Homeಕರ್ನಾಟಕ'ಹೊಸ ಧರ್ಮಗಳ ಉದಯ' ಪಾಠ ಮಾಡಬೇಡಿ: ಶಾಲೆಗಳಿಗೆ ಆದೇಶ ನೀಡಿದ ಶಿಕ್ಷಣ ಇಲಾಖೆ!

‘ಹೊಸ ಧರ್ಮಗಳ ಉದಯ’ ಪಾಠ ಮಾಡಬೇಡಿ: ಶಾಲೆಗಳಿಗೆ ಆದೇಶ ನೀಡಿದ ಶಿಕ್ಷಣ ಇಲಾಖೆ!

ತಮ್ಮ ಧರ್ಮಕ್ಕೆ ಧಕ್ಕೆಯಾಗುತ್ತದೆ ಎಂದ ಮಾತ್ರಕ್ಕೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಬಲಿ ಮತ್ತು ಮಾಂಸಾಹಾರ ಸೇವನೆಯ ಕುರಿತು ನಮಗೆ ಲಭ್ಯವಿರುವ, ಸಂಸ್ಕೃತ ಭಾಷೆಯಲ್ಲಿಯೇ ಇರುವ ವೈದಿಕ ಸಾಹಿತ್ಯದಲ್ಲಿ ಮಾಹಿತಿ ದೊರೆಯುತ್ತದೆ

- Advertisement -
- Advertisement -

2020-21 ನೇ ಸಾಲಿನ 6 ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ 7 ನೇ ಪಾಠವನ್ನು (ಹೊಸ ಧರ್ಮಗಳ ಉದಯ) ಬೋಧಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆ, “6 ನೇ ತರಗತಿ ಸಮಾಜ ವಿಜ್ಞಾನ- ಭಾಗ 1 ರಲ್ಲಿನ ಪಾಠ-7 ‘ಹೊಸ ಧರ್ಮಗಳ ಉದಯ’ ಈ ಪಾಠದಲ್ಲಿನ ಪುಟ ಸಂಖ್ಯೆ: 82 ಹಾಗು 83ರಲ್ಲಿನ ವಿಷಯಾಂಶಗಳನ್ನು, 2020-21ನೆ ಶೈಕ್ಷಣಿಕ ಸಾಲಿಗೆ ಬೋಧನೆ-ಕಲಿಕೆ/ ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಸಂಬಂಧಿಸಿದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಸೂಕ್ತ ಸೂಚನೆ ನೀಡಲು ತಿಳಿಸಿದೆ. ಇದರ ಕುರಿತು ಕೈಗೊಂಡ ಕ್ರಮಗಳನ್ನು ಫೆ. 28ರೊಳಗೆ ವರದಿ ಮಾಡಲು ತಿಳಿಸಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಿಕ್ಷಣ ಇಲಾಖೆಯ ಆದೇಶ

ಈ ಆದೇಶಕ್ಕೆ ಸ್ಪಷ್ಟ ಕಾರಣವನ್ನು ನೀಡಿಲ್ಲ. ಆದರೆ ಈ ಹಿಂದೆ ಈ ಪಾಠಗಳು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗಾಗಿ ಆರನೇ ತರಗತಿ ಸಮಾಜವಿಜ್ಞಾನ ಪಠ್ಯಪುಸ್ತಕದ ಭಾಗವಾಗಿರುವ ವೇದ ಕಾಲದ ಸಂಸ್ಕೃತಿ ಕುರಿತು ಪಾಠ ಮಾಡದಂತೆ ಶಿಕ್ಷಕರಿಗೆ ಆದೇಶ ಹೊರಡಿಸುವುದಾಗಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೇಳಿದ್ದರು.

“ಈ ಪಠ್ಯಪುಸ್ತಕವು ಹಳೆಯದಾಗಿದ್ದು, ನಾವು ಈ ವರ್ಷ ಇದನ್ನು ಪರಿಷ್ಕರಿಸಿಲ್ಲ. ಈ ಪಾಠವನ್ನು ಮಾಡದಿರುವಂತೆ ಶಿಕ್ಷಕರಿಗೆ ಆದೇಶ ನೀಡುತ್ತೇನೆ. ಅದಾಗ್ಯೂ ಈಗಾಗಲೇ ಈ ಪುಸ್ತಕ ಮುದ್ರಣಗೊಂಡು ಎಲ್ಲಾ ಮಕ್ಕಳಿಗೂ ತಲುಪಿರುವುದರಿಂದ ಈ ವರ್ಷ ಈ ಅಂಶವನ್ನು ಪಠ್ಯದಿಂದ ತೆಗೆಯಲು ಸಾಧ್ಯವಿಲ್ಲ ಎಂದು ವಿಷಾದಿಸುತ್ತೇನೆ” ಎಂದು ಶಿಕ್ಷಣ ಸಚಿವರು ಹೇಳಿದ್ದರು.

ಇದನ್ನೂ ಓದಿ: ಬ್ರಾಹ್ಮಣ ವಿರೋಧಿ ಪಠ್ಯಪುಸ್ತಕ ವಿವಾದ: ಸಿಎಂ ವಿರುದ್ದ ಆಕ್ರೋಶ

ಪಾಠದಲ್ಲಿ ಏನಿದೆ?

“ಉತ್ತರ ವೇದಗಳ ಕಾಲದಲ್ಲಿ ಆಚರಿಸುತ್ತಿದ್ದ ಯಜ್ಞ, ಯಾಗಗಳಲ್ಲಿ ಆಹಾರ ಧಾನ್ಯ, ಹಾಲು, ತುಪ್ಪವನ್ನು ಹವಿಸ್ಸು ಎಂದು ದಹಿಸುತ್ತಿದ್ದುದರಿಂದ ಆಹಾರದ ಅಭಾವ ಸೃಷ್ಟಿಯಾಯಿತು. ವೈದಿಕೆ ಆಚರಣೆಗಳು ದುಬಾರಿಯಾಗಿದ್ದು, ಸಂಸ್ಕೃತ ಮಂತ್ರದ ಮೂಲಕ ನಡೆಸುತ್ತಿದ್ದುದರಿಂದ ಜನಸಾಮಾನ್ಯರಿಗೆ ಲಭ್ಯವಾಗುತ್ತಿರಲಿಲ್ಲ ಹಾಗೂ ಅರ್ಥ ಆಗುತ್ತಿರಲಿಲ್ಲ. ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆಯಾಯಿತು. ಈ ಎಲ್ಲಾ ಕಾರಣಗಳು ಹೊಸ ಧರ್ಮಗಳ ಉದಯಕ್ಕೆ ಪುಷ್ಠಿ ನೀಡಿದವು” ಎಂದು ಪಾಠದಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಯೋಗವು ಇದಕ್ಕೆ ವಿರೋಧ ವ್ಯಕ್ತಪಡಿಸಿ, “ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ವಿಷಯವನ್ನು ಸೇರಿಸಿರುವುದು ಆಘಾತಕಾರಿ ವಿಷಯ. ಅಲ್ಲದೆ, ಇದು ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ” ಎಂದು ತನ್ನ ಮನವಿಯಲ್ಲಿ ದೂರಿತ್ತು.

ಈ ಕುರಿತು ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ನಾನುಗೌರಿ.ಕಾಂ ಪ್ರಾಧ್ಯಾಪಕರೊಬ್ಬರನ್ನು (ಹೆಸರು ಹೇಳಲಿಚ್ಚಿಸದ) ಮಾತನಾಡಿಸಿತು. “ಯಜ್ಞ,ಯಾಗ, ವೇದಗಳ ಕುರಿತು ನೀಡಿರುವ ಮಾಹಿತಿಯಲ್ಲಿ ತಪ್ಪು ಎಲ್ಲಿಯೂ ಇಲ್ಲ. ವೈದಿಕ ಸಾಹಿತ್ಯಗಳಾದ ವೇದ, ಉಪನಿಷತ್ತುಗಳು, ಅರಣ್ಯಕಗಳು, ಬ್ರಾಹ್ಮಣಕಗಳು, ಪುರಾಣಗಳು, ಶತಪಥ ಬ್ರಾಹ್ಮಣ ಮುಂತಾದವುಗಳಲ್ಲಿ ಈ ಯಜ್ಞಗಳ ಕುರಿತು ಉಲ್ಲೇಖವಿದೆ” ಎಂದು ಹೇಳಿದರು.

“ಯಜ್ಞಗಳಲ್ಲಿ ಬಲಿ ಕೊಡುವುದು, ಧಾನ್ಯಗಳು, ಹಾಲು, ತುಪ್ಪ, ವಸ್ತ್ರಗಳನ್ನೂ ಅಗ್ನಿಗೆ ಅರ್ಪಿಸುವುದು ವೇದೋತ್ತರ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಆದರೆ ಇದರಿಂದ ಆಹಾರ ಬಿಕ್ಕಟ್ಟು ಹೆಚ್ಚಾಯಿತು ಎನ್ನುವುದು ಸ್ವಲ್ಪ ಅತಿರೇಕವೆನಿಸಿದರೂ ಆಶ್ಚರ್ಯವಿಲ್ಲ. ಏಕೆಂದರೆ, ಆಗ ಯಜ್ಞಗಳನ್ನು ಮಾಡಿಸುತ್ತಿದ್ದವರು ರಾಜರು (ಕ್ಷತ್ರಿಯರು). ಕೆಲವೊಮ್ಮೆ ತಿಂಗಳುಗಟ್ಟಲೆ ಯಾಗಗಳು ನಡೆಯುತ್ತಿದ್ದವು. ಅಷ್ಟೂ ದಿನಗಳವರೆಗೆ ಯಜ್ಞಕುಂಡದಲ್ಲಿ ಬೆಂಕಿ ಆರದಿರಲು ಧವಸ, ಧಾನ್ಯ, ಹಾಲು, ತುಪ್ಪ, ಬಟ್ಟೆಗಳನ್ನು ಹಾಕುತ್ತಲೇ ಇರಬೇಕಿತ್ತು. ಹಾಗಾಗಿ ಆಹಾರದ ತೊಂದರೆಯೂ ಆಗಿರಬುಹುದು” ಎಂದು ಅವರು ಅಭಿಪ್ರಾಯಪಟ್ಟರು.

‘ತಮ್ಮ ಧರ್ಮಕ್ಕೆ ಧಕ್ಕೆಯಾಗುತ್ತದೆ ಎಂದ ಮಾತ್ರಕ್ಕೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಬಲಿ ಮತ್ತು ಮಾಂಸಾಹಾರ ಸೇವನೆಯ ಕುರಿತು ನಮಗೆ ಲಭ್ಯವಿರುವ, ಸಂಸ್ಕೃತ ಭಾಷೆಯಲ್ಲಿಯೇ ಇರುವ ವೈದಿಕ ಸಾಹಿತ್ಯದಲ್ಲಿ ಮಾಹಿತಿ ದೊರೆಯುತ್ತದೆ. ಹಾಗಾಗಿ ಈಗ ಈ ಪಾಠವನ್ನು ಕೈಬಿಡುತ್ತಿರುವ ಉದ್ದೇಶ ಸ್ಪಷ್ಟವಾಗಿದೆ. ಇದರಿಂದ ಮಕ್ಕಳಿಗೆ ನೀಡಬೇಕಾಗಿರುವ ವೈಚಾರಿಕ ಪ್ರಜ್ಞೆಯನ್ನು ಮೊಟಕುಗೊಳಿಸಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 6ನೇ ತರಗತಿ ‘ವೇದ ಕಾಲದ ಸಂಸ್ಕೃತಿ’ ಪಾಠ ಮಾಡದಂತೆ ಶಿಕ್ಷಣ ಸಚಿವರ ಆದೇಶ: ಅಂಥದ್ದೇನಿದೆ ಪಾಠದಲ್ಲಿ?

ಭಾರತೀಯ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರು ಮತ್ತು ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಆರ್.ಇಂದಿರಾರವರು ಮಾತನಾಡಿ ‘ಯಾವುದೋ ಒಂದು ಒಳ್ಳೆಯ ಅಥವಾ ಕೆಟ್ಟ ಆಚರಣೆ/ವಿಷಯದ ಬಗ್ಗೆ ಸಂಕ್ಷಿಪ್ತ ವಿವರವನ್ನು ಮಾತ್ರ ನೀಡಲಾಗುತ್ತಿದೆ. ಹಾಗಾಗಿ ಇದರಲ್ಲಿ ಸರಿ-ತಪ್ಪುಗಳನ್ನು ಹುಡುಕುವ ಪ್ರಮೇಯವೇ ಇಲ್ಲ. ಯಾವುದೇ ವಿಷಯದ ಬಗ್ಗೆ ಸಮಗ್ರ ಕಲಿಕೆ ಆಗಬೇಕು. ಅದರಲ್ಲೂ ಸಮಾಜವನ್ನು ಒಟ್ಟುಗೂಡಿಸುವ, ಸಕಾರಾತ್ಮಕ ಮನೋಭಾವ ಬೆಳೆಸುವ ವಿಷಗಳ ಕಲಿಕೆ ಆಗಬೇಕು’ ಎಂದಿದ್ದಾರೆ.

‘ಅದಾಗ್ಯೂ, ಯಜ್ಞ-ಯಾಗಗಳಿಗೆ ಧವಸ, ಧಾನ್ಯ, ಹಾಲು, ತುಪ್ಪ ಇತ್ಯಾದಿಗಳನ್ನು ಹಾಕಿ ವಿನಾಕಾರಣ ವ್ಯಯಿಸುವುದು ನಿಜಕ್ಕೂ ಖಂಡನೀಯ. ಇಂತಹ ಅಪವ್ಯಯ ವೇದಗಳ ಕಾಲದಲ್ಲಿ ಮಾತ್ರವಲ್ಲ, ಈಗಲೂ ನಡೆಯುತ್ತಿದೆ. ಎಷ್ಟೋ ಜನ ಹಸಿವಿನಿಂದ ಸಾಯುತ್ತಿರುವಾಗ ಧಾನ್ಯಗಳನ್ನು ಬೆಂಕಿಗೆ ಹಾಕುವುದು, ಎಷ್ಟೋ ಜನರಿಗೆ ಮಾನ ಮುಚ್ಚಿಕೊಳ್ಳಲೂ ತುಂಡುಬಟ್ಟೆಯಿಲ್ಲದಿರುವಾಗ ಒಳ್ಳೆಯ ಬಟ್ಟೆಗಳನ್ನು ಬೆಂಕಿಗೆ ಹಾಕುವುದು ನಿಜಕ್ಕೂ ಖಂಡನೀಯ. ಇವುಗಳ ಕುರಿತು ವೈಚಾರಿಕ ಜ್ಞಾನವನ್ನು ಶಿಕ್ಷಕರು ಶಾಲೆಯಲ್ಲಿ ನೀಡಬೇಕು. ಪಠ್ಯಪುಸ್ತಕದಲ್ಲಿ ಇದ್ದರೆ ಮಾತ್ರ ಹೇಳಬೇಕು ಎನ್ನುವುದಕ್ಕಿಂತ ಪ್ರತಿ ತರಗತಿಯಲ್ಲಿಯೂ ಇಂತಹ ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯದು’ ಎಂದರು.

ಹಂಪಿ ವಿಶ್ವವಿದ್ಯಾನಿಲಯ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ವಿಜಯ್ ಅವರನ್ನು ನಾನುಗೌರಿ.ಕಾಂ ಮಾತನಾಡಿಸಿದಾಗ, ‘ಯಾವುದೇ ಚುನಾಯಿತ ಸರ್ಕಾರಕ್ಕೆ ಪಠ್ಯ ಬದಲಾವಣೆ ಮಾಡುವ ಅಧಿಕಾರವಿದೆ. ಆದರೆ ಅದು ತಜ್ಞರ ಸಮಿತಿಯನ್ನೊಳಗೊಂಡಂತೆ ಒಂದು ಪ್ರಕ್ರಿಯೆಯ ಮೂಲಕ ನಡೆಯಬೇಕೇ ಹೊರತು ಏಕಾಏಕಿ ಯಾವುದೇ ವಿಷಯವನ್ನು ತೆಗೆಯಲೂ ಸಾಧ್ಯವಿಲ್ಲ, ಸೇರಿಸಲೂ ಸಾಧ್ಯವಿಲ್ಲ’ ಎಂದು ಹೇಳಿದರು.

‘ಪ್ರತಿಯೊಬ್ಬ ಇತಿಹಾಸಕಾರರೂ, ತಮಗೆ ಸಾಕ್ಷ್ಯಗಳು ದೊರೆತಿರುವ ಅಥವಾ ತಾವು ಅಧ್ಯಯನ ಮಾಡಿರುವ ಯಾವುದೇ ವಿಷಯದ ಬಗ್ಗೆ, ತಮ್ಮದೇ ಆದ ವ್ಯಾಖ್ಯಾನವನ್ನು ಹೊಂದಿರುತ್ತಾರೆ. ಹಾಗಾಗಿ ಯಾವುದು ಸರಿ-ತಪ್ಪು ಎಂದು ಹೇಳಲು ಸಾದ್ಯವಿಲ್ಲ. ಹಾಗಾಗಿ ಏನೇ ಮಾಡುವುದಿದ್ದರೂ ನಿರ್ದಿಷ್ಟ ಪ್ರಕ್ರಿಯೆಯ ಮೂಲಕವೇ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ಇದನ್ನೂ ಓದಿ: ತೆರೆಯದ ಸರ್ಕಾರಿ ವಸತಿ ಶಾಲೆಗಳು: 30,000 ಕ್ಕೂ ಹೆಚ್ಚು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಸರ್ಕಾರದ ಈ ನಿರ್ಧಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.


ಇದನ್ನೂ ಓದಿ: ಭಾರತದ ಸಂಸ್ಕೃತಿಯೆಂದರೆ ಕೇವಲ ವೈದಿಕ ಸಂಸ್ಕೃತಿಯೇ?: ಭಾರತೀಯ ಸಂಸ್ಕೃತಿ ಅಧ್ಯಯನದ ಹಿಂದಿನ ಹುನ್ನಾರಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸತ್ಯವನ್ನು ಮುಚ್ಚಿಟ್ಟು, ಇತಿಹಾಸವನ್ನು ತಿರುಚಲು ಯತ್ನಿಸುವುದು, ಮನುವಾದಿಗಳಿಗೆ ಅಂಟಿರುವ ಪ್ರಮುಖ ರೋಗ. ಪ್ರಜ್ಞಾವಂತರು ಈ ಸಂದರ್ಭದಲ್ಲಿ ದನಿ ಎತ್ತದಿದ್ದರೆ, ನಮ್ಮ ಮುಂದಿನ ಪೀಳಿಗೆ ಇವರು ತಿರುಚಿದ ಇತಿಹಾಸವನ್ನೇ ಓದಬೇಕಾಗುತ್ತದೆ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...