ನಮ್ಮ ಸಂಸ್ಕೃತಿಗೆ ಪೂರಕವಾಗಿ ಪರಿಸರಕ್ಕೆ ಎರವಾಗದಂತೆ ನಮ್ಮ ಪೂರ್ವಿಕರು ಬದುಕಿದರು. ನೆಲ, ಜಲ, ವಾಯು ಎಲ್ಲ ಮಾನವರ ಉಪಯೋಗಕ್ಕೆ ಇದೆ ಎಂಬುದು ನಮ್ಮ ತಲೆಮಾರಿಗೆ ಗೊತ್ತೇ ಇಲ್ಲ. ಹಾಲಿಗೂ, ನೀರಿಗೂ ಒಂದೇ ಬೆಲೆ ಆಗುತ್ತಿದ್ದರೂ ಇದೇಕೆ ಹೀಗಾಯಿತು ಎಂದು ಯಾರು ಚಿಂತಿಸುತ್ತಿಲ್ಲ. ಶಬ್ದವಿಲ್ಲದ ನಿಶ್ಯಬ್ದ ಯುದ್ಧವನ್ನು ನಮ್ಮ ಬಂಡವಾಳಶಾಹಿಗಳು, ಕಾರ್ಪೊರೇಟರ್ಗಳು, ಬಹುರಾಷ್ಟ್ರೀಯ ಕಂಪನಿಗಳು ಜನಸಾಮಾನ್ಯರ ಮೇಲೆ ಪ್ರಾರಂಭಿಸಿದ್ದಾರೆ. ಇಂದು ನಾವು ಕೇಳುವ ಸಂಗೀತ, ನೋಡುವ ಸಿನಿಮಾ, ನಮ್ಮ ಉಡುಪು, ಚಿಂತನೆಯ ಮಾದರಿಗಳನ್ನು ಗಮನಿಸಿದರೆ ನಮ್ಮ ಅಭಿವೃದ್ಧಿ ಯಾವ ಜಾಡನ್ನು ಹಿಡಿಯುತ್ತಿದೆ ಎಂಬುದು ನಮಗೆ ಮನವರಿಕೆಯಾಗಬಹುದು.
ಡಿವಿಜಿಯವರು ಹೇಳುತ್ತಾರೆ ಈಗ ಧನಸಂಪತ್ತು ಹೆಚ್ಚಿದೆ. ಧಾನ್ಯಸಂಪತ್ತು ಕುಸಿದಿದೆ. ಸೋಪು, ಪೌಡರ್ ಹೆಚ್ಚಿದೆ. ಮನಸ್ಸಿನ ನಿರ್ಮಲತೆ ಕುಗ್ಗಿದೆ. ಭೋಗ ಹೆಚ್ಚಿದೆ ನೆಮ್ಮದಿ ಕುಗ್ಗಿದೆ ಎಂದು.
ಅನ್ನ ತಿನ್ನುವ ಬಾಯಿಗೆ ನೂಡಲ್ಸ್, ಪಿಜ್ಜಾಗಳನ್ನು ತುರುಕಲಾಗುತ್ತಿದೆ. ಎಳೆನೀರು, ಮಜ್ಜಿಗೆ ಕುಡಿಯುತ್ತಿದ್ದ ಬಾಯಿಗೆ ಕೋಕಕೋಲಾ ಸುರಿಯಲಾಗುತ್ತಿದೆ. ಚಕ್ಕುಲಿ, ಕೋಡ್ಬಳೆಯ ಬದಲು ಲೇಸ್, ಕುರ್ಕುರೆ, ಚಿಪ್ಸ್ ಪ್ಯಾಕೇಟ್, ಕೆಂಟಕಿ ಚಿಕನ್ ನೀಡಲಾಗುತ್ತಿದೆ. ಅರಿಶಿನ, ಶ್ರೀಗಂಧ ಬಳಿದುಕೊಳ್ಳುತ್ತಿದ್ದ ಮುಖಕ್ಕೆ ಹತ್ತಾರು ಕ್ರೀಮ್ಗಳನ್ನು ಬಳಿದುಕೊಳ್ಳಲಾಗುತ್ತಿದೆ. ಕರಿಯರನ್ನು 15 ದಿನಗಳಲ್ಲಿ ಬಿಳಿಯರನ್ನಾಗಿ ಮಾಡಲು, ಬೊಜ್ಜು ಬೆಳೆದವರನ್ನು 10 ದಿನಗಳಲ್ಲಿ ಸಪೂರರನ್ನಾಗಿ ಮಾಡಲು, ಬೋಳು ತಲೆಯವರಿಗೆ ಕೂದಲು ಚಿಗುರುವಂತೆ ಮಾಡುವ ಜಾಹಿರಾತುಗಳು ಹೊರಬೀಳುತ್ತಿವೆ. ಇಡೀ ರಾತ್ರಿ ಭೋಗಸುಖ ಅನುಭವಿಸುವಂತೆ ಮಾಡಲು ಮಾತ್ರೆಗಳನ್ನು ತಯಾರಿಸಲಾಗಿದೆ ಎಂಬ ಜಾಹಿರಾತು ಹೊರಬೀಳುತ್ತಿದೆ. ಮಧ್ಯಮ ವರ್ಗದ ಜನ ಇದಕ್ಕೆಲ್ಲ ಬಲಿಪಶುಗಳಾಗುತ್ತಿದ್ದಾರೆ.
ನಮ್ಮ ಮಾಧ್ಯಮಗಳು ಈ ಜಾಹಿರಾತುದಾರರ ಏಜೆಂಟರುಗಳಂತೆ ಕೆಲಸ ಮಾಡುತ್ತಿವೆ. ಉಳ್ಳವರ ಹಿಡಿ ಜನರ ನೆಮ್ಮದಿಯ ಬದುಕಿಗಾಗಿ ಲಕ್ಷಾಂತರ ಜನ ಬಡವರ ಬದುಕನ್ನು ಕಿತ್ತುಕೊಳ್ಳುವ ಸಾಧನೆ ಈ ಅಭಿವೃದ್ಧಿಯಂತ್ರವಾಗಿದೆ.
ಕೋಟ್ಯಂತರ ಜನಕ್ಕೆ ಬದುಕು ದುರ್ಭರವಾಗಿದೆ ಆದರೆ 120 ಕೋಟಿ ಜನರ ಕೈಗೆ ಮೊಬೈಲ್ ನೀಡಲಾಗಿದೆ. ಭಾರತದ ಅಭಿವೃದ್ಧಿಯನ್ನು ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಅಳೆಯೋಣವೇ? ಬಡತನ ಯಾರಿಂದ ಸೃಷ್ಟಿಯಾಗಿದೆ? ಜನ ಬಡವರಾಗಲು ಬಯಸಿ ಬಡತನ ಅನುಭವಿಸುತ್ತಿದ್ದಾರೆಯೆ? ಬಡತನ ಸರ್ಕಾರದಿಂದ ಸೃಷ್ಟಿಯಾಗುತ್ತದೆ. ಶ್ರೀಮಂತರನ್ನ ಓಲೈಸುವ ಸರ್ಕಾರದ ಧೋರಣೆಯಿಂದ ಬಡತನ ಸೃಷ್ಟಿಯಾಗುತ್ತದೆ. ಮಲತಾಯಿ ಧೋರಣೆಯಿಂದ ಬಡವರನ್ನು ಸರ್ಕಾರ ನೋಡುವುದರಿಂದ ಬಡತನ ಸೃಷ್ಟಿಯಾಗುತ್ತದೆ ಎಂಬ ಕಟುಸತ್ಯವನ್ನು ಮೋದಿ ಮಹಾಶಯ ಒಪ್ಪುವುದೇ ಇಲ್ಲ. ನಮ್ಮ ರಾಜ್ಯಾಂಗ ಸಮಾಜವಾದವನ್ನು ಪ್ರತಿಪಾದಿಸುತ್ತದೆ. ಆದರೆ ನಮ್ಮ ಸರ್ಕಾರಗಳು ಸಮಾಜವಾದದಿಂದ ದೂರ ಸರಿಯುತ್ತಿವೆ. ಬಂಡವಾಳಶಾಹಿ ಪದ್ಧತಿಗೆ ಜಾರುತ್ತಿವೆ.
ಕೆಲವರು ಹೇಳುತ್ತಾರೆ ಸರ್ಕಾರ ನಡೆಸುವವರು ರಿಲಾಯನ್ಸ್ ಕಂಪೆನಿಯವರು ಮತ್ತು ಅದಾನಿ ಎಂದು. ಅದೂ ನಿಜ ಇರಬಹುದು. ಈ ಕಳೆದ 25ವರ್ಷಗಳಲ್ಲಿ ಖಾಸಗಿ ಸೆಕ್ಟರಿನ ಪ್ರಭಾವ ತುಂಬ ಬೆಳೆದಿದೆ. ಸರ್ಕಾರ ಅವರು ಹೇಳಿದಂತೆ ಶಿರಸಾವಹಿಸಿ ಕೆಲಸ ಮಾಡುತ್ತದೆ.
ಸರ್ಕಾರ ಧರ್ಮಛತ್ರವಲ್ಲ. ಕಲ್ಲಿದ್ದಲು ಗಣಿ ಹರಾಜು ಹಾಕುವುದು, ಹಲವು ರೈಲ್ವೆ ಮಾರ್ಗಗಳನ್ನು ದೀರ್ಘಕಾಲದ ಗುತ್ತಿಗೆ ಆಧಾರದ ಮೇಲೆ ಖಾಸಗಿಗೆ ಬಿಟ್ಟುಕೊಡುವುದು, ಆ ಮೂಲಕ ತನ್ನ ಜವಾಬ್ದಾರಿಯಿಂದ ಕಳಚಿಕೊಳ್ಳುವುದು ಆಡಳಿತ ನಡೆಸುವವರ ಹೊಣೆಗೇಡಿತನವನ್ನು ಸೂಚಿಸುತ್ತದೆ. ಸಾರ್ವಜನಿಕ ಜೀವನದಲ್ಲಿ
hypocrisy ಬೆಳೆಸುವ ಹುನ್ನಾರ ಕಾಲಕ್ರಮದಲ್ಲಿ ತಿರುಗುಬಾಣವಾಗಿಬಿಡುವ ಸಾಧ್ಯತೆಗಳಿವೆ.
ಇದನ್ನೂ ಓದಿ: ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ: ಹೊಸ ಬಾಟಲ್ನಲ್ಲಿ ಹಳೆ ಮದ್ಯ -ಎಚ್.ಎಸ್ ದೊರೆಸ್ವಾಮಿ