ಸರ್ಕಾರ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಮ್ಮ ಸಮಸ್ಯಗೆ ಸ್ಪಂದಿಸದೇ ಇರುವುದರಿಂದ ಟೊಯೋಟಾ ಕಾರ್ಮಿಕರು ನಾಳೆ ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಜಿಲ್ಲೆಯ ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿಯ ದುರ್ವರ್ತನೆ ವಿರುದ್ದ ಅಲ್ಲಿನ ಕಾರ್ಮಿಕರು ನಡೆಸುತ್ತಿರುವ ಹೋರಾಟ ಇಂದಿಗೆ 39 ನೇ ದಿನಕ್ಕೆ ಕಾಲಿಟ್ಟಿದೆ. ನಾಳಿನ ಮುತ್ತಿಗೆ ಕಾರ್ಯಕ್ರಮವನ್ನು ಕಾರ್ಮಿಕ, ರೈತ, ದಲಿತ, ಹಾಗೂ ಕನ್ನಡಪರ ಸಂಘಟನೆಗಳು ಟೊಯೊಟಾ ಕಾರ್ಮಿಕರನ್ನು ಬೆಂಬಲಿಸಿದ್ದು ಪ್ರತಿಭಟನೆಯ ಭಾಗವಾಗಲಿದ್ದಾರೆ ಎಂದು ಕಾರ್ಮಿಕ ಮುಖಂಡ ಗಂಗಾಧರ್ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ರೈತರ ಮೇಲೆ ಅಶ್ರುವಾಯು ದಾಳಿ ಮಾಡಿದ ಪೊಲೀಸರು; ಇಲ್ಲಿದೆ ವೀಡಿಯೋ!
ನಾನುಗೌರಿ.ಕಾಂನೊಂದಿಗೆ ಮಾತನಾಡಿದ ಟೊಯೋಟಾ ಕಾರ್ಮಿಕ ಸಂಘಟನೆಯ ಮುಖಂಡ ಗಂಗಾಧರ್ ಅವರು, “ನಾಳೆ ಬೆಳಿಗ್ಗೆ 10:30 ರಾಮನಗರ ಜಿಲ್ಲಾಧಿಕಾರಿ ಕಚೇರಿಯನ್ನು ಮುತ್ತಿಗೆ ಹಾಕಲಿದ್ದೇವೆ. ನಮ್ಮ ಹೋರಾಟವನ್ನು ಇದುವರೆಗೂ ಬೆಂಬಲಿಸಿದ ಕಾರ್ಮಿಕ ಸಂಘಟನೆಗಳ ಒಕ್ಕೂಟ, ದಲಿತ, ರೈತ, ಕನ್ನಡ ಪರ ಸಂಘಟನೆಗಳು ನಮ್ಮೊಂದಿಗೆ ಸೇರಲಿದ್ದಾರೆ. ಇಂದು ಕೂಡಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದಿದ್ದು ಅದೇನು ಫಲಕಾರಿಯಾಗುವ ಬಗ್ಗೆ ವಿಶ್ವಾಸವಿಲ್ಲ” ಎಂದರು.
ಡಿಸೆಂಬರ್ 10 ರಂದು ಕಂಪೆನಿಯ ಗೇಟ್ ಮುಂಭಾಗ ಪ್ರತಿಭಟನಾ ನಿರತ ಕಾರ್ಮಿಕರು ಹಾಕಿದ್ದ ಪೆಂಡಾಲನ್ನು ಪೊಲೀಸರು ತೆರವುಗೊಳಿಸಿದ್ದರು. ಕಾರ್ಮಿಕ ಸಂಘಟನೆಯು ಕಂಪೆನಿಯೂ ತಮ್ಮ ಪೆಂಡಾಲ್ ಅನ್ನು ಕುತಂತ್ರದಿಂದ ತೆರವುಗೊಳಿಸಿದೆ ಎಂದು ಆರೋಪಿಸಿ ಕಾರ್ಮಿಕರು ವಿನೂತನ “ಛತ್ರಿ ಚಳುವಳಿ” ಆರಂಭಿಸಿದ್ದರು.
ಇದನ್ನೂ ಓದಿ: ಟೊಯೊಟಾ ಕಿರ್ಲೋಸ್ಕರ್ ದರ್ಪ ಮುಂದುವರಿಕೆ: ’ಛತ್ರಿ ಚಳುವಳಿ’ ಆರಂಭಿಸಿದ ಕಾರ್ಮಿಕರು!
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಆಡಳಿತ ಮಂಡಳಿ ತಮ್ಮ ಮೇಲೆ ನಡೆಸಿದ ದೌರ್ಜನ್ಯವನ್ನು ಪ್ರಶ್ನಿಸಿದ ಕಾರಣಕ್ಕಾಗಿ, ಕಂಪೆನಿಯು ಕಾರ್ಮಿಕರು ಮುಷ್ಕರ ಹೂಡಿದ್ದಾರೆ ಎಂದು ಆರೋಪಿಸಿ ಲಾಕೌಟ್ ಘೋಷಿಸಿತ್ತು. ಕಂಪೆನಿಯು ಇದುವರೆಗೂ ಒಟ್ಟು 60 ಕಾರ್ಮಿಕರನ್ನು ವಜಾ ಮಾಡಿದೆ.
ಈ ನಡುವೆ ರಾಜ್ಯ ಸರ್ಕಾರವು ಕೈಗಾರಿಕಾ ವಿವಾದ ಕಾಯ್ದೆ 1947 ಕಲಂ 10(3) ರ ಅಧಿಕಾರ ಬಳಿಸಿ ಕಾರ್ಮಿಕರು ಮುಷ್ಕರ ನಿಲ್ಲಿಸಬೇಕು ಮತ್ತು ಕಂಪೆನಿಯು ಲಾಕ್ಔಟ್ ತೆರವುಗೊಳಿಸಬೇಕೆಂದು ನವೆಂಬರ್ 18 ರಂದು ಆದೇಶ ಹೊರಡಿಸಿತ್ತು. ಆದರೆ ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ತೆರಳುತ್ತೇವೆ ಎಂದು ಹೊರಟರೂ ಕಂಪೆನಿಯು ಅವರನ್ನು ಒಳಕ್ಕೆ ಬಿಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿದ್ದಾರೆ.
ಇದನ್ನೂ ಓದಿ: ಸಂಬಳ ಕೊಡದ ಆರೋಪ: ಐಫೋನ್ ತಯಾರಿಕ ನರಸಾಪುರದ ‘ವಿಸ್ಟ್ರಾನ್’ ಕಂಪನಿಗೆ ಬೆಂಕಿ ಹಚ್ಚಿದ ಕಾರ್ಮಿಕರು