ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಫ್ಎಸ್ಟಿ ಅಧಿಕಾರಿಗಳು 4.8 ಕೋಟಿ ನಗದು ವಶಪಡಿಸಿಕೊಂಡಿದ್ದು, ಈ ಕುರಿತು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಡಾ.ಕೆ. ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಬಗ್ಗೆ ಚುನಾವಣಾ ಆಯೋಗ ಎಕ್ಸ್ನ ಅಧಿಕೃತ ಖಾತೆಯಲ್ಲಿ ಮಾಹಿತಿಯನ್ನು ನೀಡಿದೆ. ಚಿಕ್ಕಬಳ್ಳಾಪುರದ ಎಫ್ಎಸ್ಟಿ (ಫ್ಲೈಯಿಂಗ್ ಸರ್ವೆಲೆನ್ಸ್ ತಂಡ) 4.8 ಕೋಟಿ ಮೌಲ್ಯದ ನಗದನ್ನು ವಶಪಡಿಸಿಕೊಂಡಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಎಸ್ಎಸ್ಟಿ ತಂಡವು ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ವಿರುದ್ಧ 25.04.2024ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ ಎಂದು ಮಾಹಿತಿಯಲ್ಲಿ ತಿಳಿಸಿದೆ.
ನಿನ್ನೆ ಸುಧಾಕರ್ ಆಪ್ತ ಗೋವಿಂದಪ್ಪ ಎಂಬವರ ಮನೆಯಲ್ಲಿ ಭಾರಿ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದ್ದು, ಗೋವಿಂದಪ್ಪ ಅವರನ್ನು ವಿಚಾರಣೆಗೆ ಗುರಿಪಡಿಸಿದ ಬಳಿಕ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ವಿರುದ್ಧ ಮತದಾರರಿಗೆ ಆಮಿಷ ಹಾಗೂ ಅನಗತ್ಯ ಪ್ರಭಾವದ ಆರೋಪದ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ. ಗೋವಿಂದಪ್ಪ ವಿಚಾರಣೆಯ ವೇಳೆ ನೀಡಿದ ಮಾಹಿತಿ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯ ಬೆನ್ನಲ್ಲೇ ಆದಾಯ ತೆರಿಗೆ ಅಧಿಕಾರಿಗಳು ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
The FST of Chikkaballapura seized cash worth 4.8 Crores. An FIR also has been lodged by the SST team of Chikkaballapura Constituency against K Sudhakar, BJP Candidate on 25.04.2024 at Madanayakanahally Police Station.
— Chief Electoral Officer, Karnataka (@ceo_karnataka) April 26, 2024