ಆರ್ಟಿಐ ಕಾರ್ಯಕರ್ತ ಮತ್ತು ಪರಿಸರವಾದಿ ಅಮಿತ್ ಜೇತ್ವಾ ಹತ್ಯೆ ಪ್ರಕರಣದಲ್ಲಿ ಜುನಾಗಡದ ಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಲಂಕಿ ಮತ್ತು ಇತರ ಆರು ಜನರನ್ನು ಗುಜರಾತ್ ಹೈಕೋರ್ಟ್ ಖುಲಾಸೆಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ ಮತ್ತು ವಿಮಲ್ ಕೆ ವ್ಯಾಸ್ ಅವರ ಪೀಠ ಇಂದು ಸತ್ಯಮೇವ ಜಯತೇ. ಸತ್ಯಕ್ಕೆ ಜಯ ಸಿಗಬೇಕು ಎಂದು ದಿನು ಬೋಘಾ ಸೋಲಂಕಿ ಸೆರಿದಂತೆ ಇತರ ಆರೋಪಿಗಳನ್ನು ಪ್ರಕರಣದಲ್ಲಿ ಖುಲಾಸೆಗೊಳಿಸುವಾಗ ಹೇಳಿದೆ.
ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಪ್ರಕರಣವನ್ನು ಪೊಲೀಸರು ಮತ್ತು ವಿಚಾರಣಾ ನ್ಯಾಯಾಲಯವು ನಿರ್ವಹಿಸಿದ ರೀತಿಯನ್ನು ಟೀಕಿಸಿದೆ. ಸತ್ಯವನ್ನು ಸಮಾಧಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಹೈಕೋರ್ಟ್ ಟೀಕಿಸಿದೆ. ಅಪರಾಧದ ತನಿಖೆಯು ಆರಂಭದಿಂದಲೂ ಕಾಟಾಚಾರದಿಂದ ಕೂಡಿದೆ ಮತ್ತು ಪೂರ್ವಾಗ್ರಹ ಪೀಡಿತವಾಗಿತ್ತು. ಸಾಕ್ಷಿಗಳ ವಿಶ್ವಾಸವನ್ನು ಗಳಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲಗೊಂಡಿದೆ. ಕೊಲೆ ನಡೆದಾಗ ದೂರುದಾರ ಪೋಲಿಸ್ ಕಾನ್ಸ್ಟೇಬಲ್ ಸ್ಥಳದಲ್ಲಿದ್ದರು, ಅವರು ಓಡಿ ಪರಾರಿಯಾಗುತ್ತಿದ್ದ ದಾಳಿಕೋರರನ್ನು ಬೆನ್ನಟ್ಟಿದ್ದರು. ಮೊದಲ ತನಿಖಾಧಿಕಾರಿ ಕೇವಲ 55 ಸೆಕೆಂಡ್ಗಳಲ್ಲಿ ಮತ್ತು ಹಿರಿಯ ಪೋಲಿಸ್ ಅಧಿಕಾರಿ 20 ನಿಮಿಷಗಳಲ್ಲಿ ಘಟನಾ ಸ್ಥಳವನ್ನು ತಲುಪಿದ್ದರು, ಆದರೆ ದಾಳಿಕೋರರನ್ನು ತಕ್ಷಣಕ್ಕೆ ಬಂಧಿಸಲು ಸಾಧ್ಯವಾಗದಿರುವುದು ದಿಗ್ಭ್ರಮೆಯನ್ನು ಮೂಡಿಸಿದೆ ಮತ್ತು ಸತ್ಯವನ್ನು ಮುಚ್ಚಿ ಹಾಕಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ದೋಷಿಯೆಂದು ಹೇಳಿದ ಜುಲೈ 11, 2019ರ ಕೆಳ ನ್ಯಾಯಾಲಯದ ತೀರ್ಪನ್ನು ನಾವು ರದ್ದುಗೊಳಿಸಿದ್ದೇವೆ, ಮೇಲ್ಮನವಿದಾರರನ್ನು ನಾವು ದೋಷಮುಕ್ತಗೊಳಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ.
ಅಮಿತ್ ಜೇಥ್ವಾ ಅವರು ಆರ್ಟಿಐ ಕಾರ್ಯಕರ್ತ ಮತ್ತು ಪರಿಸರವಾದಿಯಾಗಿದ್ದಾರೆ. ಅವರು ಆರ್ಟಿಐಯಡಿ ಮಾಹಿತಿಗಳನ್ನು ಪಡೆದು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಕರಣಗಳನ್ನು ದಾಖಲಿಸುತ್ತಿದ್ದರು. ಅವರನ್ನು 2010ರ ಜುಲೈನಲ್ಲಿ ಗುಜರಾತ್ ಹೈಕೋರ್ಟಿನ ಗೇಟ್ನ ಹೊರಗಡೆ ಮೋಟಾರ್ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅವರ ಹತ್ಯೆಗೆ ಸುಮಾರು ಒಂದು ತಿಂಗಳ ಮೊದಲು, ಅವರು ಗಿರ್ ಅರಣ್ಯದ ಸುತ್ತ ಅಕ್ರಮ ಗಣಿಗಾರಿಕೆ ಬಗ್ಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಬಿಜೆಪಿಯ ಮಾಜಿ ಸಂಸದ ಸೋಲಂಕಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಅವರು ದಾಖಲೆಯನ್ನು ಕೂಡ ಕೋರ್ಟ್ಗೆ ಸಲ್ಲಿಸಿದ್ದರು.
ಅಮಿತ್ ಜೇಥ್ವಾ ಹತ್ಯೆ ಪ್ರಕರಣವನ್ನು ಹೈಕೋರ್ಟ್ 2012ರಲ್ಲಿ ಸಿಬಿಐ ತನಿಖೆಗೆ ವಹಿಸಿದೆ. 2019ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಈ ಕೊಲೆ ಪ್ರಕರಣದಲ್ಲಿ ಸೋಲಂಕಿ ಮತ್ತು ಅವರ ಸೋದರಳಿಯ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪನ್ನು ಈಗ ಹೈಕೋರ್ಟ್ ರದ್ದುಗೊಳಿಸಿದೆ.
"Truth buried forever": Gujarat High Court acquits ex-BJP MP Dinu Solanki, 6 others in murder of activist
Read full story: https://t.co/CrSqity35t pic.twitter.com/FFlXMxXlL3
— Bar and Bench (@barandbench) May 6, 2024
ಇದನ್ನು ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ: ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ನಿರ್ಬಂಧ