Homeಅಂಕಣಗಳುಮತ್ತೆ ಗರಿಗೆದರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

ಮತ್ತೆ ಗರಿಗೆದರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

- Advertisement -
- Advertisement -

“ಬೆಳಗಾವಿ ಸೇರಿದಂತೆ ಮರಾಠಿ ಮಾತಾಡುವ ನಾಲ್ಕು ಜಿಲ್ಲೆಗಳ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಇಂದಲ್ಲಾ ನಾಳೆ ಇದು ಆಗಲೇಬೇಕು (ಝಾಲಚ ಪಾಹೀಜೆ)” ಎನ್ನುವ ಘೋಷವಾಕ್ಯ ಗಡಿ ನಗರ ಬೆಳಗಾವಿಯಲ್ಲಿ ಚುನಾವಣೆ ಬಂದಾಗೊಮ್ಮೆ ಮೊಳಗುತ್ತದೆ. ಇದು ಸುಮಾರು 66 ವರ್ಷಗಳಿಂದ ನಡೆಯುತ್ತಿದೆ.

ಗಡಿ ಆಚೆಯ ಹೋರಾಟಗಾರರು ಹಾಗೂ ಈಚೆಗಿನ ಹೋರಾಟಗಾರರಿಗೆ ಜಟಾಪಟಿ ಶುರು ಆಗುತ್ತದೆ. ಆದರೆ ಅವರಿಬ್ಬರೂ ತಮ್ಮತಮ್ಮ ಸಿಟ್ಟನ್ನು ಬಡಪಾಯಿ ಬಸ್ಸುಗಳ ಮೇಲೆ ತೀರಿಸಿಕೊಳ್ಳುತ್ತಾರೆ. ಮೊದಲೇ ಸೊರಗಿಹೋಗಿರುವ ಮಹಾರಾಷ್ಟ್ರದ ಬಸ್ಸುಗಳು ಇನ್ನಷ್ಟು ಶಕ್ತಿಹೀನವಾಗಿ ಕುಟುಕುಟು ಓಡಾಡತೊಡಗುತ್ತವೆ. ಸೂಪರ್ ಸ್ಟಾರ್ ರಜನಿ ಅವರ ಪಾದಧೂಳು ಸೋಕಿದ ಬೆಂಗಳೂರಿನ ಮೆಜೆಸ್ಟಿಕ್ ಟು ಜೆಪಿ ನಗರವೆಂಬೋ ರೂಟಿನಲ್ಲಿ ಜಮ್‌ಜಮ್ ಅಂತ ಓಡಾಡಿ ನಂತರ ರಿಟೈರ್ ಆಗಿ ಕಲ್ಯಾಣ ಕರ್ನಾಟಕಕ್ಕೆ ಬಂದ ಕೆಂಪು ಬಸ್ಸುಗಳು ಇಲ್ಲಿ ಮೂತಿಗೆ ಮಸಿ ಬಳಿಸಿಕೊಳ್ಳುತ್ತವೆ; ರಾತ್ರಿ ಕತ್ತಲಾದ ಮೇಲೆ ಬೆಳಗಾವಿಗೆ ಬಂದು ಬಸ್ ನಿಲ್ದಾಣದ ಮೂಲೆಯಲ್ಲಿ ಯಾರಿಗೂ ಕಾಣದಂತೆ ನಿಂತುಕೊಳ್ಳುತ್ತವೆ. “ನಮ್ ಬ್ಯಾಂಗ್‌ಲೋರ್‌ನಲ್ಲಿ ಎಷ್ಟು ಚೆನ್ನಾಗಿದ್ದೆ, ಯಾರೋ ಕೆಟ್ಟ ಆಫೀಸರ್‌ಗಳು ನನ್ನನ್ನ ಜುಜುಬಿ ಒಂದು ಲಕ್ಷಕ್ಕೆ ಇಲ್ಲಿಗೆ ಮಾರ್‌ಬುಟ್ರೂ” ಅಂತ ಪಕ್ಕದ ಬಸ್ಸಿಗೆ ಗೋಳು ಹೇಳುತ್ತಾ, ಕಣ್ಣಿನಿಂದ ಕಪ್ಪಾಗಿ ಹೋದ ಇಂಜಿನ್ ಆಯಿಲ್ ಸುರಿಸುತವೆ.

ಸ್ಥಳೀಯ ‘ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ’ ಎನ್ನುವ ಪಕ್ಷ ಪ್ರತಿ ಬಾರಿ ಬಿಸಿರಕ್ತದ ತರುಣರನ್ನು ಕೆಣಕುತ್ತದೆ. ಅವರು ಕರ್ನಾಟಕ ಏಕೀಕರಣದ ದಿವಸ ‘ಕಾಳಾ ದಿನ್’ ಆಚರಿಸುತ್ತಾರೆ. ಪಾದಯಾತ್ರೆ, ಸೈಕಲ್ ಯಾತ್ರೆ ನಡೆಸುತ್ತಾರೆ. ಹಿರಿಯ ಪೊಲೀಸು ಅಧಿಕಾರಿಗಳು ಸುತ್ತಮುತ್ತಲಿನ ಜಿಲ್ಲೆಗಳ ಪೊಲೀಸರನ್ನು ಕರೆಸಿ ದೊಡ್ಡದೊಡ್ಡ ಬ್ಯಾರಿಕೇಡ್‌ಗಳನ್ನು ಹಾಕಿಸಿ, ರಾಜ್ಯೋತ್ಸವದ ಮೆರವಣಿಗೆ ಹಾಗೂ ಕಪ್ಪು ವಸ್ತ್ರಧಾರಿಗಳ ಯಾತ್ರೆ ಎರಡೂ ಒಂದಕ್ಕೊಂದು ಭೇಟಿ ಆಗದ ಹಾಗೆ ನೋಡಿಕೊಳ್ಳುತ್ತಾರೆ.

‘ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಾಗ ಬೇರೆಯವರ ಎಲೆಯಲ್ಲಿ ನೊಣ ಹೊಡೆಯುವ’ ಮಹಾರಾಷ್ಟ್ರದ ಕೆಲ ರಾಜಕಾರಣಿಗಳು ಬೆಳಗಾವಿಯ ವಿಷಯ ಬಂದಾಗ ಮುಂಬೈ ಬಿಟ್ಟು ಓಡೋಡಿ ಬರುತ್ತಾರೆ. ಇಲ್ಲಿ ಬಂದು ಬಂದ್, ಧರಣಾ, ಕರ್ಫ್ಯು ಮುಂತಾದವುಗಳನ್ನು ಪ್ರಾಯೋಜಿಸುತ್ತಾರೆ. ಆದರೆ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಭಯಂಕರ ಭಾಷಣ ಬಿಗಿಯುವ ಗಡಿ ಜಿಲ್ಲೆಯ ನಾಯಕರು ಗಡಿ ಸಮಸ್ಯೆ ಬಂದಾಗ ಬಾಯಲ್ಲಿರುವ ಅವಲಕ್ಕಿ ಚಪ್ಪರಿಸುತ್ತಾ ಮಿರ್ಚಿ-ಭಜಿಯ ಬಗ್ಗೆ ಚರ್ಚೆ ನಡೆಸುತ್ತಾ ಇರುತ್ತಾರೆ. ಇದೇ ನಾಯಕರು, ತಮ್ಮ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಇದ್ದಾಗ ಮುಂಬಯಿಗೆ ಹೋಗಿ ಅಲ್ಲಿನ ನೇತಾರರನ್ನು ಅಣ್ಣಾ-ಅಕ್ಕಾ ಎಂದು ಓಲೈಸಿ ಕೆಲಸ ಮಾಡಿಸಿಕೊಳ್ಳುತ್ತಾರೆ.

ಗಡಿ ಆಚೆ-ಈಚಿನ ನಾಯಕರು ತಮ್ಮ ಅನುಕೂಲಸಿಂಧು ರಾಜಕಾರಣದಿಂದಾಗಿ ಕನ್ನಡಿಗರು-ಮರಾಠಿಗರು ಒಬ್ಬರು ಇನ್ನೊಬ್ಬರನ್ನು ಸಂಶಯದಿಂದ ನೋಡುವ ಸನ್ನಿವೇಶ ಸೃಷ್ಟಿಸಿಬಿಟ್ಟಿದ್ದಾರೆ.

ಹಿಂದೆಲ್ಲಾ ಹೀಗಿರಲಿಲ್ಲ. ಗಾಂಧೀಜಿ ಅವರ ಯಂಗ್ ಇಂಡಿಯಾದಿಂದ ಪ್ರೇರಣೆ ಪಡೆದು ಬಾಬುರಾವ್ ಠಾಕೂರ್ ಅವರು ತರುಣ್ ಭಾರತ ಅನ್ನುವ ನಾಲ್ಕು ಪುಟಗಳ ಪತ್ರಿಕೆ ಶುರು ಮಾಡಿದರು. ಅದು ಎರಡು ಪುಟ ಕನ್ನಡ ಹಾಗೂ ಎರಡು ಪುಟ ಮರಾಠಿ ಇತ್ತು. ಹೀಗೆ ಕೆಲವು ವರ್ಷ ನಡೆಯಿತು. ಆದರೆ 1956ಕ್ಕೆ ರಾಜ್ಯ ಮರು ವಿಂಗಡಣೆ ಆದಾಗ ಅದರ ಸಂಪಾದಕೀಯ ದೃಷ್ಟಿ ಬದಲಾಯಿತು. ಅದು ಸಂಪೂರ್ಣ ಮರಾಠಿ ಪತ್ರಿಕೆ ಆಯಿತು. ಬೆಳಗಾವಿ ಸೇರಿದಂತೆ ಇತರ ಮರಾಠಿ ಬಹುಸಂಖ್ಯಾತ ಪ್ರದೇಶಗಳು ಮಹಾರಾಷ್ಟ್ರ ಸೇರಲೇಬೇಕು ಎನ್ನುವ ಏಕಮೇವ ಅಜೆಂಡಾವನ್ನು ಪತ್ರಿಕೆ ಅಳವಡಿಸಿಕೊಂಡಿತು. ಈಗಲೂ ಅದೇ ನಡೆಯುತ್ತಿದೆ. ಅವರ ಮಗ ಕಿರಣ್ ಠಾಕೂರ್ ಈಗ ಆ ಪತ್ರಿಕೆಯ ಸಂಪಾದಕರು. ಅವರು ದೇಶದಲ್ಲಿನ ಅತಿ ದೊಡ್ಡ ಸಹಕಾರಿ ಸಂಸ್ಥೆಗಳಲ್ಲಿ ಒಂದರ ಮಾಲೀಕರು. ತಮ್ಮ ತಂದೆಯಿಂದ ಬಳುವಳಿ ಪಡೆದ ಪತ್ರಿಕೋದ್ಯಮ ಅಲ್ಲದೇ ಇನ್ನೂ ಅನೇಕ ವ್ಯವಹಾರ-ವ್ಯಾಪಾರಗಳನ್ನು ಅವರು ನಡೆಸುತ್ತಿದ್ದಾರೆ. ನೆನಪಾದಾಗ ಒಮ್ಮೆ ಮುಂಬಯಿಯ ಮಂತ್ರಾಲಯಕ್ಕೆ ಹೋಗಿ ಅಲ್ಲಿನ ತಮ್ಮ ದೇವರ ದರ್ಶನ ಮಾಡಿ, ಗಡಿ ವಿವಾದ ಇನ್ನೂ ಶತಮಾನಗಳವರೆಗೆ ಮುಂದುವರೆಯಲಿ, ನಮ್ಮ ಕೈ ತುಂಬಾ ಕೆಲಸ ಇರಲಿ ಎಂದು ಪ್ರಾರ್ಥಿಸಿ ಬರುತ್ತಾರೆ.

ಇದಕ್ಕೆಲ್ಲ ರಾಜ್ಯ ಮರು ವಿಂಗಡನಾ ಆಯೋಗದ ಶಿಫಾರಸು ಕಾರಣ ಅಂತ ಮರಾಠಿ ಹೋರಾಟಗಾರರು ಹೇಳುತ್ತಾರೆ. ಆದರೆ ಪ್ರಧಾನಿ ನೆಹರು ಅವರು ನೇಮಿಸಿದ ಮೊದಲ ಆಯೋಗ ರಾಜ್ಯಗಳನ್ನು ಭಾಷಾ ಆಧಾರದ ಮೇಲೆ ವಿಂಗಡಣೆ ಮಾಡಿ ಅಂತ ಹೇಳಲಿಲ್ಲ. ಭಾಷೆ- ಪ್ರದೇಶ ಮುಂತಾದ ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ರಾಜ್ಯ ಮರು ನಿರ್ಮಾಣ ಆಗಬಾರದು. ಅದು ರಾಜಧಾನಿಗೆ ಇರುವ ಅಂತರ, ಆಡಳಿತಾತ್ಮಕ ಅನುಕೂಲ, ಮೂಲ ಸೌಕರ್ಯಗಳ ಇರುವಿಕೆ-ಅಗತ್ಯ, ಜನಸಂಖ್ಯೆ ಇತ್ಯಾದಿ ಅಂಶಗಳ ಆಧಾರದ ಮೇಲೆ ನಿರ್ಧಾರ ಆಗಬೇಕು ಎಂದು ಆ ಸಮಿತಿಯ ತಜ್ಞರು ಹೇಳಿದರು. ಆಂಧ್ರದ ಭಾಷಾ ಪ್ರೇಮಿ ಹೋರಾಟಗಾರ ಪೊಟ್ಟಿ ಶ್ರೀರಾಮುಲು ಅವರು ಯಶಸ್ವಿ ಆಮರಣ ಉಪವಾಸ ಮಾಡಿದ ಮೇಲೆ ಪ್ರಧಾನಿ ಕಚೇರಿಯ ಮೇಲೆ ಒತ್ತಡ ಹೆಚ್ಚಾಗಿ ಎರಡನೇ ಆಯೋಗ ನೇಮಕ ಆಯಿತು. ಇವರು ಒಂದು ಭಾಷೆ ಮಾತಾಡುವವರು ಒಂದು ಕಡೆ ಎನ್ನುವ ತತ್ವದ ಮೇಲೆ ರಾಜ್ಯ ವಿಂಗಡಣೆ ಮಾಡಿದರು. ಆದರೂ ಒಂದೇ ಭಾಷೆ ಮಾತಾಡುವ ನಾಲ್ಕು ರಾಜ್ಯಗಳನ್ನು ಸೃಷ್ಟಿ ಮಾಡಿದರು. ಇರಲಿ.

ಇದನ್ನೂ ಓದಿ: ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

ಅದನ್ನು ಒಪ್ಪದ ಅಂದಿನ ಮಹಾರಾಷ್ಟ್ರ ಸರಕಾರ, ಕೇಂದ್ರಕ್ಕೆ ಮೊರೆಹೋಯಿತು. ಆಗ ಸರಕಾರ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ, ಕಾಶ್ಮೀರ ಮೂಲದವರಾದ ಮಿಹಿರ ಚಂದ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತು.

ಒಂದೇ ಭಾಷೆ ಮಾತಾಡುವರು ಒಂದೇ ಕಡೆ ಇರಲಿ ಎನ್ನುವ ತತ್ವ ಒಪ್ಪುವುದಾದರೆ ಬೆಳಗಾವಿ ಹಾಗೂ ಇತರ ಕೆಲವು ಪ್ರದೇಶ ಮಹಾರಾಷ್ಟ್ರಕ್ಕೆ ಹೋಗಲಿ, ಮಹಾರಾಷ್ಟ್ರದ ಕೆಲವು ತಾಲೂಕುಗಳು ಕರ್ನಾಟಕಕ್ಕೆ ಬರಲಿ ಎಂದು ಮಹಾಜನ್ ಆಯೋಗ ಶಿಫಾರಸು ಮಾಡಿತು. ಇದನ್ನು ಒಪ್ಪದ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟಿಗೆ ಹೋಯಿತು. ಅದರ ಕೊನೆಯ ವಾದ ವಿವಾದದ ತಾರೀಕು ನವೆಂಬರ್ 30. ತೀರ್ಪು ಬರುವುದು ಇನ್ನೂ ತಡ ಆಗಬಹುದು.

ಆಯಿತು. ಈಗ ಒಂದು ಭಾಷೆ ಮಾತಾಡುವವರು ಒಂದೇ ಕಡೆ ಇರಲಿ ಎನ್ನುವ ಬೇಡಿಕೆಯಲ್ಲಿ ಏನು ತಪ್ಪಿದೆ? ತಪ್ಪೇನೂ ಇಲ್ಲ. ಆದರೆ ಅದು ಭಾಷಾ ಗಣತಿಯ ಮೇಲೆ ಅವಲಂಬಿತವಾಗಿರಬೇಕೆ ಹೊರತು, ಚುನಾವಣೆ ಪೂರ್ವದಲ್ಲಿ ವಿವಿಧ ಜಾತಿ ನಾಯಕರು ತಮ್ಮತಮ್ಮ ಜಾತಿಯ ಸಂಖ್ಯೆಯ ಬಗ್ಗೆ ಮಾತಾಡುವ ತಳ ಬುಡವಿಲ್ಲದ ಮಾತುಗಳಂತೆ ಸುಳ್ಳಾಗಿರಬಾರದು.

ಇನ್ನೊಂದು, ಇದು ಸಾಂಸ್ಕೃತಿಕ ಹೋರಾಟ ಆಗಬೇಕೇ ಹೊರತು, ರಾಜಕೀಯ ಹೋರಾಟ ಆಗಬಾರದು. ಈಗ ಆಗುತ್ತಿರುವುದು ಎರಡನೆಯದು. ಇನ್ನೊಂದು ದುಃಖಕರ ಸಂಗತಿ ಅಂದರೆ ಇದರ ಚರ್ಚೆ ಆರೋಗ್ಯಕರವಾಗಿ ಆಗುತ್ತಿಲ್ಲ. ಮರಾಠಿ ಪತ್ರಿಕೆಗಳು ಕರ್ನಾಟಕವನ್ನು ‘ಕರ್ ನಾಟಕ’ ಅಂತ ಕರೆಯುವುದೂ, ಕನ್ನಡ ಪತ್ರಿಕೆಗಳು ಮರಾಠಿ ಹೊರಟಗಾರರನ್ನು ‘ನಾಡದ್ರೋಹಿಗಳು’, ‘ಕಂಗಾಲ ಕಂಪನಿ’ ಅಂತ ಕರೆಯುವುದು, ನಡೆದೇ ಇರುತ್ತದೆ.

ಗಡಿಯ ಮರಾಠಿ ಹೋರಾಟಗಾರರು ಕರ್ನಾಟಕ ಏಕೀಕರಣ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಾರೆ ಅನ್ನುವುದನ್ನು ಘೋರವಾಗಿ ಖಂಡಿಸಲಾಗುತ್ತದೆ. ಆದರೆ ಕಾಸರಗೋಡು ಕನ್ನಡಿಗರು ಕರ್ನಾಟಕ ಸೇರಲು ಬಯಸುತ್ತಿದ್ದಾರೆ ಎನ್ನುವ ಮಾತುಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳಲಾಗುತ್ತದೆ. ನಮಗೆ ಇದು ಸರಿ ಎನ್ನಿಸಿದರೂ ಹೊರಗಿನಿಂದ ನೋಡುವವರಿಗೆ ಕನ್ನಡಿಗರದು ಇಬ್ಬಗೆ ನೀತಿ ಅನ್ನಿಸಬಹುದು.

ಕೊನೆಯದಾಗಿ, ಯಾವ ರಾಜ್ಯವೂ ಇನ್ನೊಂದು ರಾಜ್ಯಕ್ಕೆ ತನ್ನ ಪ್ರದೇಶವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ ಈ ಐಡಿಯಾ ಪ್ರಾಯೋಗಿಕವಲ್ಲ ಎನ್ನುವುದು ಅನೇಕರಿಗೆ ಗೊತ್ತಿದೆ. ಅದನ್ನು ಜೋರಾಗಿ ಪ್ರತಿಪಾದಿಸುವವರಿಗೂ ಅದು ಗೊತ್ತಿರಬಹುದು. ಅವರು ಜೋರಾಗಿ ಹೇಳುತ್ತಿಲ್ಲ ಅಷ್ಟೇ. ಭಾಷೆಯ ಹೆಸರಿನಲ್ಲಿ ಮನೆ ಮಠ ಬಿಟ್ಟು, ಬಸ್ಸಿಗೆ ಮಸಿ ಹಚ್ಚುವ ಹುಡುಗರಿಗೆ ಇದು ಗೊತ್ತಾಗುತ್ತಿಲ್ಲ.

ಭಾಷಾ ಜಗಳ ಅನ್ನುವುದು ಅಂತಾರಾಷ್ಟ್ರೀಯ ಸಮಸ್ಯೆ. ಕೆನಡಾ ದೇಶದ ಕೇಬೇಕ ಪ್ರಾಂತದವರು ಫ್ರೆಂಚ್ ಮಾತಾಡುತ್ತಾರೆ. ಫ್ರಾನ್ಸ್ ದೇಶಕ್ಕೆ ಸೆಡ್ಡು ಹೊಡೆದು ಫ್ರೆಂಚ್ ಸಿನಿಮಾ ತಯಾರಿಸುತ್ತಾರೆ. ಟರ್ಕಿಯ ಅನೇಕ ಪ್ರದೇಶಗಳಲ್ಲಿ ಅರ್ಧ ಜನ ಒಂದು, ಇನ್ನರ್ಧ ಜನ ಇನ್ನೊಂದು ಭಾಷೆ ಮಾತಾಡುತ್ತಾರೆ. ಎಲ್ಲಾ ಹೋಗಲಿ, ಆಫ್ರಿಕಾದ ಉಬಾಂಗ ಪ್ರದೇಶದಲ್ಲಿ ಗಂಡು ಮಕ್ಕಳು ಬೇರೆ- ಹೆಣ್ಣು ಮಕ್ಕಳು ಬೇರೆ ಭಾಷೆ ಮಾತಾಡುತ್ತಾರೆ.

ಭಾಷೆ ನಮ್ಮನ್ನು ಜೋಡಿಸುವ ಉಪಕರಣ ಆಗಬೇಕೇ ಹೊರತು ಸ್ವಾರ್ಥ ಸಾಧನೆಯ ರಾಜಕಾರಣಿಗಳ ಆಯುಧವಾಗಬಾರದು; ವಿವಿಧ ಭಾಷೆ ಮಾತಾಡುವ, ನೆರೆ ಹೊರೆಯಲ್ಲಿ ಜೀವಿಸುವ ಅಣ್ಣ ತಮ್ಮಂದಿರನ್ನು ಪರಸ್ಪರ ವಿರೋಧಿಗಳನ್ನಾಗಿಸುವ ಹತಾರವಾಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...