ರೈತರ ಒಂದು ಗುಂಪನ್ನು ದಾರಿ ತಪ್ಪಿಸಿದ ಮತ್ತು ಹಿಂಸೆಗೆ ಪ್ರಚೋದಿಸಿದ ಅರೋಪ ಎದುರಿಸುತ್ತಿರುವ ದೀಪ್ ಸಿಧು ಹಿನ್ನೆಲೆಯೇನು?
2019 ರಲ್ಲಿ ಬಿಜೆಪಿ ಸಂಸದ ಮತ್ತು ನಟ ಸನ್ನಿ ಡಿಯೋಲ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಮೂಲಕ ಪಂಜಾಬಿ ನಟ ದೀಪ್ ಸಿಧು ಪ್ರವರ್ಧಮಾನಕ್ಕೆ ಬಂದ. ಕಿಸಾನ್ ಸಂಯುಕ್ತ್ ಮೋರ್ಚಾ ಸೇರಿದಂತೆ ಕೆಲವು ಮಾಧ್ಯಮಗಳು, ಕೆಂಪುಕೋಟೆ ಹಿಂಸಾಚಾರಕ್ಕೆ ದೀಪ್ ಸಿದು ಮೂಲ ಕಾರಣ ಎಂದಿವೆ.
ಪಂಜಾಬಿ ಮುಕ್ತ್ಸಾರ್ ಜಿಲ್ಲೆಯ ಈ ನಟ 2018 ರ ’ಜೋರ್ ದಸ್ ನಂಬ್ರಿಯಾ’ ಸಿನಿಮಾದ ಮೂಲಕ ಸ್ಟಾರ್ ಎನಿಸಿಕೊಂಡ. ಈತ ಸನ್ನಿ ಡಿಯೋಲ್ ಆಪ್ತನೇ ಆಗಿದ್ದ. ಆದರೆ ಇತ್ತೀಚೆಗೆ ಡಿಸೆಂಬರ್ನಿಂದ ಸನ್ನಿ ಡಿಯೋಲ್, ತಾವು ಮತ್ತು ತಮ್ಮ ಕುಟುಂಬ ಈತನ ಜೊತೆ ಸದ್ಯ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಹೇಳುತ್ತ ಬಂದಿದ್ದಾರೆ. ನಿನ್ನೆಯ ಘಟನೆ ನಂತರವೂ ಡಿಯೋಲ್ ಆತನ ಸಂಪರ್ಕ ಈಗ ಇಲ್ಲ, ಆತನನ್ನು ದೂರವಿಟ್ಟಿದ್ದೇವೆ ಎಂಬುದಾಗಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಟ್ರಾಕ್ಟರ್ ರ್ಯಾಲಿಯಲ್ಲಿ ಅಹಿತಕರ ಘಟನೆ: ಹೋರಾಟದಿಂದ ಹೊರಬಂದ ಎರಡು ರೈತ ಸಂಘಗಳು
ಪಂಜಾಬಿನಲ್ಲಿ ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆಗಳು ಆರಂಭಗೊಂಡಾಗ ಇತರ ಕೆಲವು ನಟರು ಮತ್ತು ಗಾಯಕರೊಂದಿಗೆ ಸೇರಿ ಕೃಷಿ ಕಾಯ್ದೆ ವಿರುದ್ಧ ಯುವಕರನ್ನು ಸೇರಿಸಲು ದೀಪ್ ಸಿಧು ನೆರವಾಗಿದ್ದ ಎನ್ನಲಾಗಿದೆ.
ಸೆಪ್ಟೆಂಬರ್ 25 ರಂದು ಕೃಷಿ ಕಾಯ್ದೆ ವಿರೋಧಿಸಿ ಬಂದ್ ನಡೆಸಿದಾಗ ಮೊದಲ ಸಲ ದೀಪ್ ಸಿಧು ಚಳವಳಿಯಲ್ಲಿ ಕಾಣಿಸಿಕೊಂಡಿದ್ದ. ಈತ, ಕೆಲವು ಕಲಾವಿದರು ಹರಿಯಾಣ-ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಅದು ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾದ ನಂತರ, ದೀಪ್ ಸಿಧು ಅಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ.
ರಿಂಗ್ರೋಡಿನಲ್ಲೇ ರ್ಯಾಲಿ ನಡೆಸುವುದಾಗಿ ಘೋಷಿಸಿದ್ದ ಕಿಸಾನ್ ಮಜ್ದೂರ್ ಸಮಿತಿಯನ್ನು ಬೆಂಬಲಿಸಿದ ದೀಪ್ ಸಿಧು, ರೈತರ ಒಂದು ಗುಂಪನ್ನು ಕೆಂಪುಕೋಟೆಯತ್ತ ತಿರುಗಿಸಿದ್ದ ಎಂಬ ಆರೋಪ ಎದುರಿಸುತ್ತಿದ್ದಾನೆ. ಧ್ವಜ ಹಾರಿಸುವ ಸಂದರ್ಭದಲ್ಲಿ ಮತ್ತು ಹಿಂಸಾಚಾರ ನಡೆದಾಗ ಈತ ಅಲ್ಲಿಯೇ ಇದ್ದುದಕ್ಕೆ ಅನೇಕ ವಿಡಿಯೋ, ಫೋಟೊ ಲಭ್ಯ ಇವೆ. ಸ್ವತ: ಆತನೇ ಧ್ವಜ ಹಾರಿಸಿದ್ದನ್ನು ಒಪ್ಪಿಕೊಂಡು ಪೋಸ್ಟ್ ಹಾಕಿದ್ದಾನೆ. ಆದರೆ ಹಿಂಸಾಚಾರಕ್ಕೆ ಪ್ರಚೋದಿಸಿಲ್ಲ ಎನ್ನುತ್ತಿದ್ದಾನೆ.
ಇದನ್ನೂ ಓದಿ: TRP ಹಗರಣ: ’ಇಂಡಿಯನ್ ಎಕ್ಸ್ಪ್ರೆಸ್’ಗೆ ಕಾನೂನು ನೋಟಿಸ್ ಕಳುಹಿಸಿದ ರಿಪಬ್ಲಿಕ್ ಟಿವಿ
ಮಂಗಳವಾರದ ಘಟನೆಯ ನಂತರ ಅಂದೇ ರಾತ್ರಿ ಈತ ಸಿಂಘು ಗಡಿಯ ಪ್ರತಿಭಟನಾ ಸ್ಥಳಕ್ಕೆ ಹೋದಾಗ, ನೂರಾರು ರೈತರು ಈತನನ್ನು ತರಾಟೆಗೆ ತೆಗೆದುಕೊಂಡಿದ್ದರು.
ಜ. 25 ರಂದು ಈತ ಮತ್ತು ಈಗ ರಾಜಕಾರಣಿಯಾಗಿ ಬದಲಾಗಿರುವ ಕ್ರಿಮಿನಲ್ ಒಬ್ಬ, ಸಂಜೆ 6 ರಿಂದ 11 ಗಂಟೆಯವರೆಗೆ ಸಿಂಘು ಗಡಿಯ ಮುಖ್ಯ ವೇದಿಕೆ ಆಕ್ರಮಿಸಿಕೊಂಡು ರಿಂಗ್ ರೋಡಿನಲ್ಲಿಯೆ ರ್ಯಾಲಿ ಮಾಡೋಣ ಎಂದು ರೈತರನ್ನು ಪ್ರಚೋದಿಸಿದ್ದರು ಎನ್ನಲಾಗಿದೆ.
ದೀಪ್ ತನ್ನ ಭಾಷಣಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಮತ್ತು ಸಿಖ್ ಪ್ರತ್ಯೇಕವಾದಿ ಚಳವಳಿ ನಾಯಕನಾಗಿದ್ದ ಭಿಂದ್ರನ್ವಾಲೆಯನ್ನು ಉಲ್ಲೇಖಿಸುತ್ತಿದ್ದನಂತೆ. ರಾಜ್ಯಗಳಿಗೆ ಹೆಚ್ಚಿನ ಹಕ್ಕು ಬೇಕು ಎನ್ನುವುದರ ಸುತ್ತ ಆಕರ್ಷಕವಾಗಿ ಮಾತಾಡುತ್ತಾನೆ. ಜೊತೆಗೆ ಪ್ರಧಾನಿಯೊಂದಿಗೆ ಫೋಟೊ ತೆಗೆಸಿಕೊಳ್ಳುವಷ್ಟರ ಮಟ್ಟಿಗೆ ಬಿಜೆಪಿ ನಾಯಕತ್ವಕ್ಕೆ ಹತ್ತಿರವಾಗಿದ್ದ.
ಇದನ್ನೂ ಓದಿ: ಸಿಖ್ ಧ್ವಜ ಹಾರಿಸಿದವ ಬಿಜೆಪಿ ಕಾರ್ಯಕರ್ತ ಎಂಬುದು ಸಾಬೀತಾಗಿದೆ: ಸಿದ್ದರಾಮಯ್ಯ