Homeಮುಖಪುಟಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?

ಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?

- Advertisement -
- Advertisement -

ಒಂದು ಪ್ರಾಣಿ ಸಂಗ್ರಹಾಲಯದಲ್ಲಿ ಒಬ್ಬ ತಂದೆ ತನ್ನ ಪುಟ್ಟ ಮಗನೊಂದಿಗೆ ಸಿಂಹದ ಬೋನಿನ ಎದುರು ನಿಂತಿದ್ದ. ಮಗು ಕುತೂಹಲದಿಂದ ಬೋನಿನ ಅತಿ ಸಮೀಪಕ್ಕೆ ಹೋಯಿತು, ಇನ್ನೇನು ಸಿಂಹ ಮಗುವಿಗೆ ತನ್ನ ಪಂಜದಲ್ಲಿ ಹೊಡೆಯುವುದರಲ್ಲಿತ್ತು. ಅಲ್ಲಿಯೇ ನಿಂತಿದ್ದ ಯುವಕ ಸರಕ್ಕನೆ ಮಗುವನ್ನು ಎಳೆದುಕೊಂಡು ಪ್ರಾಣ ಉಳಿಸಿದ. ಗುಂಪಿನಲ್ಲಿದ್ದ ಪತ್ರಕರ್ತನೊಬ್ಬ ಆ ಯುವಕನ ಬಳಿಬಂದು, ತಾನಿದರ ಬಗ್ಗೆ ಒಂದು ಲೇಖನ ಬರೆಯುತ್ತೇನೆಂದು ಅನೇಕ ಪ್ರಶ್ನೆ ಕೇಳಿದ. ಕೊನೆಯದಾಗಿ ನೀನು ಯಾವ ಪಕ್ಷದವನು ಎಂದಾಗ ಯುವಕ “ನಾನು ನಾಝಿ” ಎಂದ. ಮರುದಿನದ ಪತ್ರಿಕೆಯ ಹೆಡ್‌ಲೈನ್ ಹೀಗಿತ್ತು: “ಹಸಿದ ಆಫ್ರಿಕನ್ ವಲಸೆಗಾರನ ಊಟವನ್ನು ಕಸಿದುಕೊಂಡ ದುಷ್ಟ ನಾಝಿ”.

– ಓಶೋ ಹೇಳಿದ ಕತೆಯಿಂದ

ಪ್ರತಿಯೊಬ್ಬ ಮನುಷ್ಯನೂ ತನ್ನ ಪೂರ್ವಾಗ್ರಹಗಳ ಪ್ರತಿಫಲವೇ ಆಗಿರುತ್ತಾನೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಹೀಗಿದ್ದಾಗ ನಮ್ಮ ಸುಪ್ರೀಂ ಕೋರ್ಟಿನ ನ್ಯಾಯಾಧೀಶರುಗಳೂ ಇದಕ್ಕೆ ಹೊರತಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಒಮ್ಮೆ ಹೀಗೆ ಒಪ್ಪಿಕೊಂಡ ಮೇಲೆ ಯಾಕೆ ಕಾಲಕಾಲಕ್ಕೆ ಸುಪ್ರೀಂಕೋರ್ಟಿನ ಬಗೆಗಿನ ಚಿತ್ರಣ ಭಿನ್ನಭಿನ್ನವಾಗಿ ಕಾಣುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಸುಲಭ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮಹತ್ವವನ್ನು ಎತ್ತಿಹಿಡಿದ ಮತ್ತು ಅವುಗಳ ವಿಸ್ತಾರವನ್ನು ಹೆಚ್ಚಿಸಿದ ಜಸ್ಟಿಸ್ ಕೃಷ್ಣ ಐಯ್ಯರ್ ಮತ್ತು ಪಿ.ಎನ್ ಭಗವತಿ ಅವರು ಒಂದು ಸಮಯದಲ್ಲಿ ಎಲ್ಲರೂ ಸುಪ್ರೀಂ ಕೋರ್ಟಿನ ಕಡೆಗೆ ಆಶಾದಾಯಕವಾಗಿ ನೋಡುವಂತೆ ಮಾಡಿದ್ದರು. ಆದರೀಗ ಎಲೆಕ್ಟೋರಲ್ ಬಾಂಡ್, ಇವಿಎಮ್,
370ನೇ ಪರಿಚ್ಛೇದದಂತಹ ವಿಷಯಗಳೂ ಕೋರ್ಟಿನ ಕಡೆಗೆ ಹೆಚ್ಚಿನ ಗಮನ ಸೆಳೆಯುವಂತೆ ಮಾಡುವುದಿಲ್ಲ.

ಜಸ್ಟೀಸ್ ಎಮ್. ಫಾತಿಮಾ ಬೀವಿ

ಪರಿಸ್ಥಿತಿ ಹೀಗಿರುವಾಗ ಸುಪ್ರೀಂ ಕೋರ್ಟಿನಲ್ಲಿ ಮಹಿಳಾ ನ್ಯಾಯಾಧೀಶರ ಪ್ರಾತಿನಿಧ್ಯ ಎನ್ನುವುದು ಎಷ್ಟರಮಟ್ಟಿಗೆ ಸಾರ್ವಜನಿಕರ ಗಮನ ಅಥವಾ ಕುತೂಹಲವನ್ನು ಕೆರಳಿಸುತ್ತದೆ? ಅಕಸ್ಮಾತ್ ಇದು ದೇಶದ ಗಮನ ಸೆಳೆಯದೇ ಇದ್ದರೆ ಅದರ ವೈಫಲ್ಯ ಎಲ್ಲಿ ಅಡಗಿದೆ? ಲೋಕಸಭೆ, ವಿಧಾನಸಭೆಗಳಲ್ಲಿ 33% ಮಹಿಳಾ ಪ್ರಾತಿನಿಧ್ಯ ಕೊಡಬೇಕು ಎಂದು ಪ್ರತಿಪಾದಿಸುವವರೂ ಅದರ ಅನುಷ್ಠಾನಕ್ಕೆ ಹೆಚ್ಚಿನ ಆಸಕ್ತಿ ನೀಡದೇ ಇದ್ದಾಗ ಇನ್ನು ಸಂಪೂರ್ಣವಾಗಿ ಅರ್ಹತೆಯನ್ನೇ ಆಧರಿಸಿದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಹುದ್ದೆಯ ಬಗ್ಗೆ ಜನ ತಲೆ ಕೆಡಿಸಿಕೊಳ್ಳುತ್ತಾರಾ? ಇನ್ನೂ ಎಷ್ಟೋ ಪ್ರಶ್ನೆಗಳಿರಬಹುದು ಆದರೆ ಉತ್ತರ ಒಂದೇ. ದೇಶದ ಸಂವಿಧಾನದಲ್ಲಿ ಹೇಳಲಾದ ಆದರ್ಶಗಳ ಪ್ರತಿಪಾಲನೆ ಆಗಬೇಕಾದರೆ ಶತಮಾನಗಳಿಂದಲೂ ಬೇರುಬಿಟ್ಟಿರುವ ಪೂರ್ವಾಗ್ರಹಗಳನ್ನು ಕಾಲಕಾಲಕ್ಕೆ ಒಡೆದು ಹೊಸ ಗ್ರಹಿಕೆಗಳನ್ನು ಕಟ್ಟುವ ಕೆಲಸ ಪ್ರಜ್ಞಾಪೂರ್ವಕವಾಗಿ ಆಗಲೇಬೇಕು.

70 ವರ್ಷಗಳ ಸುಪ್ರೀಂಕೋರ್ಟಿನ ಚರಿತ್ರೆಯಲ್ಲಿ ಇವತ್ತಿಗೂ ಒಬ್ಬ ಮಹಿಳಾ ಮುಖ್ಯನ್ಯಾಯಮೂರ್ತಿಯ ನೇಮಕ ಎನ್ನುವುದು ಒಂದು ಬಹುದೊಡ್ಡ ಚರ್ಚೆಯ ವಿಷಯವಾಗುತ್ತದೆ ಎಂಬ ಪ್ರಶ್ನೆ ಮುಖ್ಯವಾದದ್ದು. ಸುಪ್ರೀಂ ಕೋರ್ಟಿಗೆ 1950ರಿಂದ ಇಲ್ಲಿಯವರೆಗೆ ಒಟ್ಟು 247 ನ್ಯಾಯಾಧೀಶರು ನೇಮಕಗೊಂಡಿದ್ದಾರೆ, ಅವರಲ್ಲಿ ಮಹಿಳೆಯರು ಕೇವಲ 8. 1980ರಲ್ಲಿ ಜಸ್ಟೀಸ್ ಎಮ್. ಫಾತಿಮಾ ಬೀವಿ ದೇಶದ ಮೊದಲ ಸುಪ್ರೀಂ ಕೋರ್ಟ್ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಂಡರು. ಮೊನ್ನೆಯವರೆಗೆ ಸುಪ್ರೀಂ ಕೋರ್ಟಿನ 27 ನ್ಯಾಯಾಧೀಶರಲ್ಲಿ ಕೇವಲ ಒಬ್ಬ ಮಹಿಳೆ ಮಾತ್ರ ಇದ್ದರು. (ಆಗಸ್ಟ್ 31ರಂದು ಮೂವರು ಮಹಿಳಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕರಿಸಿದರು)

ಇತ್ತೀಚೆಗೆ ನಿವೃತ್ತಿ ಹೊಂದಿದ ಜಸ್ಟೀಸ್ ಇಂದು ಮಲ್ಹೋತ್ರಾ ನಂತರ ಜಸ್ಟೀಸ್ ಇಂದಿರಾ ಬ್ಯಾನರ್ಜಿ ಒಬ್ಬರೇ ಮಹಿಳೆ ಇದ್ದದ್ದು. ಇನ್ನು ಹೈಕೋರ್ಟುಗಳ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಒಟ್ಟು ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ 1079, ಆದರೆ 426 ಸ್ಥಾನಗಳು ಖಾಲಿ ಇವೆ. ಭರ್ತಿಯಾಗಿರುವ 653 ಸ್ಥಾನಗಳಲ್ಲಿ ಮಹಿಳಾ ನ್ಯಾಯಾಧೀಶರ ಪ್ರಾತಿನಿಧ್ಯ ಕೇವಲ 78. ಮದ್ರಾಸ್ ಹೈಕೋರ್ಟ್ 13, ಬಾಂಬೆ ಹೈಕೋರ್ಟ್ 8, ಪಂಜಾಬ್ ಹರಿಯಾಣ ಹೈಕೋರ್ಟ್ 7, ದೆಹಲಿ ಮತ್ತು ಕರ್ನಾಟಕ ತಲಾ 6, ಕೇರಳ ಮತ್ತು ಗುಜರಾತ್ ತಲಾ 5.

ಇಂದು ಮಲ್ಹೋತ್ರಾ

ಇನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಸೇವಾ ಹಿರಿತನವನ್ನು ನೋಡಿದರೆ 2027ರವರೆಗಿನ ಪಟ್ಟಿ ಹೆಚ್ಚು ಕಡಿಮೆ ರೆಡಿಯಾಗಿದೆ. ಜಸ್ಟೀಸ್ ಎನ್.ವಿ ರಮಣ ನಂತರ ಜಸ್ಟೀಸ್ ಯು.ಯು ಲಲಿತ್, ಜಸ್ಟೀಸ್ ಡಿ.ವೈ ಚಂದ್ರಚೂಡ್, ಜಸ್ಟೀಸ್ ಸಂಜೀವ್ ಖನ್ನಾ, ಜಸ್ಟೀಸ್ ಬಿ.ಆರ್ ಗವಾಯಿ ಮತ್ತು ಜಸ್ಟೀಸ್ ಸೂರ್ಯಕಾಂತ್. ಆದ್ದರಿಂದಲೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಮುಖ್ಯನ್ಯಾಯಧೀಶರಾಗಿ ನೇಮಕವಾಗುವ ಸಂಭವವಿರುವುದು 2027ರಲ್ಲಿ.ದೇಶದ ಸಂವಿಧಾನ ಎತ್ತಿಹಿಡಿಯುವ ಸುಪ್ರೀಂ ಕೋರ್ಟಿನ ಪರಿಸ್ಥಿತಿಯೇ ಹೀಗಿದ್ದರೆ ಇನ್ನು ಉಳಿದ ಕ್ಷೇತ್ರಗಳ ಪಾಡನ್ನು ಊಹಿಸಿಕೊಳ್ಳಬಹುದು ಕಷ್ಟವಾಗಲಾರದು.

ಇದನ್ನೆಲ್ಲ ನೋಡಿದಾಗ ದೇಶದಲ್ಲಿ ಮಹಿಳೆಯರಿಗೆ ನ್ಯಾಯಮೂರ್ತಿಗಳಾಗುವ ಅರ್ಹತೆಯೇ ಇಲ್ಲವೇನೋ ಎಂಬ ಭಾವನೆ ಬರುತ್ತದೆ ಅಥವಾ ಭಾವನೆ ಬರುವಂತೆ ಮಾಡಲಾಗುತ್ತದೆ ಎಂದೂ ಹೇಳಬಹುದು. ನಿಜ ಹೇಳಬೇಕೆಂದರೆ ಕಳೆದ 70 ವರ್ಷಗಳಲ್ಲಿ ಸುಪ್ರೀಂ ಕೋರ್ಟಿನಲ್ಲಾಗಲೀ, ಹೈಕೋರ್ಟುಗಳಲ್ಲಾಗಲೀ ಸೂಕ್ತ ಮಹಿಳಾ ಪ್ರಾತಿನಿಧ್ಯವನ್ನು ಒದಗಿಸುವ ಗಂಭೀರವಾದ ಪ್ರಯತ್ನಗಳೇ ನಡೆದಿಲ್ಲ. ಶತಮಾನಗಳ ಪುರುಷಪ್ರಧಾನ, ಪ್ರತಿಗಾಮಿ ಧೋರಣೆ ಸುಪ್ರೀಂ ಕೋರ್ಟಿನಲ್ಲೂ ಆಳವಾಗಿ ಬೇರೂರಿರುವುದನ್ನು ಕಾಣಬಹುದು. ಇದನ್ನು ತಿಳಿದುಕೊಳ್ಳಬೇಕಾದರೆ ಈ ನ್ಯಾಯಮೂರ್ತಿಗಳ ಆಯ್ಕೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು.

ಸಂವಿಧಾನದ 217 ಹಾಗೂ 124ನೇ ಪರಿಚ್ಛೇದದ ಅಡಿಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿ ನಡೆಯುತ್ತದೆ. ಈ ನೇಮಕಾತಿಗಳಲ್ಲಿ ಯಾವುದೇ ಜಾತಿ, ವರ್ಗ ಅಥವಾ ಲಿಂಗಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ. ಈ ನ್ಯಾಯಮೂರ್ತಿಗಳು ಜಿಲ್ಲಾ ನ್ಯಾಯಾಧೀಶರುಗಳಾಗಿ ಬಡ್ತಿ ಹೊಂದಿದವರು ಇರಬಹುದು ಅಥವಾ ನೇರವಾಗಿ ಆಯ್ಕೆಯಾದವರೂ ಇರಬಹುದು. ಇನ್ನು ಹೈಕೋರ್ಟುಗಳಲ್ಲಿ ಸೇವಾಹಿರಿತನ ಹೊಂದಿದ ನಂತರ ಸುಪ್ರೀಂ ಕೋರ್ಟ್‌ಗೆ ಹೋದವರೂ ಇರಬಹುದು. ಅಂದರೆ ಸೇವಾಹಿರಿತನ
ಹೊಂದಿದ ಮಹಿಳಾ ನ್ಯಾಯಮೂರ್ತಿ ಕೇವಲ ನ್ಯಾಯಾಧೀಶರಾಗಿ ಕೆಲಸ ಮಾಡಿದವರೇ ಇರಬೇಕು ಎಂಬ ನಿಯಮ ಇಲ್ಲ.

ಅಂದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗಳಲ್ಲಿ ಗಣನೀಯವಾಗಿ ವಕೀಲಿವೃತ್ತಿ ನಡೆಸಿದವರನ್ನೂ ಆಯ್ಕೆ ಮಾಡಬಹುದು. ಹೈಕೋರ್ಟು ಮತ್ತು ಸುಪ್ರೀಂ ಕೋರ್ಟುಗಳಲ್ಲಿ ಅತ್ಯಂತ ಯಶಸ್ವಿಯಾದ ವೃತ್ತಿನಿರತ ಮಹಿಳಾ ವಕೀಲರು ಲಭ್ಯವಿದ್ದಾಗ ಅವರನ್ನು ಕಡೆಗಣಿಸಿ ಮಹಿಳಾ ನ್ಯಾಯಮೂರ್ತಿಗಳ ಕೊರತೆ ಇದೆ ಎನ್ನುವುದು ಮಹಿಳೆಯರನ್ನು ದೂರ ಇಡುವ ಒಂದು ತಂತ್ರವಷ್ಟೇ. ಇತ್ತೀಚೆಗೆ ನಿವೃತ್ತಿ ಹೊಂದಿದ ಜಸ್ಟೀಸ್ ರೋಹಿಂಗ್ಟ್‌ನ್ ನಾರಿಮನ್, ಜಸ್ಟೀಸ್ ಯು.ಯು ಲಲಿತ್, ಜಸ್ಟೀಸ್ ಎಲ್. ನಾಗೇಶ್ವರರಾವ್ ಅವರು ಹೀಗೆ ನೇರವಾಗಿ ವಕೀಲ ವೃತ್ತಿಯಿಂದ ಆಯ್ಕೆಯಾದವರು. ಜಸ್ಟೀಸ್ ಇಂದು ಮಲ್ಹೋತ್ರಾ ಕೂಡ ವಕೀಲರಾಗಿದ್ದುಕೊಂಡು ನೇರವಾಗಿ ಆಯ್ಕೆಯಾದವರು. ಇಷ್ಟೆಲ್ಲ ಸೌಲಭ್ಯ ಇದ್ದಾಗ್ಯೂ ಮಹಿಳೆಯರ ಕೊರತೆ ಕಂಡಾಗ ಇದು ಕೇವಲ ಇಚ್ಛಾಶಕ್ತಿಯ ಕೊರತೆ ಅಲ್ಲ ಆಳವಾಗಿ ಬೇರೂರಿದ ಪುರುಷಪ್ರದಾನ ಸಮಾಜದ ಕುರುಹುಗಳಾಗಿಯೂ ಕಾಣುತ್ತದೆ.

ಬಿ.ವಿ ನಾಗರತ್ನ

ನ್ಯಾಯಮೂರ್ತಿಗಳ ಆಯ್ಕೆಯನ್ನು ಸುಪ್ರೀಂ ಕೋರ್ಟಿನ ಕೊಲಿಜಿಯಂ ನಡೆಸುತ್ತದೆ. ಈ ಕೊಲಿಜಿಯಂ ಬಗ್ಗೆ ಅನೇಕ ಪರ ಹಾಗೂ ವಿರೋಧದ ವಾದಗಳಿವೆ. ನ್ಯಾಯಮೂರ್ತಿಗಳೇ ತಮ್ಮ ಅಧೀನ ನ್ಯಾಯಾಧೀಶರನ್ನು ಆಯ್ಕೆ ಮಾಡುವುದು ಸಂವಿಧಾನಬಾಹಿರ ಮತ್ತು ಇದರಲ್ಲಿ ಪಾರದರ್ಶಕತೆ ಇರುವುದಿಲ್ಲ, ಸ್ವಜನಪಕ್ಷಪಾತಕ್ಕೆ ದಾರಿ ಮಾಡಿಕೊಡಲಾಗುತ್ತದೆ ಇತ್ಯಾದಿ ಆರೋಪಗಳು ಅದರ ಮೇಲಿವೆ. ಈ ನ್ಯಾಯಮೂರ್ತಿ ಮತ್ತು ನ್ಯಾಯಾಧೀಶರ ಆಯ್ಕೆಯೂ ಸಹ ಇತರ ಉನ್ನತ ಹುದ್ದೆಗಳಂತೆ ಭರ್ತಿಯಾಗಬೇಕು, ಆ ಇಲಾಖೆ ಸರ್ಕಾರದ ಕಾನೂನು ಮಂತ್ರಿಗಳ ಅಡಿಯಲ್ಲಿ ಬರಬೇಕು ಎಂಬುದು ಮತ್ತೊಂದು ವಾದ. 1993ರ ಮೊದಲು ಈ ಎಲ್ಲ ಆಯ್ಕೆಗಳೂ ಕಾನೂನು ಮಂತ್ರಿಗಳ ಹಸ್ತಕ್ಷೇಪ ಹಾಗೂ ರಾಷ್ಟ್ರಪತಿಗಳ ಶಿಫಾರಸ್ಸಿನ ಮೇಲೆಯೇ ನಡೆಯುತ್ತಿದ್ದವು. ಆಗ ನಡೆದ ಕೆಲವು ಆಯ್ಕೆಗಳು ಸೇವಾಹಿರಿತನವನ್ನು ಪರಿಗಣಿಸದೇ ನಡೆದಿದ್ದವು.

ಆದರೆ 1993ರ ’ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಟ್ ಅಸೋಸಿಯೇಶನ್ ವಿರುದ್ಧ ಭಾರತ ಒಕ್ಕೂಟ’ ಕೇಸಿನಲ್ಲಿ ಸಂವಿಧಾನ ಹಾಗೂ ಕಾನೂನಿನ ಪರಿಕಲ್ಪನೆಯನ್ನು ವಿಸ್ತರಿಸುತ್ತಾ ಸುಪ್ರೀಂಕೋರ್ಟ್ ಅಧೀನ ನ್ಯಾಯಾಧೀಶರ ಆಯ್ಕೆಯ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿತು. ಈಗ ರಾಷ್ಟ್ರಪತಿಗಳು ಕೊಲಿಜಿಯಂ ನೀಡಿದ ಪಟ್ಟಿಯನ್ನು ಮರಿಪರಿಶೀಲಿಸಿ ಎಂದು ಹೇಳಬಹುದೇ ಹೊರತು ಬದಲಿಸಿ ಎನ್ನುವುದು ಕಷ್ಟ. ಈ ಆಯ್ಕೆಯ ಪಟ್ಟಿ ಕೊಲಿಜಿಯಂನ ಎಲ್ಲಾ 5 ನ್ಯಾಯಮೂರ್ತಿಗಳ ಸರ್ವಾನುಮತದ ಆಯ್ಕೆಯಾಗಿರಬೇಕು. ಇಷ್ಟಿದ್ದೂ ಇವತ್ತಿನ ದಿನಗಳಲ್ಲಿ ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ನಡೆಯುವ ತಾರತಮ್ಯವನ್ನು ನೋಡುತ್ತಿದ್ದೇವೆ. ಒಂದು ಸರ್ವಾಧಿಕಾರಿ ಧೋರಣೆಯ ಸರ್ಕಾರ ಇದ್ದಾಗ ಸುಪ್ರೀಂ ಕೋರ್ಟ್ ಎಷ್ಟು ನಿರ್ಭಿಡೆಯಿಂದ ನಡೆದುಕೊಳ್ಳುತ್ತದೆ ಎಂಬುದರ ಮೇಲೆ ಅದರ ವಿಶ್ವಾಸಾರ್ಹತೆ ನಿಂತಿರುತ್ತದೆ.

ಮಹಿಳಾ ನ್ಯಾಯಮೂರ್ತಿಗಳು ಮತ್ತು ಅವರ ಬುದ್ಧಿಮಟ್ಟದ ಬಗ್ಗೆಯೂ ಮಾತುಗಳು ಬರುತ್ತವೆ. ಇವತ್ತಿನವರೆಗೆ ನ್ಯಾಯಾಧೀಶರ ಸ್ಥಾನ ಅಲಂಕರಿಸಿದವರೆಲ್ಲ ಅಪ್ರತಿಮ ಬುದ್ಧಿವಂತರೇನಲ್ಲ. ಸಮಾಜದ 50% ಜನಸಂಖ್ಯೆ ಹೊಂದಿದ ಮಹಿಳಾ ಸಮುದಾಯಕ್ಕೆ ನೀಡುವ ನಗಣ್ಯ ಪ್ರಾತಿನಿಧ್ಯ ಸಾಮಾಜಿಕ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತದೆ.

ಶಬರಿಮಲೈ ದೇವಸ್ಥಾನದ ಪ್ರವೇಶದ ಕೇಸಿನಲ್ಲಿ 4:1 ತೀರ್ಪಿನಲ್ಲಿ ಮಹಿಳೆ ದೇವಸ್ಥಾನ ಪ್ರವೇಶಿಸಬಾರದು ಎಂದು ಹೇಳಿದ್ದು, ಒಬ್ಬ ಮಹಿಳಾ ನ್ಯಾಯಮೂರ್ತಿ ಇದ್ದಾಗಲೇ- ಅಂತಹ ಪ್ರಾತಿನಿಧ್ಯದಿಂದ ಏನು ಉಪಯೋಗ ಎಂದು ಉಡಾಫೆಯ ಮಾತುಗಳನ್ನು ಆಡಿದವರು ಎಷ್ಟೋ ಜನರಿದ್ದಾರೆ. ಆದ್ದರಿಂದಲೇ ಪ್ರಾರಂಭದಲ್ಲೇ ಹೇಳಿದ್ದು ಪ್ರತಿಯೊಬ್ಬ ನ್ಯಾಯಮೂರ್ತಿಯ ವೈಯಕ್ತಿಕ ಅನುಭವ, ಬೆಳವಣಿಗೆ, ಸಾಮಾಜಿಕ ಸ್ಥಾನಮಾನಗಳು ಕೆಲವೊಮ್ಮೆ ಅವರ ತೀರ್ಪುಗಳಲ್ಲಿ ಪ್ರತಿಫಲಿಸುತ್ತವೆ ಎಂದು. ಹಾಗೆಂದ ಮಾತ್ರಕ್ಕೆ ಆ ಪ್ರಕ್ರಿಯೆಯಲ್ಲಯೇ ಹುಳುಕು ಹುಡುಕುವುದಲ್ಲ. ಪ್ರಜಾಪ್ರಭುತ್ವದ ಸೌಂದರ್ಯವೇ ವಿವಿಧತೆಯಲ್ಲಿದೆ. ಜಸ್ಟೀಸ್ ಬಿ.ಆರ್ ಗವಾಯಿ ಒಬ್ಬರು ಎಸ್‌ಸಿ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ, ಇನ್ನು ಎಸ್‌ಟಿ ವಿವಿಧ ಅಲ್ಪಸಂಖ್ಯಾತ, ವಿಕಲಚೇತನ ಮತ್ತು LGBTQ ಮುಂತಾದ ಹಿನ್ನೆಲೆಯ ನ್ಯಾಯಮೂರ್ತಿಗಳನ್ನು ಈ ದೇಶ ನೋಡುವುದು ಯಾವಾಗ? ಸುಪ್ರೀಂ ಕೋರ್ಟ್ ತನ್ನ ಪೂರ್ವಾಗ್ರಹಗಳ ಪೊರೆ ಹರಿದುಕೊಳ್ಳುವುದು ಯಾವಾಗ?

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ದೈಹಿಕ, ಮಾನಸಿಕವಾಗಿ ನಲುಗಿದ ಮಹಿಳೆಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...