“ನಾವು ಕೊಂದವರು ಯಾರು’ ಆಂದೋಲನದಿಂದ ‘ಮಹಿಳಾ ನ್ಯಾಯ ಸಮಾವೇಶ’ವನ್ನು ಬೆಳ್ತಂಗಡಿಯಲ್ಲಿ ಹಮ್ಮಿಕೊಳ್ಳಬೇಕು ಎಂದುಕೊಂಡಾಗ ನೂರಾರು ಪ್ರಶ್ನೆಗಳು, ನೂರಾರು ಆಪಾದನೆಗಳು, ಆರೋಪಗಳು ಬಂದವು. ಯಾಕೆ ಇಲ್ಲಿಗೆ ಬರುತ್ತಿದ್ದಾರೆ, ಇಲ್ಲಿಗೇ ಬಂದು ಏನು ಮಾಡುತ್ತಾರೆ ಅನ್ನುವ ಹಲವು ಬಗೆಯ ಪ್ರಶ್ನೆಗಳು ಬಂದವು. ಇವತ್ತು ನಮ್ಮ ಹಕ್ಕೋತ್ತಾಯಗಳು, ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುತ್ತವೆ” ಎಂದು ಸಾಮಾಜಿಕ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಹೇಳಿದರು.
ಡಿಸೆಂಬರ್ 16ರಂದು ಬೆಳ್ತಂಗಡಿಯಲ್ಲಿ ಹಮ್ಮಿಕೊಂಡಿದ್ದ ‘ಕೊಂದವರು ಯಾರು ಆಂದೋಲನ’ದ ‘ಮಹಿಳಾ ನ್ಯಾಯ ಸಮಾವೇಶದ’ಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಅವರು ‘ಇಲ್ಲಿ ನೆರೆದಿರುವ ಎಲ್ಲರೂ ಸಹ ಕಾರ್ಯಕ್ರಮವನ್ನ ವೀಕ್ಷಣೆ ಮಾಡಲು ಬಂದವರಲ್ಲ, ಬದಲಿಗೆ ತಮ್ಮ ತಮ್ಮ ಊರುಗಳಿಂದ, ತಮ್ಮ ತಮ್ಮ ಬದುಕುಗಳಿಂದ, ತಮ್ಮ ತಮ್ಮ ಜೀವನದ ನೋವಿನ ಕಥೆಗಳಿಂದ ಒಂದೊಂದು ಕಿಡಿಯನ್ನು ಹೊತ್ತಿಸಿಕೊಂಡು ಬಂದು, ಈ ಧರ್ಮಸ್ಥಳದ ನೆಲದಲ್ಲಿ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಲಿ ಅಂತಾ ಆಗ್ರಹಿಸುತ್ತಿರುವವರು. ಇಲ್ಲಿ ಬಂದಂತಹ ಹೆಣ್ತನದ, ಹೆಂಗರುಳಿನ ಎಲ್ಲರೂ ಕೂಡಾ ನ್ಯಾಯಕ್ಕಾಗಿ ಆಗ್ರಹಿಸುವ ದೀಪಗಳು ಎಂದರು.
‘ಇಲ್ಲಿ ಬಂದವರಲ್ಲಿ ದೂರದ ಬೀದರ್ ನ ಭಾಲ್ಕಿಯಿಂದ, ಇದೇ ಬೆಳ್ತಂಗಡಿಯ ತನಕ, ಪಕ್ಕದ ಜಿಲ್ಲೆ ಚಿಕ್ಕಮಂಗಳೂರಿನಿಂದ, ದೂರದ ಚಿತ್ರದುರ್ಗದ ತನಕ, ಎಲ್ಲಾ ಜಿಲ್ಲೆಗಳಿಂದ, ಎಲ್ಲಾ ಜೀವನದ ಹಂತಗಳಿಂದ, ಬೇರೆ ಬೇರೆ ಹಿನ್ನೆಲೆಗಳಿಂದ ಬಂದವರಾಗಿದ್ದಾರೆ. ಆದರೆ ನಮ್ಮೆಲ್ಲರ ಕೂಗು ಒಂದೇ ಆಗಿದೆ, ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು, ಹೆಣ್ಣು ಮಕ್ಕಳಿಗೆ ಘನತೆಯಿಂದ ಬದುಕುವ ಹಕ್ಕು ಸಿಗಬೇಕು. ಸಂವಿಧಾನ ನಮಗೆ ಸಮಾನತೆಯನ್ನು ಕೊಟ್ಟಿದೆ. ಆ ಸಮಾನತೆ ನಿಜ ಜೀವನದಲ್ಲೂ ಕೂಡಾ ಜಾರಿಯಾಗಬೇಕು’ ಎಂದು ಆಗ್ರಹಿಸಿದರು.
ಇದೇ ವೇಳೆ ಸಮಾನತೆ ನಮ್ಮ ಹಕ್ಕು, ಭಿಕ್ಷೆ ಅಲ್ಲ ಅನ್ನುವ ಘೋಷಣೆಯ ಮೂಲಕ ಪ್ರಸ್ತಾವಿಕ ಮಾತುಗಳನ್ನು ಮುಂದುವರಿಸಿದರು.
‘ನಮ್ಮ ಹಕ್ಕೋತ್ತಾಯಗಳನ್ನು ಓದಿದ್ದನ್ನು ಕೇಳಿದ ಮೇಲೆ ಇದು ಯಾವುದೋ ಒಂದು ಊರಿಗೆ ಸಂಬಂಧಿಸಿದ, ಒಂದು ಪ್ರಕರಣಕ್ಕೆ ಸಂಬಂಧಿಸಿದ ಹೋರಾಟ ಅಲ್ಲ ಅನ್ನುವುದು ನಿಮಗೆ ಅರ್ಥವಾಗಿರುತ್ತದೆ. ‘ನಾವು ಕೊಂದವರು ಯಾರು’ ಆಂದೋಲನದಿಂದ ‘ಮಹಿಳಾ ನ್ಯಾಯ ಸಮಾವೇಶ’ವನ್ನು ಬೆಳ್ತಂಗಡಿಯಲ್ಲಿ ಹಮ್ಮಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಾಗ, ನೂರಾರು ಪ್ರಶ್ನೆಗಳು, ನೂರಾರು ಆಪಾದನೆಗಳು, ಆರೋಪಗಳು ಬಂದವು. ಯಾಕೆ ಇಲ್ಲಿಗೆ ಬರುತ್ತಿದ್ದಾರೆ, ಇಲ್ಲಿಗೇ ಬಂದು ಏನು ಮಾಡುತ್ತಾರೆ, ಅನ್ನುವ ನೂರಾರು ಬಗೆಯ ಪ್ರಶ್ನೆಗಳು ಬಂದವು. ಇವತ್ತು ನಮ್ಮ ಹಕ್ಕೋತ್ತಾಯಗಳು, ಆ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುತ್ತವೆ ಎಂದುಕೊಳ್ಳುತ್ತೇನೆ. ನಾವು ಕೇವಲ ಬೆಳ್ತಂಗಡಿಗೆ ಬಂದವರಲ್ಲ, ಅಥವಾ ಇಲ್ಲಿಗೆ ಬಂದು ನಮ್ಮ ಪ್ರಯಾಣವನ್ನು ಮುಗಿಸುವವರು ಅಲ್ಲ, ಮಹಿಳಾ ಚಳವಳಿಯ ಈ ಪ್ರಯಾಣ ಶುರುವಾಗಿದ್ದು ಬಹಳಷ್ಟು ವರ್ಷಗಳ ಹಿಂದೆ. ನೂರಾರು ವರ್ಷಗಳಿಂದ ಮಹಿಳೆಯರು ನಡೆಸಿಕೊಂಡು ಬಂದಿರುವಂತ ಆಂದೋಲನದ ಕೆಲವು ಪ್ರತಿನಿಧಿಗಳು ಇಲ್ಲಿದ್ದೇವೆ. ಮುಂದೆಯು ಕೂಡಾ ಎಷ್ಟೋ ಜನ ಮಹಿಳೆಯರು, ಎಷ್ಟೋ ಜನ ನಮ್ಮ ಕಿರಿಯ ಸಹೋದರಿಯರು ಈ ಹೋರಾಟದ ಪಂಜನ್ನು ಹಿಡಿದು ಮುನ್ನೆಡೆಯುತ್ತಾರೆ’ ಎಂದು ಭರವಸೆ ವ್ಯಕ್ತ ಪಡಿಸಿದರು.
‘ಇಂದಲ್ಲಾ-ನಾಳೆ ಈ ದೇಶದಲ್ಲಿ, ಈ ರಾಜ್ಯದಲ್ಲಿ, ಈ ನೆಲದಲ್ಲಿ ಕೂಡಾ ಹೆಣ್ಣು ಮಕ್ಕಳಿಗೆ ನ್ಯಾಯ ಖಾತ್ರಿಯಾಗುತ್ತದೆ. ಹೆಣ್ಣು ಮಕ್ಕಳಿಗೆ ಸಂವಿಧಾನ ಕೊಟ್ಟಿರುವಂತಹ ಸಮಾನತೆ ಖಾತ್ರಿಯಾಗುತ್ತೆ. ಈ ಭರವಸೆಯ ಜೊತೆಗೆ ಇಲ್ಲಿ ಬಂದು ಸೇರಿರುವವರು ನಾವು’ ಎಂದು ಹೇಳಿದರು.
‘ಇಲ್ಲಿಗೆ ಯಾಕೆ ಬರ್ತಿದ್ದೀರೀ..ಇಲ್ಲಿ ಬಂದು ಏನ್ ಮಾಡ್ತೀರಿ ಅಂದ್ರೆ. ಹಾಗೇ ಕೇಳುವವರಿಗೆ ನಾವಿವತ್ತು ಇಲ್ಲಿಂದ ಈ ಎಲ್ಲಾ ಸಹೋದರಿಯರ ಪರವಾಗಿ ಹೇಳೋದಕ್ಕೆ ಬಯಸುತ್ತೀವಿ. ನಾವು ಇಲ್ಲಿಗೆ ಮಾತ್ರ ಬಂದವರಲ್ಲ, ಬಿಜಾಪುರದಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಆಯ್ತು. ಅತ್ಯಾಚಾರ ಆಗಿ ಆಕೆಯನ್ನ ಅತ್ಯಂತ ಬರ್ಬರವಾಗಿ ಕೊಂದು ಹಾಕಿದ್ದರು, ಸಾಲದ್ದಕ್ಕೆ ಆ ಸಣ್ಣ ಹುಡುಗಿಯ ನಡೆತೆಯೇ ಸರಿ ಇರಲಿಲ್ಲ ಅನ್ನುವ ಆರೋಪಗಳನ್ನು ಮಾಡಲಾಯಿತು. ಆ ದಿನ ಜನಪರ ಕಾಳಜಿ ಇರುವಂತಹವರು, ಮಹಿಳಾ ಸಂಘಟನೆಗಳು ಸೇರಿದಂತೆ ಎಲ್ಲರೂ ದೊಡ್ಡ ಸಂಖ್ಯೆಯಲ್ಲಿ ಬಿಜಾಪುರಕ್ಕೆ ಹೋಗಿದ್ದೇವೆ. ಆ ದಲಿತ ಹೆಣ್ಣು ಮಗುವಿನ ಪ್ರಾಣ ಕಸಿದವರ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಆ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಹಲವಾರು ಜನ, ಈ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದಾರೆ’ ಎಂದು ತಿಳಿಸಿದರು.
ಅಲ್ಲದೇ ‘ನೂರಾರು ಹೆಣ್ಣು ಮಕ್ಕಳನ್ನ ಅತ್ಯಂತ ಅಸಹ್ಯಕರವಾಗಿ ಲೈಂಗಿಕ ಶೋಷಣೆಗೆ ಒಳಪಡಿಸಿದ ಪ್ರಕರಣ ಹಾಸನದಲ್ಲಿ ನಡೆದರೆ, ನಾವು ಹಾಸನಕ್ಕೂ ಹೋಗಿ, ಹಾಸನದ ನೆಲದಲ್ಲಿ ಪಾದಯಾತ್ರೆ ಮಾಡಿದ್ದೆವು, ನ್ಯಾಯಕ್ಕಾಗಿ ಘೋಷಣೆಗಳನ್ನ ಕೂಗಿದ್ದೆವು, ನಮಗೆ ನ್ಯಾಯ ಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತಾ ಕೇಳಿದ್ದೆವು. ನಮ್ಮ ಒಡಲ ಸಂಕಟದ ಧ್ವನಿ ಒಂದಲ್ಲಾ ಒಂದು ದಿನ ನ್ಯಾಯಾಲಯದ ಬಾಗಿಲನ್ನು ಮುಟ್ಟುತ್ತದೆ, ತಪ್ಪಿತಸ್ತರಿಗೆ ಶಿಕ್ಷೆ ಆಗುತ್ತದೆ. ನಮಗೆ ನ್ಯಾಯ ಸಿಗುತ್ತದೆ ಅನ್ನುವುದನ್ನು ಹಾಸನದ ಪ್ರಕರಣ ತೋರಿಸುತ್ತಿದೆ’ ಎಂದು ಹೇಳಿದರು.
‘ಒಂದಲ್ಲಾ, ಎರಡರಲ್ಲ, ಎಲ್ಲವನ್ನು ಹೇಳಿಕೊಳ್ಳಲು ಸಮಯವಿಲ್ಲ, 70ರ ದಶಕದ ಮಥುರಾ ಪ್ರಕರಣದಿಂದ ಹಿಡಿದು, 90ರ ದಶಕದಲ್ಲಿ ಭನ್ವರಿ ದೇವಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧದ ಹೋರಾಟದಿಂದ, ಅಥವಾ ಮಹಾರಾಷ್ಟ್ರದ ಖೈರ್ಜಾಂಜಿಯಲ್ಲಿ ನಡೆದ ದಲಿತ ತಾಯಿ-ಮಗಳು ಹೋರಾಡಿದಂತಹ ಪ್ರಕರಣದಲ್ಲಿ ಅವರ ಮೇಲೆ ನಡೆದ ದೌರ್ಜನ್ಯದ ವಿರುದ್ಧದ ಹೋರಾಟದಿಂದ, ಎಲ್ಲೇ ಅನ್ಯಾಯ, ಅತ್ಯಾಚಾರ ನಡೆದರು ನಾವಲ್ಲಿ ಹೋಗಿ ಪ್ರತಿಭಟನೆ ಮಾಡಿದ್ದೇವೆ. ಇವತ್ತು ನಾವು ಯಾಕೆ ಬರಬಾರದು ಇಲ್ಲಿಗೆ, ಯಾಕೆ ಬರಬಾರದು ಬೆಳ್ತಂಗಡಿಗೆ, ಯಾಕೆ ನಾವು ಪ್ರಶ್ನೆ ಮಾಡಬಾರದು, ಇಲ್ಲಿ ಮಹಿಳೆಯರನ್ನ ಕೊಂದವರು ಯಾರು ಅನ್ನುವುದನ್ನು ನಾವು ಯಾಕೆ ಕೇಳಬಾರದು. ಯಾರು ನಮ್ಮನ್ನ ತಡೆಯುವುದು, ಯಾರು ನಮ್ಮ ಮೇಲೆ ಆಪಾದನೆ ಹೊರಿಸುತ್ತಿರುವವರು, ಅಂತವರಿಗೆ ನಿಮ್ಮ ಆತ್ಮಸಾಕ್ಷಿಯಲ್ಲಿಯೇ ಉಳುಕಿರಬೇಕು. ನಿಮ್ಮ ಎದೆಗಳನ್ನ ಮುಟ್ಟಿ ನೋಡಿಕೊಳ್ಳಿ, ನೀವೇ ಅಲ್ಲವೇ ಕೊಂದವರು, ನೀವೇ ಅಲ್ಲವೇ ಕೊಂದವರ ಪರ ನಿಂತವರು..ನಿಮ್ಮ ಆತ್ಮಸಾಕ್ಷಿಗಳನ್ನ ಮುಟ್ಟಿ ನೋಡಿಕೊಳ್ಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸರ್ಕಾರದ ಗಮನ ಸೆಳೆದ ಮಲ್ಲಿಗೆ, ‘ಸರ್ಕಾರದಲ್ಲಿ ಮೇಲೆ ಕೂತಿರುವಂತವರು, ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪಮುಖ್ಯಮಂತ್ರಿಗಳು, ಗೃಹ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ನೀವು ನಿಮ್ಮ ಮನಸಾಕ್ಷಿಯನ್ನು ಮುಟ್ಟಿ ನೋಡಿಕೊಳ್ಳಿ, ಯಾರನ್ನ ಬೆಂಬಲಿಸಬೇಕಿತ್ತು, ನೀವು ಯಾರನ್ನು ಬೆಂಬಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅಲ್ಲದೇ ನಾವು ನೊಂದಂತಹ ಹೆಣ್ಣು ಮಕ್ಕಳು ಇಲ್ಲೇ ಇದ್ದೇವೆ. ತಮ್ಮ ಕುಟುಂಬದ ಕರುಳ ಕುಡಿಗಳನ್ನ ಕಳೆದುಕೊಂಡ ತಾಯಂದಿರು ಇಲ್ಲಿದ್ದಾರೆ..ನಮಗೆ ನ್ಯಾಯ ಖಾತರಿ ಪಡಿಸುವಂತವರು ಯಾರು. ನಿಮಗೆ ಜವಾಬ್ದಾರಿ ಇಲ್ಲವಾ ನಮಗೆ ನ್ಯಾಯ ಕೊಡುವಂತಾದ್ದು, ಈ ನೆಲದ ಹೆಣ್ಣು ಮಕ್ಕಳಿಗೆ ನೀವು ಉತ್ತರದಾಯಿಗಳು ಅಲ್ಲವಾ, ನೀವು ಹೊಣೆಗಾರರು ಅಲ್ಲವಾ ಎಂದು ಪ್ರಶ್ನಿಸಿದ ಅವರು ಈ ವೇಳೆ ಎಸ್.ಐ.ಟಿ ಲೋಪದೋಷಗಳ ಬಗ್ಗೆಯೂ ಮಾತನಾಡಿದರು.
‘ಧರ್ಮಸ್ಥಳ ಪ್ರಕರಣದಲ್ಲಿ ಒಂದು ಎಸ್ಐಟಿ ರಚನೆಯಾಯಿತು. ಇಂದಲ್ಲಾ ನಾಳೆ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಲ್ಲಿ ನಾವು ಅದನ್ನು ಸ್ವಾಗತಿಸಿದೆವು, ತನಿಖೆಯಲ್ಲಿ ನೀವು ಮಾಡಿದ್ದೇನು, ಎಲ್ಲಿ ಹೋಯಿತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ವಿಚಾರ’ ಎಂದು ಗುಡುಗಿದರು.
‘ಇಂದು ನಾವು ಇಲ್ಲಿಗೆ ಯಾಕೆ ಬಂದಿದ್ದೇವೆ ಎಂದರೆ ನಮಗೆ ಗೊತ್ತಿರುವ ವೇದವಲ್ಲಿ, ಪದ್ಮಲತಾ, ಸೌಜನ್ಯ, ಯಮುನಾ, ಹೇಮಾವತಿ ಇಂಥ ಹತ್ತಾರು ಹೆಣ್ಣು ಮಕ್ಕಳು ಮಾತ್ರವಲ್ಲ, ಆರ್.ಟಿ.ಐ ಅರ್ಜಿಗಳ ಅಂಕಿಅಂಶಗಳಲ್ಲಿ ಬಂದತಹ ಮಾಹಿತಿಯಲ್ಲಿ 2001 ರಿಂದ 2012ರ ತನಕ, ಕೇವಲ 12ವರ್ಷಗಳಲ್ಲಿ 452 ಅಸಹಜ ಸಾವುಗಳು ನಡೆದಿವೆ. ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಅದರಲ್ಲಿ ಮಹಿಳೆಯರ ಸಾವುಗಳು 96, ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಒಂದು ವರ್ಷದಲ್ಲಿ ಮಹಿಳೆಯರ ಅಸಹಜ ಸಾವುಗಳು ಸಂಭವಿಸುವ ಸರಾಸರಿ ಮೊತ್ತ 37, ಆದರೆ ಇಲ್ಲಿ ಇದಕ್ಕೆ ಮೂರು ಪಟ್ಟು ಹೆಚ್ಚು ಹೆಣ್ಣು ಮಕ್ಕಳ ಅಸಹಜ ಸಾವು ಸಂಭವಿಸುತ್ತವೆ. ಇದಕ್ಕೆ ನ್ಯಾಯ ಕೇಳುವುದು ಈ ಹೋರಾಟ ಮುಖ್ಯ ಅಂಶ. ಇಷ್ಟು ಮಾತ್ರವಲ್ಲ ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್.ಐ.ಟಿ ಸಮಗ್ರ ತನಿಖೆ ನಡೆಸಬೇಕು.
‘ಅದಕ್ಕಿಂತಲೂ ಮುಖ್ಯವಾದ ಪ್ರಶ್ನೆ ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿರುವಾಗ ವ್ಯವಸ್ಥೆ ಏನು ಮಾಡುತ್ತಿತ್ತು. ಈ ವ್ಯವಸ್ಥೆ ಇಂಥಹ ದೌರ್ಜನ್ಯ ನಡೆಯಲು ಹೇಗೆ ಅವಕಾಶ ಮಾಡಿಕೊಟ್ಟಿತು. ಇಂತಹ ಸರಣಿ ಹತ್ಯೆಗಳು ನಡೆದವು, ಅಪರಾಧಿಗಳು ಅಂತಾ ಬಂಧಿಸಿದ ಎಲ್ಲರನ್ನ ನಿರಪರಾಧಿಗಳು ಅಂತಾ ಸರ್ಕಾರವೇ ಬಿಡುಗಡೆ ಮಾಡಿತ್ತು. ಆದರೆ ಇಲ್ಲಿ ನಡೆದ ಹತ್ಯೆ, ಅತ್ಯಾಚಾರ, ಭೀಕರ ಹತ್ಯೆ ಪ್ರಕರಣಗಳಲ್ಲಿ ನಿಜವಾಗಲೂ ಕೊಂದವರು ಯಾರು ಅನ್ನುವುದಕ್ಕೆ ಉತ್ತರ ಕೊಡಬೇಕು’ ಎಂದು ಹೇಳಿದರು.
ಸಮಾವೇಶದ ಸಂಪೂರ್ಣ ವಿಡಿಯೋ ಇಲ್ಲಿದೆ:


