Homeಮುಖಪುಟಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?

ಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?

- Advertisement -
- Advertisement -

ಒಂದು ಪ್ರಾಣಿ ಸಂಗ್ರಹಾಲಯದಲ್ಲಿ ಒಬ್ಬ ತಂದೆ ತನ್ನ ಪುಟ್ಟ ಮಗನೊಂದಿಗೆ ಸಿಂಹದ ಬೋನಿನ ಎದುರು ನಿಂತಿದ್ದ. ಮಗು ಕುತೂಹಲದಿಂದ ಬೋನಿನ ಅತಿ ಸಮೀಪಕ್ಕೆ ಹೋಯಿತು, ಇನ್ನೇನು ಸಿಂಹ ಮಗುವಿಗೆ ತನ್ನ ಪಂಜದಲ್ಲಿ ಹೊಡೆಯುವುದರಲ್ಲಿತ್ತು. ಅಲ್ಲಿಯೇ ನಿಂತಿದ್ದ ಯುವಕ ಸರಕ್ಕನೆ ಮಗುವನ್ನು ಎಳೆದುಕೊಂಡು ಪ್ರಾಣ ಉಳಿಸಿದ. ಗುಂಪಿನಲ್ಲಿದ್ದ ಪತ್ರಕರ್ತನೊಬ್ಬ ಆ ಯುವಕನ ಬಳಿಬಂದು, ತಾನಿದರ ಬಗ್ಗೆ ಒಂದು ಲೇಖನ ಬರೆಯುತ್ತೇನೆಂದು ಅನೇಕ ಪ್ರಶ್ನೆ ಕೇಳಿದ. ಕೊನೆಯದಾಗಿ ನೀನು ಯಾವ ಪಕ್ಷದವನು ಎಂದಾಗ ಯುವಕ “ನಾನು ನಾಝಿ” ಎಂದ. ಮರುದಿನದ ಪತ್ರಿಕೆಯ ಹೆಡ್‌ಲೈನ್ ಹೀಗಿತ್ತು: “ಹಸಿದ ಆಫ್ರಿಕನ್ ವಲಸೆಗಾರನ ಊಟವನ್ನು ಕಸಿದುಕೊಂಡ ದುಷ್ಟ ನಾಝಿ”.

– ಓಶೋ ಹೇಳಿದ ಕತೆಯಿಂದ

ಪ್ರತಿಯೊಬ್ಬ ಮನುಷ್ಯನೂ ತನ್ನ ಪೂರ್ವಾಗ್ರಹಗಳ ಪ್ರತಿಫಲವೇ ಆಗಿರುತ್ತಾನೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಹೀಗಿದ್ದಾಗ ನಮ್ಮ ಸುಪ್ರೀಂ ಕೋರ್ಟಿನ ನ್ಯಾಯಾಧೀಶರುಗಳೂ ಇದಕ್ಕೆ ಹೊರತಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಒಮ್ಮೆ ಹೀಗೆ ಒಪ್ಪಿಕೊಂಡ ಮೇಲೆ ಯಾಕೆ ಕಾಲಕಾಲಕ್ಕೆ ಸುಪ್ರೀಂಕೋರ್ಟಿನ ಬಗೆಗಿನ ಚಿತ್ರಣ ಭಿನ್ನಭಿನ್ನವಾಗಿ ಕಾಣುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಸುಲಭ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮಹತ್ವವನ್ನು ಎತ್ತಿಹಿಡಿದ ಮತ್ತು ಅವುಗಳ ವಿಸ್ತಾರವನ್ನು ಹೆಚ್ಚಿಸಿದ ಜಸ್ಟಿಸ್ ಕೃಷ್ಣ ಐಯ್ಯರ್ ಮತ್ತು ಪಿ.ಎನ್ ಭಗವತಿ ಅವರು ಒಂದು ಸಮಯದಲ್ಲಿ ಎಲ್ಲರೂ ಸುಪ್ರೀಂ ಕೋರ್ಟಿನ ಕಡೆಗೆ ಆಶಾದಾಯಕವಾಗಿ ನೋಡುವಂತೆ ಮಾಡಿದ್ದರು. ಆದರೀಗ ಎಲೆಕ್ಟೋರಲ್ ಬಾಂಡ್, ಇವಿಎಮ್,
370ನೇ ಪರಿಚ್ಛೇದದಂತಹ ವಿಷಯಗಳೂ ಕೋರ್ಟಿನ ಕಡೆಗೆ ಹೆಚ್ಚಿನ ಗಮನ ಸೆಳೆಯುವಂತೆ ಮಾಡುವುದಿಲ್ಲ.

ಜಸ್ಟೀಸ್ ಎಮ್. ಫಾತಿಮಾ ಬೀವಿ

ಪರಿಸ್ಥಿತಿ ಹೀಗಿರುವಾಗ ಸುಪ್ರೀಂ ಕೋರ್ಟಿನಲ್ಲಿ ಮಹಿಳಾ ನ್ಯಾಯಾಧೀಶರ ಪ್ರಾತಿನಿಧ್ಯ ಎನ್ನುವುದು ಎಷ್ಟರಮಟ್ಟಿಗೆ ಸಾರ್ವಜನಿಕರ ಗಮನ ಅಥವಾ ಕುತೂಹಲವನ್ನು ಕೆರಳಿಸುತ್ತದೆ? ಅಕಸ್ಮಾತ್ ಇದು ದೇಶದ ಗಮನ ಸೆಳೆಯದೇ ಇದ್ದರೆ ಅದರ ವೈಫಲ್ಯ ಎಲ್ಲಿ ಅಡಗಿದೆ? ಲೋಕಸಭೆ, ವಿಧಾನಸಭೆಗಳಲ್ಲಿ 33% ಮಹಿಳಾ ಪ್ರಾತಿನಿಧ್ಯ ಕೊಡಬೇಕು ಎಂದು ಪ್ರತಿಪಾದಿಸುವವರೂ ಅದರ ಅನುಷ್ಠಾನಕ್ಕೆ ಹೆಚ್ಚಿನ ಆಸಕ್ತಿ ನೀಡದೇ ಇದ್ದಾಗ ಇನ್ನು ಸಂಪೂರ್ಣವಾಗಿ ಅರ್ಹತೆಯನ್ನೇ ಆಧರಿಸಿದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಹುದ್ದೆಯ ಬಗ್ಗೆ ಜನ ತಲೆ ಕೆಡಿಸಿಕೊಳ್ಳುತ್ತಾರಾ? ಇನ್ನೂ ಎಷ್ಟೋ ಪ್ರಶ್ನೆಗಳಿರಬಹುದು ಆದರೆ ಉತ್ತರ ಒಂದೇ. ದೇಶದ ಸಂವಿಧಾನದಲ್ಲಿ ಹೇಳಲಾದ ಆದರ್ಶಗಳ ಪ್ರತಿಪಾಲನೆ ಆಗಬೇಕಾದರೆ ಶತಮಾನಗಳಿಂದಲೂ ಬೇರುಬಿಟ್ಟಿರುವ ಪೂರ್ವಾಗ್ರಹಗಳನ್ನು ಕಾಲಕಾಲಕ್ಕೆ ಒಡೆದು ಹೊಸ ಗ್ರಹಿಕೆಗಳನ್ನು ಕಟ್ಟುವ ಕೆಲಸ ಪ್ರಜ್ಞಾಪೂರ್ವಕವಾಗಿ ಆಗಲೇಬೇಕು.

70 ವರ್ಷಗಳ ಸುಪ್ರೀಂಕೋರ್ಟಿನ ಚರಿತ್ರೆಯಲ್ಲಿ ಇವತ್ತಿಗೂ ಒಬ್ಬ ಮಹಿಳಾ ಮುಖ್ಯನ್ಯಾಯಮೂರ್ತಿಯ ನೇಮಕ ಎನ್ನುವುದು ಒಂದು ಬಹುದೊಡ್ಡ ಚರ್ಚೆಯ ವಿಷಯವಾಗುತ್ತದೆ ಎಂಬ ಪ್ರಶ್ನೆ ಮುಖ್ಯವಾದದ್ದು. ಸುಪ್ರೀಂ ಕೋರ್ಟಿಗೆ 1950ರಿಂದ ಇಲ್ಲಿಯವರೆಗೆ ಒಟ್ಟು 247 ನ್ಯಾಯಾಧೀಶರು ನೇಮಕಗೊಂಡಿದ್ದಾರೆ, ಅವರಲ್ಲಿ ಮಹಿಳೆಯರು ಕೇವಲ 8. 1980ರಲ್ಲಿ ಜಸ್ಟೀಸ್ ಎಮ್. ಫಾತಿಮಾ ಬೀವಿ ದೇಶದ ಮೊದಲ ಸುಪ್ರೀಂ ಕೋರ್ಟ್ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಂಡರು. ಮೊನ್ನೆಯವರೆಗೆ ಸುಪ್ರೀಂ ಕೋರ್ಟಿನ 27 ನ್ಯಾಯಾಧೀಶರಲ್ಲಿ ಕೇವಲ ಒಬ್ಬ ಮಹಿಳೆ ಮಾತ್ರ ಇದ್ದರು. (ಆಗಸ್ಟ್ 31ರಂದು ಮೂವರು ಮಹಿಳಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕರಿಸಿದರು)

ಇತ್ತೀಚೆಗೆ ನಿವೃತ್ತಿ ಹೊಂದಿದ ಜಸ್ಟೀಸ್ ಇಂದು ಮಲ್ಹೋತ್ರಾ ನಂತರ ಜಸ್ಟೀಸ್ ಇಂದಿರಾ ಬ್ಯಾನರ್ಜಿ ಒಬ್ಬರೇ ಮಹಿಳೆ ಇದ್ದದ್ದು. ಇನ್ನು ಹೈಕೋರ್ಟುಗಳ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಒಟ್ಟು ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ 1079, ಆದರೆ 426 ಸ್ಥಾನಗಳು ಖಾಲಿ ಇವೆ. ಭರ್ತಿಯಾಗಿರುವ 653 ಸ್ಥಾನಗಳಲ್ಲಿ ಮಹಿಳಾ ನ್ಯಾಯಾಧೀಶರ ಪ್ರಾತಿನಿಧ್ಯ ಕೇವಲ 78. ಮದ್ರಾಸ್ ಹೈಕೋರ್ಟ್ 13, ಬಾಂಬೆ ಹೈಕೋರ್ಟ್ 8, ಪಂಜಾಬ್ ಹರಿಯಾಣ ಹೈಕೋರ್ಟ್ 7, ದೆಹಲಿ ಮತ್ತು ಕರ್ನಾಟಕ ತಲಾ 6, ಕೇರಳ ಮತ್ತು ಗುಜರಾತ್ ತಲಾ 5.

ಇಂದು ಮಲ್ಹೋತ್ರಾ

ಇನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಸೇವಾ ಹಿರಿತನವನ್ನು ನೋಡಿದರೆ 2027ರವರೆಗಿನ ಪಟ್ಟಿ ಹೆಚ್ಚು ಕಡಿಮೆ ರೆಡಿಯಾಗಿದೆ. ಜಸ್ಟೀಸ್ ಎನ್.ವಿ ರಮಣ ನಂತರ ಜಸ್ಟೀಸ್ ಯು.ಯು ಲಲಿತ್, ಜಸ್ಟೀಸ್ ಡಿ.ವೈ ಚಂದ್ರಚೂಡ್, ಜಸ್ಟೀಸ್ ಸಂಜೀವ್ ಖನ್ನಾ, ಜಸ್ಟೀಸ್ ಬಿ.ಆರ್ ಗವಾಯಿ ಮತ್ತು ಜಸ್ಟೀಸ್ ಸೂರ್ಯಕಾಂತ್. ಆದ್ದರಿಂದಲೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಮುಖ್ಯನ್ಯಾಯಧೀಶರಾಗಿ ನೇಮಕವಾಗುವ ಸಂಭವವಿರುವುದು 2027ರಲ್ಲಿ.ದೇಶದ ಸಂವಿಧಾನ ಎತ್ತಿಹಿಡಿಯುವ ಸುಪ್ರೀಂ ಕೋರ್ಟಿನ ಪರಿಸ್ಥಿತಿಯೇ ಹೀಗಿದ್ದರೆ ಇನ್ನು ಉಳಿದ ಕ್ಷೇತ್ರಗಳ ಪಾಡನ್ನು ಊಹಿಸಿಕೊಳ್ಳಬಹುದು ಕಷ್ಟವಾಗಲಾರದು.

ಇದನ್ನೆಲ್ಲ ನೋಡಿದಾಗ ದೇಶದಲ್ಲಿ ಮಹಿಳೆಯರಿಗೆ ನ್ಯಾಯಮೂರ್ತಿಗಳಾಗುವ ಅರ್ಹತೆಯೇ ಇಲ್ಲವೇನೋ ಎಂಬ ಭಾವನೆ ಬರುತ್ತದೆ ಅಥವಾ ಭಾವನೆ ಬರುವಂತೆ ಮಾಡಲಾಗುತ್ತದೆ ಎಂದೂ ಹೇಳಬಹುದು. ನಿಜ ಹೇಳಬೇಕೆಂದರೆ ಕಳೆದ 70 ವರ್ಷಗಳಲ್ಲಿ ಸುಪ್ರೀಂ ಕೋರ್ಟಿನಲ್ಲಾಗಲೀ, ಹೈಕೋರ್ಟುಗಳಲ್ಲಾಗಲೀ ಸೂಕ್ತ ಮಹಿಳಾ ಪ್ರಾತಿನಿಧ್ಯವನ್ನು ಒದಗಿಸುವ ಗಂಭೀರವಾದ ಪ್ರಯತ್ನಗಳೇ ನಡೆದಿಲ್ಲ. ಶತಮಾನಗಳ ಪುರುಷಪ್ರಧಾನ, ಪ್ರತಿಗಾಮಿ ಧೋರಣೆ ಸುಪ್ರೀಂ ಕೋರ್ಟಿನಲ್ಲೂ ಆಳವಾಗಿ ಬೇರೂರಿರುವುದನ್ನು ಕಾಣಬಹುದು. ಇದನ್ನು ತಿಳಿದುಕೊಳ್ಳಬೇಕಾದರೆ ಈ ನ್ಯಾಯಮೂರ್ತಿಗಳ ಆಯ್ಕೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು.

ಸಂವಿಧಾನದ 217 ಹಾಗೂ 124ನೇ ಪರಿಚ್ಛೇದದ ಅಡಿಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿ ನಡೆಯುತ್ತದೆ. ಈ ನೇಮಕಾತಿಗಳಲ್ಲಿ ಯಾವುದೇ ಜಾತಿ, ವರ್ಗ ಅಥವಾ ಲಿಂಗಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ. ಈ ನ್ಯಾಯಮೂರ್ತಿಗಳು ಜಿಲ್ಲಾ ನ್ಯಾಯಾಧೀಶರುಗಳಾಗಿ ಬಡ್ತಿ ಹೊಂದಿದವರು ಇರಬಹುದು ಅಥವಾ ನೇರವಾಗಿ ಆಯ್ಕೆಯಾದವರೂ ಇರಬಹುದು. ಇನ್ನು ಹೈಕೋರ್ಟುಗಳಲ್ಲಿ ಸೇವಾಹಿರಿತನ ಹೊಂದಿದ ನಂತರ ಸುಪ್ರೀಂ ಕೋರ್ಟ್‌ಗೆ ಹೋದವರೂ ಇರಬಹುದು. ಅಂದರೆ ಸೇವಾಹಿರಿತನ
ಹೊಂದಿದ ಮಹಿಳಾ ನ್ಯಾಯಮೂರ್ತಿ ಕೇವಲ ನ್ಯಾಯಾಧೀಶರಾಗಿ ಕೆಲಸ ಮಾಡಿದವರೇ ಇರಬೇಕು ಎಂಬ ನಿಯಮ ಇಲ್ಲ.

ಅಂದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗಳಲ್ಲಿ ಗಣನೀಯವಾಗಿ ವಕೀಲಿವೃತ್ತಿ ನಡೆಸಿದವರನ್ನೂ ಆಯ್ಕೆ ಮಾಡಬಹುದು. ಹೈಕೋರ್ಟು ಮತ್ತು ಸುಪ್ರೀಂ ಕೋರ್ಟುಗಳಲ್ಲಿ ಅತ್ಯಂತ ಯಶಸ್ವಿಯಾದ ವೃತ್ತಿನಿರತ ಮಹಿಳಾ ವಕೀಲರು ಲಭ್ಯವಿದ್ದಾಗ ಅವರನ್ನು ಕಡೆಗಣಿಸಿ ಮಹಿಳಾ ನ್ಯಾಯಮೂರ್ತಿಗಳ ಕೊರತೆ ಇದೆ ಎನ್ನುವುದು ಮಹಿಳೆಯರನ್ನು ದೂರ ಇಡುವ ಒಂದು ತಂತ್ರವಷ್ಟೇ. ಇತ್ತೀಚೆಗೆ ನಿವೃತ್ತಿ ಹೊಂದಿದ ಜಸ್ಟೀಸ್ ರೋಹಿಂಗ್ಟ್‌ನ್ ನಾರಿಮನ್, ಜಸ್ಟೀಸ್ ಯು.ಯು ಲಲಿತ್, ಜಸ್ಟೀಸ್ ಎಲ್. ನಾಗೇಶ್ವರರಾವ್ ಅವರು ಹೀಗೆ ನೇರವಾಗಿ ವಕೀಲ ವೃತ್ತಿಯಿಂದ ಆಯ್ಕೆಯಾದವರು. ಜಸ್ಟೀಸ್ ಇಂದು ಮಲ್ಹೋತ್ರಾ ಕೂಡ ವಕೀಲರಾಗಿದ್ದುಕೊಂಡು ನೇರವಾಗಿ ಆಯ್ಕೆಯಾದವರು. ಇಷ್ಟೆಲ್ಲ ಸೌಲಭ್ಯ ಇದ್ದಾಗ್ಯೂ ಮಹಿಳೆಯರ ಕೊರತೆ ಕಂಡಾಗ ಇದು ಕೇವಲ ಇಚ್ಛಾಶಕ್ತಿಯ ಕೊರತೆ ಅಲ್ಲ ಆಳವಾಗಿ ಬೇರೂರಿದ ಪುರುಷಪ್ರದಾನ ಸಮಾಜದ ಕುರುಹುಗಳಾಗಿಯೂ ಕಾಣುತ್ತದೆ.

ಬಿ.ವಿ ನಾಗರತ್ನ

ನ್ಯಾಯಮೂರ್ತಿಗಳ ಆಯ್ಕೆಯನ್ನು ಸುಪ್ರೀಂ ಕೋರ್ಟಿನ ಕೊಲಿಜಿಯಂ ನಡೆಸುತ್ತದೆ. ಈ ಕೊಲಿಜಿಯಂ ಬಗ್ಗೆ ಅನೇಕ ಪರ ಹಾಗೂ ವಿರೋಧದ ವಾದಗಳಿವೆ. ನ್ಯಾಯಮೂರ್ತಿಗಳೇ ತಮ್ಮ ಅಧೀನ ನ್ಯಾಯಾಧೀಶರನ್ನು ಆಯ್ಕೆ ಮಾಡುವುದು ಸಂವಿಧಾನಬಾಹಿರ ಮತ್ತು ಇದರಲ್ಲಿ ಪಾರದರ್ಶಕತೆ ಇರುವುದಿಲ್ಲ, ಸ್ವಜನಪಕ್ಷಪಾತಕ್ಕೆ ದಾರಿ ಮಾಡಿಕೊಡಲಾಗುತ್ತದೆ ಇತ್ಯಾದಿ ಆರೋಪಗಳು ಅದರ ಮೇಲಿವೆ. ಈ ನ್ಯಾಯಮೂರ್ತಿ ಮತ್ತು ನ್ಯಾಯಾಧೀಶರ ಆಯ್ಕೆಯೂ ಸಹ ಇತರ ಉನ್ನತ ಹುದ್ದೆಗಳಂತೆ ಭರ್ತಿಯಾಗಬೇಕು, ಆ ಇಲಾಖೆ ಸರ್ಕಾರದ ಕಾನೂನು ಮಂತ್ರಿಗಳ ಅಡಿಯಲ್ಲಿ ಬರಬೇಕು ಎಂಬುದು ಮತ್ತೊಂದು ವಾದ. 1993ರ ಮೊದಲು ಈ ಎಲ್ಲ ಆಯ್ಕೆಗಳೂ ಕಾನೂನು ಮಂತ್ರಿಗಳ ಹಸ್ತಕ್ಷೇಪ ಹಾಗೂ ರಾಷ್ಟ್ರಪತಿಗಳ ಶಿಫಾರಸ್ಸಿನ ಮೇಲೆಯೇ ನಡೆಯುತ್ತಿದ್ದವು. ಆಗ ನಡೆದ ಕೆಲವು ಆಯ್ಕೆಗಳು ಸೇವಾಹಿರಿತನವನ್ನು ಪರಿಗಣಿಸದೇ ನಡೆದಿದ್ದವು.

ಆದರೆ 1993ರ ’ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಟ್ ಅಸೋಸಿಯೇಶನ್ ವಿರುದ್ಧ ಭಾರತ ಒಕ್ಕೂಟ’ ಕೇಸಿನಲ್ಲಿ ಸಂವಿಧಾನ ಹಾಗೂ ಕಾನೂನಿನ ಪರಿಕಲ್ಪನೆಯನ್ನು ವಿಸ್ತರಿಸುತ್ತಾ ಸುಪ್ರೀಂಕೋರ್ಟ್ ಅಧೀನ ನ್ಯಾಯಾಧೀಶರ ಆಯ್ಕೆಯ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿತು. ಈಗ ರಾಷ್ಟ್ರಪತಿಗಳು ಕೊಲಿಜಿಯಂ ನೀಡಿದ ಪಟ್ಟಿಯನ್ನು ಮರಿಪರಿಶೀಲಿಸಿ ಎಂದು ಹೇಳಬಹುದೇ ಹೊರತು ಬದಲಿಸಿ ಎನ್ನುವುದು ಕಷ್ಟ. ಈ ಆಯ್ಕೆಯ ಪಟ್ಟಿ ಕೊಲಿಜಿಯಂನ ಎಲ್ಲಾ 5 ನ್ಯಾಯಮೂರ್ತಿಗಳ ಸರ್ವಾನುಮತದ ಆಯ್ಕೆಯಾಗಿರಬೇಕು. ಇಷ್ಟಿದ್ದೂ ಇವತ್ತಿನ ದಿನಗಳಲ್ಲಿ ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ನಡೆಯುವ ತಾರತಮ್ಯವನ್ನು ನೋಡುತ್ತಿದ್ದೇವೆ. ಒಂದು ಸರ್ವಾಧಿಕಾರಿ ಧೋರಣೆಯ ಸರ್ಕಾರ ಇದ್ದಾಗ ಸುಪ್ರೀಂ ಕೋರ್ಟ್ ಎಷ್ಟು ನಿರ್ಭಿಡೆಯಿಂದ ನಡೆದುಕೊಳ್ಳುತ್ತದೆ ಎಂಬುದರ ಮೇಲೆ ಅದರ ವಿಶ್ವಾಸಾರ್ಹತೆ ನಿಂತಿರುತ್ತದೆ.

ಮಹಿಳಾ ನ್ಯಾಯಮೂರ್ತಿಗಳು ಮತ್ತು ಅವರ ಬುದ್ಧಿಮಟ್ಟದ ಬಗ್ಗೆಯೂ ಮಾತುಗಳು ಬರುತ್ತವೆ. ಇವತ್ತಿನವರೆಗೆ ನ್ಯಾಯಾಧೀಶರ ಸ್ಥಾನ ಅಲಂಕರಿಸಿದವರೆಲ್ಲ ಅಪ್ರತಿಮ ಬುದ್ಧಿವಂತರೇನಲ್ಲ. ಸಮಾಜದ 50% ಜನಸಂಖ್ಯೆ ಹೊಂದಿದ ಮಹಿಳಾ ಸಮುದಾಯಕ್ಕೆ ನೀಡುವ ನಗಣ್ಯ ಪ್ರಾತಿನಿಧ್ಯ ಸಾಮಾಜಿಕ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತದೆ.

ಶಬರಿಮಲೈ ದೇವಸ್ಥಾನದ ಪ್ರವೇಶದ ಕೇಸಿನಲ್ಲಿ 4:1 ತೀರ್ಪಿನಲ್ಲಿ ಮಹಿಳೆ ದೇವಸ್ಥಾನ ಪ್ರವೇಶಿಸಬಾರದು ಎಂದು ಹೇಳಿದ್ದು, ಒಬ್ಬ ಮಹಿಳಾ ನ್ಯಾಯಮೂರ್ತಿ ಇದ್ದಾಗಲೇ- ಅಂತಹ ಪ್ರಾತಿನಿಧ್ಯದಿಂದ ಏನು ಉಪಯೋಗ ಎಂದು ಉಡಾಫೆಯ ಮಾತುಗಳನ್ನು ಆಡಿದವರು ಎಷ್ಟೋ ಜನರಿದ್ದಾರೆ. ಆದ್ದರಿಂದಲೇ ಪ್ರಾರಂಭದಲ್ಲೇ ಹೇಳಿದ್ದು ಪ್ರತಿಯೊಬ್ಬ ನ್ಯಾಯಮೂರ್ತಿಯ ವೈಯಕ್ತಿಕ ಅನುಭವ, ಬೆಳವಣಿಗೆ, ಸಾಮಾಜಿಕ ಸ್ಥಾನಮಾನಗಳು ಕೆಲವೊಮ್ಮೆ ಅವರ ತೀರ್ಪುಗಳಲ್ಲಿ ಪ್ರತಿಫಲಿಸುತ್ತವೆ ಎಂದು. ಹಾಗೆಂದ ಮಾತ್ರಕ್ಕೆ ಆ ಪ್ರಕ್ರಿಯೆಯಲ್ಲಯೇ ಹುಳುಕು ಹುಡುಕುವುದಲ್ಲ. ಪ್ರಜಾಪ್ರಭುತ್ವದ ಸೌಂದರ್ಯವೇ ವಿವಿಧತೆಯಲ್ಲಿದೆ. ಜಸ್ಟೀಸ್ ಬಿ.ಆರ್ ಗವಾಯಿ ಒಬ್ಬರು ಎಸ್‌ಸಿ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ, ಇನ್ನು ಎಸ್‌ಟಿ ವಿವಿಧ ಅಲ್ಪಸಂಖ್ಯಾತ, ವಿಕಲಚೇತನ ಮತ್ತು LGBTQ ಮುಂತಾದ ಹಿನ್ನೆಲೆಯ ನ್ಯಾಯಮೂರ್ತಿಗಳನ್ನು ಈ ದೇಶ ನೋಡುವುದು ಯಾವಾಗ? ಸುಪ್ರೀಂ ಕೋರ್ಟ್ ತನ್ನ ಪೂರ್ವಾಗ್ರಹಗಳ ಪೊರೆ ಹರಿದುಕೊಳ್ಳುವುದು ಯಾವಾಗ?

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ದೈಹಿಕ, ಮಾನಸಿಕವಾಗಿ ನಲುಗಿದ ಮಹಿಳೆಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...