ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಬಿಂಬಿಸುವ, ಮುಸ್ಲಿಮರ ಬಗ್ಗೆ ಕಾಂಗ್ರೆಸ್ ತುಷ್ಟೀಕರಣ ಮಾಡುತ್ತದೆ ಎಂದು ಪ್ರತಿಪಾದಿಸುವ ಅನಿಮೇಟೆಡ್ ವೀಡಿಯೊವೊಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಎಚ್ಚರ..ಎಚ್ಚರ..ಎಚ್ಚರ.. ಎಂಬ ತಲೆ ಬರಹದಲ್ಲಿ ಬಿಜೆಪಿ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಕಾರ್ಟೂನ್ಗಳಿವೆ. ಈ ಇಬ್ಬರು ಎಸ್ಸಿ,ಎಸ್ಟಿ, ಒಬಿಸಿ ಎಂದು ಬರೆದ ಮೊಟ್ಟೆ ಬಳಿ ಮುಸ್ಲಿಂ ಎಂದು ಬರೆದ ದೊಡ್ಡ ಮೊಟ್ಟೆಯನ್ನು ತಂದು ಇಡುತ್ತಾರೆ. ಈ ಮೊಟ್ಟೆಯಿಂದ ಹೊರಬಂದ ಮುಸ್ಲಿಂ ಎಂದು ಬರೆದ ಹಕ್ಕಿಗೆ ರಾಹುಲ್ ಗಾಂಧಿ ಸಂಪತ್ತನ್ನು ತಂದು ಸುರಿಯುವುದು, ಬಳಿಕ ಎಸ್ಸಿ, ಎಸ್ಟಿ ಒಬಿಸಿ ಎಂದು ಬರೆದ ಹಕ್ಕಿಯನ್ನು ಮುಸ್ಲಿಂ ಎಂದು ಬರೆದ ಹಕ್ಕಿ ಹೊರದಬ್ಬುವ ದ್ವೇಷ ಪೂರಿತ ಅಂಶಗಳು ಅನಿಮೇಟೆಡ್ ವೀಡಿಯೊದಲ್ಲಿ ಉಲ್ಲೇಖವಾಗಿದೆ.
ಈ ದ್ವೇಷವನ್ನು ಹರಡುವ, ಸುಳ್ಳು ಬಿಂಬಿಸುವ ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಬಿಜೆಪಿ ವಿರುದ್ಧ ವ್ಯಾಪಕವಾದಂತಹ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಬಹುಭಾಷಾ ನಟ ಪ್ರಕಾಶ್ ರಾಜ್, ಇದನ್ನು ನಾಚಿಕೆಗೇಡು ಎಂದು ಬಣ್ಣಿಸಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ, ಶಾಂತಿಪ್ರಿಯ ಕರ್ನಾಟಕ ಮತ್ತು ದೇಶದ ಜನತೆ ಹಿಂದುತ್ವ ಪಕ್ಷಗಳಿಗೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಭಾರತೀಯ ಮೂಲದ ಬ್ರಿಟಿಷ್ ಶಿಕ್ಷಣ ತಜ್ಞ ಪ್ರೊಫೆಸರ್ ನಿತಾಶಾ ಕೌಲ್ ಅವರು ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿ, 1930ರ ದಶಕದ ಜರ್ಮನಿ ಶೈಲಿಯ ಕಾರ್ಟೂನ್ ಎಂದು ಇದನ್ನು ಬಣ್ಣಿಸಿದ್ದಾರೆ. ನಾಝಿಗಳು ಅಪಪ್ರಚಾರಕ್ಕೆ ಇಂಥ ವಿಡಿಯೊ ಬಳಸುತ್ತಿದ್ದರು. ಇದು ಚುನಾವಣಾ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಕೆಪಿ ಸಿಂಗ್ ಎಂಬವರು, ಸಮಾಜದಲ್ಲಿ ದ್ವೇಷವನ್ನು ಹರಡುವ ಗುರಿಯನ್ನು ಹೊಂದಿರುವ ಈ ದ್ವೇಷಪೂರಿತ ಮತ್ತು ಕೋಮುವಾದಿ ಪೋಸ್ಟ್ ವಿರುದ್ಧ ಕಾಂಗ್ರೆಸ್ ಪ್ರಕರಣ ದಾಖಲಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಶ್ರೀನಿವಾಸ್ ಕಾರ್ಕಳ ಎಂಬವರು ಎಕ್ಸ್ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಜನರನ್ನು ಎಲ್ಲಾ ಸಮಯದಲ್ಲೂ ಮರುಳು ಮಾಡಲು ಸಾಧ್ಯವಿಲ್ಲ. ದ್ವೇಷವೂ ಕೊನೆಯನ್ನು ಕಾಣಲಿದೆ. ನನ್ನ ಮಾತುಗಳನ್ನು ನೆನಪಿಟ್ಟುಕೊಳಳಿ, ಬಿಜೆಪಿ ಈ ಚುನಾವಣೆಯಲ್ಲಿ ದೊಡ್ಡ ರೀತಿಯಲ್ಲಿ ಸೋಲಲಿದೆ ಎಂದು ಹೇಳಿದ್ದು, ಈ ಪೋಸ್ಟ್ನ್ನು ಕರ್ನಾಟಕದ ಸಿಎಂ, ಡಿಸಿಎಂ ಗೃಹಸಚಿವರು ಮತ್ತು ಡಿಜಿಪಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇಂತಹ ವಿಷಪೂರಿತ ಕಸದ ಬಗ್ಗೆ ಮಾತ್ರ ಹತ್ತು ವರ್ಷ ಅಧಿಕಾರದಲ್ಲಿದ್ದ ಸರ್ಕಾರಕ್ಕೆ ಮಾತನಾಡಲಿದೆ. ಚುನಾವಣಾ ಆಯೋಗವು ತಪ್ಪು ಮಾಹಿತಿ ಮತ್ತು ವಿಭಜನೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಲವಾಗಿ ಹೇಳುತ್ತಿದೆ. ಇದನ್ನು ಪ್ರಧಾನಿ ಮೋದಿಯವರು ಮುಂಭಾಗದಿಂದ ಮುನ್ನಡೆಸುತ್ತಿದ್ದಾರೆ, ಅವರ ಹೆಸರನ್ನು ಕೂಡ ಚುನಾವಣಾ ಆಯೋಗ ಉಲ್ಲೇಖಿಸುವುದಿಲ್ಲ, ಈ ಬಗ್ಗೆ ನ್ಯಾಯಾಲಯ ನಿಗಾ ವಹಿಸುತ್ತಾ? ಎಂದು ಸೀಮಾ ಎಂಬವರು ಪ್ರತಿಕ್ರಿಯಿಸಿದ್ದಾರೆ.
ಇದು ಮುಸ್ಲಿಮರು ಮತ್ತು ಎಸ್ಸಿ, ಎಸ್ಟಿ, ಒಬಿಸಿಗಳ ವಿರುದ್ಧದ ಬ್ರಾಹ್ಮಣ ಬನಿಯಾ ಬಿಜೆಪಿಯ ದ್ವೇಷದ ಭಾಗವಾಗಿದೆ. ಬಿಜೆಪಿ SC ST OBC ಮುಸ್ಲಿಂ ಕ್ರಿಶ್ಚಿಯನ್ ಸಿಖ್ಖರು ಜಗಳವಾಡಬೇಕೆಂದು ಬಯಸುತ್ತದೆ ಇನ್ನೋರ್ವ ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಇವು ಮಾತ್ರ ನಿಮಗೆ ತಿಳಿದಿರುವ ತಂತ್ರಗಳು. 2024ರ ಮತದಾರ 2014ರಂತೆಯೇ ಇಲ್ಲ. ಕನ್ನಡಿಗರು ಈ ಬಾರಿ ನಿಮಗೆ ಸಂಪೂರ್ಣ ಸೋಲಿನ ರುಚಿ ತೋರಿಸುತ್ತಾರೆ ಎಂದು ಇಂಡಿಯನ್ ಡಾಕ್ಟರ್ ಎಂಬ ಎಕ್ಸ್ ಖಾತೆಯು ಪ್ರತಿಕ್ರಿಯಿಸಿದೆ.
ಸೂರಜ್ ಯಾದವ್ ಎಂಬವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಖಾತೆಯು ಯಾವುದೇ ಸಮುದಾಯದ ವಿರುದ್ಧ ದ್ವೇಷವನ್ನು ಹರಡಲು ಮುಕ್ತವಾಗಿದೆಯೇ? ನೀವು ಅಂತಹ ವಿಷಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಎಕ್ಸ್ಗೆ ಪೋಸ್ಟ್ನ್ನು ಟ್ಯಾಗ್ ಮಾಡಿದ್ದು, ಬಿಜೆಪಿ ಎಕ್ಸ್ ಖಾತೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಯಾಸಿರ್ ಅಹ್ಮದ್ ಎಂಬವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಿಮ್ಮ ನಿಜವಾದ ಬಣ್ಣಗಳನ್ನು ತೋರಿಸುವ ಮಾರ್ಗ, ನಿಮ್ಮ ವಿಷಕಾರಿ ರಾಜಕಾರಣ ಕರ್ನಾಟಕಕ್ಕೆ ಬೇಕಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ತಲಪತಿ ರಿಶಿ ಎಂಬವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದ್ವೇಷ ಹರಡಬೇಡಿ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ರೀತಿ ಹಲವರು ಬಿಜೆಪಿಗೆ ‘ಸುಳ್ಳು ಮತ್ತು ದ್ವೇಷವನ್ನು ಹರಬೇಡಿ’ ಎಂದು ಎಕ್ಸ್ನಲ್ಲಿ ಪಾಠ ಮಾಡಿದ್ದಾರೆ.
ಎಚ್ಚರ.. ಎಚ್ಚರ.. ಎಚ್ಚರ..! pic.twitter.com/Pr75QHf4lI
— BJP Karnataka (@BJP4Karnataka) May 4, 2024
ಇದನ್ನು ಓದಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ