ಬಿಜೆಪಿ ಕರ್ನಾಟಕ ತನ್ನ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ನಲ್ಲಿ ಮತ್ತು ದಿನಪತ್ರಿಕೆಯಲ್ಲಿ ಜಾಹೀರಾತುಗಳನ್ನು ನೀಡಿ ಸುಳ್ಳು ಸುದ್ದಿ ಮತ್ತು ದ್ವೇಷವನ್ನು ಹಬ್ಬಿಸುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ವಿವಿಧ ಸಂಘಟನೆಗಳ ನಿಯೋಗವೊಂದು ಚುನಾವಣಾ ಆಯೋಗಕ್ಕೆ ದೂರನ್ನು ನೀಡಿದೆ.
ಬಹುತ್ವ ಕರ್ನಾಟಕ, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (AILAJ), ಕ್ಯಾಂಪೇನ್ ಎಗೇನ್ಸ್ಟ್ ಹೇಟ್ ಸ್ಪೀಚ್ (CAHS), ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ (AIDWA), ನಾವೆದ್ದು ನಿಲ್ಲದಿದ್ರೆ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಪ್ರತಿನಿಧಿಗಳು ನಿಯೋಗದ ಭಾಗವಾಗಿದ್ದರು.
ದೂರಿನಲ್ಲಿ ಬಿಜೆಪಿ ‘ಎಕ್ಸ್’ ಖಾತೆಯಲ್ಲಿ ಮಾದರಿ ನೀತಿ ಸಂಹಿತೆ ಮತ್ತು 153A, 505 (1) (c ) ಮತ್ತು 505 (2)ರ ನಿಯಮವನ್ನು ಉಲ್ಲಂಘಿಸಿದೆ ಎಂದು ಉಲ್ಲೇಖಿಸಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ಭಾಷಣ, ಟ್ವೀಟ್, ಜಾಹೀರಾತು ಸೇರಿ ವಿವಿಧ ರೀತಿಯಲ್ಲಿ ಸುಳ್ಳು ಮತ್ತು ದ್ವೇಷದ ಸುದ್ದಿಯನ್ನು ಬಿತ್ತರಿಸುತ್ತಿದೆ ಇದರ ವಿರುದ್ದ ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಬಿಜೆಪಿ ಶನಿವಾರ ಎಕ್ಸ್ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದೆ, ಇದರಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಕಾರ್ಟೂನ್ಗಳಿವೆ. ಈ ಇಬ್ಬರು ಎಸ್ಸಿ,ಎಸ್ಟಿ, ಒಬಿಸಿ ಎಂದು ಬರೆದ ಮೊಟ್ಟೆ ಬಳಿ ಮುಸ್ಲಿಂ ಎಂದು ಬರೆದ ದೊಡ್ಡ ಮೊಟ್ಟೆಯನ್ನು ತಂದು ಇಡುತ್ತಾರೆ. ಈ ಮೊಟ್ಟೆಯಿಂದ ಹೊರಬಂದ ಮುಸ್ಲಿಂ ಎಂದು ಬರೆದ ಹಕ್ಕಿಗೆ ರಾಹುಲ್ ಗಾಂಧಿ ಸಂಪತ್ತನ್ನು ತಂದು ಸುರಿಯುವುದು, ಬಳಿಕ ಎಸ್ಸಿ, ಎಸ್ಟಿ ಒಬಿಸಿ ಎಂದು ಬರೆದ ಹಕ್ಕಿಯನ್ನು ಮುಸ್ಲಿಂ ಎಂದು ಬರೆದ ಹಕ್ಕಿ ಹೊರದಬ್ಬುವ ದ್ವೇಷ ಪೂರಿತ ಅಂಶಗಳು ಅನಿಮೇಟೆಡ್ ವೀಡಿಯೊದಲ್ಲಿ ಉಲ್ಲೇಖವಾಗಿದೆ. ಈ ಪೋಸ್ಟ್ಗೆ 3,700 ಕಂಮೆಂಟ್ಗಳು, 11,000 ರಿಟ್ವೀಟ್ಗಳು, 18,000 ಲೈಕ್ಗಳು ಮತ್ತು 7.7ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋದಿಂದ ಸಮಾಜದಲ್ಲಿ ಬಹಳಷ್ಟು ದುಷ್ಪರಿಣಾಮ ಉಂಟಾಗಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಉಂಟು ಮಾಡಲು ಮತ್ತು ಎಸ್ಸಿ, ಎಸ್ಟಿ ಒಬಿಸಿಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಸೃಷ್ಟಿಸಲು ಈ ವಿಡಿಯೋ ಪ್ರಯತ್ನಿಸುತ್ತದೆ. ಇದು ಮುಸ್ಲಿಂ ಸಮುದಾಯದ ವಿರುದ್ಧ ಆಘಾತಕಾರಿ ಮತ್ತು ಸ್ಪಷ್ಟವಾದ ದಾಳಿಯಾಗಿದೆ ಎಂದು ದೂರಿನಲ್ಲಿ ಉಲ್ಲೆಖಿಸಲಾಗಿದೆ.
ಇದನ್ನು ಓದಿ: ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಅನಿಮೇಟೆಡ್ ವೀಡಿಯೊ ಹಂಚಿಕೊಂಡ ಬಿಜೆಪಿ: ‘ಎಕ್ಸ್’ ಬಳಕೆದಾರರು ತರಾಟೆ