸಿಯೂಟ ನೀಡಲು ದಲಿತ ಮಕ್ಕಳನ್ನು ದೂರ ಬೇರೆ ಪಂಕ್ತಿಯಲ್ಲಿ ಕೂರಿಸುವ ರೂಢಿ ಕೇವಲ ಮಧ್ಯಪ್ರದೇಶಕ್ಕೆ ಮಾತ್ರ ಸೀಮಿತ ಅಲ್ಲ. ಇತರೆ ಮಕ್ಕಳಿಗೆ ನೀಡುವ ಪ್ರಮಾಣದ ಕಾಲು ಭಾಗದಷ್ಟನ್ನು ಮಾತ್ರವೇ ದಲಿತ ಮಕ್ಕಳಿಗೆ ಬಡಿಸಿ, ಎರಡನೆಯ ಬಾರಿ ಕೇಳಿದರೆ ಅವಮಾನ ಮಾಡುವ ಪ್ರಕರಣಗಳು ಸರ್ವೇ ಸಾಧಾರಣ. ಮೇಲ್ಜಾತಿಯ ಮಕ್ಕಳಿಗೆ ಬಡಿಸಿ ಉಳಿದ ಚೂರು ಪಾರನ್ನು ದಲಿತ ಮಕ್ಕಳಿಗೆ ಹಾಕುವ ಶಿಕ್ಷಕರ ಮನಸ್ಥಿತಿಗಳು ಅಪರೂಪ ಅಲ್ಲ.

ಬಿಸಿಯೂಟದ ಅಡುಗೆ ಮಾಡುವ ಹೆಣ್ಣುಮಕ್ಕಳು ದಲಿತರೆಂಬ ಕಾರಣಕ್ಕೆ ಪೋಷಕರು ಊಟಕ್ಕೇ ಬಹಿಷ್ಕಾರ ಹಾಕಿದ್ದ ಘಟನೆಗಳು ನಮ್ಮದೇ ಕರ್ನಾಟಕದಿಂದ ವರದಿಯಾಗಿ ತಣ್ಣಗಾಗಿವೆ.

ಥಳಗುಟ್ಟುವ ಭಾರತದ ಆಚೆಗೆ ಬದುಕಿರುವ ಕಗ್ಗತ್ತಲ ಉದ್ದಗಲಗಳಲ್ಲಿ ಜಾತಿ ಬಲವುಳ್ಳವರು, ಹಣದ ಸೊಕ್ಕಿನವರು, ಧರ್ಮದುರಂಧರರು, ಪಿತೃಪ್ರಧಾನ್ಯತೆಯ ಪರಿಪಾಲಕರು, ಪೊಲೀಸರು, ಪ್ಯಾರಾಮಿಲಿಟರಿಗಳ ಅಟ್ಟಹಾಸಗಳಲ್ಲಿ ಈ ಜೀವಗಳು ನಲುಗಿಹೋಗುತ್ತಿವೆ. ಇವರು ಮಾತು ಸತ್ತವರು, ಕಾಸಿಲ್ಲದವರು, ತುಳಿಸಿಕೊಂಡವರು, ಒಕ್ಕಲೆಬ್ಬಿಸಿ ದಬ್ಬಲಾದ ಅನಾಥ ಆದಿವಾಸಿಗಳು. ತಮ್ಮ ಮಾನ ಪ್ರಾಣ ಕಣ್ಣೀರುಗಳಿಗೆ ಕಾಸಿನ ಕಿಮ್ಮತ್ತೂ ಇಲ್ಲದ ದೈನೇಸಿಗಳು. ಖೈರ್ಲಾಂಜಿ, ಕಂಬಾಲಪಲ್ಲಿಗಳಲ್ಲಿ ಬೂದಿಯಾದವರು ಇವರು.

ಭಾರತೀಯ ಸೇನೆಯ ಹನ್ನೊಂದು ಮಂದಿ ಸಿಪಾಯಿಗಳು ಚಿತ್ರಹಿಂಸೆಯ ನಂತರ ಸಾಮೂಹಿಕ ಮಾನಭಂಗ ಮಾಡಿ ಜನನೇಂದ್ರಿಯಕ್ಕೆ ಕಾಡತೂಸುಗಳ ಸಿಡಿಸಿ ಕೊಂದ ಪ್ರಕರಣದ ಬಲಿಪಶು ಮಣಿಪುರದ ಥಂಗ್ಲಾಮ್ ಮನೋರಮಾದೇವಿ ಎಂಬ ಯುವತಿ. 2004ರ ಈ ಪ್ರಕರಣದ ಅಪರಾಧಿಗಳನ್ನು ಕಾನೂನಿನ ಕೈಗಳು ಈಗಲೂ ಮುಟ್ಟಿಲ್ಲ. 1991ರಲ್ಲಿ ಕಾಶ್ಮೀರದ ಮೂವತ್ತು ಮಹಿಳೆಯರ ಮೇಲೆ ಸೇನೆ ನಡೆಸಿತೆನ್ನಲಾದ ಅತ್ಯಾಚಾರ ಪ್ರಕರಣದ ಮರುವಿಚಾರಣೆ ಇನ್ನೂ ಮುಗಿದಿಲ್ಲ.

ಶೇ.75ರಷ್ಟು ಅತ್ಯಾಚಾರ ಪ್ರಕರಣಗಳು ನಡೆಯುವುದು ಗ್ರಾಮೀಣ ಭಾರತದಲ್ಲಿ ಎಂಬುದಾಗಿ ದಿಲ್ಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ ಸಮೀಕ್ಷೆಯಿಂದ ತಿಳಿದುಬಂದಿತ್ತು. ಗ್ರಾಮೀಣ ಪ್ರದೇಶಗಳ ಅತ್ಯಾಚಾರ ಪ್ರಕರಣಗಳನ್ನು ಜಾತಿ – ವರ್ಗ ಹಾಗೂ ಊಳಿಗಮಾನ್ಯ ವ್ಯವಸ್ಥೆಗಳು ಅಲ್ಲಲ್ಲಿಯೇ ಅದುಮಿ ಹೂತು ಹಾಕುತ್ತಿವೆ.

ಪ್ರಾಣ ಮತ್ತು ಮಾನಹರಣದ ಶುದ್ಧೀಕರಣದ ಹಿಂದೂ ಮಹಾಯಜ್ಞಕ್ಕೆ ದಲಿತರು ಈ ದೇಶದಲ್ಲಿ ನಿರಂತರ ಬಲಿಪಶುಗಳು.


ಇದನ್ನೂ ಓದಿ: ರಾಜಕೀಯ ಸಾಧನವಾಗಿ ಅತ್ಯಾಚಾರದ ಕಲ್ಪನೆಯನ್ನು ಸಾವರ್ಕರ್ ಸಮರ್ಥಿಸಿಕೊಂಡಿದ್ದು ಹೀಗೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...