2020 ರ ಡಿಸೆಂಬರ್ನಲ್ಲಿ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋನ ವೈರ್ಲೆಸ್ ಚಂದಾದಾರರ ಸಂಖ್ಯೆ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಭಾರೀ ಕುಸಿತ ಕಂಡಿದೆ. ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಂದ ಅದರ ಮೂಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎದುರಿಸುತ್ತಿರುವ ವಿರೋಧ ಇದಕ್ಕೆ ಕಾರಣವಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಿಲಯನ್ಸ್ ಕಂಪನಿಗೆ ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಕಂಟ್ರ್ಯಾಕ್ಟ್ ಫಾರ್ಮಿಂಗ್ ಮಾಡಲು ಅನುಕೂಲವಾಗುವ ರೀತಿಯಲ್ಲಿ ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ರೈತ ಸಂಘಟನೆಗಳು ಆರೋಪ ಮಾಡಿವೆ.
ಜನವರಿ-ಫೆಬ್ರುವರಿಯಲ್ಲಿ ಈ ಕುಸಿತ ಇನ್ನಷ್ಟು ಹೆಚ್ಚಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಭಾರತೀಯ ದೂರಸಂಪರ್ಕ ನಿಯಂತ್ರಣ ನಿಗಮ) ಬಿಡುಗಡೆ ಮಾಡಿದ ಡಿಸೆಂಬರ್ 2020 ರ ಅಂಕಿ ಅಂಶಗಳ ಪ್ರಕಾರ, ಪಂಜಾಬ್ ಮತ್ತು ಹರಿಯಾಣಗಳಲ್ಲಿ ರಿಲಯನ್ಸ್ ಜಿಯೋ ಡಿಸೆಂಬರ್ ತಿಂಗಳಲ್ಲಿ ಲಕ್ಷಾಂತರ ಚಂದಾದಾರರನ್ನು ಕಳೆದುಕೊಂಡಿದೆ. ಅಲ್ಲದೆ, ಡಿಸೆಂಬರ್ ಅವಧಿಯಲ್ಲಿ, ಈ ಎರಡು ರಾಜ್ಯಗಳಲ್ಲಿ ಚಂದಾದಾರರನ್ನು ಕಳೆದುಕೊಂಡ ಏಕೈಕ ಪ್ರಮುಖ ಆಪರೇಟರ್ ಜಿಯೋ ಆಗಿದೆ.
ಪಂಜಾಬ್ನಲ್ಲಿ, ಡಿಸೆಂಬರ್ ಅಂತ್ಯದ ವೇಳೆಗೆ ಜಿಯೋ 1.25 ಕೋಟಿ ಚಂದಾದಾರರನ್ನು ಹೊಂದಿದ್ದು, ಹಿಂದಿನ 18 ತಿಂಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆ. ಇದು 2020 ರ ನವೆಂಬರ್ ವೇಳೆಗೆ 1.40 ಕೋಟಿ ಚಂದಾದಾರರನ್ನು ಹೊಂದಿತ್ತು. ಅಂದರೆ ಡಿಸೆಂಬರ್ ತಿಂಗಳೊಂದರಲ್ಲೇ ಪಂಜಾಬಿನಲ್ಲಿ 15 ಲಕ್ಷ ಚಂದಾದಾರರು ಜಿಯೋ ತೊರೆದಿದ್ದಾರೆ.
ಹರಿಯಾಣದಲ್ಲಿ, ಜಿಯೋ ವೈರ್ಲೆಸ್ ಚಂದಾದಾರರ ಸಂಖ್ಯೆ 2020 ರ ನವೆಂಬರ್ನಲ್ಲಿ 94.48 ಲಕ್ಷದಿಂದ 2020 ರ ಡಿಸೆಂಬರ್ನಲ್ಲಿ 89.87 ಲಕ್ಷಕ್ಕೆ ಇಳಿದಿದೆ. ಇದು 2016 ರ ಸೆಪ್ಟೆಂಬರ್ನಲ್ಲಿ ಹರಿಯಾಣದಲ್ಲಿ ಜಿಯೋ ಪ್ರಾರಂಭವಾದ ನಂತರ ಕಂಡ ದೊಡ್ಡ ಕುಸಿತವಾಗಿದೆ.
ಇಂಡಿಯನ್ ಎಕ್ಸ್ಪ್ರೆಸ್ ಇದಕ್ಕೆ ಪ್ರತಿಕ್ರಿಯೆ ಕೋರಿ ರಿಲಯನ್ಸ್ ಜಿಯೋಗೆ ಕಳುಹಿಸಿದ ಇ-ಮೇಲ್ ಪ್ರಶ್ನೆಗೆ ಉತ್ತರ ಬಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಜಿಯೋ ಟವರ್ ಮೇಲಿನ ರೈತರ ದಾಳಿಗೆ ಬೆದರಿದ ರಿಲಾಯನ್ಸ್: ಗುತ್ತಿಗೆ ಕೃಷಿ ಮಾಡುವುದಿಲ್ಲವೆಂದು ಹೇಳಿಕೆ
ಅಖಿಲ ಭಾರತ ಮಟ್ಟದಲ್ಲೂ ಜಿಯೋ ಸಾಧನೆ ಹೇಳಿಕೊಳ್ಳುವಂತಿಲ್ಲ. 2020 ರ ಡಿಸೆಂಬರ್ನ ಟೆಲಿಕಾಂ ನಿಗಮ ನೀಡಿದ ದತ್ತಾಂಶದ ಪ್ರಕಾರ, ಇಡೀ ದೇಶದಲ್ಲಿ ರಿಲಯನ್ಸ್ ಜಿಯೋ 4.78 ಲಕ್ಷ ಹೊಸ ಬಳಕೆದಾರರನ್ನು ಪಡೆದಿದ್ದರೆ, ಭಾರ್ತಿ ಏರ್ಟೆಲ್ 40.51 ಲಕ್ಷ ಹೊಸ ಬಳಕೆದಾರರನ್ನು ಪಡೆದುಕೊಂಡಿದೆ. ಆದರೆ ವೊಡಾಫೋನ್ ಐಡಿಯಾ 56.9 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ.
ನವೆಂಬರ್ ಅಂತ್ಯದ ವೇಳೆಗೆ ದೆಹಲಿಯ ಹೊರಗಿನ ಗಡಿಗಳಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿತು. ಸ್ವಲ್ಪ ಸಮಯದ ನಂತರ ಜಿಯೋ ಪೋರ್ಟ್-ಔಟ್ ವಿನಂತಿಗಳನ್ನು ಸ್ವೀಕರಿಸಲು ಪ್ರಾರಂಭಿಸಿತು. ಡಿಸೆಂಬರ್ 11 ರಂದು, ಜಿಯೋ ತನ್ನ ಪ್ರತಿಸ್ಪರ್ಧಿಗಳಾದ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾವು “ತನ್ನ ವಿರುದ್ಧ ದುರುದ್ದೇಶಪೂರಿತ ಅಭಿಯಾನಗಳನ್ನು” ನಡೆಸುತ್ತಿದೆ ಎಂದು ದೂರಿತ್ತು. ಈ ಆರೋಪಗಳನ್ನು ಪ್ರತಿಸ್ಪರ್ಧಿಗಳು ನಿರಾಕರಿಸಿದ್ದರು.
ನಂತರ, ಈ ಎರಡು ರಾಜ್ಯಗಳಲ್ಲಿ ಜಿಯೋ ಬಳಕೆಯಲ್ಲಿರುವ ಹಲವಾರು ಟೆಲಿಕಾಂ ಟವರ್ಗಳು ಮತ್ತು ಫೈಬರ್ ಕೇಬಲ್ಗಳನ್ನು ಹಲವು ಪ್ರತಿಭಟನಾಕಾರರು ನಾಶ ಮಾಡಿದ್ದಾಗಿ ವರದಿಯಾಗಿತ್ತು.
ಇದನ್ನೂ ಓದಿ: ಜಿಯೋದಿಂದ ಹೊರನಡೆದ 26 ಲಕ್ಷ ಗ್ರಾಹಕರು: ರೈತರ ಬಾಯ್ಕಾಟ್ ಕರೆಗೆ Jio ಕಂಗಾಲು!