ಹಿಂದೂ ದೇವಾಲಯಗಳ ಮೇಲೆ ಪ್ರಭುತ್ವ ನಿಯಂತ್ರಣ ಹಾಗೂ ಅದರಿಂದ ಭಾರತದ ಧರ್ಮನಿರಪೇಕ್ಷತೆಯ ಮೇಲೆ ಉಂಟಾಗುವ ಪರಿಣಾಮ – ಇವು ಬಹಳ ಕಾಲದಿಂದ ಬಿಸಿಬಿಸಿ ಚರ್ಚೆಯಾಗುತ್ತಿವೆ. ದೇವಾಲಯಗಳನ್ನು ಪ್ರಭುತ್ವದ ಮೇಲ್ವಿಚಾರಣೆಯಿಂದ ’ಮುಕ್ತ’ಗೊಳಿಸಬೇಕೆಂಬ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಹಿಂದೂ ದೇವಾಲಯಗಳನ್ನು ರಾಜ್ಯ ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವ ಕಾಯ್ದೆಯೊಂದನ್ನು ಕರ್ನಾಟಕ ಸರ್ಕಾರ ತರಲಿದೆ ಎಂದು ಕಳೆದ ಡಿಸೆಂಬರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಯಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದ್ದರು. ಈ ಘೋಷಣೆಯು ವಿವಾದದ ಧೂಳೆಬ್ಬಿಸಿದೆ; ಮುಖ್ಯವಾಗಿ ಹಿಂದುತ್ವ ಅಜೆಂಡಾದ ಭಾಗವಾಗಿರುವ ಇದನ್ನು ಆಗುಮಾಡಲು ಬೊಮ್ಮಾಯಿಯವರು ರಾಜಾರೋಷವಾಗಿ ಪ್ರಭುತ್ವ ಯಂತ್ರಾಂಗವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷಗಳನ್ನೂ ಒಳಗೊಂಡಂತೆ ಅನೇಕರು ತೀಕ್ಷ್ಣವಾಗಿ ಟೀಕಿಸುತ್ತಿದ್ದಾರೆ.
ಧಾರ್ಮಿಕ ಸಂಸ್ಥೆಗಳ ಮೇಲೆ ಪ್ರಭುತ್ವದ ನಿಯಂತ್ರಣವು ಬಹಳ ಹಳೆಯ ಪದ್ಧತಿಯಾಗಿದೆ. ಬ್ರಿಟಿಷ್ ಆಳ್ವಿಕೆ ಅಡಿಯಲ್ಲಿದ್ದ ಮದರಾಸು ಪ್ರೆಸಿಡೆನ್ಸಿಯು ’ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಸೇವಾ ದತ್ತಿಗಳ ಕಾಯ್ದೆ’ಯನ್ನು 1926ರಲ್ಲಿ ಜಾರಿಗೆ ತಂದು, ದೇವಸ್ಥಾನಗಳು ಮತ್ತು ಅವುಗಳ ಹಣಕಾಸಿನ ನಿರ್ವಹಣೆ ಕುರಿತಂತೆ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು. ಈ ಚೌಕಟ್ಟನ್ನಾಧರಿಸಿ ಭಾರತದ ಅನೇಕ ರಾಜ್ಯಗಳು ಇಂಥದೇ ಕಾನೂನುಗಳನ್ನು ಜಾರಿಗೆ ತಂದವು. ಕರ್ನಾಟಕದಲ್ಲೂ ಸಹ ’ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಸೇವಾ ದತ್ತಿಗಳ ಕಾಯ್ದೆ 1997’ ಮತ್ತು ಅದರಡಿಯಲ್ಲಿ 2002ರ ನಿಯಮಗಳು ಜಾರಿಯಲ್ಲಿವೆ.
’ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಸೇವಾ ದತ್ತಿಗಳ ಇಲಾಖೆ’ಯು ಕರ್ನಾಟಕದಲ್ಲಿರುವ 1,80,000 (ಒಂದು ಲಕ್ಷ ಎಂಬತ್ತು ಸಾವಿರ) ದೇಗುಲಗಳ ಪೈಕಿ ಕೇವಲ 34,563 ದೇಗುಲಗಳ ನಿರ್ವಹಣೆ ಮಾಡುತ್ತಿದೆ. ಹೀಗಿರುವಾಗ, ಮೊದಲನೆಯದಾಗಿ ಹಿಂದೂ ದೇವಸ್ಥಾನಗಳ ಮೇಲೆ ’ಅತಿಯಾದ ಪ್ರಭುತ್ವ ನಿಯಂತ್ರಣ’ ಎನ್ನುವ ವಾದ ಸುಳ್ಳಾದುದು. ಎರಡನೆಯದಾಗಿ, ದೇಗುಲಗಳನ್ನು ಮುಕ್ತಗೊಳಿಸಿ ಎಂಬ ಈ ಕ್ಯಾಂಪೇನು ’ಪ್ರಭುತ್ವ ಹತೋಟಿ’ಯ ವಿಚಾರವನ್ನು ’ಧಾರ್ಮಿಕ ಸಂಸ್ಥೆಗಳನ್ನು ಪ್ರಜಾತಾಂತ್ರಿಕಗೊಳಿಸುವ’ ಪ್ರಶ್ನೆಗೆ ಎದುರುಬದುರಾಗಿ ಎತ್ತುತ್ತಿರುವುದು ಅದರ ಅಪ್ರಾಮಾಣಿಕತೆಯನ್ನು ತೋರಿಸುತ್ತದೆ.
ಧಾರ್ಮಿಕ ವಿಚಾರದಲ್ಲಿ ಪ್ರಭುತ್ವದ ಮಧ್ಯಪ್ರವೇಶ ಇರುವೆಡೆಯಲ್ಲೆಲ್ಲ ಅದರ ಉದ್ದೇಶವೆಂದರೆ ಧಾರ್ಮಿಕ ಆಚರಣೆಗಳು ನಮ್ಮ ಸಾಂವಿಧಾನಿಕ ಆಶಯಗಳಿಗೆ ಬದ್ಧವಾಗಿ ಇರುವಂತೆ ನೋಡಿಕೊಳ್ಳುವುದು. ಧಾರ್ಮಿಕ ವಿಚಾರಗಳಲ್ಲಿ ಪ್ರಭುತ್ವ ನಿಯಂತ್ರಣದ ಪ್ರಾಮುಖ್ಯ ಕುರಿತು ಡಾ. ಬಿ.ಆರ್.ಅಂಬೇಡ್ಕರರು ತಮ್ಮ ಮೂಲ ಕೃತಿ ’ಜಾತಿ ವಿನಾಶ’ದಲ್ಲಿ ಒತ್ತಿ ಹೇಳಿದ್ದಾರೆ. ಇದು ಧರ್ಮವನ್ನೂ ದೇವಸ್ಥಾನಗಳ ಆಡಳಿತವನ್ನೂ ಪ್ರಜಾತಾಂತ್ರೀಕರಿಸುತ್ತದೆ ಎಂದು ಅವರು ವಾದಿಸಿದ್ದಾರೆ. ಪೂಜಾರಿ/ಪುರೋಹಿತ ವೃತ್ತಿಯು ಆನುವಂಶಿಕವಾಗಿರಬಾರದು ಎಂದು ಪ್ರತಿಪಾದಿಸುವ ಅವರು, ಪೂಜಾರಿ/ಪುರೋಹಿತ ವೃತ್ತಿಯನ್ನೇ ಸಂಪೂರ್ಣವಾಗಿ ರದ್ದು ಮಾಡುವ ಕುರಿತೂ ಒತ್ತಾಯ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ಸಂಪೂರ್ಣ ಸುಧಾರಣೆ ಮಾಡಬೇಕಿದೆ ಎಂದು ಕರೆ ಕೊಡುವ ಅವರು, ’ನಾವು ಧರ್ಮಕ್ಕೆ ಒಂದು ಹೊಸ ತಾತ್ವಿಕ ತಳಹದಿಯನ್ನು ನೀಡಬೇಕಿದೆ – ಅದು ಸ್ವಾತಂತ್ರ್ಯ, ಸಮಾನತೆ, ಸೋದರತೆಯ ತತ್ವಗಳಿಗೆ, ಅಂದರೆ ಪ್ರಜಾತಂತ್ರಕ್ಕೆ ಅನುಗುಣವಾಗಿ ಇರಬೇಕು’ ಎನ್ನುತ್ತಾರೆ.
ಸಂವಿಧಾನ ರಚನಾ ಸಭೆಯು ಧರ್ಮ ಮತ್ತು ಧಾರ್ಮಿಕ ಹಕ್ಕುಗಳನ್ನು ಕುರಿತ ವಿಚಾರಗಳನ್ನು ಚರ್ಚಿಸುತ್ತಾ, ಭಾರತದಲ್ಲಿ ಧರ್ಮವು ಅಧಿಕಾರದ ಒಂದು ಮೂಲವಾಗಿದೆ ಹಾಗೂ ಅದು ಜನರ ಮನಸ್ಸುಗಳ ಮೇಲೆ ಹೊಂದಿರುವ ಪ್ರಭಾವ ವಲಯ ಗಣನೀಯವಾದದ್ದು ಎಂದು ಗುರುತಿಸಿದೆ. ಈ ನಿಲುವಿಗೆ ಅನುಗುಣವಾಗಿ ಸಂವಿಧಾನ ಕರ್ತೃಗಳು, ಸಮಾಜದಲ್ಲಿನ ಹಳೆಯ ಚಾರಿತ್ರಿಕ ತಾರತಮ್ಯಗಳನ್ನು ಗಟ್ಟಿಗೊಳಿಸುವ ಒಂದು ಸಾಧನವಾಗಿ ಪಟ್ಟಭದ್ರ ಶಕ್ತಿಗಳು ಧರ್ಮವನ್ನು ದುರುಪಯೋಗಪಡಿಸಿಕೊಳ್ಳದಂತೆ ನಿರ್ದಿಷ್ಟ ನಿಯಂತ್ರಣ ಕ್ರಮಗಳನ್ನು ಪ್ರಭುತ್ವದಲ್ಲಿ ಅಳವಡಿಸಿದರು. ಜನರು ತಮ್ಮ ಆತ್ಮಸಾಕ್ಷಿಗೆ ಅನುಸಾರವಾಗಿ ಯಾವುದೇ ಧರ್ಮವನ್ನು ತಮ್ಮದಾಗಿಸಿಕೊಳ್ಳುವ, ಆಚರಿಸುವ ಅಥವಾ ಪ್ರಚಾರ ಮಾಡುವ ಹಕ್ಕನ್ನು ಭಾರತೀಯ ಸಂವಿಧಾನದ ೨೫ನೇ ಕಲಮು ರಕ್ಷಿಸುತ್ತದೆ. ಆದರೆ ಇದರೊಳಗಿನ ಆರ್ಥಿಕ, ರಾಜಕೀಯ ಅಥವಾ ಹಣಕಾಸಿನ ವಿಚಾರಗಳಲ್ಲಿ ಮಧ್ಯಪ್ರವೇಶಿಸುವ ಅಥವಾ ಸಾಮಾಜಿಕ ಸುಧಾರಣೆಯ ಕಲ್ಯಾಣ ಕ್ರಮಗಳಿಗೆ ಅವಕಾಶ ಕಲ್ಪಿಸುವ ಅಧಿಕಾರ ಪ್ರಭುತ್ವಕ್ಕೆ ಇರುತ್ತದೆ. ಹಾಗೆಯೇ 26ನೇ ಕಲಮಿನ ಪ್ರಕಾರ, ಯಾವುದೇ ಧಾರ್ಮಿಕ ಪಂಗಡವು ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸುವ, ಆಸ್ತಿಯನ್ನು ಗಳಿಸಿ ನಿರ್ವಹಿಸುವ ಹಕ್ಕನ್ನು ಹೊಂದಿರುತ್ತದೆ. ಆದರೆ ಅದೂ ಸಹ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಅಂದರೆ, ಧಾರ್ಮಿಕ ಹಕ್ಕುಗಳು ಪರಮೋಚ್ಚವಲ್ಲ, ಅವು ಯಾವತ್ತೂ ಪ್ರಭುತ್ವದ ಪರಿಶೀಲನಾಧಿಕಾರಕ್ಕೆ ಒಳಪಟ್ಟಿರುತ್ತವೆ ಎಂಬುದನ್ನು ಸಂವಿಧಾನದ ಈ ವಿಧಿಗಳು ಸ್ಪಷ್ಟಪಡಿಸುತ್ತವೆ.
ಧಾರ್ಮಿಕ ಆಚರಣೆಗಳ/ನಂಬಿಕೆಗಳ ಹಕ್ಕಿಗೂ, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಧಾರ್ಮಿಕ ವಿಚಾರಗಳಲ್ಲಿ ಪ್ರಭುತ್ವದ ಮಧ್ಯಪ್ರವೇಶದ ಅಧಿಕಾರಕ್ಕೂ ನಡುವೆ ಒಂದು ಸೂಕ್ಷ್ಮವಾದ ಸಮತೋಲನವನ್ನು ಕಾಯ್ದುಕೊಳ್ಳಲು ನ್ಯಾಯದಾನ ವ್ಯವಸ್ಥೆಯು ಅನೇಕ ಸಂದರ್ಭಗಳಲ್ಲಿ ಶ್ರಮಿಸಿದೆ. ಕಾನೂನಿನ ಈ ಪ್ರಶ್ನೆಗೆ ಸಂಬಂಧಪಟ್ಟಂತೆ ನ್ಯಾಯಶಾಸ್ತ್ರವು ವೈರುಧ್ಯಗಳಿಂದ ಕೂಡಿರುವುದನ್ನು ಸಂವಿಧಾನ ತಜ್ಞರುಗಳು ಅನೇಕ ವೇಳೆ ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸಿದ್ದಾರೆ ನಿಜ; ಆದರೂ, ಪ್ರಭುತ್ವ ಮಧ್ಯಪ್ರವೇಶಕ್ಕೆ ಇರುವ ಅವಕಾಶವು ಧರ್ಮದ ಹೆಸರಿನಲ್ಲಿ ರೂಢಿಯಲ್ಲಿರುವ ’ಕೆಲವರಿಗೆ ಎಲ್ಲ ಸವಲತ್ತು, ಮಿಕ್ಕವರಿಗೆ ಅದರಿಂದ ವಂಚನೆ’ ಎಂಬಂಥ ವ್ಯವಸ್ಥೆಯನ್ನು ಪ್ರಶ್ನಿಸಿ ಪರಿಹಾರ ಕಂಡುಕೊಳ್ಳಲು ಭಾರತೀಯ ಸಮಾಜಕ್ಕೆ ಅವಕಾಶ ಮಾಡಿಕೊಟ್ಟಿದೆ.
ಉದಾಹರಣೆಗೆ, ಶ್ರೀ ವೆಂಕಟರಮಣ ದೇವರು ವರ್ಸಸ್ ಮೈಸೂರು ರಾಜ್ಯ ಎಂಬ ಪ್ರಕರಣದಲ್ಲಿ ’ಮದ್ರಾಸ್ ದೇವಸ್ಥಾನ ಪ್ರವೇಶ ಅಧಿಕೃತಗೊಳಿಸುವ ಕಾಯ್ದೆ’ಯ ಸಂವಿಧಾನಾತ್ಮಕತೆ ಪರಿಶೀಲನೆಗೆ ಒಳಪಟ್ಟಿತ್ತು. ಅಂಚಿಗೊತ್ತಲ್ಪಟ್ಟ ಜಾತಿಗಳಿಗೆ ದೇಗುಲ ಪ್ರವೇಶದ ಅವಕಾಶವನ್ನು ಕೊಡಮಾಡಿದ್ದ ಆ ಕಾಯ್ದೆಯ ಸಂವಿಧಾನಬದ್ಧತೆಯನ್ನು ಎತ್ತಿಹಿಡಿದ ಕೋರ್ಟು – ಪ್ರಜೆಗಳ ಆತ್ಮಸಾಕ್ಷಿ ಮತ್ತು ಧರ್ಮದ ಹಕ್ಕು, ಹಾಗೂ ಧಾರ್ಮಿಕ ಪಂಗಡಗಳು ತಮ್ಮತಮ್ಮ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕು, ಇವೆರಡೂ ಸಹ ಸಮಾನಾಧಿಕಾರದ ಹಕ್ಕುಗಳು. ಆದರೂ, ಸಮಾನತೆ ಮತ್ತು ಘನತೆಯ ಸಾಂವಿಧಾನಿಕ ಆದರ್ಶಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಆ ಎರಡು ಹಕ್ಕುಗಳನ್ನೂ ಸೌಹಾರ್ದಯುತವಾಗಿ ವ್ಯಾಖ್ಯಾನಿಸಬೇಕಿದೆ ಎಂದು ಹೇಳಿತು.
ಅದೇ ರೀತಿ, ಫಲವಂತಿಕೆಯ ವರ್ಷಗಳಲ್ಲಿ ಹಿಂದೂ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನದಲ್ಲಿ ಪ್ರವೇಶಕ್ಕೆ ವಿಧಿಸಲಾಗಿರುವ ನಿರ್ಬಂಧದ ಪ್ರಶ್ನೆಯನ್ನು ಕುರಿತ ಶಬರಿಮಲೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟು, ಧಾರ್ಮಿಕ ಹಕ್ಕುಗಳು ಇನ್ನಿತರ ಮೂಲಭೂತ ಹಕ್ಕುಗಳ ಬಗ್ಗೆ ನಿಷ್ಕಾಳಜಿ ಹೊಂದಿರುವಂತಿಲ್ಲ ಎಂದು ಹೇಳಿತು. ಡಾ. ಅಂಬೇಡ್ಕರರ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸುತ್ತ ಕೋರ್ಟು –
ವೈಯಕ್ತಿಕ ಘನತೆಯನ್ನು ಸಾಧಿಸುವ ಸಾಧನಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಯ ಮೌಲ್ಯಗಳಿಗೆ ಪ್ರಾಧಾನ್ಯತೆ ಕೊಡಬೇಕಿರುವುದು ಧಾರ್ಮಿಕ ವಿಚಾರದ ಯಾವುದೇ ವಿಶ್ಲೇಷಣೆಯನ್ನು ನಿರ್ದೇಶಿಸುವ ಮೂಲಭೂತ ತತ್ವವಾಗಿದೆ. ಮೂಲಭೂತ ಹಕ್ಕುಗಳ ನಡುವೆ ವೈಯಕ್ತಿಕ ಘನತೆಯೇ ಪ್ರಧಾನ ಎಂದಮೇಲೆ, ಸಾರ್ವಜನಿಕ ಸ್ಥಳಗಳಲ್ಲಿ ಧರ್ಮದ ಸ್ಥಾನ ಏನು ಎಂಬುದನ್ನು ಮಾನವ ಘನತೆಯನ್ನಾಧರಿಸಿದ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಭಾರತ ಹೊಂದಿರುವ ಅಚಲ ನಿಷ್ಠೆಗೆ ಅನುಗುಣವಾಗಿಯೇ ನಿರ್ಧರಿಸಬೇಕಾಗುತ್ತದೆ. ಸ್ವಾತಂತ್ರ್ಯಕ್ಕೆ ಮಾರಕವಾಗಿರುವ, ಹಾಗೂ ಕೆಲವು ಪ್ರಜೆಗಳನ್ನು ಇತರರಿಗಿಂತ ಕಡಿಮೆ ಸಮಾನರು ಎಂದು ಪರಿಗಣಿಸುವ ಆಚರಣೆಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ – ಎಂದು ತೀರ್ಪಿತ್ತಿತು.
ಆದ್ದರಿಂದ, 25ನೇ ಕಲಮಿನ ಪ್ರಕಾರ ಇಂಥ ಪ್ರಭುತ್ವ ನಿಯಂತ್ರಣಾಧಿಕಾರ ಇಲ್ಲದಿರುತ್ತಿದ್ದರೆ, ಪ್ರಗತಿಪರವೂ ಸಾಮಾಜಿಕ ಸುಧಾರಣಾ ಪರವೂ ಆದ ಇಂತಹ ನಿರ್ಣಯಗಳು ಬರುವುದು ಸಾಧ್ಯವೇ ಇರುತ್ತಿರಲಿಲ್ಲ ಎಂಬುದನ್ನು ನೆನಪಿಡಬೇಕಿದೆ.
ಹಿಂದೂ ದೇಗುಲಗಳನ್ನು ನಿಯಂತ್ರಣಮುಕ್ತಗೊಳಿಸಬೇಕೆಂದು ಕೇಳುತ್ತಿರುವವರು ಮುಂದಿಡುವ ಒಂದು ವಾದವೆಂದರೆ, ಇತರ ಧರ್ಮಗಳಿಗೆ ತಮ್ಮ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಇರುವ ಸ್ವಾಯತ್ತತೆ ಹಿಂದೂ ಸಮುದಾಯಕ್ಕೆ ಇಲ್ಲ ಎಂಬುದು. ಇದು ನಿಜವಲ್ಲ. ’1995ರ ವಕ್ಫ್ ಕಾಯ್ದೆ’ಯಲ್ಲಿ ಕೂಡ, ಧರ್ಮನಿರಪೇಕ್ಷ
ಆಚರಣೆಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳು ಮತ್ತು ನೀತಿಗಳನ್ನು ವಿಧಿಸುವ ಅಧಿಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗಿದೆ. ಉದಾಹರಣೆಗೆ, ಮಹಿಳೆಯರಿಗೆ ದರ್ಗಾದ ಗರ್ಭಗುಡಿಯೊಳಗೆ ಪ್ರವೇಶ ನೀಡಬೇಕು, ಇಲ್ಲದಿದ್ದಲ್ಲಿ ಅವರ ಸಮಾನತೆ ಮತ್ತು ತಾರತಮ್ಯಕ್ಕೆ ಒಳಗಾಗದಿರುವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು 2016ರಲ್ಲಿ ಸುಪ್ರೀಂ ಕೋರ್ಟು ಹಾಜಿ ಅಲಿ ದರ್ಗಾ ಟ್ರಸ್ಟಿಗೆ ನಿರ್ದೇಶನ ನೀಡಿದ್ದಿದೆ.
ಧರ್ಮ ನಿರಪೇಕ್ಷತೆಯು ಭಾರತದ ಕಾನೂನು ಮತ್ತು ಸಾಮಾಜಿಕ ಸಂರಚನೆಯ ಒಂದು ಬಹುಮುಖ್ಯ ಭಾಗವಾಗಿದೆ. ದೇಗುಲಗಳ ಪ್ರಭುತ್ವ ನಿಯಂತ್ರಣವನ್ನು ಧರ್ಮ ನಿರಪೇಕ್ಷತೆಯ ತತ್ವದ ಮೇಲಿನ ದಾಳಿಯೆಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಭಾರತದಲ್ಲಿನ ಧರ್ಮ ನಿರಪೇಕ್ಷತೆಯ ಪ್ರಶ್ನೆಯು ಪಾಶ್ಚಿಮಾತ್ಯ ದೇಶಗಳಿಗಿಂತ ಸ್ಪಷ್ಟವಾಗಿ ಭಿನ್ನವಾಗಿರುವುದರಿಂದ, ಪ್ರಭುತ್ವಕ್ಕೂ ಧರ್ಮಕ್ಕೂ ನಡುವೆ ಉಕ್ಕಿನ ಗೋಡೆ ನಿರ್ಮಿಸಲು ಪ್ರಯತ್ನಿಸುವುದು ಅಸಹಜವಾಗುತ್ತದೆ. ಧರ್ಮದ ವಿಷಯದಲ್ಲಿ ಪ್ರಭುತ್ವದ ಮಧ್ಯಪ್ರವೇಶವನ್ನು, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಧಾರ್ಮಿಕ ಸಂಸ್ಥೆಗಳ ಆಳ್ವಿಕೆಯನ್ನು ಸಮರ್ಪಕಗೊಳಿಸಲು ಬಳಸಿಕೊಳ್ಳಬೇಕು.
ಧಾರ್ಮಿಕ ಸಂಸ್ಥೆಗಳು ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳ ತಾಣಗಳಾಗಿದ್ದು, ಅನೇಕ ವೇಳೆ ಅಂಥ ಕೆಲವು ಆಚರಣೆಗಳು ತಾರತಮ್ಯಪೂರಿತವಾಗಿರುತ್ತವೆ. ಈ ಸಂಸ್ಥೆಗಳು ನಿಜಾರ್ಥದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳ ಧರ್ಮದರ್ಶಿಗಳು. ಹಾಗಾಗಿ ಅವು ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುವಂತಹ ಏನಾದರೊಂದು ವ್ಯವಸ್ಥೆಗೆ ಒಳಪಟ್ಟಿರಲೇಬೇಕಿದೆ. ಹಾಗೂ ’ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಸೇವಾ ದತ್ತಿಗಳ ಕಾಯ್ದೆ’ಯಂಥ ಕಾನೂನುಗಳ ಉದ್ದೇಶ ಇದೇ ಆಗಿದೆ. ಮೇಲಾಗಿ, ದೇಗುಲಗಳನ್ನು ಪ್ರಭುತ್ವ ನಿಯಂತ್ರಣದಿಂದ ಮುಕ್ತಗೊಳಿಸುವ ಬೇಡಿಕೆ ಮುಂದಿಡುವವರು, ಸರ್ಕಾರ ಒಂದು ವೇಳೆ ತನ್ನ ನಿಯಂತ್ರಣಾಧಿಕಾರಗಳನ್ನು ಬಿಟ್ಟುಕೊಟ್ಟಲ್ಲಿ ಅದಕ್ಕೆ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹವಾದ ಆಡಳಿತ ವಿಧಾನವನ್ನು ಮುಂದಿಡುತ್ತಿಲ್ಲ. ಪ್ರಭುತ್ವದ ವಿಸ್ತರಣಾವಾದಿ ಧೋರಣೆಯನ್ನು ನಿಯಂತ್ರಣದಲ್ಲಿಡುವ ಒಂದು ಪ್ರಯತ್ನವೆಂಬಂತೆ ದೇಗುಲಗಳನ್ನು ನಿಯಂತ್ರಣಮುಕ್ತಗೊಳಿಸುವ ಆಂದೋಲನವನ್ನು ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಅದು ಸಾಂವಿಧಾನಿಕ ತತ್ವಾದರ್ಶಗಳನ್ನು ಕಿತ್ತೊಗೆದು ಬಹುಸಂಖ್ಯಾತ ಪುರೋಹಿತಶಾಹಿ ಮೇಲಾಧಿಪತ್ಯವನ್ನು ಸ್ಥಾಪಿಸುವ ದುಷ್ಟ ಪ್ರಯತ್ನವಲ್ಲದೆ ಬೇರೇನಲ್ಲ.
(ಈ ಲೇಖನವು ವಿನಯ್ ಶ್ರೀನಿವಾಸ್ ಅವರ ಇನ್ಪುಟ್ಗಳನ್ನು ಒಳಗೊಂಡಿದೆ.)
ಅನುವಾದ: ಸಿರಿಮನೆ ನಾಗರಾಜ್

ಪೂರ್ಣ ರವಿಶಂಕರ್
ವಕೀಲರು ಮತ್ತು ಸಂಶೋಧಕರು, ಪರ್ಯಾಯ ಕಾನೂನು ವೇದಿಕೆ, ಬೆಂಗಳೂರು
ಇದನ್ನೂ ಓದಿ: ಹಿಂದುತ್ವ ವಾರ್: ‘ಶಿವಸೇನೆ ಹುಟ್ಟೇ ಇರಲಿಲ್ಲ’ ಎಂದ ಬಿಜೆಪಿ
Church maseedigalu kooda prabhutvada adi baruttadeye
ಯಾಕೆ ದೇವಾಲಯಗಳನ್ನು ಸ್ವಾತಂತ್ರ ಗೊಳಿಸಬಾದು ,ನಿಮ್ಮ ಮಾವೋವಾದಿ,ಕಮ್ಯೂನಿಸ್ಟ್,ಕಾಂಗ್ರೆಸ್ ಗುಲಾಮರಿಗೆ ತಾಕತ್ ಇದ್ದರೆ ಮಸೀದಿ,ಚರ್ಚ್ ಗಳನ್ನು ಸರಕಾರ ದ ಸುಪರ್ದಿಗೆ ತೆಗೆದುಕೊಳ್ಳುವಂತೆ ಹೋರಾಟ ಮಾಡಲಿ ನೋಡೋಣಾ, ಆಯೋಗ್ಯ ನಗರ ನಕ್ಸಲರು ದೇಶಕ್ಕೆ ಮಾರಕ