ಮುಖೇಶ್ ಅಂಬಾನಿ ಒಡೆತನದ ಜಿಯೋ ಕಂಪನಿ ಏರ್ಟೆಲ್ ಮತ್ತು ವೋಡೋಪೋನ್ ಐಡಿಯಾ ವಿರುದ್ಧ ಟ್ರಾಯ್ (Telecom Regulator Authority of India) ಬಳಿ ದೂರು ನೀಡಿದೆ. ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಕರೆ ನೀಡಿರುವ ‘ಬಾಯ್ಕಾಟ್ ಜಿಯೋ’ ಹಿಂದೆ ಈ ಕಂಪನಿಗಳ ಪಿತೂರಿಯಿದೆ ಎಂಬುದು ಜಿಯೋ ವಾದ. ಏರ್ಟೆಲ್ ಮತ್ತು ವೋಡೋಪೋನ್ ಐಡಿಯಾ ಕಂಪನಿಗಳು ಅನೈತಿಕ ಮತ್ತು ಸ್ಪರ್ಧಾತ್ಮಕ ವಿರೋಧಿ ರೀತಿಯಲ್ಲಿ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ (MNP) ಅಭಿಯಾನವನ್ನು ನಡೆಸುತ್ತಿದೆ ಎಂದು ಜಿಯೋ ಆರೋಪಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ಟೆಲಿಕಾಂ ಕ್ಷೇತ್ರದ ಅನಭಿಕ್ಷಿಕ್ತ ದೊರೆಯಾಗಿ ಮೆರೆಯುತ್ತಿದ್ದ ಜಿಯೋ ಇಂದು ಈ ಪರಿ ಅಳುತ್ತಿರುವುದೇಕೆ? Financial express ವರದಿಯ ಪ್ರಕಾರ ಜಿಯೋ ಭಾರತದಲ್ಲಿ ಒಟ್ಟು 40 ಕೋಟಿ ಗ್ರಾಹಕರನ್ನು ಹೊಂದಿದ್ಧೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅದರಲ್ಲಿ ಸುಮಾರು 8-9 ಕೋಟಿ ಜನರು ರೀಚಾರ್ಜ್ ಮಾಡಿಸದೆ ಸಿಮ್ ಬಿಸಾಡಿದ್ದಾರೆ. ಆದರೂ 31 ಕೋಟಿ ಸಂಪರ್ಕ ಹೊಂದಿರುವ ಭಾರತದ ಅತಿ ದೊಡ್ಡ ನೆಟ್ವರ್ಕ್. ಭಾರ್ತಿ ಏರ್ಟೆಲ್ 31 ಕೋಟಿ ಗ್ರಾಹಕರೊಂದಿಗೆ 2ನೇ ಸ್ಥಾನದಲ್ಲಿದೆ ಎಂದು ಹೇಳಿಕೊಳ್ಳುತ್ತಿದೆ. ಆನಂತರ ವೊಡೋಫೋನ್ ಐಡಿಯಾ 30 ಕೋಟಿ ಗ್ರಾಹಕರನ್ನು ಹೊಂದಿದ್ದೇವೆ ಎನ್ನುತ್ತಿದೆ. ಇನ್ನು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ಗೆ ಕೇವಲ 10 ಕೋಟಿ ಗ್ರಾಹಕರಿದ್ದಾರೆ.
ಜುಲೈ ತ್ರೈಮಾಸಿಕದಲ್ಲಿ ಏರ್ಟೆಲ್ಗೆ 53 ಲಕ್ಷ ಹೊಸ 4ಜಿ ಗ್ರಾಹಕರು ಬಂದರೆ ಜಿಯೋಗೆ ಬಂದಿದ್ದು ಕೇವಲ 45 ಲಕ್ಷ. ಅಷ್ಟು ಮಾತ್ರವಲ್ಲದೆ ಈ ನಾಲ್ಕೈದು ತಿಂಗಳಲ್ಲಿ ಜಿಯೋ ಗ್ರಾಹಕರು ಕುಸಿಯುತ್ತಿರುವುದಲ್ಲದೆ ಆ ಸ್ಥಾನವನ್ನು ಏರ್ಟೆಲ್ ಪಡೆದುಕೊಳ್ಳುತ್ತಿದೆ. ದೆಹಲಿಯಲ್ಲಿ ಹೋರಾಟ ನಿರತ ರೈತರು ಬಾಯ್ಕಾಟ್ ಜಿಯೋ ಎಂಬ ಕರೆ ನೀಡಿದ ನಂತರ ಕಳೆದ ಒಂದು ವಾರದಲ್ಲಿಯೇ ಸುಮಾರು 26 ಲಕ್ಷ ಜನ ಜಿಯೋನಿಂದ ಇತರ ಕಂಪನಿಗಳಿಗೆ ಪೋರ್ಟ್ ಆಗಲು ಮುಂದಾಗಿದ್ದಾರೆ. ಇದೇ ಜಿಯೋ ಇಂದು ದೂರು ಕೊಡಲು ಪ್ರಧಾನ ಕಾರಣ.
ಆಗಸ್ಟ್ ತಿಂಗಳಿನಲ್ಲಿ ರೈತ ಹೋರಾಟ ಭುಗಿಲೆದ್ದಿತು. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ 3 ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಅಂಗೀಕರಿಸಿತು. ಈ ಕಾಯ್ದೆಗಳು ಕಾರ್ಪೊರೇಟ್ಗಳ ಹಿತಾಸಕ್ತಿ ಕಾಯುತ್ತವೆ ಎಂಬುದು ರೈತರ ಆರೋಪ. ಅದರಲ್ಲಿಯೂ ಅಂಬಾನಿ ಮತ್ತು ಅದಾನಿ ಕಂಪನಿಗಳ ಅನುಕೂಲಕ್ಕಾಗಿಯೇ ಈ ಕೃಷಿ ಕಾಯ್ದೆಗಳನ್ನು ಮೋದಿ ತಂದಿದ್ದಾರೆ ಎಂದು ಆರೋಪಿಸಿರುವು ರೈತರು ಅಂಬಾನಿ-ಅದಾನಿ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಅದರಲ್ಲಿಯೂ ಅಂಬಾನಿಯ ಜಿಯೋ ಸಿಮ್ ಬಳಸುವುದಿಲ್ಲ, ರಿಲೆಯನ್ಸ್ ಪೆಟ್ರೋಲ್ ಹಾಕಿಸುವುದಿಲ್ಲ, ಜಿಯೋ ಮಾರ್ಟ್ ವಸ್ತುಗಳನ್ನು ಖರೀದಿಸುವುದಿಲ್ಲ ಎಂದು ರೈತರು ಪ್ರತಿಜ್ಞೆ ಮಾಡಿದ್ದಾರೆ. ಇದಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಲಕ್ಷಾಂತರ ಯುವಜರನು ಜಿಯೋ ಸಿಮ್ ಅನ್ನು ಕಿತ್ತೆಸೆದಿದ್ದಾರೆ.
ಇನ್ನು ತೀವ್ರ ಆಂದೋಲನವಾದರೆ ತಾವು ಮುಳುಗುವುದು ಗ್ಯಾರಂಟಿ ಎಂಬುದನ್ನು ಅರಿತ ಜಿಯೋ ನೇರವಾಗಿ ರೈತರನ್ನು ದೂರಲಾರದೆ ಏರ್ಟೆಲ್ ವೋಡೋಪೋನ್ ಮೇಲೆ ಮುಗಿಬಿದ್ದಿದೆ. ಆದರೆ ಏರ್ಟೆಲ್ ಮತ್ತು ವೋಡಾಫೋನ್ ಪ್ರತಿಕ್ರಿಯೆ ನೀಡಿ ಜಿಯೋ ಆರೋಪವನ್ನು ತಳ್ಳಿ ಹಾಕಿವೆ. ಇದೇ ಸಂದರ್ಭದಲ್ಲಿ “2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜಾಹೀರಾತಿನೊಂದಿಗೆ 3 ತಿಂಗಳ ಉಚಿತ ಕರೆ ಮತ್ತು ಡಾಟಾ ಫ್ರೀ ಎಂದು ಹೇಳಿ ಅನಧಿಕೃತವಾಗಿ ಸ್ಪರ್ಧಿಸಿದ್ದು ಯಾರು? ನೀವೇ ತಾನೇ ಈಗ ಅನುಭವಿಸಿ” ಎಂದು ಜಿಯೋ ವಿರುದ್ಧ ಸಾಮಾಜಿಕ ಜಾಲತಾಣಿಗರು ಕಿಡಿಕಾರಿದ್ದಾರೆ.
ಇನ್ನು ಏರ್ಟೆಲ್ ಸತತ ಮೂರು ವರ್ಷದ ನಷ್ಟದ ನಂತರ ಲಾಭದತ್ತು ಮುಖಮಾಡಿದೆ. ಅದು ಇತ್ತೀಚೆಗೆ ತನ್ನ 4ಜಿ ಯಲ್ಲಿ ಉತ್ತಮ ಸೇವೆ ನೀಡುತ್ತಿದೆ ಎಂದು ಕೇಳಿಬಂದಿದೆ. ನೆಟ್ವರ್ಕ್ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದರಿಂದ ಬಹಳಷ್ಟು 4ಜಿ ಗ್ರಾಹಕರು ಏರ್ಟೆಲ್ ನತ್ತ ಬರುತ್ತಿದ್ದಾರೆ. ಇದೇ ಸಮಯದಲ್ಲಿ ಜಿಯೋದಲ್ಲಿಯೂ ಸಹ ನೆಟ್ವರ್ಕ್ ಸಮಸ್ಯೆ ಎದುರಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ರೈತರು ಬಾಯ್ಕಾಟ್ ಜಿಯೋ ಎಂದಿದ್ದಾರೆ. ಅದಕ್ಕೆ ಯುವಜನರು ಕೈಗೂಡಿಸಿದ್ದಾರೆ. ಹಾಗಾಗಿ ಜಿಯೋಗೆ ಕಂಟಕ ಎದುರಾಗಿದೆ.
ಬಿಎಸ್ಎನ್ಎಲ್ ಕಥೆಯೇನು?
2004-05ರಲ್ಲಿ ಇದೇ ಬಿಸ್ಸೆನ್ನೆಲ್ 10,000 ಕೋಟಿ ನಿವ್ವಳ ಲಾಭ ಗಳಿಸಿತ್ತು. ಆನಂತರ ಸರ್ಕಾರಗಳ ಮುನ್ನೋಟದ ಕೊರತೆ, ಮೂಲಭೂತ ಸೌಲಭ್ಯಗಳ ಕಡೆಗಣನೆ, ಟೆಂಡರ್ ವಿಳಂಬ, ಹಸ್ತಕ್ಷೇಪ ಭ್ರಷ್ಟಾಚಾರದಿಂದಾಗಿ ಬಿಎಸ್ಎನ್ಎಲ್ ಕುಸಿಯುತ್ತಾ ಸಾಗಿದರೆ ಖಾಸಗಿ ಕಂಪನಿಗಳು ಬೆಳೆಯುತ್ತಾ ಹೋದವು.
ಒಂದು ರೀತಿಯಲ್ಲಿ ಜಿಯೋ ಕೊಬ್ಬಿಸುವುದಕ್ಕಾಗಿಯೇ ಬಿಎಸ್ಎನ್ಎಲ್ ಮುಳುಗಿಸಲಾಯಿತು ಎಂಬ ಆರೋಪ ಸರ್ಕಾರದ ಮೇಲಿದೆ.
70 ವರ್ಷಗಳ ಭಾರತ ರಾಷ್ಟ್ರ ನಿರ್ಮಾಣದ ಇತಿಹಾಸದಲ್ಲಿ BSNL ಗೆ ತನ್ನದೇ ಆದ ಮಹತ್ವದ ಪಾತ್ರವಿದೆ. ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದ್ದು ಮಾತ್ರವಲ್ಲದೆ, ದೇಶದ ಒಟ್ಟಾರೆ ಆರ್ಥಿಕ ವಾಣಿಜ್ಯ ವಹಿವಾಟುಗಳಿಗೆ ಬಿಸ್ಸೆನ್ನೆಲ್ ನೀಡಿದ ಕೊಡುಗೆ ಅಪಾರವಾದದ್ದು. ಮೂಲೆಮೂಲೆಯ ಹಳ್ಳಿಗಾಡುಗಳನ್ನೂ ಒಳಗೊಂಡು ಇಡೀ ದೇಶಕ್ಕೆ ಸಂಪರ್ಕ ಸೇತುವಾಗಿ ದುಡಿದ ಸಂಸ್ಥೆಯ ಸೇವೆಯನ್ನು ರೂಪಾಯಿಗಳಲ್ಲಿ ಲೆಕ್ಕ ಹಾಕಲಾಗದು. ಇಂಥಾ ಸಂಸ್ಥೆಯನ್ನು ಮಣ್ಣುಗೂಡಿಸಲು ಇದೀಗ ರಂಗ ಸಜ್ಜಾಗಿದೆ.
BSNL ಕುಸಿತ ದಿಢೀರ್ ಸಂಭವಿಸಿದ್ದಲ್ಲ. ಬಹಳ ವ್ಯವಸ್ಥಿತವಾಗಿ ಹಂತಹಂತವಾಗಿ ನಡೆಸಿದ ಷಡ್ಯಂತ್ರ. ಖಾಸಗಿ ಕಂಪನಿಗಳು 4ಜಿ, 5ಜಿ ಸೇವೆ ಒದಗಿಸುತ್ತಿರುವ ಸಂದರ್ಭದಲ್ಲಿ ಬಿಎಸ್ಸೆನ್ನೆಲ್ಗೆ ಹಲವು ವರ್ಷಗಳ ಕಾಲ 4ಜಿ ಸ್ಪೆಕ್ಟ್ರಮ್ ಮಂಜೂರಾತಿಯೇ ಸಿಗಲಿಲ್ಲವೆಂದರೆ ನಿಮಗೆ ಆಶ್ಚರ್ಯ ಎನಿಸಬಹುದು. ಕುಸಿಯುತ್ತಿರುವ ಸಂಸ್ಥೆಯನ್ನು ಉಳಿಸಿಕೊಳ್ಳಲು ಬಿಸ್ಸೆನ್ನೆಲ್ ನೌಕರರು ಹಲವು ಬಾರಿ ಮುಷ್ಕರ ಹೂಡಿದ್ದಾರೆ. ಮುಷ್ಕರ ಎಂದರೆ ಸಂಬಳ ಭತ್ಯೆ ಜಾಸ್ತಿ ಮಾಡಿ ಎಂದು ಕೇಳುವುದು ಮಾಮೂಲಿ. ಆದರೆ ಬಿಸ್ಸೆನ್ನೆಲ್ ನೌಕರರ ಪ್ರಧಾನ ಬೇಡಿಕೆ ‘4ಜಿ ಸ್ಪೆಕ್ಟ್ರಮ್ ಹಂಚಿಕೆ ಮಾಡಿ – ಬಿಸ್ಸೆನ್ನೆಲ್ ಉಳಿಸಿ’ ಎಂಬುದಾಗಿತ್ತು. ಮುಷ್ಕರ ತೀವ್ರಗೊಂಡ ಸಂದರ್ಭದಲ್ಲಿ ಕೇಂದ್ರದ ಮಂತ್ರಿಗಳು ಹಾಜರಾಗಿ 4ಜಿ ಕೊಡುವುದಾಗಿ ಭರವಸೆ ನೀಡಿದ್ದು, ನಂತರದಲ್ಲಿ ಬೇಡಿಕೆಯನ್ನು ಕಸದಬುಟ್ಟಿಗೆ ಹಾಕಿದ್ದು ಹಳೆ ಸಂಗತಿ.
ಇದೀಗ ರೈತರು ಮತ್ತು ಯುವಜನರು ಬಿಎಸ್ಎನ್ಎಲ್ ಉಳಿಸಿ, 4ಜಿ ಸೇವೆ ನೀಡಿ ಎಂದು ದನಿಯೆತ್ತಿದ್ದಾರೆ. ಜಿಯೋ ಬಳಸುವುದಿಲ್ಲ ಬಿಎಸ್ಎನ್ಎಲ್ ಬೇಕು ಎನ್ನುತ್ತಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸುವುದೇ ಕಾದು ನೋಡಬೇಕಿದೆ.
ಇದನ್ನೂ ಓದಿ: ಅಂಬಾನಿಯ ಜಿಯೋ ಸಿಮ್ ಬಳಸುವುದಿಲ್ಲ, ರಿಲೆಯನ್ಸ್ ಪೆಟ್ರೋಲ್ ಹಾಕಿಸುವುದಿಲ್ಲ, ಮಾಲ್ಗೆ ಹೋಗುವುದಿಲ್ಲ: ರೈತರ ಪ್ರತಿಜ್ಞೆ