ಲಡಾಖ್ನಿಂದ ಚೀನಾದ ಸೈನ್ಯವನ್ನು ಹೇಗೆ ಹೊರಗೆ ಹಾಕುತ್ತೀರಿ ಎಂಬುದನ್ನು ರಾಷ್ಟ್ರಕ್ಕೆ ತಿಳಿಸುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿದ್ದಾರೆ.
ಪ್ರಧಾನಮಂತ್ರಿಯ ಭಾಷಣಕ್ಕಿಂತ ಒಂದು ಗಂಟೆ ಮೊದಲು ಮಾತನಾಡಿದ ರಾಹುಲ್ ಗಾಂದಿ, “ಚೀನಾ ಭಾರತದ ಭೂಮಿಯನ್ನು ಕಸಿದುಕೊಂಡಿದೆ ಎಂದು ಇಡೀ ದೇಶಕ್ಕೆ ತಿಳಿದಿದೆ. ಲಡಾಖ್ನಲ್ಲಿ ಚೀನಿಯರು ನಾಲ್ಕು ಸ್ಥಳಗಳಲ್ಲಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನೀವು ಚೀನಾದ ಸೈನ್ಯವನ್ನು ಹೇಗೆ ಹೊರಹಾಕುತ್ತೀರಿ ಮತ್ತು ಯಾವಾಗ ಎಂದು ದೇಶಕ್ಕೆ ತಿಳಿಸಿ?” ಎಂದು ಪ್ರಧಾನ ಮಂತ್ರಿಯನ್ನು ಕೇಳಿದ್ದಾರೆ.
ಲಡಾಖ್ನಲ್ಲಿ ಚೀನಾದ ಸೈನ್ಯ ವಾಸ್ತವ್ಯ ಹೂಡಿರುವಾಗ ಸರ್ಕಾರದ ನಿಲುವಿನ ಅಸಂಗತತೆಯ ಬಗ್ಗೆ ಕಾಂಗ್ರೆಸ್ ಪ್ರಧಾನ ಮಂತ್ರಿಯ ಮೇಲೆ ದಾಳಿ ನಡೆಸುತ್ತಿದೆ. ಕಳೆದ ವಾರ, ವಿರೋಧ ಪಕ್ಷವು ಮೋದಿಯವರನ್ನು “ಲಡಾಖ್ನಲ್ಲಿ ಚೀನಾದ ಲಜ್ಜೆಗೆಟ್ಟ ಕೃತ್ಯವನ್ನು ಸಾರ್ವಜನಿಕವಾಗಿ ಖಂಡಿಸುವಂತೆ” ಕೇಳಿಕೊಂಡಿತ್ತು.
ಲಡಾಖ್ನಲ್ಲಿ ಜೂನ್ 15 ರ ರಾತ್ರಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ, ಇದು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು.
ಇನ್ನು ಇಂದು ದೇಶವನ್ನುದ್ದೇಶಿಸಿ ನರೇಂದ್ರ ಮೋದಿಯವರು ಮಾತನಾಡಿದ್ದು ಅಲ್ಲಿ ಚೀನಾ ಮತ್ತು ಲಡಾಖ್ ವಿಷಯವನ್ನು ಪ್ರಸ್ತಾಪಿಸುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಮೋದಿಯವರು ತಮ್ಮ ಭಾಷಣದಲ್ಲಿ ಅವುಗಳ ಕುರಿತು ಒಂದೂ ಮಾತನಾಡಿಲ್ಲ. ಬದಲಿಗೆ ಪಡಿತರ ವಿತರಣೆ ಮತ್ತು ಲಾಕ್ಡೌನ್ ಅನ್ಲಾಕ್ಗೆ ತಮ್ಮ ಭಾಷಣವನ್ನು ಸೀಮಿತಗೊಳಿಸಿದ್ದಾರೆ.
ಓದಿ: ಗುಜರಾತ್ ಮಾಡೆಲ್ ಎಕ್ಸ್ಪೋಸ್ ಆಗಿದೆ : ರಾಹುಲ್ ಗಾಂಧಿ ಟೀಕೆ