“ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ನಾನು ಸಚಿವನಾಗದಿರಲು ಆಗದಿರಲು ನಿರ್ಧರಿಸಿದ್ದೇನೆ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಭಾನುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯತ್ನಾಳ್, “ನಾನು ಮಂತ್ರಿ ಆಗಬೇಕೆಂದು ಯಡಿಯೂರಪ್ಪ ಹೇಳುವುದಿಲ್ಲ. ಸಚಿವ ಸ್ಥಾನಕ್ಕಾಗಿ ನಾನು ಎಂದೂ ಒತ್ತಾಯಿಸುವುದಿಲ್ಲ. ಈ ಹಿಂದೆಯೂ ನನ್ನ ಯೋಗ್ಯತೆಯ ಆಧಾರದ ಮೇಲೆ ಕೇಂದ್ರದಲ್ಲಿ ಮಂತ್ರಿ ಆಗಿದ್ದೆ. ಕಾಡಿ-ಬೇಡಿ, ಮಧ್ಯವರ್ತಿಗಳ ಮೂಲಕ ಮಂತ್ರಿ ಆಗಲು ನಾನು ಎಂದೂ ಪ್ರಯತ್ನಿಸುವುದಿಲ್ಲ. ನನ್ನ ಬಯೋಡೇಟಾ ಪ್ರಧಾನಿಗಳ ಕಚೇರಿಯಲ್ಲಿ, ಗೃಹ ಸಚಿವರ ಕಾರ್ಯಾಲಯದಲ್ಲಿ, ರಾಷ್ಟ್ರೀಯ ಅಧ್ಯಕ್ಷರ ಕಚೇರಿಯಲ್ಲಿದೆ” ಎಂದು ಹೇಳಿದರು.
“ನನಗೆ ಸಚಿವ ಸ್ಥಾನ ಸಿಗದೇ ಇದ್ದರೂ ತೊಂದರೆಯಿಲ್ಲ. ಆದರೆ, ರಾಜ್ಯದ ಅಭಿವೃದ್ಧಿಯೇ ನನ್ನ ಕನಸು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಿಯಾಧ್ಯಕ್ಷ ಜೆ.ಪಿ.ನಡ್ಡಾ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ” ಎಂದು ಯತ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತಿದೆ: ಹೋರಾಟಗಾರ್ತಿ ಮೇಧಾ ಪಾಟ್ಕರ್
“ಕೇಂದ್ರ ಶಿಸ್ತು ಸಮಿತಿ ನನಗೆ ನೋಟಿಸ್ ಕೊಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಾನು ಈವರೆಗೆ ಪಕ್ಷದ ಶಿಸ್ತನ್ನು ಮೀರಿಲ್ಲ. ಇದುವರೆಗೆ ಯಾರೂ ನನಗೆ ಯಾವುದೇ ರೀತಿಯ ನೋಟಿಸ್ ನೀಡಿಲ್ಲ” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದರು.
“ಜನವರಿ 14 ಕ್ಕೆ ಮಕರ ಸಂಕ್ರಮಣ. ಈ ಬಾರಿ ಉತ್ತರಾಯಣ 20 ಅಥವಾ 21ಕ್ಕೆ ಇದೆ. ಉತ್ತರಾಯಣ ಬದಲಾವಣೆಯ ಪರ್ವಕಾಲ. ಹೀಗಾಗಿ, ಸಚಿವ ಸಂಪುಟದಲ್ಲಿ ಬದಲಾವಣೆಯಾಗಬಹುದು, ಪುನಾರಚನೆಯೂ ಆಗಬಹುದು” ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಬಹುದಿನಗಳಿಂದ ಸಚಿವ ಸಂಪುಟ ವಿಸ್ತರಣೆಯ ಮಾತು ಕೇಳಿಬರುತ್ತಿತ್ತು. ಆದರೆ ಈಗ ಅದಕ್ಕೆ ಕಾಲ ಕೂಡಿಬಂದಿದ್ದು, ಜನವರಿ 13 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅದೇ ಸಮಯದಲ್ಲಿ ಒಬ್ಬರು ಸಚಿವರನ್ನು ಸಂಪುಟದಿಂದ ಹೊರಗುಳಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಸೂಜಿ ತಯಾರಿಕಾ ಕಂಪೆನಿ ’ಸ್ಮಿಟ್ಝ್’ ಲಾಕೌಟ್: ನೂರಾರು ಕಾರ್ಮಿಕರು ಬೀದಿಗೆ
ಭಾನುವಾರ ಬಿ ಎಸ್ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಅನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದರು. ಅಲ್ಲಿ ಸಚಿವ ಸಂಪುಟ ವಿಸ್ತರಣೆಗೆ ವರಿಷ್ಟರು ಒಪ್ಪಿಗೆ ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಮನೆಯಲ್ಲಿ, ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಸುಮಾರು ಒಂದು ತಾಸು ಮಾತುಕತೆ ನಡೆಸಿದರು. ಬಿಜೆಪಿ ಮುಖಂಡ ಅರುಣ್ ಸಿಂಗ್ ಕೂಡಾ ಇದ್ದರು.
“ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಿದೆ. ಇದೇ 13 ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ. 14 ರಂದು ಸಂಕ್ರಾಂತಿ ಇರುವ ಕಾರಣ 13 ರ ಮಧ್ಯಾಹ್ನವೇ ಪ್ರಮಾಣ ವಚನ ನಡೆಯಲಿದೆ” ಎಂದು ಯಡಿಯೂರಪ್ಪ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಕ್ಷಕ್ಕೆ ವಲಸೆ ಬಂದವರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಹಾಗೆಯೇ ಸಂಪುಟದಿಂದ ಹೊರಗುಳಿಯುವ ಆ ಒಬ್ಬ ಸಚಿವರು ಯಾರೆಂಬುದು ಇನ್ನೂ ಬಹಿರಂಗವಾಗಿಲ್ಲ.
ಇದನ್ನೂ ಓದಿ: ಇನ್ನೂ ಸಮಯವಿದೆ ಮೋದಿಜಿ…! – ಪ್ರಧಾನಿಯವರಲ್ಲಿ ಮನವಿ ಮಾಡಿದ ರಾಹುಲ್ ಗಾಂಧಿ