- Advertisement -
- Advertisement -
ಗಿರೀಶ್ ತಾಳಿಕಟ್ಟೆ |
ನನಗೂ
ಬುದ್ಧನಾಗುವ ಆಸೆ
ಆದರೆ
ಆಸೆಗಳು ಬಿಡುತಿಲ್ಲ
ಒಮ್ಮೊಮ್ಮೆ ಸರಿರಾತ್ರಿಯಲಿ
ಎದ್ದು ಬಿಡುವೆ,
ಭವ ಬಂಧನಗಳ
ಕಿತ್ತೆಸೆದು
ಹೊರಟು ಬಿಡೋಣವೆಂದು;
ಆದರೆ
ಪಕ್ಕದಲೆ ಮಲಗಿರುವ
ಮಡದಿ ಮಕ್ಕಳ ದಾಟಲಾರದೆ
ಮತ್ತೆ ಮಲಗಿಬಿಡುವೆ
ಕಂಡಕಂಡ
ಮರದ ಬುಡದಲಿ
ಗಂಟೆಗಟ್ಟಲೆ ಕೂತುಬಿಡುವೆ,
ಅಪ್ಪಿತಪ್ಪಿ ನನಗೂ
ಜ್ಞಾನೋದಯ
ಆದೀತೆಂಬ ಆಸೆಯಿಂದ;
ಏಕಾಂತವು ಪಿಚ್ಚೆನಿಸಿ
ಅಲ್ಲಿಂದಲೂ ಹೊರಟುಬಿಡುವೆ
ಕೊನೆಗೊಮ್ಮೆ ಅರಿವಾಯಿತು;
ಆಸೆಬಿದ್ದು ನಾನು ಬುದ್ದನಾಗಲಾರೆ,
ಯಾಕೆಂದರೆ
ಬುದ್ದ
`ಆಗುವ’ ಹಾದಿಯಲ್ಲ
`ಮಾಗುವ’ ಹಾದಿ!!!