HomeUncategorizedಯಡಿಯೂರಪ್ಪ ಪದಚ್ಯುತಿ; ದುಃಖಕ್ಕೂ ಸಂಭ್ರಮಕ್ಕೂ ಯೋಗ್ಯವಲ್ಲದ ಬದಲಾವಣೆ

ಯಡಿಯೂರಪ್ಪ ಪದಚ್ಯುತಿ; ದುಃಖಕ್ಕೂ ಸಂಭ್ರಮಕ್ಕೂ ಯೋಗ್ಯವಲ್ಲದ ಬದಲಾವಣೆ

- Advertisement -
- Advertisement -

ಈ ಸಾರಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡ ದಿನದಿಂದಲೇ ಅವರ ಬದಲಾವಣೆಯ ಸುದ್ದಿ ಹರಡತೊಡಗಿತ್ತು. ಅಂತಹದೊಂದು ಸುದ್ದಿ ಸದಾಕಾಲ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳುವುದರಲ್ಲಿ ಕೆಲವರ ಹಿತಾಸಕ್ತಿಯೂ ಇದ್ದಿರಬಹುದು. ಅದನ್ನು ಬಲವಾಗಿ ಎದುರಿಸಿ ಪೂರಾ ಎರಡು ವರ್ಷ ಅಧಿಕಾರ ನಡೆಸಿದ ಯಡಿಯೂರಪ್ಪನವರ ಜಿಗುಟುತನವೂ ಎದ್ದುಕಂಡ ಒಂದು ಸಂಗತಿಯಾಗಿತ್ತು.

ಆದರೆ ಈ ಬದಲಾವಣೆಯಿಂದ ಕೆಲವರು ವಿಚಿತ್ರ ಕಾರಣಗಳಿಗಾಗಿ ದುಃಖಿತರಾದಂತೆ
ತೋರಿಸಿಕೊಳ್ಳುತ್ತಾ ಸಂಭ್ರಮಪಡುತ್ತಿದ್ದು ವಿಚಿತ್ರವಾಗಿತ್ತು. ಅದು ಕರ್ನಾಟಕವು ಸಂಪೂರ್ಣವಾಗಿ ಮತೀಯ ಶಕ್ತಿಗಳ ಕೈಗೆ ಹೋಗಿಬಿಡಬಾರದು ಎಂಬ ಸದ್ಬಯಕೆ ಹೊಂದಿದ್ದವರ ದುಃಖಭರಿತ ಸಂಭ್ರಮ. ಯಡಿಯೂರಪ್ಪ ಇದ್ದುದರಲ್ಲಿ ಪರವಾಗಿಲ್ಲ ಎಂದು ಹೇಳುತ್ತಲೇ, ಅವರ ಬದಲಾವಣೆಯಿಂದ ಲಿಂಗಾಯಿತರು ಬಿಜೆಪಿಯ ವಿರುದ್ಧ ತಿರುಗಿಬೀಳಲಿ ಎಂಬ ಆಶಯ ಅವರದ್ದು. ಇದೀಗ ಒಂದೆಡೆ ಯಡಿಯೂರಪ್ಪನವರ ಆಪ್ತ ಎಂಬಂತೆ ಬಿಂಬಿತವಾಗಿ ಈಗ ಹೈಕಮಾಂಡ್‌ನ ಆಯ್ಕೆಯೂ ಆಗಿರುವ, ಮೂಲತಃ ಸಂಘಪರಿವಾರದವರಲ್ಲದ, ಗೃಹ ಸಚಿವರಾಗಿದ್ದಾಗ ಆರೆಸ್ಸೆಸ್‌ಗೆ ಪೂರಕವಾಗಿಯೇ ಖಾತೆ ನಿರ್ವಹಿಸಿದ ವೀರಶೈವ ಲಿಂಗಾಯಿತ ಬಸವರಾಜ ಬೊಮ್ಮಾಯಿಯವರು ಸಿಎಂ ಗಾದಿಗೇರುತ್ತಿರುವ ಹೊತ್ತಿನಲ್ಲಿ ಅಂತಹವರ ಭಾವವೇನಾಗಿದೆಯೋ ಇನ್ನೂ ಗೊತ್ತಾಗಿಲ್ಲ.

ಇನ್ನು ಲಿಂಗಾಯಿತ ಮಠಗಳ ಮುಖ್ಯಸ್ಥರದ್ದು ದುಃಖವೋ, ಸಂಭ್ರಮವೋ ಗೊತ್ತಾಗುತ್ತಿರಲಿಲ್ಲ. ಅವರಿಗೆ ಇದ್ದಕ್ಕಿದ್ದ ಹಾಗೆ ರಾಜ್ಯ ರಾಜಕಾರಣದಲ್ಲಿ ಎಲ್ಲಿಲ್ಲದ ಮಹತ್ವ ಬಂದಿದ್ದು, ರಾಜ್ಯಮಟ್ಟದಲ್ಲಿ ಹೆಸರೇ ಕೇಳಿರದ ಕಾವಿಧಾರಿಗಳು ಪತ್ರಿಕಾಗೋಷ್ಠಿಗಳಲ್ಲಿ ಮಿಂಚಿದ್ದು, ಯಾವ ಲಜ್ಜೆಯೂ ಇಲ್ಲದೇ ಹಣ ಪಡೆದು ಗುಟುರು ಹಾಕಿದ್ದು, ಸರ್ಕಾರೀ ಅತಿಥಿಗೃಹದಿಂದ ಬೆಡ್‌ಶೀಟ್ ಹೊತ್ತೊಯ್ದರೆಂಬ ಆರೋಪಕ್ಕೆ ತುತ್ತಾಗಿದ್ದು ಇವೆಲ್ಲವೂ ಅವರಿಗೆ ನಿಜವಾದ ಸಿಟ್ಟಿಗಿಂತ ಮೋಜಿರಬಹುದು ಎಂಬ ಭಾವ ಮೂಡಿಸುತ್ತಿತ್ತು.

ಬಿಜೆಪಿಯ ಮಾಧ್ಯಮಗಳದ್ದು ಇನ್ನೊಂದು ವಿಶಿಷ್ಟ ಸ್ಥಿತಿ. ಒಂದೆಡೆ ತಮ್ಮಿಷ್ಟದ ಪಕ್ಷದಲ್ಲಿ ಆಗುತ್ತಿರುವ ತುಮುಲದಿಂದ ಡ್ಯಾಮೇಜ್ ಆಗಿಬಿಡುತ್ತದೇನೋ ಎಂಬ ಆತಂಕ; ಇನ್ನೊಂದೆಡೆ ಟಿಆರ್‌ಪಿಗಾಗಿ ಅರಚಾಡುತ್ತಾ ಗಾಳಿಸುದ್ದಿಗಳನ್ನು ತೇಲಿಬಿಡುವ ಉಮೇದು.

ವಾಸ್ತವದಲ್ಲಿ ಕರ್ನಾಟಕದ ಪ್ರಜ್ಞಾವಂತರು ಗಂಭೀರವಾಗಿ ತಲೆಕೆಡಿಸಿಕೊಳ್ಳಬೇಕಾದ ವಿದ್ಯಮಾನವಿದು. ಯಡಿಯೂರಪ್ಪ ಎಂಬ ವಿದ್ಯಮಾನ ಈಗಲೂ ಸಂಪೂರ್ಣವಾಗಿ ಮರೆಗೆ ಸರಿಯದೇ ಇದ್ದರೂ, ಇನ್ನೇನಿದ್ದರೂ ತೆರೆಯ ಹಿಂದಿನ ಚಟುವಟಿಕೆಯಷ್ಟೇ ಕೆಲಕಾಲ ನಡೆದು, ಕಾಲನ ಸೂಚನೆಗೆ ತಕ್ಕಂತೆ ವಿಶ್ರಾಂತ ಜೀವನ ನಡೆಸಬೇಕಾದ ಸ್ಥಿತಿ ಅವರದ್ದು. ಆದರೆ ಬಹಳಷ್ಟು ಜನರು ಚಿತ್ರಿಸುತ್ತಿರುವಂತೆ ಮತ್ತು ಸ್ವತಃ ಅವರೇ ವಿದಾಯ ಭಾಷಣದಲ್ಲಿ ಬಿಂಬಿಸಿಕೊಂಡಂತೆ ಯಡಿಯೂರಪ್ಪನವರದ್ದು ಜನಪರ ಹೋರಾಟ, ಮತೀಯ ರಾಜಕಾರಣವಲ್ಲದ ಭಿನ್ನ ನಡೆ, ತಳಹಂತದಿಂದ ಬಿಜೆಪಿಯನ್ನು ಕಟ್ಟಿದ ಶ್ರಮಜೀವಿಯ ಜೀವನ ಎಂಬುದೆಲ್ಲಾ ನಿಜವೇ? ಅಥವಾ ಎಂಬುದಷ್ಟೇ ನಿಜವೇ? ಎಲ್ಲಾ ರಾಜಕಾರಣಿಗಳಂತೆ ಒಂದಷ್ಟು ಭ್ರಷ್ಟರೇ ಹೊರತು ಅವರನ್ನು ಮಾತ್ರ ಏಕೆ ಗುರಿ ಮಾಡಬೇಕು ಎಂಬ ಮಾತುಗಳಲ್ಲಿ ಹುರುಳಿದೆಯೇ?

ಉಳಿದ ಸರ್ಕಾರಗಳೇನೂ ಸಾಚಾ ಅಲ್ಲವಾದರೂ, ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಇದಾಗಿತ್ತು ಎನ್ನಲು ಕಾರಣಗಳಿವೆ; ಸಂವಿಧಾನ ಬಾಹಿರ ಶಕ್ತಿಯೊಂದು ಸರ್ಕಾರದ ಆಡಳಿತದಲ್ಲಿ ಕೈ ಹಾಕಿ, ಅತೀ ಹೆಚ್ಚು ಆದಾಯ ತರುತ್ತಿದ್ದ ಇಲಾಖೆಗಳ ಮೇಲೆ ನೇರ ಹಿಡಿತವನ್ನೂ ಸಾಧಿಸಿದ ಪರಿ ಹಿಂದೆಂದೂ ಈ ಮಟ್ಟಿಗೆ ಕರ್ನಾಟಕದಲ್ಲಿ ಕಂಡಿರಲಿಲ್ಲ. ಬಿಜೆಪಿಯ ಹೈಕಮಾಂಡ್ ಇದೇ ಕಾರಣಕ್ಕೆ ಯಡಿಯೂರಪ್ಪನವರನ್ನು ತೆಗೆಯಿತೆಂಬುದೂ ವಾಸ್ತವವಲ್ಲ. ಹೀಗಾಗಿ ಯಡಿಯೂರಪ್ಪನವರು ಕಣ್ಣೀರು ಹಾಕಿದ ಹೊತ್ತಿನಲ್ಲಿ ಅಕ್ಷರಗಳೂ ಅನಗತ್ಯ ಭಾವುಕವಾಗದೇ ಸತ್ಯವನ್ನು ಒರೆಗೆ ಹಚ್ಚುವ ಕೆಲಸ ಮಾಡುವ ಅಗತ್ಯವಿದೆ. ಇದೇ ಬಿಜೆಪಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಎಂಬೊಬ್ಬ ದೊಡ್ಡ ನಾಯಕರಿದ್ದರು. ಆರೆಸ್ಸೆಸ್‌ನ ಸ್ವಯಂಸೇವಕರಾಗಿದ್ದ ಅವರು ಸೈದ್ಧಾಂತಿಕ ವಿರೋಧಿಗಳಿಗೂ ಪ್ರೀತಿಪಾತ್ರರಾಗಿದ್ದರು. ಅವರು ಹಾಗಿದ್ದುದರಿಂದ ಅದೇ ಪಾತ್ರವನ್ನು ಅವರಿಗೆ ವಹಿಸಲಾಗಿತ್ತು.

ಬಾಬ್ರಿ ಮಸೀದಿ ಧ್ವಂಸವಾದ ದಿನ ಮಾಧ್ಯಮಗಳ ಮುಂದೆ ಮಾತಾಡಿ ಅದನ್ನು ಖಂಡಿಸಿದ ವಾಜಪೇಯಿ, ಅದೇ ಧ್ವಂಸ ಮತ್ತು ಅದರಿಂದುಂಟಾದ ಧ್ರುವೀಕರಣದ ಫಲವಾಗಿಯೇ ಪ್ರಧಾನಿಯೂ ಆದರು. ಏಕೆಂದರೆ ಖುದ್ದಾಗಿ ಧ್ವಂಸ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಡ್ವಾಣಿಯವರೇ ಪ್ರಧಾನಿಯಾಗುವ ಸಂದರ್ಭವಿನ್ನೂ ದೇಶದ ರಾಜಕಾರಣದಲ್ಲಿ ಬಂದಿರಲಿಲ್ಲ. ಹಾಗೆಯೇ ಕರ್ನಾಟಕದಲ್ಲಿ ಅನಂತ ಕುಮಾರ ಹೆಗಡೆಯೋ, ಸಿ.ಟಿ.ರವಿಯೋ, ಬಿ.ಎಲ್.ಸಂತೋಷೋ ಮುಖ್ಯಮಂತ್ರಿಯಾಗುವ ಸಂದರ್ಭ ಇನ್ನೂ ಬಂದಿಲ್ಲವೆಂಬ ಕಾರಣಕ್ಕೇ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅಂತಹುದೇ ಕಾರಣಗಳಿಂದ ತಳಮಟ್ಟದ ವಾಜಪೇಯಿ ಗುಣಗಳನ್ನು ಹೊಂದಿದ್ದ ಯಡಿಯೂರಪ್ಪ ಬಿಜೆಪಿಯ ದೊಡ್ಡ ನಾಯಕರಾದರು ಮತ್ತು ಪ್ರತೀ ಹಂತದಲ್ಲೂ ರಾಜ್ಯದಲ್ಲಿ ಮತೀಯವಾದ ಬೆಳೆಯಲು ಬೇಕಾದ ನೀರು, ಗೊಬ್ಬರವನ್ನೆರೆದರು.

ಅದರ ಜೊತೆಜೊತೆಗೇ ಸ್ವಂತ ಅಧಿಕಾರದ ಆಸೆಯನ್ನೂ ವಿಪರೀತ ಬೆಳೆಸಿಕೊಳ್ಳುತ್ತಾ ಬಂದಿದ್ದರು. ಹಾಗಾಗಿಯೇ ಅವರು ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಒಂದು ರಾತ್ರಿ ಶೋಭಾ ಕರಂದ್ಲಾಜೆಯವರ ಜೊತೆಗೆ ಕುಮಾರಸ್ವಾಮಿಯವರ ಮನೆ ಬಾಗಿಲು ಬಡಿದು, ನೀವು ಸಿಎಂ ಆಗಿ ನಾವು ಬಂದು ಬೆಂಬಲ ಕೊಡುತ್ತೇವೆ, ನಮ್ಮನ್ನು ಮಂತ್ರಿಗಳನ್ನಾಗಿಸಿದರೆ ಸಾಕು ಎಂದಿದ್ದರು. ಕೆಲ ತಿಂಗಳ ನಂತರ ಕುಮಾರಸ್ವಾಮಿ ಜೊತೆ ಸೇರಿ ಉಪಮುಖ್ಯಮಂತ್ರಿಯೂ ಆದರು. ಅದರ ನಂತರ ಒಪ್ಪಂದದಂತೆ ಇವರು ಸಿಎಂ ಆಗಲು ಜೆಡಿಎಸ್ ಬೆಂಬಲ ಕೊಡಲ್ಲ ಎಂದಾಗ ಸಿದ್ಧಗಂಗಾ ಮಠದ ಮುಖ್ಯಸ್ಥರಿಗೆ ನಮಸ್ಕರಿಸಿ ರಾಜ್ಯ ಪ್ರವಾಸ ಮಾಡಿ ಹೋರಾಡುತ್ತೇನೆಂದು ಹೊರಟವರು, ಬನ್ನಿ ಬೆಂಬಲ ಕೊಡುತ್ತೇವೆಂದು ಕರೆದಾಗ ಮತ್ತೆ ಬಂದು ಪ್ರಮಾಣವಚನ ಸ್ವೀಕರಿಸಿದ್ದರು. ಮತ್ತೆ ಜೆಡಿಎಸ್ ಕೈ ಕೊಟ್ಟಿತು.

ಆ ನಂತರದ ಚುನಾವಣೆಯಲ್ಲೂ ಬಹುಮತ ಬಾರದಿದ್ದಾಗ ಪಕ್ಷೇತರರಿಂದ ಬೆಂಬಲ ಪಡೆದು ಸಿಎಂ ಆದವರು ಅಲ್ಲಿಗೇ ನಿಲ್ಲದೇ, ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ಗಣಿ ಪಾತಕದ ಹಣದಿಂದ ಲೋಡುಗಟ್ಟಲೇ ಶಾಸಕರನ್ನು ರಾಜೀನಾಮೆ ಕೊಡಿಸಿ, ಮಂತ್ರಿಗಳನ್ನಾಗಿಸಿ, ಮತ್ತೆ ಗೆಲ್ಲಿಸಿಕೊಂಡು ಬರುವ ಅಸಹ್ಯದ ಆಪರೇಷನ್‌ಅನ್ನು ಎಗ್ಗಿಲ್ಲದೇ ಮಾಡಿದರು.

ಪೂರ್ಣ ಬಹುಮತದ ಸಿಎಂ ಆದವರು, ರೆಡ್ಡಿಗಳ ಬಲವಿಲ್ಲದೇ ಅಧಿಕಾರದಲ್ಲುಳಿಯಲು ಬೇಕಾದ ಹಣವನ್ನು ಗುಡ್ಡೆ ಹಾಕಿಕೊಳ್ಳತೊಡಗಿದರು. ಚೆಕ್‌ನಲ್ಲಿ ಲಂಚ ಸ್ವೀಕರಿಸಿದ, ಜೈಲಿಗೆ ಹೋದ ಮೊದಲ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಅವರದ್ದು. ಆಗಲೂ ಅಧಿಕಾರ ಬಿಡಲು ಒಪ್ಪದೇ ಎಳೆದಾಡಿದ್ದು, ಎರಡೆರಡು ಬಾರಿ ಸಿಎಂ ಬದಲಾವಣೆಗೆ ಕಾರಣವಾಗಿದ್ದು, ಪಕ್ಷವನ್ನೂ ಬಿಟ್ಟು ಹೋಗಿದ್ದು ಎಲ್ಲವೂ ನಡೆದು ಬಹಳ ಕಾಲವಾಗಿಲ್ಲ.
ಆ ಅವಧಿಯ ನಂತರದ ಚುನಾವಣೆಯಲ್ಲಿ ಹಿಂದಿಗಿಂತ ಕಡಿಮೆ ಸೀಟುಗಳು ಬಂದಿದ್ದಲ್ಲದೇ, ಜೆಡಿಎಸ್ ಮತ್ತು ಕಾಂಗ್ರೆಸ್‌ಗಳು ಬಹಿರಂಗವಾಗಿ ಒಟ್ಟಿಗೆ ನಿಂತರೂ ಬಿಡದೇ ಪ್ರಮಾಣವಚನ ಸ್ವೀಕರಿಸಿದರು. ಎಚ್‌ಡಿಕೆ ಸಿಎಂ ಆದ ಮೇಲೆ ನಿರಂತರವಾಗಿ ಆ ಸರ್ಕಾರ ಕೆಡವಲು ಹಿಂದಿನಿಂದ ಹುನ್ನಾರ ನಡೆಸಿದ ಯಡಿಯೂರಪ್ಪನವರು ಮತ್ತೊಮ್ಮೆ ಅಸಹ್ಯದ ಆಪರೇಷನ್‌ಗೆ ಕೈ ಹಾಕಿದ್ದನ್ನು ರಾಜ್ಯದ ಪ್ರಜ್ಞಾವಂತ ಜನರು ಇಷ್ಟು ಸಲೀಸಾಗಿ ಹೇಗೆ ಮರೆತು ಹೋಗುತ್ತಾರೆ? ಹೇಗಾದರೂ ಸರಿ ಅಧಿಕಾರ ಹಿಡಿಯಬೇಕು, ಅಧಿಕಾರವಿದ್ದಾಗ ಲೂಟಿ ಹೊಡೆಯಬೇಕು ಮತ್ತು ಅಧಿಕಾರ ಬಿಟ್ಟುಕೊಡಬಾರದು ಎಂಬ ಅವರ ಧೋರಣೆಯನ್ನು ’ಮತೀಯವಾದಿ ಅಲ್ಲ, ಲಿಂಗಾಯಿತರ ಧ್ರುವೀಕರಣ ಮಾಡಿದರೂ ಇತರ ಜಾತಿಗಳನ್ನು ದ್ವೇಷಿಸುವುದಿಲ್ಲ, ತನ್ನ ಪರ ನಿಂತವರು ಎಂತಹ ಭ್ರಷ್ಟರೂ ನಾಲಾಯಕ್‌ಗಳಾದರೂ ಅವರ ಹಿತ ಕಾಪಾಡುತ್ತಾರೆ’ ಎಂಬ ’ಮೌಲ್ಯಗಳನ್ನು ಮುಂದಿಟ್ಟು ಉಪೇಕ್ಷಿಸುವುದು ಹೇಗೆ?

ಯಡಿಯೂರಪ್ಪನವರು ಕೋಮುವಾದೇತರ ಇಶ್ಯೂಗಳಿಂದ ರಾಜಕೀಯವಾಗಿ ಮೇಲೆ ಬಂದರು ಎಂಬುದು ಅರ್ಧ ಸತ್ಯ. ಅವರ ಬೆಳವಣಿಗೆಯಿಂದ ಕೋಮುವಾದಿಗಳಿಗೆ ಅನುಕೂಲವಾಯಿತು ಎಂಬುದು ಪೂರ್ಣ ಸತ್ಯ. ಕೊರೊನಾ ಕಾಲದಲ್ಲಿ ತಬ್ಲಿಗಿ ಜಮಾತ್ ಘಟನೆಯನ್ನಿಟ್ಟುಕೊಂಡು ಮುಸ್ಲಿಮರ ವಿರುದ್ಧ ಮಾತಾಡಬಾರದು ಎಂದು ಮಾತಾಡಿದ್ದನ್ನು ಬಿಟ್ಟರೆ ಯಡಿಯೂರಪ್ಪ ಕೋಮುವಾದೀ ಸಂಚಿನ ವಿರುದ್ಧ ನಿಂತ ಯಾವ ಉದಾಹರಣೆಯೂ ಇಲ್ಲ. ಬಾಬಾಬುಡನ್‌ಗಿರಿಯಲ್ಲಿ ಒಮ್ಮೆ ಸ್ವತಃ ದತ್ತಮಾಲೆ ಹಾಕಿಕೊಂಡು ಹೋಗಿದ್ದ ಯಡಿಯೂರಪ್ಪ, ಆ ನಂತರ ಡೆಪ್ಯುಟಿ ಸಿಎಂ ಆದ ಸಂದರ್ಭದಲ್ಲಿ ರಾಮಸೇತು ನೆಪವಿಟ್ಟುಕೊಂಡು ಬಸ್‌ಗೆ ಬೆಂಕಿ ಹಾಕಿ ಇಬ್ಬರ ಜೀವಂತದಹನ ನಡೆದಾಗಲೂ ಅದನ್ನು ಖಂಡಿಸಲಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಹಾಗೂ ಅಟಲ್ ಬಿಹಾರಿ ವಾಜಪೇಯಿ ಥರದವರ ಮೋಡಸ್ ಒಪರಾಂಡಿಯನ್ನು ಸರಿಯಾಗಿ ಒರೆಗೆ ಹಚ್ಚಬೇಕಿದೆ. ಸಂವಿಧಾನ ಪರಾಮರ್ಶೆ ಹೆಸರಿನಲ್ಲಿ ಬದಲಾವಣೆಯ ಪ್ರಯತ್ನ ಶುರುವಾಗಿದ್ದು ಉದಾರವಾದಿ ವಾಜಪೇಯಿಯವರ ಕಾಲದಲ್ಲಿ. ಭಾರತದಲ್ಲಿರುವ ಸಂಕೀರ್ಣ ಸಾಮಾಜಿಕ ಸನ್ನಿವೇಶದಲ್ಲಿ ಹಲವು ಬಗೆಯ ಮುಖವಾಡಗಳು ಬೇಕಾಗುತ್ತವೆ. ಯಡಿಯೂರಪ್ಪನವರು ವ್ಯಕ್ತಿಗತ ಅಧಿಕಾರದ ಆಸೆಯ ಆಚೆಗೂ ಆ ಮುಖವಾಡದ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದರು. ಯಡಿಯೂರಪ್ಪನವರು ಮೊದಲ ಸಾರಿ ಸಿಎಂ ಆಗಿದ್ದಾಗ ’ಆಂತರಿಕ ಸಭೆಯಲ್ಲಿ ಹೇಳಬೇಕಿದ್ದ ಮಾತೊಂದನ್ನು’ ಅಪ್ಪಿತಪ್ಪಿ ಸಭಾಂಗಣದ ವೇದಿಕೆಯೊಂದರಿಂದ ಹೇಳಿಬಿಟ್ಟಿದ್ದರು. ಅದೂ ಪಠ್ಯಪುಸ್ತಕ ಬದಲಿಸುವ ವಿಚಾರದಲ್ಲಿ. ’ಪಠ್ಯಪುಸ್ತಕ ಬದಲಿಸುವ ವಿಚಾರವನ್ನು ಸುದ್ದಿ ಮಾಡುತ್ತಾ ಮಾಡಬೇಡಿ, ನೀವೇನು ಮಾಡಬೇಕೋ ಅದನ್ನು ಮಾಡಿಬಿಡಿ ಅಷ್ಟೇ’ ಎಂದಿದ್ದರು. ಹಾಗೇ ಮಾಡಿದರೂ ಸಹಾ. ಮುಖವಾಡಗಳಿಗೆ ಸಾಧ್ಯವಾಗುವ ಚಾಲಾಕಿತನ ಇಂಥಾದ್ದು.

ವಿವಿಧ ದಮನಿತ ಸಮುದಾಯಗಳನ್ನು ದಮನಕ ವೈದಿಕಶಾಹಿ ಸಿದ್ಧಾಂತದ ಬಿಜೆಪಿ ತೆಕ್ಕೆಗೆ ತರುವುದರಲ್ಲಿ ಯಡಿಯೂರಪ್ಪನವರದ್ದು ದೊಡ್ಡ ಪಾಲಿದೆ. ಕರ್ನಾಟಕದಲ್ಲೊಂದು ಸೋಷಿಯಲ್ ಎಂಜಿನಿಯರಿಂಗ್‌ಅನ್ನು ಸಾಧಿಸುವುದರಲ್ಲಿ ಆರೆಸ್ಸೆಸ್ ಮತ್ತು ಯಡಿಯೂರಪ್ಪ ಜೊತೆ ಜೊತೆಗೇ ಕೆಲಸ ಮಾಡಿದ್ದಾರೆ. ಜೊತೆಗೆ ಲಿಂಗಾಯಿತರ ಗಟ್ಟಿ ಬೇಸ್‌ಅನ್ನೂ ನಿರ್ಮಿಸಿಕೊಟ್ಟಿದ್ದಾರೆ. ಲಿಂಗಾಯತ ನಾಯಕನೆಂಬ ಪಟ್ಟ ಪಡೆಯಲು – ಆಯಾಚಿತವಾಗಿ ಲಭ್ಯವಾದ ಅವಕಾಶವನ್ನು ಬಳಸಿಕೊಂಡಿದ್ದಷ್ಟೇ ಅಲ್ಲ. ಅದನ್ನು ಗಟ್ಟಿಗೊಳಿಸಿಕೊಳ್ಳಲು ಅಪಾರವಾದ ಹಣ ಚೆಲ್ಲಿದ್ದಾರೆ. ಅದೂ ಯಾರ ಹಣ? ಒಂದೆಡೆ ನೇರವಾಗಿ ಸರ್ಕಾರದ ಬಜೆಟ್‌ನಿಂದ ಎತ್ತಿಕೊಟ್ಟರೆ, ಇನ್ನೊಂದೆಡೆ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿ ಕೊರೆದ ಹಣ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಕರ್ನಾಟಕದ ದೊಡ್ಡ ವೀರಶೈವ ಲಿಂಗಾಯಿತ ಮಠಗಳ ಮುಖ್ಯಸ್ಥರಲ್ಲಿ ಹಲವರು ಲಜ್ಜೆಯಿಲ್ಲದೇ ಅದಕ್ಕೆ ಪಕ್ಕಾದದ್ದು ಬಸವ ಪರಂಪರೆಗೆ ಎಸಗಿದ ದ್ರೋಹವೆಂದು ಅನಿಸದ ರೀತಿಯಲ್ಲಿ ಇದನ್ನು ನೆರವೇರಿಸಿದರು. ಇವೆಲ್ಲವೂ ಯಡಿಯೂರಪ್ಪನವರು ತಂದಿಟ್ಟ ದೊಡ್ಡ ಅಪಾಯವೆಂದು ಬಗೆಯದೇ, ಅವರು ಅನಂತ ಕುಮಾರ ಹೆಗಡೆಯಂತೆ, ಸಿ.ಟಿ.ರವಿಯಂತೆ ಮಾತಾಡುವುದಿಲ್ಲವೆಂಬುದೇ ದೊಡ್ಡದು ಎಂದುಕೊಳ್ಳುವುದು ಕೇವಲ ಅಮಾಯಕತನವಲ್ಲ.

ಆರೆಸ್ಸೆಸ್‌ನ ಮತ್ತು ಅದರ ವೈದಿಕ ಮುಂದಾಳುಗಳ ಗೋಸುಂಬೆತನಕ್ಕೆ ಎಣೆಯೇ ಇಲ್ಲ. ಯಡಿಯೂರಪ್ಪನವರನ್ನು ಭ್ರಷ್ಟಾಚಾರದ ಕಾರಣಕ್ಕೆ ಕೆಳಗಿಳಿಸಲಾಗುತ್ತಿದೆ ಎಂಬಂತೆ ಬಿಂಬಿಸಲಾಯಿತು. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಿದ್ದೇ ಭ್ರಷ್ಟಾಚಾರದಿಂದ. ಅದಕ್ಕೆ ಖುದ್ದು ಹೈಕಮ್ಯಾಂಡ್‌ನ ಸಂಪೂರ್ಣ ರಕ್ಷಣೆಯಿತ್ತು. ಮಹಾರಾಷ್ಟ್ರದಲ್ಲಿ ಅವರದ್ದೇ ಪಕ್ಷ ಅಧಿಕಾರದಲ್ಲಿದ್ದಾಗ, ಬಾಂಬೆ ಬಾಯ್ಸ್‌ರಿಗೆ ಪೊಲೀಸ್ ರಕ್ಷಣೆ ಕೊಟ್ಟು ಸಾಕಿಕೊಳ್ಳಲಾಗಿತ್ತು. ಶಾಸಕರನ್ನು ಕೊಳ್ಳಲು, ಉಪಚುನಾವಣೆಗಳಲ್ಲಿ ಹೇಗಾದರೂ ಮಾಡಿ ಗೆಲ್ಲಲು ಯಡಿಯೂರಪ್ಪನವರು ಅಥವಾ ವಿಜಯೇಂದ್ರ ದುಡಿದು ತಂದ ಹಣವನ್ನೇನೂ ಹಾಕಿರಲಿಲ್ಲ. ಹಾಗೆ ನೋಡಿದರೆ ಇದೇ ಯಡಿಯೂರಪ್ಪನವರನ್ನು ಮೊದಲ ಸಾರಿ ಭ್ರಷ್ಟಾಚಾರದ ಕಾರಣ ಹೇಳಿಯೇ ಕೆಳಗಿಳಿಸಲಾಗಿತ್ತು. ಭ್ರಷ್ಟಾಚಾರವೇ ಕಾರಣವೆಂಬಂತೆ ಸುದ್ದಿ ಹರಡಿಸಿದರೂ, ಅದನ್ನು ಬಹಿರಂಗವಾಗಿ ಹೇಳಿಲ್ಲ. ಇದುವರೆಗೂ ಅಧಿಕೃತವಾಗಿ ಒಬ್ಬನೇ ಒಬ್ಬ ಬಿಜೆಪಿಯ ನಾಯಕ ಅಥವಾ ನಾಯಕಿ ಯಡಿಯೂರಪ್ಪನವರನ್ನು ಇಳಿಸಲು ಏನು ಕಾರಣ ಎಂದು ಮಾತಾಡಿಲ್ಲ. ಅವರಿಗೆ 75ಕ್ಕಿಂತ ಹೆಚ್ಚು ವಯಸ್ಸಾಗಿದೆ ಎನ್ನುವುದಾದಲ್ಲಿ, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗಲೇ 75 ದಾಟಿತ್ತು. ವಿಜಯೇಂದ್ರರ ಮಧ್ಯಪ್ರವೇಶ ಹೆಚ್ಚಾಗಿದ್ದೇ ಕಾರಣ ಎನ್ನುವುದಾದಲ್ಲಿ, ಅದು ತಾರಕಕ್ಕೇರಿದ್ದಾಗಲೇ ಆತನನ್ನು ಬಿಜೆಪಿಯ ರಾಜ್ಯ ಉಪಾಧ್ಯಕ್ಷನನ್ನಾಗಿಸಲಾಗಿತ್ತು ಮತ್ತು ವಿವಿಧ ಉಪಚುನಾವಣೆಗಳ ಉಸ್ತುವಾರಿಯನ್ನು ನೀಡಲಾಗಿತ್ತು. ಕರ್ನಾಟಕದ ಯಾವ ದೊಡ್ಡ ನಾಯಕರಿಗೂ ಸಿಗದ ದೆಹಲಿಯ ದೊಡ್ಡ ನಾಯಕರು ವಿಜಯೇಂದ್ರರನ್ನು ಮಾತ್ರ ಭೇಟಿ ಮಾಡುತ್ತಿದ್ದರು. ಅಂದರೆ ಈ ಭ್ರಷ್ಟತೆಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯ ದೊಡ್ಡ ನಾಯಕರೂ ಶಾಮೀಲಾಗಿದ್ದಾರೆ.

ಹಾಗಾಗಿ ಕರ್ನಾಟಕದ ಪ್ರಜ್ಞಾವಂತರು ಸೀಮಿತ ದೃಷ್ಟಿಕೋನದಿಂದ ಯಡಿಯೂರಪ್ಪನವರನ್ನು ವೈಭವೀಕರಿಸುವ ಅಥವಾ ಯಡಿಯೂರಪ್ಪನವರನ್ನು ತೆಗೆದಿದ್ದಕ್ಕಾಗಿ ಸಂತಸ ಪಡುವುದರಾಚೆಗೆ ಆಲೋಚಿಸುವ ಅಗತ್ಯವಿದೆ.

ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...