Homeಅಂಕಣಗಳುಮತ್ತೆ ಗರಿಗೆದರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

ಮತ್ತೆ ಗರಿಗೆದರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

- Advertisement -
- Advertisement -

“ಬೆಳಗಾವಿ ಸೇರಿದಂತೆ ಮರಾಠಿ ಮಾತಾಡುವ ನಾಲ್ಕು ಜಿಲ್ಲೆಗಳ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಇಂದಲ್ಲಾ ನಾಳೆ ಇದು ಆಗಲೇಬೇಕು (ಝಾಲಚ ಪಾಹೀಜೆ)” ಎನ್ನುವ ಘೋಷವಾಕ್ಯ ಗಡಿ ನಗರ ಬೆಳಗಾವಿಯಲ್ಲಿ ಚುನಾವಣೆ ಬಂದಾಗೊಮ್ಮೆ ಮೊಳಗುತ್ತದೆ. ಇದು ಸುಮಾರು 66 ವರ್ಷಗಳಿಂದ ನಡೆಯುತ್ತಿದೆ.

ಗಡಿ ಆಚೆಯ ಹೋರಾಟಗಾರರು ಹಾಗೂ ಈಚೆಗಿನ ಹೋರಾಟಗಾರರಿಗೆ ಜಟಾಪಟಿ ಶುರು ಆಗುತ್ತದೆ. ಆದರೆ ಅವರಿಬ್ಬರೂ ತಮ್ಮತಮ್ಮ ಸಿಟ್ಟನ್ನು ಬಡಪಾಯಿ ಬಸ್ಸುಗಳ ಮೇಲೆ ತೀರಿಸಿಕೊಳ್ಳುತ್ತಾರೆ. ಮೊದಲೇ ಸೊರಗಿಹೋಗಿರುವ ಮಹಾರಾಷ್ಟ್ರದ ಬಸ್ಸುಗಳು ಇನ್ನಷ್ಟು ಶಕ್ತಿಹೀನವಾಗಿ ಕುಟುಕುಟು ಓಡಾಡತೊಡಗುತ್ತವೆ. ಸೂಪರ್ ಸ್ಟಾರ್ ರಜನಿ ಅವರ ಪಾದಧೂಳು ಸೋಕಿದ ಬೆಂಗಳೂರಿನ ಮೆಜೆಸ್ಟಿಕ್ ಟು ಜೆಪಿ ನಗರವೆಂಬೋ ರೂಟಿನಲ್ಲಿ ಜಮ್‌ಜಮ್ ಅಂತ ಓಡಾಡಿ ನಂತರ ರಿಟೈರ್ ಆಗಿ ಕಲ್ಯಾಣ ಕರ್ನಾಟಕಕ್ಕೆ ಬಂದ ಕೆಂಪು ಬಸ್ಸುಗಳು ಇಲ್ಲಿ ಮೂತಿಗೆ ಮಸಿ ಬಳಿಸಿಕೊಳ್ಳುತ್ತವೆ; ರಾತ್ರಿ ಕತ್ತಲಾದ ಮೇಲೆ ಬೆಳಗಾವಿಗೆ ಬಂದು ಬಸ್ ನಿಲ್ದಾಣದ ಮೂಲೆಯಲ್ಲಿ ಯಾರಿಗೂ ಕಾಣದಂತೆ ನಿಂತುಕೊಳ್ಳುತ್ತವೆ. “ನಮ್ ಬ್ಯಾಂಗ್‌ಲೋರ್‌ನಲ್ಲಿ ಎಷ್ಟು ಚೆನ್ನಾಗಿದ್ದೆ, ಯಾರೋ ಕೆಟ್ಟ ಆಫೀಸರ್‌ಗಳು ನನ್ನನ್ನ ಜುಜುಬಿ ಒಂದು ಲಕ್ಷಕ್ಕೆ ಇಲ್ಲಿಗೆ ಮಾರ್‌ಬುಟ್ರೂ” ಅಂತ ಪಕ್ಕದ ಬಸ್ಸಿಗೆ ಗೋಳು ಹೇಳುತ್ತಾ, ಕಣ್ಣಿನಿಂದ ಕಪ್ಪಾಗಿ ಹೋದ ಇಂಜಿನ್ ಆಯಿಲ್ ಸುರಿಸುತವೆ.

ಸ್ಥಳೀಯ ‘ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ’ ಎನ್ನುವ ಪಕ್ಷ ಪ್ರತಿ ಬಾರಿ ಬಿಸಿರಕ್ತದ ತರುಣರನ್ನು ಕೆಣಕುತ್ತದೆ. ಅವರು ಕರ್ನಾಟಕ ಏಕೀಕರಣದ ದಿವಸ ‘ಕಾಳಾ ದಿನ್’ ಆಚರಿಸುತ್ತಾರೆ. ಪಾದಯಾತ್ರೆ, ಸೈಕಲ್ ಯಾತ್ರೆ ನಡೆಸುತ್ತಾರೆ. ಹಿರಿಯ ಪೊಲೀಸು ಅಧಿಕಾರಿಗಳು ಸುತ್ತಮುತ್ತಲಿನ ಜಿಲ್ಲೆಗಳ ಪೊಲೀಸರನ್ನು ಕರೆಸಿ ದೊಡ್ಡದೊಡ್ಡ ಬ್ಯಾರಿಕೇಡ್‌ಗಳನ್ನು ಹಾಕಿಸಿ, ರಾಜ್ಯೋತ್ಸವದ ಮೆರವಣಿಗೆ ಹಾಗೂ ಕಪ್ಪು ವಸ್ತ್ರಧಾರಿಗಳ ಯಾತ್ರೆ ಎರಡೂ ಒಂದಕ್ಕೊಂದು ಭೇಟಿ ಆಗದ ಹಾಗೆ ನೋಡಿಕೊಳ್ಳುತ್ತಾರೆ.

‘ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಾಗ ಬೇರೆಯವರ ಎಲೆಯಲ್ಲಿ ನೊಣ ಹೊಡೆಯುವ’ ಮಹಾರಾಷ್ಟ್ರದ ಕೆಲ ರಾಜಕಾರಣಿಗಳು ಬೆಳಗಾವಿಯ ವಿಷಯ ಬಂದಾಗ ಮುಂಬೈ ಬಿಟ್ಟು ಓಡೋಡಿ ಬರುತ್ತಾರೆ. ಇಲ್ಲಿ ಬಂದು ಬಂದ್, ಧರಣಾ, ಕರ್ಫ್ಯು ಮುಂತಾದವುಗಳನ್ನು ಪ್ರಾಯೋಜಿಸುತ್ತಾರೆ. ಆದರೆ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಭಯಂಕರ ಭಾಷಣ ಬಿಗಿಯುವ ಗಡಿ ಜಿಲ್ಲೆಯ ನಾಯಕರು ಗಡಿ ಸಮಸ್ಯೆ ಬಂದಾಗ ಬಾಯಲ್ಲಿರುವ ಅವಲಕ್ಕಿ ಚಪ್ಪರಿಸುತ್ತಾ ಮಿರ್ಚಿ-ಭಜಿಯ ಬಗ್ಗೆ ಚರ್ಚೆ ನಡೆಸುತ್ತಾ ಇರುತ್ತಾರೆ. ಇದೇ ನಾಯಕರು, ತಮ್ಮ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಇದ್ದಾಗ ಮುಂಬಯಿಗೆ ಹೋಗಿ ಅಲ್ಲಿನ ನೇತಾರರನ್ನು ಅಣ್ಣಾ-ಅಕ್ಕಾ ಎಂದು ಓಲೈಸಿ ಕೆಲಸ ಮಾಡಿಸಿಕೊಳ್ಳುತ್ತಾರೆ.

ಗಡಿ ಆಚೆ-ಈಚಿನ ನಾಯಕರು ತಮ್ಮ ಅನುಕೂಲಸಿಂಧು ರಾಜಕಾರಣದಿಂದಾಗಿ ಕನ್ನಡಿಗರು-ಮರಾಠಿಗರು ಒಬ್ಬರು ಇನ್ನೊಬ್ಬರನ್ನು ಸಂಶಯದಿಂದ ನೋಡುವ ಸನ್ನಿವೇಶ ಸೃಷ್ಟಿಸಿಬಿಟ್ಟಿದ್ದಾರೆ.

ಹಿಂದೆಲ್ಲಾ ಹೀಗಿರಲಿಲ್ಲ. ಗಾಂಧೀಜಿ ಅವರ ಯಂಗ್ ಇಂಡಿಯಾದಿಂದ ಪ್ರೇರಣೆ ಪಡೆದು ಬಾಬುರಾವ್ ಠಾಕೂರ್ ಅವರು ತರುಣ್ ಭಾರತ ಅನ್ನುವ ನಾಲ್ಕು ಪುಟಗಳ ಪತ್ರಿಕೆ ಶುರು ಮಾಡಿದರು. ಅದು ಎರಡು ಪುಟ ಕನ್ನಡ ಹಾಗೂ ಎರಡು ಪುಟ ಮರಾಠಿ ಇತ್ತು. ಹೀಗೆ ಕೆಲವು ವರ್ಷ ನಡೆಯಿತು. ಆದರೆ 1956ಕ್ಕೆ ರಾಜ್ಯ ಮರು ವಿಂಗಡಣೆ ಆದಾಗ ಅದರ ಸಂಪಾದಕೀಯ ದೃಷ್ಟಿ ಬದಲಾಯಿತು. ಅದು ಸಂಪೂರ್ಣ ಮರಾಠಿ ಪತ್ರಿಕೆ ಆಯಿತು. ಬೆಳಗಾವಿ ಸೇರಿದಂತೆ ಇತರ ಮರಾಠಿ ಬಹುಸಂಖ್ಯಾತ ಪ್ರದೇಶಗಳು ಮಹಾರಾಷ್ಟ್ರ ಸೇರಲೇಬೇಕು ಎನ್ನುವ ಏಕಮೇವ ಅಜೆಂಡಾವನ್ನು ಪತ್ರಿಕೆ ಅಳವಡಿಸಿಕೊಂಡಿತು. ಈಗಲೂ ಅದೇ ನಡೆಯುತ್ತಿದೆ. ಅವರ ಮಗ ಕಿರಣ್ ಠಾಕೂರ್ ಈಗ ಆ ಪತ್ರಿಕೆಯ ಸಂಪಾದಕರು. ಅವರು ದೇಶದಲ್ಲಿನ ಅತಿ ದೊಡ್ಡ ಸಹಕಾರಿ ಸಂಸ್ಥೆಗಳಲ್ಲಿ ಒಂದರ ಮಾಲೀಕರು. ತಮ್ಮ ತಂದೆಯಿಂದ ಬಳುವಳಿ ಪಡೆದ ಪತ್ರಿಕೋದ್ಯಮ ಅಲ್ಲದೇ ಇನ್ನೂ ಅನೇಕ ವ್ಯವಹಾರ-ವ್ಯಾಪಾರಗಳನ್ನು ಅವರು ನಡೆಸುತ್ತಿದ್ದಾರೆ. ನೆನಪಾದಾಗ ಒಮ್ಮೆ ಮುಂಬಯಿಯ ಮಂತ್ರಾಲಯಕ್ಕೆ ಹೋಗಿ ಅಲ್ಲಿನ ತಮ್ಮ ದೇವರ ದರ್ಶನ ಮಾಡಿ, ಗಡಿ ವಿವಾದ ಇನ್ನೂ ಶತಮಾನಗಳವರೆಗೆ ಮುಂದುವರೆಯಲಿ, ನಮ್ಮ ಕೈ ತುಂಬಾ ಕೆಲಸ ಇರಲಿ ಎಂದು ಪ್ರಾರ್ಥಿಸಿ ಬರುತ್ತಾರೆ.

ಇದಕ್ಕೆಲ್ಲ ರಾಜ್ಯ ಮರು ವಿಂಗಡನಾ ಆಯೋಗದ ಶಿಫಾರಸು ಕಾರಣ ಅಂತ ಮರಾಠಿ ಹೋರಾಟಗಾರರು ಹೇಳುತ್ತಾರೆ. ಆದರೆ ಪ್ರಧಾನಿ ನೆಹರು ಅವರು ನೇಮಿಸಿದ ಮೊದಲ ಆಯೋಗ ರಾಜ್ಯಗಳನ್ನು ಭಾಷಾ ಆಧಾರದ ಮೇಲೆ ವಿಂಗಡಣೆ ಮಾಡಿ ಅಂತ ಹೇಳಲಿಲ್ಲ. ಭಾಷೆ- ಪ್ರದೇಶ ಮುಂತಾದ ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ರಾಜ್ಯ ಮರು ನಿರ್ಮಾಣ ಆಗಬಾರದು. ಅದು ರಾಜಧಾನಿಗೆ ಇರುವ ಅಂತರ, ಆಡಳಿತಾತ್ಮಕ ಅನುಕೂಲ, ಮೂಲ ಸೌಕರ್ಯಗಳ ಇರುವಿಕೆ-ಅಗತ್ಯ, ಜನಸಂಖ್ಯೆ ಇತ್ಯಾದಿ ಅಂಶಗಳ ಆಧಾರದ ಮೇಲೆ ನಿರ್ಧಾರ ಆಗಬೇಕು ಎಂದು ಆ ಸಮಿತಿಯ ತಜ್ಞರು ಹೇಳಿದರು. ಆಂಧ್ರದ ಭಾಷಾ ಪ್ರೇಮಿ ಹೋರಾಟಗಾರ ಪೊಟ್ಟಿ ಶ್ರೀರಾಮುಲು ಅವರು ಯಶಸ್ವಿ ಆಮರಣ ಉಪವಾಸ ಮಾಡಿದ ಮೇಲೆ ಪ್ರಧಾನಿ ಕಚೇರಿಯ ಮೇಲೆ ಒತ್ತಡ ಹೆಚ್ಚಾಗಿ ಎರಡನೇ ಆಯೋಗ ನೇಮಕ ಆಯಿತು. ಇವರು ಒಂದು ಭಾಷೆ ಮಾತಾಡುವವರು ಒಂದು ಕಡೆ ಎನ್ನುವ ತತ್ವದ ಮೇಲೆ ರಾಜ್ಯ ವಿಂಗಡಣೆ ಮಾಡಿದರು. ಆದರೂ ಒಂದೇ ಭಾಷೆ ಮಾತಾಡುವ ನಾಲ್ಕು ರಾಜ್ಯಗಳನ್ನು ಸೃಷ್ಟಿ ಮಾಡಿದರು. ಇರಲಿ.

ಇದನ್ನೂ ಓದಿ: ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

ಅದನ್ನು ಒಪ್ಪದ ಅಂದಿನ ಮಹಾರಾಷ್ಟ್ರ ಸರಕಾರ, ಕೇಂದ್ರಕ್ಕೆ ಮೊರೆಹೋಯಿತು. ಆಗ ಸರಕಾರ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ, ಕಾಶ್ಮೀರ ಮೂಲದವರಾದ ಮಿಹಿರ ಚಂದ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತು.

ಒಂದೇ ಭಾಷೆ ಮಾತಾಡುವರು ಒಂದೇ ಕಡೆ ಇರಲಿ ಎನ್ನುವ ತತ್ವ ಒಪ್ಪುವುದಾದರೆ ಬೆಳಗಾವಿ ಹಾಗೂ ಇತರ ಕೆಲವು ಪ್ರದೇಶ ಮಹಾರಾಷ್ಟ್ರಕ್ಕೆ ಹೋಗಲಿ, ಮಹಾರಾಷ್ಟ್ರದ ಕೆಲವು ತಾಲೂಕುಗಳು ಕರ್ನಾಟಕಕ್ಕೆ ಬರಲಿ ಎಂದು ಮಹಾಜನ್ ಆಯೋಗ ಶಿಫಾರಸು ಮಾಡಿತು. ಇದನ್ನು ಒಪ್ಪದ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟಿಗೆ ಹೋಯಿತು. ಅದರ ಕೊನೆಯ ವಾದ ವಿವಾದದ ತಾರೀಕು ನವೆಂಬರ್ 30. ತೀರ್ಪು ಬರುವುದು ಇನ್ನೂ ತಡ ಆಗಬಹುದು.

ಆಯಿತು. ಈಗ ಒಂದು ಭಾಷೆ ಮಾತಾಡುವವರು ಒಂದೇ ಕಡೆ ಇರಲಿ ಎನ್ನುವ ಬೇಡಿಕೆಯಲ್ಲಿ ಏನು ತಪ್ಪಿದೆ? ತಪ್ಪೇನೂ ಇಲ್ಲ. ಆದರೆ ಅದು ಭಾಷಾ ಗಣತಿಯ ಮೇಲೆ ಅವಲಂಬಿತವಾಗಿರಬೇಕೆ ಹೊರತು, ಚುನಾವಣೆ ಪೂರ್ವದಲ್ಲಿ ವಿವಿಧ ಜಾತಿ ನಾಯಕರು ತಮ್ಮತಮ್ಮ ಜಾತಿಯ ಸಂಖ್ಯೆಯ ಬಗ್ಗೆ ಮಾತಾಡುವ ತಳ ಬುಡವಿಲ್ಲದ ಮಾತುಗಳಂತೆ ಸುಳ್ಳಾಗಿರಬಾರದು.

ಇನ್ನೊಂದು, ಇದು ಸಾಂಸ್ಕೃತಿಕ ಹೋರಾಟ ಆಗಬೇಕೇ ಹೊರತು, ರಾಜಕೀಯ ಹೋರಾಟ ಆಗಬಾರದು. ಈಗ ಆಗುತ್ತಿರುವುದು ಎರಡನೆಯದು. ಇನ್ನೊಂದು ದುಃಖಕರ ಸಂಗತಿ ಅಂದರೆ ಇದರ ಚರ್ಚೆ ಆರೋಗ್ಯಕರವಾಗಿ ಆಗುತ್ತಿಲ್ಲ. ಮರಾಠಿ ಪತ್ರಿಕೆಗಳು ಕರ್ನಾಟಕವನ್ನು ‘ಕರ್ ನಾಟಕ’ ಅಂತ ಕರೆಯುವುದೂ, ಕನ್ನಡ ಪತ್ರಿಕೆಗಳು ಮರಾಠಿ ಹೊರಟಗಾರರನ್ನು ‘ನಾಡದ್ರೋಹಿಗಳು’, ‘ಕಂಗಾಲ ಕಂಪನಿ’ ಅಂತ ಕರೆಯುವುದು, ನಡೆದೇ ಇರುತ್ತದೆ.

ಗಡಿಯ ಮರಾಠಿ ಹೋರಾಟಗಾರರು ಕರ್ನಾಟಕ ಏಕೀಕರಣ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಾರೆ ಅನ್ನುವುದನ್ನು ಘೋರವಾಗಿ ಖಂಡಿಸಲಾಗುತ್ತದೆ. ಆದರೆ ಕಾಸರಗೋಡು ಕನ್ನಡಿಗರು ಕರ್ನಾಟಕ ಸೇರಲು ಬಯಸುತ್ತಿದ್ದಾರೆ ಎನ್ನುವ ಮಾತುಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳಲಾಗುತ್ತದೆ. ನಮಗೆ ಇದು ಸರಿ ಎನ್ನಿಸಿದರೂ ಹೊರಗಿನಿಂದ ನೋಡುವವರಿಗೆ ಕನ್ನಡಿಗರದು ಇಬ್ಬಗೆ ನೀತಿ ಅನ್ನಿಸಬಹುದು.

ಕೊನೆಯದಾಗಿ, ಯಾವ ರಾಜ್ಯವೂ ಇನ್ನೊಂದು ರಾಜ್ಯಕ್ಕೆ ತನ್ನ ಪ್ರದೇಶವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ ಈ ಐಡಿಯಾ ಪ್ರಾಯೋಗಿಕವಲ್ಲ ಎನ್ನುವುದು ಅನೇಕರಿಗೆ ಗೊತ್ತಿದೆ. ಅದನ್ನು ಜೋರಾಗಿ ಪ್ರತಿಪಾದಿಸುವವರಿಗೂ ಅದು ಗೊತ್ತಿರಬಹುದು. ಅವರು ಜೋರಾಗಿ ಹೇಳುತ್ತಿಲ್ಲ ಅಷ್ಟೇ. ಭಾಷೆಯ ಹೆಸರಿನಲ್ಲಿ ಮನೆ ಮಠ ಬಿಟ್ಟು, ಬಸ್ಸಿಗೆ ಮಸಿ ಹಚ್ಚುವ ಹುಡುಗರಿಗೆ ಇದು ಗೊತ್ತಾಗುತ್ತಿಲ್ಲ.

ಭಾಷಾ ಜಗಳ ಅನ್ನುವುದು ಅಂತಾರಾಷ್ಟ್ರೀಯ ಸಮಸ್ಯೆ. ಕೆನಡಾ ದೇಶದ ಕೇಬೇಕ ಪ್ರಾಂತದವರು ಫ್ರೆಂಚ್ ಮಾತಾಡುತ್ತಾರೆ. ಫ್ರಾನ್ಸ್ ದೇಶಕ್ಕೆ ಸೆಡ್ಡು ಹೊಡೆದು ಫ್ರೆಂಚ್ ಸಿನಿಮಾ ತಯಾರಿಸುತ್ತಾರೆ. ಟರ್ಕಿಯ ಅನೇಕ ಪ್ರದೇಶಗಳಲ್ಲಿ ಅರ್ಧ ಜನ ಒಂದು, ಇನ್ನರ್ಧ ಜನ ಇನ್ನೊಂದು ಭಾಷೆ ಮಾತಾಡುತ್ತಾರೆ. ಎಲ್ಲಾ ಹೋಗಲಿ, ಆಫ್ರಿಕಾದ ಉಬಾಂಗ ಪ್ರದೇಶದಲ್ಲಿ ಗಂಡು ಮಕ್ಕಳು ಬೇರೆ- ಹೆಣ್ಣು ಮಕ್ಕಳು ಬೇರೆ ಭಾಷೆ ಮಾತಾಡುತ್ತಾರೆ.

ಭಾಷೆ ನಮ್ಮನ್ನು ಜೋಡಿಸುವ ಉಪಕರಣ ಆಗಬೇಕೇ ಹೊರತು ಸ್ವಾರ್ಥ ಸಾಧನೆಯ ರಾಜಕಾರಣಿಗಳ ಆಯುಧವಾಗಬಾರದು; ವಿವಿಧ ಭಾಷೆ ಮಾತಾಡುವ, ನೆರೆ ಹೊರೆಯಲ್ಲಿ ಜೀವಿಸುವ ಅಣ್ಣ ತಮ್ಮಂದಿರನ್ನು ಪರಸ್ಪರ ವಿರೋಧಿಗಳನ್ನಾಗಿಸುವ ಹತಾರವಾಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...