ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿಯನ್ನು ರದ್ದುಗೊಳಿಸುವ ಉದ್ದೇಶದಿಂದ ಬಿಜೆಪಿ ಮತ್ತು ಆರ್ಎಸ್ಎಸ್ ಸಂವಿಧಾನದ ವಿರುದ್ಧ ಸಮರ ಸಾರಿವೆ ಎಂದು ಆರೋಪಿಸಿರುವ ತೆಲಂಗಾಣದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಮೀಸಲಾತಿ ರದ್ದುಗೊಳಿಸುವ ಉದ್ದೇಶದಿಂದಲೇ ಬಿಜೆಪಿ 400 ಸ್ಥಾನ ಗೆಲ್ಲುವ ಪಣ ತೊಟ್ಟಿದೆ ಎಂದಿದ್ದಾರೆ.
“ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಲು ಬಿಜೆಪಿ 400 ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಇದು ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಲು ಅನುವು ಮಾಡಿಕೊಡುತ್ತದೆ. ಆರ್ಎಸ್ಎಸ್ 2025ರ ವೇಳೆಗೆ ಮೀಸಲಾತಿ ರದ್ದುಪಡಿಸುವ ಗುರಿ ಹೊಂದಿದೆ ಎಂದು ಅದರ ನಾಯಕರು ಹಲವಾರು ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದಾರೆ” ಎಂದು ರೇವಂತ್ ರೆಡ್ಡಿ ಆರೋಪಿಸಿದ್ದಾರೆ.
ಎಐಸಿಸಿ ಉಸ್ತುವಾರಿ ದೀಪಾ ದಾಸ್ಮುಂಶಿ, ಸಹ ಉಸ್ತುವಾರಿ ರೋಹಿತ್ ಚೌಧರಿ, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಟಿಪಿಸಿಸಿ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್, ಸಚಿವರಾದ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಕೊಂಡ ಸುರೇಖಾ, ಪೊನ್ನಂ ಪ್ರಭಾಕರ್ ಮತ್ತಿತರ ಜೊತೆ ಹೈದರಾಬಾದ್ನ ಗಾಂಧಿ ಭವನದಲ್ಲಿ ಬಿಜೆಪಿಯ 10 ವರ್ಷಗಳ ಆಡಳಿತದ ವಿರುದ್ಧದ ಆರೋಪಪಟ್ಟಿ (ಚಾರ್ಜ್ ಶೀಟ್) ಬಿಡುಗಡೆ ಮಾಡಿ ರೇವಂತ್ ರೆಡ್ಡಿ ಮಾತನಾಡಿದ್ದಾರೆ.
“ಬಿಜೆಪಿಗೆ ಮತ ಹಾಕಿದರೆ ದೇಶದಲ್ಲಿ ಮೀಸಲಾತಿ ವ್ಯವಸ್ಥೆ ರದ್ದುಪಡಿಸಲು ಸಹಕಾರಿಯಾಗುತ್ತದೆ ಎಂದು ಎಚ್ಚರಿಸಿದ ಮುಖ್ಯಮಂತ್ರಿ, ತೆಲಂಗಾಣದಲ್ಲಿ ಕೇಸರಿ ಪಕ್ಷಕ್ಕೆ ಒಂದೇ ಒಂದು ಸ್ಥಾನ ಬಂದರೆ ಅದು ಅವರ (ಎಸ್ಸಿ, ಎಸ್ಟಿ ಮತ್ತು ಒಬಿಸಿ) ಹಕ್ಕುಗಳನ್ನು ಕಸಿದುಕೊಳ್ಳಲಿದೆ. ಈ ಚುನಾವಣೆ ಮೀಸಲಾತಿ ರದ್ದತಿಯ ವಿರುದ್ದದ ಹೋರಾಟವಾಗಿದೆ” ಎಂದು ರೇವಂತ್ ಹೇಳಿದ್ದಾರೆ.
ಒಬಿಸಿಗಳಿಗೆ ಮೀಸಲಾತಿ ಶಿಫಾರಸು ಮಾಡಿದ್ದ ಮಂಡಲ್ ಆಯೋಗದ ವರದಿಯ ಅನುಷ್ಠಾನವನ್ನು ಬಿಜೆಪಿ ವಿರೋಧಿಸಿತ್ತು ಎಂದು ನೆನಪಿಸಿಕೊಂಡ ರೇವಂತ್ ರೆಡ್ಡಿ, ಆ ಸಮಯದಲ್ಲಿ, ಬಿಜೆಪಿಯ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಅವರು ಕೋಮು ದ್ವೇಷವನ್ನು ಹರಡುವ ರಥದಲ್ಲಿ ದೇಶಾದ್ಯಂತ ಪ್ರವಾಸ ಮಾಡಿದ್ದರು. ಇದರಿಂದಾಗಿ ಮೀಸಲಾತಿಯಿಂದ ಗಮನವನ್ನು ಬೇರೆಡೆಗೆ ತಿರುಗಿಸಲಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ : ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್ ನೀಡಿದ ಚುನಾವಣಾ ಆಯೋಗ!