Homeಮುಖಪುಟವಿಶ್ವ ಸಾಮಾಜಿಕ ನ್ಯಾಯ ದಿನ: ಡಿಜಿಟಲ್ ಕಾಲದಲ್ಲೂ ಹಿಗ್ಗಿದ ಸಾಮಾಜಿಕ ಅಸಮಾನತೆಯ ಅಂತರ!

ವಿಶ್ವ ಸಾಮಾಜಿಕ ನ್ಯಾಯ ದಿನ: ಡಿಜಿಟಲ್ ಕಾಲದಲ್ಲೂ ಹಿಗ್ಗಿದ ಸಾಮಾಜಿಕ ಅಸಮಾನತೆಯ ಅಂತರ!

ಫೆ.20ರಂದು ವಿಶ್ವ ಸಾಮಾಜಿಕ ನ್ಯಾಯದ ದಿನವಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಆಚರಿಸುವ ಈ ಸಾಮಾಜಿಕ ನ್ಯಾಯ ದಿನಕ್ಕೆ ಈ ಬಾರಿ, ’ಡಿಜಿಟಲ್ ಆರ್ಥಿಕತೆಯಲ್ಲಿ ಸಾಮಾಜಿಕ ನ್ಯಾಯ’ಕ್ಕೆ ಕರೆ ಕೊಡಲಾಗಿದೆ. ಎಲ್ಲೆಡೆ ಆರ್ಥಿಕತೆ ತಂತ್ರಜ್ಞಾನದ ಆಯಾಮ ರೂಪು ಪಡೆದುಕೊಳ್ಳುತ್ತಿರುವಾಗ, ಸಮಾಜದ ಅತ್ಯಂತ ಕೆಳಸ್ಥರದ ವ್ಯಕ್ತಿಯೂ ಅರ್ಥಿಕತೆಯಲ್ಲಿ ಸಮಾನವಾಗಿ ಭಾಗಿಯಾಗಬೇಕೆಂಬ ಆಶಯವನ್ನು ಗಟ್ಟಿಯಾಗಿ ಹೇಳಿದೆ. ಆದರೆ ಭಾರತದ ಪರಿಸ್ಥಿತಿ ಏನು?

- Advertisement -
- Advertisement -

ಫೆಬ್ರವರಿ 20: ವಿಶ್ವ ಸಾಮಾಜಿಕ ನ್ಯಾಯ ದಿನ

“ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಜೀವನದ ಕ್ರಮವಾದಾಗ ಮಾತ್ರ ಸಾಮಾಜಿಕ ಪ್ರಜಾಪ್ರಭುತ್ವ ಕಾಣಲು ಸಾಧ್ಯ – 1945ರ ನವೆಂಬರ್ 25ರಂದು ಸಂವಿಧಾನ ರಚನಾಸಭೆಯಲ್ಲಿ ಕಡೆಯದಾಗಿ ಭಾಷಣ ಮಾಡಿದ್ದ ಡಾ. ಬಿಆರ್ ಅಂಬೇಡ್ಕರ್ ಹೇಳಿದ ಮಾತುಗಳಿವು. ಶತಮಾನಗಳ ಕಾಲ ಈ ದೇಶದಲ್ಲಿದ್ದ ವರ್ಣವ್ಯವಸ್ಥೆ ಪ್ರಣೀತ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆಯ ತರಲೆಂದೇ ರೂಪಿಸಿದ ಸಂವಿಧಾನದ ಕರಡು ಸಿದ್ಧಪಡಿಸುವ ಸಭೆಯಲ್ಲಿ ಹೇಳಿದ ಮಾತಿದು.

ಅಸಮಾನತೆಯನ್ನೇ ಕಂಡುಂಡು ಬೆಳೆದ ಅಂಬೇಡ್ಕರ್ ಅವರಿಗೆ ಸ್ವತಂತ್ರ ಭಾರತದಲ್ಲಿ ಜಾತಿಯ ಕಾರಣಕ್ಕೆ ಯಾರೂ ಅವಕಾಶ ವಂಚಿತರಾಗಬಾರದು, ಜಾತಿಯ ಕಾರಣಕ್ಕಾಗಿ ಯಾರಿಗೋ ಹೆಚ್ಚು ಅಥವಾ ಕಡಿಮೆ ಅವಕಾಶ ಸಿಗುವ ತಾರತಮ್ಯ ಇರಬಾರದು ಎಂದು, ಸಾಮಾಜಿಕ ನ್ಯಾಯದಿಂದ ಮಾತ್ರ ಈ ದೇಶದ ಪ್ರಗತಿ ಸಾಧ್ಯ ಮತ್ತು ನಿಜವಾದ ಪ್ರಜಾಪ್ರಭುತ್ವವಾಗಲು ಎಂದು ಸಾಧ್ಯ ಎಂದು ಪ್ರತಿಪಾದಿಸಿದ್ದರು.

ಏನಿದು ಸಾಮಾಜಿಕ ನ್ಯಾಯ? ಅದನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದೇನೊ; ದೇಶವನ್ನು ಒಂದು ಮನೆ ಎಂದುಕೊಂಡರೆ, ಕುಟುಂಬದ ಸದಸ್ಯರೆಲ್ಲರೂ ಅದರ ಪ್ರಜೆಗಳು. ಕುಟುಂಬದ ಆಸ್ತಿಯನ್ನು ಈ ಎಲ್ಲ ಸದಸ್ಯರಿಗೆ ಸಮಾನವಾಗಿ ಹಂಚುವುದು ಸಾಮಾನ್ಯ ರೂಢಿ. ಇದು ದೇಶದಲ್ಲೂ ಆಗಬೇಕು. ಕುಟುಂಬದ ಆಸ್ತಿಯಂತೆ, ಉದ್ಯೋಗ, ಶಿಕ್ಷಣ, ಆರ್ಥಿಕ, ರಾಜಕೀಯ ಅವಕಾಶಗಳು ಜಾತಿ-ಮತ ಬೇಧಗಳಿಲ್ಲದ ಸಮಾನಾವಾಗಿ ತನ್ನ ಪ್ರಜೆಗಳಿಗೆ ಹಂಚಿಕೆಯಾಗಬೇಕು. ಹಿಂದುಳಿದವರನ್ನೂ, ಶತಶತಮಾನಗಳಿಂದ ಅವಕಾಶವಂಚಿತರನ್ನೂ ಸಮಾನತೆಗಾಗಿ ಮೇಲೆತ್ತಲು ಕ್ರಮ ಕೈಗೊಳ್ಳಬೇಕು.

ಎಪ್ಪತ್ತು ವರ್ಷಗಳ ಬಳಿಕ ಭಾರತೀಯ ಸಮಾಜದ ಸ್ಥಿತಿಯನ್ನು ಗಮನಿಸಿದರೆ ನಿಜಕ್ಕೂ ಸಾಮಾಜಿಕ ನ್ಯಾಯ ಅನುಷ್ಠಾನಕ್ಕೆ ಬಂದಿದೆ ಎಂದು ಮುಟ್ಟಿಹೇಳಿಕೊಳ್ಳುವ ಧೈರ್ಯ ಯಾರಿಗೂ ಇಲ್ಲ.

ಶೋಷಿತ, ಹಿಂದುಳಿದ ಸಮುದಾಯಗಳು ಇಂದಿಗೂ ತಮ್ಮ ಹಕ್ಕಿಗಾಗಿ ಹೋರಾಟ ಮಾಡಲೇಬೇಕಾದ ಸ್ಥಿತಿ ಇರುವುದನ್ನು, ಘನತೆಯ ಬದುಕು ಕಟ್ಟಿಕೊಳ್ಳುವ ಅವಕಾಶಗಳನ್ನು ಪಡೆದುಕೊಳ್ಳುವುದಕ್ಕಾಗಿ ಸಂಘರ್ಷ ನಡೆಸಬೇಕಾಗಿರುವುದನ್ನು ನೋಡುತ್ತಿದ್ದೇವೆ. ಸಂವಿಧಾನ ಬದ್ಧ ಅವಕಾಶ ಹಕ್ಕಾಗದೆ, ಮೇಲ್ಜಾತಿಯ, ಅಧಿಕಾರಸ್ಥರ ಮರ್ಜಿ, ಅನುಕಂಪವಾಗಿದೆ ಎಂದೇ ಅನ್ನಿಸುತ್ತದೆ.

ತೊಂಬತ್ತರ ದಶಕದ ಜಾಗತೀಕರಣ ಅಂತಹ ಅವಕಾಶಗಳನ್ನು ತರುವ ಬೆಳವಣಿಗೆಯಾಗಿ ಬಣ್ಣಿಸಲಾಯಿತು. ಆರ್ಥಿಕ ಸ್ವಾವಲಂಬನೆ ಈ ಜಾತಿಯ ತಾರತಮ್ಯವನ್ನು ಹೋಗಲಾಡಿಸಬಹುದು ಎಂಬ ಪ್ರತಿಪಾದನೆಗಳು ತೀವ್ರವಾಗಿ ಕೇಳಿ ಬಂದ ಕಾಲವದು. ಜಾಗತೀಕರಣ, ಹೊಸ ಉದ್ಯಮ, ಹೊಸ ಉದ್ಯೋಗ, ಹೊಸ ಅವಕಾಶಗಳನ್ನು ಸೃಷ್ಟಿಸಿತಾದರೂ, ಶತಮಾನಗಳಿಂದಲೂ ಶಿಕ್ಷಣ, ಕೌಶಲ್ಯಗಳನ್ನು ತಮ್ಮ ಪಾರುಪತ್ಯದಂತೆ ಕಾಪಾಡಿಕೊಂಡ ಜಾತಿ/ವರ್ಗಗಳೇ ಈ ಅವಕಾಶಗಳನ್ನು ಹಂಚಿಕೊಂಡು ಸಮಾಜದಲ್ಲಿರುವ ತಮ್ಮ ಸ್ಥಾನಗಳನ್ನು ಹಾಗೇ ಭದ್ರ ಮಾಡಿಕೊಂಡವು.

ಔದ್ಯೋಗೀಕರಣದ ಈ ಬೆಳವಣಿಗೆಗೆ ತಂತ್ರಜ್ಞಾನ ಮತ್ತೊಂದು ಆಯಾಮವನ್ನು ಕೊಟ್ಟಿತು. ಇಂಟರ್‌ನೆಟ್ ಮಾಂತ್ರಿಕತೆ ದೇಶವ್ಯಾಪಿ ಆವರಿಸುತ್ತಿರುವಾಗ ಇದೂ ಹೊಸ ಅವಕಾಶಗಳ ಬಾಗಿಲಿನಂತೆ ಕಂಡಿತಾದರೂ ಇಲ್ಲೂ ನಿರ್ದಿಷ್ಟ ಸಮುದಾಯದವರೇ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಂಡವು ಎಂಬುದನ್ನು ಹಲವು ಸಾಮಾಜಿಕ ಸಂಶೋಧನೆಗಳು ಬಹಿರಂಗಮಾಡಿವೆ. ಇಡೀ ದೇಶ ಸಾಮಾಜಿಕ ಚಲನೆಯ ಭಾಗವಾಗಿ ಬದಲಾಗುತ್ತಿದ್ದರೂ, ಸಾಮಾಜಿಕ ನ್ಯಾಯದ ವಿಷಯದಲ್ಲಿ ಯಥಾಸ್ಥಿತಿಯಲ್ಲೇ ಇತ್ತು ಎಂಬುದನ್ನೂ ಈ ಅಧ್ಯಯನಗಳು ಹೇಳುತ್ತವೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೇಳಿ ಬರುತ್ತಿರುವ ಕೆಲವು ’ಮಾಂತ್ರಿಕ’ ಪದಪುಂಜಗಳ ಪೈಕಿ ಡಿಜಿಟಲ್ ಇಂಡಿಯಾ ಕೂಡ ಒಂದು. ಎಲ್ಲ ಸರ್ಕಾರಿ ಸೇವೆಗಳನ್ನು ಡಿಜಿಟಲ್ ಸೇವೆಯಾಗಿ ರೂಪಾಂತರಿಸುವ ಮೂಲಕ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಭ್ರಮೆಯನ್ನು ಈ ಘೋಷಣೆಗಳು ಹುಟ್ಟಿಸಿದವು. ಅಗ್ಗದ ಇಂಟರ್‌ನೆಟ್ ಮತ್ತು ಸುಲಭ ದರದ ಸ್ಮಾರ್ಟ್‌ಫೋನ್‌ಗಳನ್ನು ಈ ಡಿಜಿಟಲ್ ಇಂಡಿಯಾದ ಕಲ್ಪನೆಯನ್ನು ಸಾಕಾರ ಮಾಡುವ ಉತ್ಸಾಹದಲ್ಲಿದ್ದವು. ಇದು ಎಲ್ಲರನ್ನು ದೇಶದ ಆರ್ಥಿಕತೆಯ ತೆಕ್ಕೆಗೆ ಎಳೆದುಕೊಳ್ಳುವ ಪ್ರಯತ್ನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಲೇ ಬಂದರು. ಆದರೆ ನಿಜಕ್ಕೂ ಹಾಗಾಯಿತೇ?

ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುವ ವ್ಯಕ್ತಿ ಈ ಡಿಜಿಟಲ್ ಆರ್ಥಿಕತೆಯಲ್ಲಿ ಹೇಗೆ ಭಾಗವಾದಾನು? ಆತನಿಗೆ ಫೋನ್ ಕೊಳ್ಳಲು ಆಗುವುದಿಲ್ಲ ಎಂದಲ್ಲ. ಆತನಿಗೆ ಇಂಟರ್‌ನೆಟ್ ಹೊಂದಲು ಸಾಧ್ಯವಿಲ್ಲ ಎಂದಲ್ಲ. ಆದರೆ ಡಿಜಿಟಲ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಆತನಿಗೆ ಮಾಹಿತಿಯೇ ಇಲ್ಲದಿದ್ದಾಗ, ಆತ ಈ ಡಿಜಿಟಲ್ ಆರ್ಥಿಕ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಹೇಗೆ ಭಾಗಿಯಾಗುತ್ತಾನೆ? ಇಂಥ ತೊಡಕುಗಳ ನಡುವೆಯೂ ಸರ್ಕಾರ ಡಿಜಿಟಲ್ ಇಂಡಿಯಾ ಎಂದು ಬೀಗುತ್ತಲೇ ಇದೆ.

ನಾಲ್ಕು ವರ್ಷಗಳ ಹಿಂದೆ, ’ಭಾರತ 2025ರ ಹೊತ್ತಿಗೆ 1 ಟ್ರಿಲಿಯನ್ ಡಾಲರ್‌ಗಳ ಡಿಜಿಟಲ್ ಅರ್ಥಿಕತೆಯಾಗುತ್ತದೆ’ ಎಂದು ಸರ್ಕಾರ ಬೀಗುತ್ತಿದ್ದಾಗಲೇ ಹೊರಬಿದ್ದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿದ್ದ ಡಿಜಿಟಲ್ ಸಾಕ್ಷರತೆಯ ಪ್ರಮಾಣ 10% ಅಷ್ಟೇ! ಅಂದರೆ 13 ಕೋಟಿ ಜನ! ನಮ್ಮ ಮನೆಯ ಬೀದಿಯ ತರಕಾರಿ ವ್ಯಾಪಾರಿಯೋ, ನಮ್ಮ ಪುಟ್ಟ ಊರಿನ ಕೃಷಿಕನೊ ಈ ಡಿಜಿಟಲ್ ಆರ್ಥಿಕತೆಯಲ್ಲಿ ಲೆಕ್ಕಕ್ಕೆ ಇದ್ದಾನೋ! ಇಲ್ಲ.

ಎಲ್ಲರನ್ನು ಒಳಗೊಳ್ಳುವ ಸಾಮಾಜಿಕ ಸಮಾನತೆಯ, ಸಮಾನ ಅವಕಾಶಗಳ ಧ್ಯೇಯಕ್ಕೆ, ಡಿಜಿಟಲ್ ಆರ್ಥಿಕತೆ ವಾಸ್ತವದಲ್ಲಿ ಸಾಮಾಜಿಕ ಅಸಮಾನತೆಗೆ ಡಿಜಿಟಲ್ ಹೊದಿಕೆಯನ್ನು ಹೊದಿಸಿತಷ್ಟೆ. ಸಾಮಾಜಿಕ, ಆರ್ಥಿಕವಾದ ಅಸಮಾನತೆಯ ಇನ್ನಷ್ಟು ಹೆಚ್ಚಿತೇ ಹೊರತು, ಕಡಿಮೆಯಾಗಲಿಲ್ಲ. ಮಾಹಿತಿಯ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆಯ ಜೊತೆಗೆ ಡಿಜಿಟಲ್ ವ್ಯವಹಾರಗಳ ಬಗೆಗಿನ ತಿಳಿವು ಇಲ್ಲದಿರುವುದು ಈ ಅಸಮಾನತೆಯನ್ನು ಜೀವಂತವಾಗಿಯೇ ಉಳಿಸಿಕೊಂಡು ಬಂದಿದೆ.

ನೇರ ಆರ್ಥಿಕತೆಗೆ ಸಂಬಂಧಿಸದೇ ಇದ್ದರೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ಅಂಶವನ್ನು ಗಮನಿಸಬೇಕೆಂದೆನಿಸುತ್ತದೆ; ಕೋವಿಡ್ ಕಾಲದಲ್ಲಿ ಶಾಲೆಗಳು ನಿಂತು ಹೋದವು. ಆನ್‌ಲೈನ್ ಮೂಲಕ ಶಿಕ್ಷಣ ಚಟುವಟಿಕೆಗಳು ಆರಂಭಗೊಂಡವು. ಈ ಹೊತ್ತಿನಲ್ಲಿ ಹತ್ತಾರು ಸುದ್ದಿಗಳು ಗಮನಿಸಿದ್ದೇವೆ. ಮಗಳಿಗೆ ಸ್ಮಾರ್ಟ್‌ಫೋನ್ ಕೊಳ್ಳಲಾಗದೆ ಸೋತ ತಂದೆ, ಅಪ್ಪ ಫೋನ್ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಮಗಳು, ಫೋನಿದ್ದರೂ ಸರಿಯಾದ ಇಂಟರ್‌ನೆಟ್ ಸಂಪರ್ಕವಿಲ್ಲದ ನೊಂದ ವಿದ್ಯಾರ್ಥಿಗಳು ಇತ್ಯಾದಿ.ಸ॒ಮಾಜದ ವಿವಿಧ ಆರ್ಥಿಕ ಹಿನ್ನೆಲೆಯ ಕುಟುಂಬಗಳು ಆನ್‌ಲೈನ್ ಕ್ಲಾಸ್‌ಗಳ ಕಾರಣಕ್ಕೆ ಅನುಭವಿಸಿದ ನೋವು, ಸಂಕಟ ಈ ದೇಶದಲ್ಲಿ ಇನ್ನೂ ಉಸಿರಾಡುತ್ತಿರುವ ಸಾಮಾಜಿಕ ಅಸಮಾನತೆಯ ಸಂಕೇತವೇ.

ಸರ್ಕಾರದ್ದೇ ರಾಷ್ಟ್ರೀಯ ಮಾದರಿ ಸಮೀಕ್ಷೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಭಾರತದ 23.8% ಮನೆಗಳಿಗೆ ಮಾತ್ರ ಇಂಟರ್‌ನೆಟ್ ಸೇವೆ ಇದೆ. ಇದರಲ್ಲೂ 14.9% ಹಳ್ಳಿಗಳಿಗೆ ಮಾತ್ರ ಇಂಟರ್‌ನೆಟ್ ಸಂಪರ್ಕ ಲಭ್ಯವಿದೆ. ಭಾರತದ ಚಿತ್ರಣ ಹೀಗಿರುವಾಗ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಡಿಜಿಟಲ್ ಮಾಡುವುದು, ’ಅರ್ಹರು ಬದುಕಲಿ’ ಎಂಬ ಅಹಂಕಾರದ ನಡೆ ಎಂದು ಅನ್ನಿಸದೇ ಇರದು. ಸರ್ಕಾರ ಎಲ್ಲರಿಗೂ ತಲುಪುವ ಯೋಜನೆಯನ್ನು ಜಾರಿಗೆ ತರುವ ಬದ್ಧತೆಯಿಂದ ಕೆಲಸ ಮಾಡದೆ, ಅರ್ಹರು ಪಡೆದುಕೊಳ್ಳುತ್ತಾರೆ ಎಂಬ ಧಾಷ್ಟ್ರ್ಯದಿಂದಲೇ ವರ್ತಿಸಿದ್ದನ್ನು ಕಾಣುತ್ತೇವೆ. ಸಮಾನ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಾಗಬಹುದಾಗಿದ್ದ ಡಿಜಿಟಲ್ ಇಂಡಿಯಾ, ಈ ಕಾರಣಕ್ಕಾಗಿಯೇ ಆಕರ್ಷಕವಾಗಿ ಕಂಡರೂ, ಅನಾಹುತಕಾರಿ ಎನಿಸುತ್ತದೆ.

ಕಿರಾಣಿ ಅಂಗಡಿಯಲ್ಲೊಬ್ಬ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದೇ ಡಿಜಿಟಲ್ ಆರ್ಥಿಕತೆಯ ಒಳಗೊಳ್ಳುವಿಕೆಯ ಮಾನದಂಡವೇ!? ಬಹಳ ಮುಖ್ಯವಾಗಿ ಇಂಟರ್‌ನೆಟ್ ಲಭ್ಯತೆ, ಮಾಹಿತಿ ಸುರಕ್ಷತೆ, ಡಿಜಿಟಲ್ ವಹಿವಾಟುಗಳ ಬಗ್ಗೆ ಅಗತ್ಯವಾದ ತಿಳಿವಳಿಕೆ ಇವೆಲ್ಲವೂ ಎಲ್ಲರಿಗೂ ಲಭ್ಯವಾಗಬೇಕು. ಇದು ಹಕ್ಕು. ಇದನ್ನು ಒದಗಿಸದೇ ಯಾವುದೇ ಸೌಲಭ್ಯವನ್ನು ಒದಗಿಸುವುದು ಸಾಮಾಜಿಕ ವ್ಯವಸ್ಥೆಯಲ್ಲಿ ಗುಲಾಮರನ್ನು ಸೃಷ್ಟಿಸಿಕೊಳ್ಳುವ ಅಥವಾ ತಾರತಮ್ಯವನ್ನು ಜೀವಂತವಾಗಿಡುವ ತಂತ್ರವೇ ಆಗಿರುತ್ತದೆ.

 

ಕೋವಿಡ್ ಹಿನ್ನೆಲೆಯಲ್ಲಿ ಈ ’ಡಿಜಿಟಲ್ ವ್ಯವಸ್ಥೆ ಹೆಚ್ಚು ಹತ್ತಿರವಾಗಿದೆ. ಸೋಂಕಿನ ಭೀತಿಗೆ ಮನೆಯಲ್ಲೇ ತಿಂಗಳುಗಳನ್ನು ಕಳೆಯಬೇಕಾದ ಸ್ಥಿತಿಯಲ್ಲಿ ಕೆಲಸವನ್ನು ಮನೆಯಿಂದ ಮಾಡುವಂತಾಗಿದ್ದು, ವಿದ್ಯಾಭ್ಯಾಸಕ್ಕೆ ಇಂಟರ್‌ನೆಟ್‌ಅನ್ನೇ ಅವಲಂಬಿಸಬೇಕಾದ್ದು, ಖರೀದಿ, ಇತ್ಯಾದಿ ವಹಿವಾಟುಗಳಿಗೆ ಇಂಟರ್‌ನೆಟ್ ಬ್ಯಾಂಕಿಂಗ್‌ಗೆ ಆತುಕೊಂಡಿದ್ದು, ಇವೆಲ್ಲವೂ ಡಿಜಿಟಲ್ ಅವಲಂಬನೆಯನ್ನು ಹಲವು ಪಟ್ಟು ಹೆಚ್ಚಿಸಿತು.

ಈ ಬೇಡಿಕೆಯ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ಯಾವ ವ್ಯವಸ್ಥೆಯೂ ಸರ್ಕಾರ ಮಾಡಿದಂತೆ ಕಾಣಿಸುತ್ತಿಲ್ಲ. ಸರ್ಕಾರ ಎಲ್ಲರಿಗೂ ಡಿಜಿಟಲ್ ಸೇವೆಯನ್ನು ಹೊಂದುವುದಕ್ಕೆ ಬೇಕಾದ ಪರಿಸರವನ್ನು ಕಲ್ಪಿಸದೇ ಹೋದರೆ, ತಾನೇ ಡಿಜಿಟಲ್ ಅನರಕ್ಷಸ್ಥ ನಾಗರಿಕ ಸಮುದಾಯವನ್ನು ಸೃಷ್ಟಿಸುತ್ತದೆ. ಅಂದ ಮೇಲೆ ಇದು ಎಲ್ಲರನ್ನು ಒಳಗೊಳ್ಳುವ ಡಿಜಿಟಲ್ ಆರ್ಥಿಕತೆಯಾಗದೆ ಉಳ್ಳವರು-ಇಲ್ಲದವರ ಆರ್ಥಿಕತೆಯ ಹೊಸ ಮಾದರಿಯೇ ಆಗುತ್ತದೆ ಎಂಬ ವಾದ ಗಟ್ಟಿಯಾಗುತ್ತದೆ.

ಜಗತ್ತಿನಲ್ಲೇ ಡಿಜಿಟಲ್ ವ್ಯವಸ್ಥೆಯನ್ನು ಬಳಸಿಕೊಂಡು ಅತ್ಯಂತವಾಗಿ ಬೆಳೆಯುತ್ತಿರುವ 17 ದೇಶಗಳಲ್ಲಿ ಭಾರತವೂ ಒಂದಾಗಿದೆ. ಒಂದೆಡೆ ವಿವಿಧ ರೀತಿಯ ಔದ್ಯೋಗಿಕ ವಲಯದಲ್ಲಿರುವ ಕಾರ್ಮಿಕರಿಗೆ ಸೂಕ್ತ ಸವಲತ್ತುಗಳನ್ನು, ಭದ್ರತೆಯನ್ನು ಕಲ್ಪಿಸುವ ಮೂಲಕ ಆರ್ಥಿಕತೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಡಿಜಿಟಲ್ ಸ್ವರೂಪವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಸೂಕ್ತ ಬೆಂಬಲ ನೀಡುವ ಪೂರಕ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮವನ್ನು ಕೈಗೊಳ್ಳದೇ ಹೋದರೆ, ಅದು ದೇಶದ ಬಹುದೊಡ್ಡ ಸಮುದಾಯವನ್ನು ಅವಕಾಶ ವಂಚಿತವಾಗಿಸುತ್ತಿದೆ ಎಂದರ್ಥ.

ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆ, ಲಿಂಗ ಸಮಾನತೆ ಮತ್ತು ಸಾಮಾಜಿಕ ಸಮಾನತೆಯ ಎಲ್ಲ ಹಕ್ಕುಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಲು ಡಿಜಿಟಲ್ ಆರ್ಥಿಕತೆಯನ್ನು ಕಲ್ಪಿಸುವ ಬದ್ಧತೆ ಆಳುವ ವರ್ಗ ತೋರಿಸಬೇಕು. ಜಾತಿ, ಧರ್ಮಗಳ ಮಂತ್ರ ಪಠಿಸುತ್ತಲೇ ತಂತ್ರಜ್ಞಾನವನ್ನು ತನ್ನ ಹಿತಾಸಕ್ತಿಗಳ ಸಾಧನೆಯ ಸಾಧನವನ್ನಾಗಿ ಬಳಸುತ್ತಿರುವ ಸರ್ಕಾರ, ಹೊಸ ಕಾಲದ ಆರ್ಥಿಕತೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಎಷ್ಟರ ಮಟ್ಟಿಗೆ ಬದ್ಧವಾಗಿರುತ್ತದೆ ಎಂಬುದು ಕುತೂಹಲದ ನಿರೀಕ್ಷೆ.


ಇದನ್ನೂ ಓದಿ: ರೈತ ಹೋರಾಟದ ಬಿಸಿ: ಪಂಜಾಬ್, ಹರಿಯಾಣಗಳಲ್ಲಿ ಜಿಯೋ ಚಂದಾದಾರರ ಗಣನೀಯ ಕುಸಿತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...