Homeಅಂಕಣಗಳುಗೌರಿ ಕಣ್ಣೋಟ | ಮಹಿಳೆಯರ ಪಾಲಿಗೆ ಆಧುನಿಕತೆ ಎಂದರೆ...

ಗೌರಿ ಕಣ್ಣೋಟ | ಮಹಿಳೆಯರ ಪಾಲಿಗೆ ಆಧುನಿಕತೆ ಎಂದರೆ…

- Advertisement -
- Advertisement -

ನಮ್ಮ ಆಫೀಸಿನ ಹತ್ತಿರವೇ ಇರುವ ಮಹಿಳಾ ಕಾಲೇಜಿಗೆ ಬರುವ ಹುಡುಗಿಯರನ್ನು ಪ್ರತಿ ದಿನ ನೋಡುತ್ತಿರುತ್ತೇನೆ. ಬಣ್ಣಬಣ್ಣದ ಚೂಡಿದಾರಗಳು, ಜೀನ್ಸ್ ಮತ್ತು ಟೀ ಶರ್ಟ್ಗಳು, ಹಲವೊಮ್ಮೆ ಮೈ ತುಂಬ ದೊಗಲಾದ ಬಟ್ಟೆ ಧರಿಸಿ ತಲೆ ಕೂದಲನ್ನು ಮಾತ್ರ ಮುಚ್ಚಿರುವ ಉಡುಪುಗಳು, ಅಪರೂಪಕ್ಕೊಮ್ಮೆ ನವಿರಾದ ಸೀರೆ…. ಹೀಗೆ ವಿವಿಧ ಉಡುಪುಗಳನ್ನು ತೊಟ್ಟು ಗೆಳತಿಯರೊಂದಿಗೆ ಚರ್ಚಿಸುತ್ತಾ, ತಮ್ಮ ಸ್ಕೂಟಿಗಳನ್ನು ವೇಗವಾಗಿ ಓಡಿಸುತ್ತಾ, ಬದುಕಿನ ಬಗ್ಗೆ ಕನಸುಗಳನ್ನೂ, ಆಸೆಗಳನ್ನೂ ಹೊತ್ತಿರುವ ಆ ಹುಡುಗಿಯರ ಮುಖಗಳು ಅದೆಷ್ಟು ಲವಲವಿಕೆಯಿಂದ ಕೂಡಿರುತ್ತದೆ ಎಂದರೆ ಅವರನ್ನು ನೋಡುವುದೇ ನೂರಾರು ಬಣ್ಣಬಣ್ಣದ ಚಿಟ್ಟೆಗಳನ್ನು ಒಮ್ಮೆಗೆ ನೋಡಿದಷ್ಟು ಸಂತೋಷ ಕೊಡುತ್ತದೆ. ಆದರೆ ಈ ಸಂತೋಷದ ನಡುವೆಯೇ ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ವರದಿಯೊಂದನ್ನು ಓದಿದೆ.

ಅದರಲ್ಲಿ ಭಾರತೀಯ ಮಹಿಳೆಯರು ಹೇಗಿರಬೇಕು ಎಂದು ವಿವರಿಸಲಾಗಿತ್ತು. “ಭಾರತೀಯ ಹುಡುಗಿಯರು ಪ್ರತ್ಯೇಕ ಶಾಲೆ ಮತ್ತು ಕಾಲೇಜುಗಳಿಗೆ ಹೋಗಬೇಕು. ಇಲ್ಲಿ ಕೋ-ಎಜುಕೇಷನ್ ಪದ್ಧತಿ ಇರಕೂಡದು. ಹುಡುಗರು ಮತ್ತು ಹುಡುಗಿಯರು ಪರಸ್ಪರ ಭೇಟಿ ಯಾಗುವಂತಹ ವ್ಯವಸ್ಥೆ ಇರಬಾರದು. ಮಹಿಳೆಯರಿಗೆ ನೀಡುವ ವಿದ್ಯೆ ಕೂಡ ಅವರು ಮುಂದೆ ಹೆಂಡತಿಯರಾಗಿ, ಗೃಹಸ್ಥೆಯರಾಗಿ ಬಾಳು ನಡೆಸುವುದಕ್ಕೆ ಅನುಗುಣವಾಗಿರಬೇಕು. ಮನೆಯ ನಾಲ್ಕು ಗೋಡೆಗಳೊಳಗೇ ಅವರು ತಮ್ಮ ಬದುಕಿನ ಸಾರ್ಥಕತೆಯನ್ನು ಕಾಣಬೇಕಿರುವುದರಿಂದ ಅವರಿಗೆ ಇತರ ರೀತಿಯ ವಿದ್ಯೆ ಅನಗತ್ಯ’ ಇದಿಷ್ಟು ಆ ವರದಿಯ ಸಾರಾಂಶ. ಇದನ್ನು ಹೇಳಿದ್ದು ರಾಷ್ಟ್ರೀಯ ಸ್ವಯಂ ಸೇವಕರ ಸರಸಂಚಾಲಕ ಕೆ.ಎಸ್. ಸುದರ್ಶನ್.

ನಿಜ, ಇವತ್ತು ಭಾರತದ ಎಲ್ಲಾ ಮಹಿಳೆಯರಿಗೆ ಎಲ್ಲಾ ಹಕ್ಕುಗಳೂ ಸಿಕ್ಕಿಲ್ಲ. ಇವತ್ತಿಗೂ ಸಮಾನತೆಗಾಗಿ, ಸಮಾನ ವೇತನಕ್ಕಾಗಿ, ಸ್ವಾಭಿಮಾನಕ್ಕಾಗಿ, ಆರ್ಥಿಕ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮುಂದುವರೆಯುತ್ತಿದೆ. ಆದರೆ, ಅದೇ ಸಮಯದಲ್ಲಿ ಸತಿ ಪದ್ಧತಿಗೆ ಬಲಿಯಾದ ರೂಪಾ ಕನ್ವರ್‌ಳ ಸಹಗಮನವನ್ನು ವೈಭವೀಕರಿಸುವವರನ್ನು ಅಧಿಕಾರಕ್ಕೆ ತರಲಾಗಿದೆ. ಅಷ್ಟೇ ಅಲ್ಲ, ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುತ್ತೇವೆ ಎಂದು ಎಲ್ಲಾ ರಾಜಕೀಯ ಪಕ್ಷದವರೂ ಬಹಳ ವರ್ಷದಿಂದ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೂ ಇಲ್ಲಿಯವರೆಗೂ ಯಾವ ಮಸೂದೆಯೂ ಪಾಸಾಗಿಲ್ಲ. ಇದೆಲ್ಲದರ ಮಧ್ಯೆ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಲೇ ಇವೆ. ಹೊರಗೆ ಬಂದರೆ ಆಸಿಡ್ ದಾಳಿಯ ಹೆದರಿಕೆ, ಮನೆಯೊಳಗಿದ್ದರೆ ಕೌಟುಂಬಿಕ ಹಿಂಸೆ …….ಇವೆರಡೂ ಅದೆಷ್ಟೋ ಮಹಿಳೆಯರ ದಿನನಿತ್ಯದ ಬದುಕಿನ ಅಂಗಗಳಾಗಿ ಹೋಗಿವೆ. ಇವುಗಳೊಂದಿಗೆ ಈಗ ಧರ್ಮದ ನೆಪದಲ್ಲಿ ಸುದರ್ಶನ್‌ರಂತವರು ಮಹಿಳೆಯನ್ನು ಮತ್ತೊಮ್ಮೆ ಮೌಢ್ಯ, ಫ್ಯೂಡಲ್ ಪದ್ಧತಿ, ಅಸಮಾನತೆಗಳಿಗೆ ಗುರಿಪಡಿಸಲು ಹವಣಿಸುತ್ತಿದ್ದಾರೆ.

ಇಪ್ಪತ್ತೊಂದನೆ ಶತಮಾನದಲ್ಲಿ ನಿಂತಿರುವ ಭಾರತದ ಮಹಿಳೆ ಈಗ ಒಂದು ರೀತಿಯ ಕ್ರಾಸ್ ರೋಡ್ಸ್ನಲ್ಲಿ ಸಾಗುತ್ತಿದ್ದಾಳೆ. ನಮ್ಮ ಸಮಾಜದ ಮಾನಸಿಕ ಸ್ಥಿತಿ ಇನ್ನೂ ಮಧ್ಯ ಯುಗದಲ್ಲಿದ್ದರೆ, ಅದರ ಆರ್ಥಿಕ ಸ್ಥಿತಿ ಆಧುನಿಕ ಯುಗದಲ್ಲಿದೆ. ಆದ್ದರಿಂದಲೇ ಇವತ್ತು ಆಧುನಿಕತೆ ಎಂದರೇನೇ ಸರಕು, ಸುಖ, ತಂತ್ರಜ್ಞಾನ, ಉಪಭೋಗ ವೆಚ್ಚ ಎಂದು ಪರಿಗಣಿಸಲಾಗುತ್ತಿದೆ. ಆದರೆ ಮಹಿಳೆಯರ ಪಾಲಿಗೆ ಆಧುನಿಕತೆ ಎಂಬುದೇ ವೈಯಕ್ತಿಕ ಘನತೆ, ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸ್ವಾತಂತ್ರ‍್ಯಗಳು…..

– ಗೌರಿ ಲಂಕೇಶ್,
ಏಪ್ರಿಲ್ 6, 2005 (`ಕಂಡಹಾಗೆ; ಸಂಪಾದಕೀಯದಿಂದ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0
ಲೋಕಸಭೆ ಚುನಾವಣೆಗೆ "ದೇವರು ಮತ್ತು ಪೂಜಾ ಸ್ಥಳಗಳ" ಹೆಸರಿನಲ್ಲಿ ಮತ ಕೇಳುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ...