ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು, ಮೋದಿಗೆ ಅಲ್ಲ ಎನ್ನುವುದು ಬಯಲಾಗಿದೆ.
ವಾಸ್ತವವಾಗಿ, ನೋಟೀಸ್ನಲ್ಲಿ ಪ್ರಧಾನಿಯ ಹೆಸರನ್ನು ಉಲ್ಲೇಖಿಸಲಾಗಿಲ್ಲ. ನೋಟಿಸ್ಗೆ ಮೋದಿಯ ರಾಜಸ್ಥಾನದ ಬನ್ಸ್ವಾರಾದ ದುರುದ್ದೇಶಪೂರಿತ ಚುನಾವಣಾ ಭಾಷಣ ವಿರುದ್ಧದ ಕಾಂಗ್ರೆಸ್ನ ದೂರುಗಳು, ಜೊತೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ನೀಡಿರುವ ದೂರುಗಳ ಪ್ರತಿಯನ್ನು ಲಗತ್ತಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಇದೇ ರೀತಿಯ ನೋಟಿಸ್ ನೀಡಲಾಗಿದೆ.
ಪ್ರಧಾನ ಮಂತ್ರಿಯೊಬ್ಬರ ವಿರುದ್ಧದ ದೂರನ್ನು ಸಮಿತಿಯು ಪರಿಗಣನೆಗೆ ತೆಗೆದುಕೊಂಡಿರುವುದು ಇತ್ತೀಚಿನ ಇತಿಹಾಸದಲ್ಲಿ ಇದೇ ಮೊದಲು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ, ವಿರೋಧ ಪಕ್ಷಗಳು ನೀಡಿದ ದೂರಿಗೆ ಸಂಬಂಧಿಸಿ ಚುನಾವಣಾ ಆಯೋಗ ಮೋದಿಗೆ ಕ್ಲೀನ್ ಚಿಟ್ ನೀಡಿತ್ತು. ಅಂದಿನ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಅವರು ಪ್ರಧಾನಿ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಅಚ್ಚರಿಯೆಂದರೆ ಚುನಾವಣಾ ಆಯೋಗವು ಗುರುವಾರದ ನೋಟಿಸ್ಗಳನ್ನು ನೇರವಾಗಿ ಸಂಬಂಧಪಟ್ಟ ವ್ಯಕ್ತಿಗಳಿಗೆ ನೀಡುವ ಬದಲು ಆಯಾ ಪಕ್ಷದ ಅಧ್ಯಕ್ಷರಿಗೆ ನೀಡಿದೆ. ಈ ಚುನಾವಣಾ ಆರಂಭದಿಂದಲೂ, ಆಯೋಗವು, ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ, ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ದಿಲೀಪ್ ಘೋಷ್, ಆಮ್ ಆದ್ಮಿ ಪಕ್ಷದ ನಾಯಕ ಅತಿಶಿ, ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಆದರೆ ಈ ಎಲ್ಲಾ ಪ್ರಕರಣಗಳಲ್ಲಿ ನೊಟೀಸ್ನ್ನು ಆಪಾದಿತ ವ್ಯಕ್ತಿಗಳಿಗೆ ನೀಡಿತ್ತು.
ಚುನಾವಣಾ ಆಯೋಗವು ಬಿಜೆಪಿ ಅಧ್ಯಕ್ಷರಿಗೆ ನೀಡಿದ ನೋಟಿಸ್ನಲ್ಲಿ, ರಾಜಕೀಯ ಭಾಷಣದ ವೇಳೆ ಗುಣಮಟ್ಟ ಕಾಪಾಡಲು ಮತ್ತು ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಅನುಸರಿಸಲು ಪಕ್ಷದ ಎಲ್ಲಾ ಸ್ಟಾರ್ ಪ್ರಚಾರಕರಿಗೆ ಸೂಚಿಸಲು ಹೇಳಿದೆ. ವೈಯಕ್ತಿಕ ಸ್ಟಾರ್ ಪ್ರಚಾರಕರು ಮಾಡಿದ ಭಾಷಣಗಳಿಗೆ ಅವರೇ ಜವಾಬ್ದಾರರಾಗಿ ಉಳಿಯುತ್ತಾರೆ, ಉನ್ನತ ಹುದ್ದೆಯಲ್ಲಿರುವವರು ಮಾಡಿದ ಪ್ರಚಾರ ಭಾಷಣಗಳು ಹೆಚ್ಚು ಗಂಭೀರ ಪರಿಣಾಮಗಳನ್ನು ಬೀರುತ್ತವೆ ಎಂದು ಆಯೋಗವು ಹೇಳಿದೆ.
ಮೋದಿ ದ್ವೇಷ ಭಾಷಣದ ಬಗ್ಗೆ ಪ್ರಮುಖ ದೂರುದಾರರಾಗಿರುವ ಕಾಂಗ್ರೆಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಚುನಾವಣಾ ಆಯೋಗವು ನೋಟಿಸನ್ನು ಮೋದಿಗೆ ಕೊಡದೆ ನಡ್ಡಾ ಅವರಿಗೆ ಕಳುಹಿಸಿದೆ. ಚುನಾವಣಾ ಆಯೋಗ ಸೂಪರ್, ಪ್ರಧಾನ ಮಂತ್ರಿಯ ವಿಷಯಕ್ಕೆ ಬಂದಾಗ ಅವರು ತುಂಬಾ ಜಾಗರೂಕರಾಗಿದ್ದಾರೆ, ಗೃಹ ಸಚಿವರ ವಿಷಯಕ್ಕೆ ಬಂದಾಗ ಅವರು ತುಂಬಾ ಜಾಗರೂಕರಾಗಿದ್ದಾರೆ. ಆಯೋಗವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಗತ್ಯವಿರುವಾಗ ನೋಟಿಸ್ಗಳನ್ನು ನೀಡುತ್ತದೆ ಎಂದು ಕಾಂಗ್ರೆಸ್ ನಿರೀಕ್ಷಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಹಿಂದಿನ ಪ್ರಧಾನಿಗಳಾದ ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ವಿರುದ್ಧ ಯಾವುದೇ ದೂರುಗಳು ಇರಲಿಲ್ಲ. ನಾವು ಪ್ರಧಾನಿ ಮೋದಿ ವಿರುದ್ಧ ಎರಡನೇ ಬಾರಿ ದೂರು ನೀಡಿದ್ದೇವೆ. ಈ ಹಿಂದೆ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಇದೇ ರೀತಿ ಖರ್ಗೆ ಅವರಿಗೆ ಕಳುಹಿಸಿರುವ ನೋಟಿಸ್ನಲ್ಲಿ ಬಿಜೆಪಿ ಸಲ್ಲಿಸಿದ ದೂರುಗಳನ್ನುಚುನಾವಣಾ ಆಯೋಗ ಲಗತ್ತಿಸಿದೆ. ಅದರಲ್ಲಿ ರಾಹುಲ್ ಗಾಂಧಿ ಅವರು ಏಪ್ರಿಲ್ 18ರಂದು ಕೊಟ್ಟಾಯಂನಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿ: ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್ ಶಾ