Homeಮುಖಪುಟಭಾರತದ ರೈತರಿಗೆ ತಿಳಿದಿರುವ ಸತ್ಯ ಅರ್ಥಶಾಸ್ತ್ರಜ್ಞರಿಗೆ ಗೊತ್ತಾಗುತ್ತಿಲ್ಲ: ಯೋಗೇಂದ್ರ ಯಾದವ್

ಭಾರತದ ರೈತರಿಗೆ ತಿಳಿದಿರುವ ಸತ್ಯ ಅರ್ಥಶಾಸ್ತ್ರಜ್ಞರಿಗೆ ಗೊತ್ತಾಗುತ್ತಿಲ್ಲ: ಯೋಗೇಂದ್ರ ಯಾದವ್

ಕೃಷಿ ಉತ್ಪನ್ನಗಳ ಸಂಗ್ರಹಣೆಯಿಂದ ಸರಕಾರ ಹೊರಬರಬೇಕು ಎಂಬ ಶಿಫಾರಸ್ಸುಗಳ ಒಳ ಅರ್ಥದ ಬಗ್ಗೆ ರೈತರಿಗೆ ಗೊತ್ತಾಗಿದೆ.

- Advertisement -
- Advertisement -

ಕೃಷಿಯ ಬಗ್ಗೆ ಅಧ್ಯಯನ ನಡೆಸಿರುವ ಅರ್ಥಶಾಸ್ತ್ರಜ್ಞರಾದ ಅಶೋಕ್ ಗುಲಾಟಿಯವರಿಗಿಂತ ದೇಶದ ರೈತರು ಕೃಷಿಯ ಅರ್ಥಶಾಸ್ತ್ರದ ಬಗ್ಗೆ ಸರಿಯಾಗಿ ತಿಳಿದುಕೊಂಡಿದ್ದಾರೆಯೇ? ಈ ಮಾತು ತಮಗೆ ಅಸಂಬದ್ಧ ಹಾಗೂ ಹಾಸ್ಯಾಸ್ಪದ ಅನ್ನಿಸಬಹುದು ಆದರೆ ಈ ಪ್ರಶ್ನೆಗೆ ಉತ್ತರ – ಹೌದು.

ಪ್ರೊ ಅಶೋಕ್ ಗುಲಾಟಿ ಅವರು ಭಾರತದ ಅಗ್ರಗಣ್ಯ ಕೃಷಿ- ಆರ್ಥಿಕತಜ್ಞರಾಗಿದ್ದಾರೆ. ಅವರ ಬರಹಗಳನ್ನು ನಾನು ಗಂಭೀರವಾಗಿ ಪರಿಗಣಿಸಿ ಓದುತ್ತೇನೆ, ಹಲವಾರು ಬಾರಿ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ ಹಾಗೂ ಅವರ ಬಗ್ಗೆ ನನಗೆ ಗೌರವವಿದೆ. ಪ್ರೊ. ಗುಲಾಟಿ ಅವರು ರೈತರ ಹಿತಚಿಂತಕರಾಗಿದ್ದಾರೆ ಹಾಗೂ ರೈತರ ಬಗ್ಗೆ ಅವರಿಗಿರುವ ಕಾಳಜಿ ಅವರ ವಿದ್ವತ್ಪೂರ್ಣ ಲೇಖನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅವರು ಸರಕಾರದ ವಿರುದ್ಧ ನಿಲುವು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಹಾಗೂ ಅವರು ನರೇಂದ್ರ ಮೋದಿಯ ನಾಯಕತ್ವದ ಸರಕಾರದ ವಿರುದ್ಧವೂ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವ ಧೈರ್ಯ ಹೊಂದಿದ್ದಾರೆ. ಅವರಿಗೆ ಸರಿ ಎನಿಸಿದರೆ, ರೈತರ ಆಂದೋಲನಗಳ ವಿರುದ್ಧ ಕೂಡ ನಿಲುವು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಅನೇಕ ವರ್ಷಗಳಿಂದ ವ್ಯಕ್ತಪಡಿಸಿರುವ ನಿಲುವಿಗೆ ಅನುಗುಣವಾಗಿಯೇ ಅವರು ಈ ಬಾರಿ ಹೊಸ ಕೃಷಿ ಕಾನೂನುಗಳನ್ನು ಸ್ವಾಗತಿಸಿದ್ದಾರೆ. ಹಾಗೂ ಇದು 1991 ರಲ್ಲಿ ಹುಟ್ಟಿದ ಭಾರತೀಯ ಆರ್ಥಿಕತೆ ಹೇಗೆ ಒಂದು ಮಹತ್ವದ ತಿರುವಾಗಿತ್ತೋ ಅದೇ ರೀತಿಯಲ್ಲಿ ಈ ಕಾನೂನುಗಳು ಭಾರತೀಯ ಕೃಷಿಗೆ ವರವಾಗಲಿವೆ ಎಂತಲೂ ಹೇಳಿದ್ದಾರೆ. ದಿ ಪ್ರಿಂಟ್‌ನ ಸಂಪಾದಕ ಶೇಖರ್ ಗುಪ್ತಾ ಸೇರಿದಂತೆ ಈ ಮಸೂದೆಗಳನ್ನು ಸಮರ್ಥಿಸುವ ಅನೇಕರು ಅಶೋಕ್ ಗುಲಾಟಿಯವರ ವಾದಗಳ ಆಧಾರದ ಮೇಲೆಯೇ ಅವುಗಳನ್ನು ಬೆಂಬಲಿಸಿದ್ದಾರೆ.

ಪ್ರೊ. ಅಶೋಕ್ ಗುಲಾಟಿ : Photo Courtesy: The Wire

ಆದರೆ ವಿಪರ್ಯಾಸವೇನೆಂದರೆ ಪ್ರೊ. ಗುಲಾಟಿ ಅವರು ಈ ಬಾರಿ ಎಡವಿದ್ದಾರೆ ಮತ್ತು ವಿಷಯವನ್ನು ತಿಳಿದುಕೊಳ್ಳುವಲ್ಲಿ ದೊಡ್ಡ ತಪ್ಪು ಮಾಡಿದ್ದಾರೆ. ಈ ಬಾರಿ ಅವರು ವಿಷಯವನ್ನು ತಿಳಿದುಕೊಳ್ಳುವಲ್ಲಿ ಯಾವುದೋ ಪೂರ್ವಾಗ್ರಹ ಕೆಲಸ ಮಾಡಿದೆೆ ಅಥವಾ ಅವರ ಅಂಕಿಅಂಶಗಳಲ್ಲಿ ಯಾವುದೇ ತಪ್ಪಿದೆ ಅಂತಲ್ಲ. ಅವೆಲ್ಲ ಸರಿಯಾಗಿಯೇ ಇದ್ದರೂ ಅವರು ಅತಿ ದೊಡ್ಡ ತಪ್ಪೆಸಗಿದ್ದಾರೆ. ನೀತಿ ರಚನೆ ಮಾಡಲು ಸಲಹೆ ನೀಡುವ ಅರ್ಥಶಾಸ್ತ್ರಜ್ಞರಿಂದ ಈ ತಪ್ಪು ಮಾಡಲು ಸಾಧ್ಯವಾಗಿದೆ. ನನಗೆ ಮೊದಲ ಬಾರಿ ಈ ವಿಷಯ ಸ್ಪಷ್ಟವಾಗಿದ್ದು, ನಾನು ಜಾನ್ ಡ್ರೀಝ್ ಮತ್ತು ಅಶೋಕ್ ಕೋಟವಾಲ್ ಎಂಬ ಇಬ್ಬರು ಅರ್ಥಶಾಸ್ತ್ರಜ್ಞರ ನಡುವೆ ನಡೆದ ಗಂಭೀರ ವಿಚಾರ ವಿಮರ್ಶೆಗಳನ್ನು ಓದಿದಾಗ. ಈ ವಿಚಾರ-ವಿಮರ್ಶೆಯಲ್ಲಿ ಅಶೋಕ್ ಕೋಟವಾಲ್ ಅವರ ಅಭಿಪ್ರಾಯವೇನಿತ್ತೆಂದರೆ, ಬಡವರಿಗೆ ಸಬ್ಸಿಡಿ ದರದಲ್ಲಿ ಆಹಾರಧಾನ್ಯಗಳನ್ನು ನೀಡುವುದರ ಬದಲಿಗೆ ನಗದು ಹಣವನ್ನು ನೀಡುವುದು ಹಲವು ಪಟ್ಟು ಉತ್ತಮ ಎಂಬುದು. ಇದಕ್ಕೆ ಪ್ರತಿಕ್ರಿಯಿಸುತ್ತ ಜಾನ್ ಡ್ರೀಝ್ ಅವರು ಹೇಳಿದ್ದು; ಸರಕಾರಕ್ಕೆ ಸಲಹೆ ನೀಡುವ ಅರ್ಥಶಾಸ್ತ್ರಜ್ಞ ಮತ್ತು ಬಡವರಿಗೆ ಸಲಹೆ ನೀಡುವ ಅರ್ಥಶಾಸ್ತ್ರಜ್ಞರ ನಡುವೆ ಇರುವ ಅಂತರವನ್ನು ನೋಡಬೇಕು. ಸರಕಾರಕ್ಕೆ ಸಲಹೆ ನೀಡುವ ಅರ್ಥಶಾಸ್ತ್ರಜ್ಞರು ಅಂದುಕೊಳ್ಳುವುದೇನೆಂದರೆ, ಅವರ ಸಲಹೆಗಳನ್ನು ಯಥಾವತ್ತಾಗಿ ಒಪ್ಪಿಕೊಳ್ಳಲಾಗುವುದು ಹಾಗೂ ಸಂಪೂರ್ಣ ಪ್ರಾಮಾಣಿಕತೆಯಿಂದ ಅವುಗಳನ್ನು ಪರಿಗಣಿಸಲಾಗುವುದು ಹಾಗೂ ಆಯಾ ನೀತಿಗಳನ್ನು ಪಾಲಿಸುವುದರಿಂದ ಆಗಬಹುದಾದ ಲಾಭದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ ಎಂದು. ಆದರೆ ಬಡವರಿಗೆ ಸಲಹೆ ನೀಡುವ ಅರ್ಥಶಾಸ್ತ್ರಜ್ಞರಿಗೆ ಯಾವುದೇ ನೀತಿಯ ಅನುಷ್ಠಾನದಿಂದ ಯಾವ್ಯಾವ ಪರಿಣಾಮ ಬೀರಬಹುದು, ತಳಮಟ್ಟದಲ್ಲಿ ಆಯಾ ನೀತಿಯನ್ನು ಹೇಗೆ ಅನುಷ್ಠಾನಗೊಳಿಸಲಾಗುವುದು ಎಂಬುದರ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಬೇಕಾಗುತ್ತದೆ. ಜಾನ್ ಡ್ರೀಝ್ ಅವರ ಪ್ರಕಾರ, ಹಾಳೆಯ ಮೇಲಿರುವ ಯೋಜನೆಯನ್ನು ನೋಡಿದರೆ, ನೇರ ಹಣ ವರ್ಗಾವಣೆ ಬಡವರಿಗೆ ಸಹಾಯ ಮಾಡುವುದರಲ್ಲಿ ಅತ್ಯಂತ ಪರಿಣಾಮಕಾರಿ ಹಾಗೂ ಹೆಚ್ಚಿನ ಆರ್ಥಿಕ ಭಾರವಿಲ್ಲದ ಕ್ರಮ ಎಂದು ಕಾಣಿಸುತ್ತದೆ ಆದರೆ ನಿಜಜೀವನದ ಲೆಕ್ಕಾಚಾರಗಳನ್ನು ನೋಡಿದಾಗ, ರೇಷನ್ ಅಂಗಡಿಗಳ ಮುಖಾಂತರ ಪಡಿತರವನ್ನು ವಿತರಿಸುವುದೇ ಬಡವರಿಗೆ ಸಹಾಯ ಮಾಡುವ ಅತ್ಯಂತ ಒಳ್ಳೆಯ ವಿಧಾನವಾಗಿದೆ.

ಇದೇ ಮಾತು ಈ ಮೂರು ಕೃಷಿ ಮಸೂದೆಗಳ ಬಗ್ಗೆಯೂ ಸತ್ಯವಾಗಿದೆ.

ಅರ್ಥಶಾಸ್ತ್ರಜ್ಞ ವರ್ಸಸ್ ರೈತ

ಈ ಕಾನೂನುಗಳ ಪಕ್ಷದಲ್ಲಿ ಪ್ರಸ್ತುತಪಡಿಸಲಾಗುತ್ತಿರುವ ವಾದಗಳು ಅರ್ಥಶಾಸ್ತ್ರದ ಪಠ್ಯಪುಸ್ತಕದಿಂದ ಬಂದಂತಿವೆ. ಹಾಗೂ ಈ ವಾದಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ದಿ ಇಂಡಿಯನ್ ಎಕ್ಸ್ಪ್ರೆಸ್‌ನಲ್ಲಿ ಪ್ರಕಟವಾದ ಪ್ರೊ ಅಶೋಕ್ ಗುಲಾಟಿಯವರ ಲೇಖನದಲ್ಲಿರುವ ಪದಗಳ ಮೇಲೆ ಲಕ್ಷö್ಯ ನೀಡಬೇಕಿದೆ. ಪ್ರೊ ಗುಲಾಟಿ ಹೀಗೆ ಬರೆಯುತ್ತಾರೆ; “ಈ ಕಾನೂನುಗಳಿಂದ ರೈತರಿಗೆ ತನ್ನ ಉತ್ಪನ್ನಗಳನ್ನು ಮಾರುವ ವಿಷಯದಲ್ಲಿ ಹಾಗೂ ಖರೀದಿ ಮಾಡುವವರಿಗೆ ಖರೀದಿ ಮಾಡಲು ಮತ್ತು ಸಂಗ್ರಹ ಮಾಡುವ ವಿಷಯದಲ್ಲಿ ಹೆಚ್ಚಿನ ಆಯ್ಕೆಗಳಿವೆ ಮತ್ತು ಹೆಚ್ಚಿನ ಸ್ವಾತಂತ್ರ ಲಭ್ಯವಾಗುತ್ತದೆ. ಈ ಮೂಲಕ ಕೃಷಿ ಮಾರುಕಟ್ಟೆಯಲ್ಲಿ ಪೈಪೋಟಿ ಸೃಷ್ಟಿಯಾಗುತ್ತದೆ. ಈ ಪೈಪೋಟಿಯಿಂದ ಕೃಷಿಯಲ್ಲಿ ಮಾರ್ಕೆಟಿಂಗ್‌ಗಾಗಿ ತಗಲುವ ಖರ್ಚು ಕಡಿಮೆಯಾಗಿ, ಅದರಿಂದ ಹೆಚ್ಚಿನ ದಕ್ಷತೆಯ ಮೌಲ್ಯ ಸರಪಳಿ (ವ್ಯಾಲ್ಯೂ ಚೈನ್) ಸೃಷ್ಟಿಯಾಗುವುದು, ಅದರಿಂದ ಆಗುವುದೇನೆಂದರೆ, ಉತ್ಪನ್ನಗಳಿಗೆ ಒಳ್ಳೆಯ ದರ ಸಿಗುವುದು, ರೈತರಿಗೂ ಲಾಭ ಆಗುವುದು ಹಾಗೂ ಅದೇ ಸಮಯದಲ್ಲಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಸಿಗುವಂತೆ ಆಗುವುದು. ಇದರಿಂದ ಕೃಷಿ ಉತ್ಪನ್ನಗಳ ಶೇಖರಣೆಯಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ಸಿಗುತ್ತದೆ. ಹಾಗಾಗಿ ಕೃಷಿ ಉತ್ಪನ್ನಗಳ ಹಾಳಾಗಿ ತ್ಯಾಜ್ಯವಾಗುವುದು ಕಡಿಮೆಯಾಗಿ, ಪದೇಪದೇ ದರಗಳು ಮೇಲೆಕೆಳಗೆ ಆಗುವುದರ ಮೇಲೆಯೂ ಕಡಿವಾಣ ಹಾಕಲು ಸಹಾಯವಾಗುತ್ತದೆ”. ನಾನು ಓದುವ, ಗೌರವಿಸುವ ಇನ್ನೊಬ್ಬ ಅರ್ಥಶಾಸ್ತçಜ್ಞ ಸ್ವಾಮಿನಾಥನ್ ಹೇಳಿದ್ದು ಹೀಗೆ, “ಕಣ್ಣಿಗೆ ಒಂದು ರೀತಿಯ ಸೈದ್ಧಾಂತಿಕ ಪಟ್ಟಿಯನ್ನು ಕಟ್ಟಿಕೊಂಡವರನ್ನು ಹೊರತುಪಡಿಸಿ, ಯಾರಿಗಾದರೂ ಹೇಗೆ ಈ ಕ್ರಮಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಲು ಸಾಧ್ಯ? ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ ಎಂಬ ವಿರೋಧಪಕ್ಷಗಳ ಹೇಳಿಕೆ ಹಸಿ ಸುಳ್ಳು’ ಎಂದು ಹೇಳಿದ್ದಾರೆ.

ಹಾಗೆ ನೋಡಿದರೆ, ಪ್ರೊ ಗುಲಾಟಿ ಅಥವಾ ಸ್ವಾಮಿನಾಥನ್ ಐಯರ್ ಅವರ ವಾದಗಳು ಕೆಟ್ಟ ವಾದಗಳೇನಲ್ಲ. ಆದರೆ ನೆಲಮಟ್ಟದ ವಾಸ್ತವಗಳ ಬಗ್ಗೆ ಅವರು ತಮ್ಮ ಮನಸ್ಸಿನಲ್ಲಿ ಮಾಡಿಕೊಂಡಿರುವ ಗ್ರಹಿಕೆಯು ಟೊಳ್ಳಾಗಿದೆ. ಹಾಗೂ ಕೃಷಿ ಕಾನೂನುಗಳ ಅನುಷ್ಠಾನ ಹೇಗಾಗುತ್ತದೆ ಎಂಬುದರ ಬಗ್ಗೆ ಅವರ ಭವಿಷ್ಯದ ಅಂದಾಜು ಕೇವಲ ಸುಂದರ ಕಲ್ಪನೆಯಾಗಿದೆ. ಸ್ವಾಭಾವಿಕವಾಗಿ ಅವರ ತೀರ್ಮಾನಗಳು ತಪ್ಪಿನಿಂದ ಕೂಡಿವೆ. ರೈತರಿಗೆ ಆರ್ಥಿಕತೆಯ ಸೂಕ್ಷö್ಮ ಅಂಶಗಳು ಗೊತ್ತಾಗದೇ ಇರಬಹುದು ಆದರೆ, ಅವರ ಹೃದಯಕ್ಕೆ ಸತ್ಯ ಏನು ಎಂಬುದು ತಿಳಿದಿದೆ. ಈ ಕಾನೂನುಗಳ ಪರಿಣಾಮ ನೆಲಮಟ್ಟದಲ್ಲಿ ಏನಾಗಲಿದೆ ಎಂಬುದನ್ನು ಅರ್ಥಶಾಸ್ತ್ರಜ್ಞರ ತಾರ್ಕಿಕ ಬುದ್ಧಿಗೆ ತಿಳಿಯಲಾರದ್ದು ರೈತರ ಸಹಜ ಸಾಮಾನ್ಯ ಜ್ಞಾನದಿಂದ ಅರಿತುಕೊಂಡಿದ್ದಾರೆ. ಒಂದು ವೇಳೆ ನಿಮಗೆ ರೈತರ ಹೃದಯದ ಮೇಲೆ ಅಷ್ಟು ನಂಬಿಕೆ ಇರದೇ, ಕೇವಲ ಬುದ್ಧಿಜೀವಿಗಳ ತರ್ಕದ ಮೇಲೆ ವಿಶ್ವಾಸವಿದ್ದರೆ, ಮುಖ್ಯವಾಹಿನಿಯ ನಿಯಮಿತ ಅರ್ಥಶಾಸ್ತ್ರಜ್ಞರ ಬಳಿ ಹೋಗದೆ, ಮೆಖಲಾ ಕೃಷ್ಣಮೂರ್ತಿ ಅವರಂತಹ ಮಾನವಶಾಸ್ತ್ರಜ್ಞೆ ಅಥವಾ ಕವಿತಾ ಕುರಗಂಟಿಯಂತಹ ಹೋರಾಟಗಾರ್ತಿ ಅಥವಾ ನೆಲದ ಅರ್ಥಶಾಸ್ತ್ರಜ್ಞರಾಗಿರುವ ಸುಧಾ ನಾರಾಯಣ ಅವರ ಲೇಖನಗಳನ್ನು ಓದಬಹುದು.

ಊಹಾಪೋಹಗಳು ವರ್ಸಸ್ ವಾಸ್ತವ
ಈ ಕಾನೂನುಗಳ ಬಗ್ಗೆ ಹೇಗೆ ಸುಂದರ ಚಿತ್ರಣ ಕಟ್ಟಲಾಗುತ್ತಿದೆ ಎಂದರೆ, ನಮ್ಮ ರೈತರಿಗೆ ಎರಡೂ ಕೈಯಲ್ಲಿ ಮಿಠಾಯಿ ಕೊಟ್ಟಂತೆ ಇವೆ ಈ ಕಾನೂನುಗಳು ಎಂದು. ಹೀಗೆ ಹೇಳುವುದರ ಹಿಂದೆ ನಾಲ್ಕು ಊಹೆಗಳು ಕೆಲಸ ಮಾಡುತ್ತಿವೆ. ಇಲ್ಲಿ ನಾವು ಒಂದೊಂದಾಗಿ ನಾಲ್ಕೂ ಊಹೆಗಳನ್ನು ಪರಿಶೀಲಿಸುವ. ಮೊದಲ ಊಹೆ ಏನೆಂದರೆ, ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಲು ಹೆಚ್ಚಿನ ಆಯ್ಕೆಗಳ ಇರುವುದಿಲ್ಲ ಏಕೆಂದರೆ ಅವರಿಗೆ ತಮ್ಮ ಉತ್ಪನ್ನಗಳನ್ನು ಸರಕಾರಿ ಮಾರುಕಟ್ಟೆ ಅಂದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಮಾರಬೇಕಾಗುತ್ತದೆ. ಇದು ಸುಳ್ಳು ಏಕೆಂದರೆ, ಕೃಷಿ ಉತ್ಪನ್ನದ ಕಾಲು ಭಾಗ ಮಾತ್ರ ಸರಕಾರಿ ಮಾರುಕಟ್ಟೆಗಳ ಆಸರೆಯಲ್ಲಿ ಮಾರಲಾಗುತ್ತದೆ. ಮುಂಚೆಯಿಂದಲೇ ಸರಕಾರಿ ಮಾರುಕಟ್ಟೆಗಳ ಹೊರಗೆ ಮಾರುತ್ತಿರುವ ಮುಕ್ಕಾಲು ಭಾಗ ರೈತರು ಈ ಕಾನೂನಿನಿಂದ ಸುಲಭವಾಗಿ ಸ್ವಾತಂತ್ರ ಸಿಗುತ್ತದೆ ಎನ್ನುತ್ತಿದ್ದಾರೆ. ವಾಸ್ತವದಲ್ಲಿ ರೈತರು ಸರಕಾರಿ ಮಾರುಕಟ್ಟೆಗಳಿಂದ ಸ್ವಾತಂತ್ರ ಬಯಸುತ್ತಿಲ್ಲ, ಅದರ ಬದಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಸರಿಯಾದ ಕೆಲಸ ಮಾಡುತ್ತಿರುವ ಮಾರುಕಟ್ಟೆಗಳನ್ನು ಬಯಸುತ್ತಿದ್ದಾರೆ. ಇಷ್ಟು ವರ್ಷ ದೇಶಾದ್ಯಂತ ತಿರುಗಿ ರೈತರನ್ನು ಮಾತನಾಡಿಸಿದಾಗ ನನಗೆ ಪದೇಪದೇ ಕೇಳಿಬರುವ ದೂರು ಯಾವುದೆಂದರೆ, ಮಾರುಕಟ್ಟೆಗಳ ಕೊರತೆ ಹಾಗೂ ಈ ಮಾರುಕಟ್ಟೆಗಳ ಕಳಪೆ ಕಾರ್ಯನಿರ್ವಹಣೆ. ಆದರೆ ಇಷ್ಟು ವರ್ಷಗಳಲ್ಲಿ ನನಗೆ ಈ ಮಾರುಕಟ್ಟೆಗಳ ಹೊರಗೆ ಮಾರಲು ಅವಕಾಶ ಸಿಗುತ್ತಿಲ್ಲ ಎಂದು ದೂರಿದ ಒಬ್ಬ ರೈತನೂ ಸಿಕ್ಕಿಲ್ಲ.

ಎರಡನೇ ಊಹೆ ಏನೆಂದರೆ, ಈ ಕಾನೂನುಗಳಿಂದ ರೈತರು ಈಗ ಕಮಿಷನ್ ಏಜೆಂಟ್ ಅಥವಾ ದಲ್ಲಾಳಿಗಳ ಶೋಷಣೆಗಳಿಂದ ಮುಕ್ತವಾಗುವರು ಎಂಬುದು. ಇದೂ ಕೂಡ ಸತ್ಯಕ್ಕೆ ದೂರ. ಇದರರ್ಥ, ಈ ಮಧ್ಯವರ್ತಿಗಳು ರೈತರಿಗೆ ಮೋಸ ಮಾಡುವುದಿಲ್ಲ ಎಂತಲ್ಲ ಆದರೆ ಕೃಷಿ ಉತ್ಪನ್ನದ ಮಾರುಕಟ್ಟೆ ಬೃಹತ್ ಆಗಿದೆ ಹಾಗೂ ಈ ಮಧ್ಯವರ್ತಿಗಳಿಲ್ಲದೇ ಕೆಲಸ ಆಗುವುದಿಲ್ಲ ಎಂಬುದು ವಾಸ್ತವ. ದೊಡ್ಡ ದೊಡ್ಡ ಕಂಪನಿಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿರುವ ರೈತರಿಂದ ನೇರವಾಗಿ ವ್ಯವಹರಿಸಲು ಆಗುವುದಿಲ್ಲ. ಹಾಗಾಗಿ ಅವರಿಗೆ ಈ ರೈತರು ಹಾಗೂ ಕಂಪನಿಗಳ ಮಧ್ಯೆ ವ್ಯವಹಾರ, ಚೌಕಾಸಿ ಮಾಡುವಂತಹ ವ್ಯಕ್ತಿಗಳು ಬೇಕಾಗುತ್ತಾರೆ. ಹಾಗಾಗಿ ಈಗ ಆಗಬಹುದಾದದ್ದೇನೆಂದರೆ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿರುವವರೇ ಮುಂದೆ ಖಾಸಗಿ ಮಾರುಕಟ್ಟೆ ಶುರುವಾದಾಗ ತಮ್ಮ ಮುಂಚಿನ ಸೇವೆಗಳಿಗೆ ಸುಲಭವಾಗಿ ಹಿಂದಿರುಗುತ್ತಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಮಾರುಕಟ್ಟೆ ಚಲಾವಣೆಗೆ ಬಂದರೆ ಎರಡು ಸ್ತರದ ಮಧ್ಯವರ್ತಿಗಳೊಂದಿಗೆ ವ್ಯವಹರಿಸಬೇಕಾಗುವುದು; ಮುಂಚೆಯಿಂದಲೂ ನಡೆದುಬಂದಿರುವ ಹಳೆಯ ಕಮಿಷನ್ ಏಜೆಂಟ್ ಅವರನ್ನು ವಸೂಲಿ ಮಾಡುವುದಷ್ಟೇ ಅಲ್ಲದೇ ಕಾರ್ಪೊರೆಟ್ ಜಗತ್ತಿಗೆ ಕೆಲಸ ಮಾಡುವ ಹೊಸ ಸೂಪರ್ ಮಧ್ಯವರ್ತಿಗಳೊಂದಿಗೆ ಜೂಜಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು.

ಮೂರನೆಯ ಊಹೆ ಏನೆಂದರೆ, ಹೊಸ ಮಾರುಕಟ್ಟೆಯು ನ್ಯಾಯಯುತ ರೀತಿಯಲ್ಲಿ ತನ್ನ ಕೆಲಸ ಮಾಡುತ್ತದೆ ಹಾಗೂ ಹೆಚ್ಚಿನ ಕಾರ್ಯಕ್ಷಮತೆ, ಕಡಿಮೆ ಖರ್ಚು ಇರುತ್ತದೆ, ವ್ಯವಹಾರದ ಪ್ರಮಾಣ ದೊಡ್ಡದಾಗಿರುತ್ತದೆ ಎಂಬುದು; ಇವೆಲ್ಲ ಕಾರಣಗಳಿಂದ ಸ್ಟಾಕಿಸ್ಟ್ ಅಥವಾ ಟ್ರೇಡರ್‌ಗಳು ಹೆಚ್ಚಿನ ಲಾಭ ಗಳಿಸುವುದರಿಂದ ರೈತರೂ ಆ ಲಾಭದ ಫಲಾನುಭವಿಗಳಾಗುವುರು ಎಂಬುದು. ಆದರೆ ಹೀಗೆ ಉದಾರವಾಗಿ ಊಹಿಸಲು, ಹೇಳಲು ತಮ್ಮ ಬಳಿ ಇರುವ ಆಧಾರ ಯಾವುದು ಎಂಬುದನ್ನು ಯಾರೂ ಇಲ್ಲಿಯವರೆಗೆ ಹೇಳಿಲ್ಲ. ಖಾಸಗಿ ಕ್ಷೇತ್ರದ ಯಾವುದೇ ವ್ಯಾಪಾರಿಯು ತನ್ನ ಹೆಚ್ಚುವರಿ ಲಾಭವನ್ನು ರೈತನಿಗೆ ಕೊಡಲು ಇಚ್ಛಿಸುವುದಾದರೂ ಏಕೆ? ಹಾಗೂ ಖಾಸಗಿ ವ್ಯಾಪಾರಿಗಳು ತಮ್ಮೊಳಗೆ ಒಪ್ಪಂದ ಮಾಡಿಕೊಂಡು ರೈತನಿಗೆ ಸರಿಯಾದ ಬೆಲೆ ಕೊಡದೇ ಇದ್ದರೆ? ಹೀಗೂ ಆಗಬಹುದಲ್ಲವೇ, ವ್ಯಾಪಾರಿಗಳು ತಮ್ಮೊಳಗೆ ಕೈಮಿಲಾಯಿಸಿಕೊಂಡು ಕೃಷಿ ಉತ್ಪನ್ನಗಳ ಖರೀದಿ-ಮಾರಾಟದ ಮಾರುಕಟ್ಟೆಯನ್ನು ಒಂದು ವಿಶೇಷ ಕ್ರಮದಲ್ಲಿ ನಡೆಯಲು ಒತ್ತಾಯಿಸಿ, ಆ ಕ್ರಮದಲ್ಲಿ ಕೆಲವು ಕೃಷಿ-ಸೀಸನ್‌ಗಳಲ್ಲಿ ರೈತರಿಗೆ ಉತ್ಪನ್ನಗಳ ಸರಿಯಾದ ಬೆಲೆ ಸಿಗುವಂತೆ ಮಾಡಿ, ತದನಂತರ ಈ ವ್ಯಾಪಾರಿಗಳು ರೈತರ ಜೇಬನ್ನು ಹಿಂಡುವ, ಬರಿದಾಗಿಸುವ ಕೆಲಸದಲ್ಲಿ ನಿರತರಾಗಿಬಿಟ್ಟರೆ? ಇವೆಲ್ಲ ರೈತರ ಬಳಿ ಇರುವ(ಬಹುದಾದ) ಚೌಕಾಸಿ, ವ್ಯವಹಾರ ಮಾಡುವ ಶಕ್ತಿಯನ್ನು ಅವಲಂಬಿಸಿರುತ್ತದೆ. ಸದ್ಯಕ್ಕೆ ರೈತರು, ವ್ಯಾಪಾರಿಗಳು ಮತ್ತು ಮಾರುಕಟ್ಟೆಯ ಅಧಿಕಾರಿಗಳ ಶಕ್ತಿಯ ಮುಂದೆ ಅತ್ಯಂತ ದುರ್ಬಲರಾಗಿದ್ದಾರೆ. ಹೌದು. ಈಗ ಸದ್ಯದ ಪರಿಸ್ಥಿತಿಯಲ್ಲಿ ಇಷ್ಟಂತೂ ಇದೆ; ರೈತರು ತಮ್ಮ ರಾಜಕೀಯ ಪ್ರತಿನಿಧಿಗಳ ಸಹಾಯದಿಂದ ಮಾರುಕಟ್ಟೆಯ ಅಧಿಕಾರಿಗಳ ಹಾಗೂ ವ್ಯಾಪಾರಿಗಳ ಬೇಕಾಬಿಟ್ಟಿ ಕೆಲಸಗಳನ್ನು ಕೆಲವೊಮ್ಮೆ ಅಡೆತಡೆ ಒಡ್ಡಿ ನಿಲ್ಲಿಸಬಹುದಾಗಿದೆ. ಆದರೆ ಹೊಸ ವ್ಯವಸ್ಥೆಯಲ್ಲಿ ರೈತರ ಬಳಿ ಇಷ್ಟೂ ಶಕ್ತಿ ಇಲ್ಲದಂತೆ ಆಗುವದು. ಹೊಸ ವ್ಯವಸ್ಥೆಯಲ್ಲಿ ವಿವಾದಗಳನ್ನು ಬಗೆಹರಿಸಲು ಸೂಚಿಸಿರುವ ವಿಧಾನವನ್ನು ಒಂದು ಕ್ರೂರ ತಮಾಷೆ ಎಂದರೂ ತಪ್ಪಾಗಲಾರದು. ರೈತರೆಲ್ಲರೂ ಸಹಕಾರಿ ಸಂಘಟನೆಗಳ (ಸರಕಾರಿ ಭಾಷೆಯಲ್ಲ್ಲಿ ಹೇಳಬೇಕಾದರೆ, ಫಾರ್ಮರ್ಸ್ ಪ್ರೊಡ್ಯೂಸರ್ ಆರ್ಗನೈಝೇಷನ್) ರೂಪದಲ್ಲಿ ಒಗ್ಗೂಡಲಿದ್ದಾರೆ ಎಂಬುದು ಅರ್ಥಶಾಸ್ತ್ರಜ್ಞರಿಗೆ ಇರುವ ಒಂದು ಭರವಸೆ/ಆಸೆ ಆದರೆ ಹಾಗೆ ಆಗುವದಕ್ಕೆ ಒಂದೆರಡು ವರ್ಷಗಳಲ್ಲ, ಹಲವು ದಶಕಗಳೇ ಬೇಕಾಗಬಹುದು.

ನಾಲ್ಕನೆಯ ಊಹೆ ಏನೆಂದರೆ, ಸರಕಾರವು ಕೃಷಿಯ ಮೂಲಸೌಕರ್ಯದಲ್ಲಿ ತನ್ನ ಹೂಡಿಕೆಯನ್ನು ಮುಂದುವರೆಸುತ್ತದೆ ಮತ್ತು ಹೆಚ್ಚಿಸುತ್ತದೆ ಎಂಬುದು. ಈಗ ಇಂತಹ ಮುಗ್ಧತೆಗೆ ಏನನ್ನಬೇಕು? ಈ ವಿಷಯದಲ್ಲಿ ಮುಂಬರುವ ಪರಿಸ್ಥಿತಿಯನ್ನು ರೈತರು ಅರ್ಥಶಾಸ್ತ್ರಜ್ಞರಿಗಿಂತ ಚೆನ್ನಾಗಿ ಅರಿತುಕೊಂಡಿದ್ದಾರೆ. ಈ ಮೂರೂ ಕಾನೂನುಗಳು ಕೇವಲ ನೀತಿಯ ವಿಷಯಗಳಲ್ಲ, ಇವುಗಳ ಮೂಲಕ ಸರಕಾರವು ತನ್ನ ಇಂಗಿತವನ್ನು ವ್ಯಕ್ತಪಡಿಸುತ್ತಿದೆ ಎಂಬುದು ರೈತರಿಗೆ ಚೆನ್ನಾಗಿ ತಿಳಿದಿದೆ. ಈ ಮೂರೂ ಕಾನೂನುಗಳ ಮೂಲಕ ಮೋದಿ ಸರಕಾರವು ವ್ಯಕ್ತಪಡಿಸಿರುವ ಇಂಗಿತವೇನೆಂದರೆ, ಕೃಷಿ ಕ್ಷೇತ್ರದಲ್ಲಿ ಹೂಡಿಕೆ, ನಿಯಂತ್ರಣ ಹಾಗೂ ವಿಸ್ತರಣಾ ಕಾರ್ಯದಿಂದ ಸರಕಾರವು ತನ್ನ ಕೈಚೆಲ್ಲಿ ಹೊರಹೋಗುವುದು ಎಂಬುದು. ಖಾಸಗಿ ವಲಯದ ಕುಳಗಳು ಗೋದಾಮುಗಳು ಮತ್ತು ಪ್ರಶೀತನ ಕೇಂದ್ರಗಳನ್ನು(ಕೋಲ್ಡ್ ಸ್ಟೋರೇಜ್) ಸ್ಥಾಪಿಸುವುದಕ್ಕೆ ಹೂಡಿಕೆ ಮಾಡುತ್ತಾರೆ ಹಾಗಾಗಿ ಸರಕಾರವು ಅದರಿಂದ ತನ್ನ ಹೆಜ್ಜೆಯನ್ನು ಹಿಂದಕ್ಕೆ ಹಾಕುವುದು. ಎಪಿಎಂಸಿಗಳ ಹೊರಗೆ ವ್ಯಾಪಾರ ಕೇಂದ್ರಗಳನ್ನು (ಟ್ರೇಡಿಂಗ್ ಜೋನ್)ಸ್ಥಾಪಿಸಲು ಇರುವ ನಿಜವಾದ ಅಂಶ ಖಾಸಗಿ ವ್ಯಾಪಾರಕ್ಕೆ ಅನುವು ಮಾಡಿಕೊಡುವುದಲ್ಲ. (ಏಕೆಂದರೆ ಎಪಿಎಂಸಿಯಲ್ಲಿಯೂ ಹೆಚ್ಚಿನಾಂಶ ಖಾಸಗಿ ವ್ಯಾಪಾರವೇ ನಡೆಯುತ್ತದೆ). ಆದರೆ ಅದಕ್ಕಿರುವ ನಿಜವಾದ ಕಾರಣ ಏನೆಂದರೆ, ಸರಕಾರವು ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ನಿಯಂತ್ರಣ ತೆಗೆದುಹಾಕಿ, ಅನಿಯಿಂತ್ರಿತ ವ್ಯಾಪಾರಕ್ಕೆ ಅಡಿಪಾಯ ಹಾಕುವುದು. ಈ ಕಾನೂನುಗಳ ಕಾರಣದಿಂದ ನಾವೀಗ ಎಂತಹ ಒಂದು ವ್ಯವಸ್ಥೆಗೆ ತಲುಪುತ್ತಿದ್ದೇವೆ ಎಂದರೆ, ಅಲ್ಲಿ ಕೃಷಿ ಉತ್ಪನ್ನಗಳ ವ್ಯಾಪಾರ ಸಂಪೂರ್ಣ ಅನಿಯಂತ್ರಿತ ಹಾಗೂ ಪಾರದರ್ಶಕವಲ್ಲದ ವ್ಯವಸ್ಥೆಯಾಗಿ ಬದಲಾಗಿ, ಅದರಲ್ಲಿ ಅಂಕಿಅಂಶಗಳನ್ನು ದಾಖಲಿಸುವ ಮತ್ತು ಸಂಗ್ರಹಿಸುವ, ತಾಳೆ ಹಾಕುವ ಯಾವುದೇ ನಿಯಮ ಅಥವಾ ಅವಕಾಶ ಇರುವುದಿಲ್ಲ ಮತ್ತು ವ್ಯಾಪಾರಿಗಳಿಗೆ ನೋಂದಣಿ ಮಾಡುವ ಅವಶ್ಯಕತೆಯೂ ಇರುವುದಿಲ್ಲ. ಹಾಗೂ ಗುತ್ತಿಗೆ ಆಧಾರದ ಕೃಷಿಯಿಂದ ಸರಕಾರಕ್ಕೆ ಎಲ್ಲಾ ವಿಸ್ತರಣಾ ಸೇವೆಗಳಿಂದ ಹೊರಬರಲು ಒಂದು ಒಳ್ಳಯ ನೆಪವಾಗಿ ಪರಿಣಮಿಸುತ್ತದೆ.

ರೈತರಿಗೆ ಸಂದೇಶ
ಗೋಡೆಯ ಮೇಲಿನ ಬರಹವನ್ನು ರೈತರು ಸ್ಪಷ್ಟವಾಗಿ ಓದಬಲ್ಲವರಾಗಿದ್ದಾರೆ; ಕೃಷಿ ಕ್ಷೇತ್ರದಿಂದ ಸರಕಾರ ತನ್ನ ಕಾಲು ಹಿಂದಕ್ಕೆ ತೆಗೆದುಕೊಳ್ಳವ ಅರ್ಥವೇನೆಂದರೆ, ರೈತರು ಕೆಲವೊಮ್ಮೆಯಾದರೂ ಸರಕಾರದ ಮೇಲೆ ಪ್ರಭಾವ ಬೀರುವ, ಒತ್ತಾಯ ಹಾಕುವ ಶಕ್ತಿಯನ್ನು ಉಳಿಸಿಕೊಂಡಿದ್ದರು, ಈಗ ಆ ಶಕ್ತಿಯನ್ನು ಅವರ ಕೈಯಿಂದ ಕಸಿದುಕೊಂಡಂತೆ. ಕೃಷಿ ಉತ್ಪನ್ನಗಳ ಸಂಗ್ರಹಣೆಯಿಂದ ಸರಕಾರ ಹೊರಬರಬೇಕು ಎಂಬ ಶಿಫಾರಸ್ಸುಗಳ ಒಳ ಅರ್ಥದ ಬಗ್ಗೆ ರೈತರಿಗೆ ಗೊತ್ತಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ಕೆಡವಿ ಹಾಕುವುದರಿಂದ ಪರಿಣಾಮಗಳು ಏನಾಗಬಹುದು ಎಂಬುದರ ಬಗ್ಗೆ ಅವರಿಗೆ ತಿಳಿದಿದೆ; ಕನಿಷ್ಠ ಬೆಂಬಲ ಬೆಲೆಯ ಭರವಸೆ ಈಗ ಅವರ ಬಳಿ ಇಲ್ಲ ಎಂಬುದರ ವಾಸನೆಯನ್ನು ಹಿಡಿದಿದ್ದಾರೆ. ಹಾಗೂ ಇತ್ತೀಚಿಗೆ ಈರುಳ್ಳಿಯ ರಫ್ತನ್ನು ನಿಷೇಧಿಸಿರುವ ಕ್ರಮದಿಂದ ಅವರಿಗೆ ತಿಳಿದಿರುವುದೇನೆಂದರೆ, ರೈತರು ಎಂದಾದರೂ ಒಂದಿಷ್ಟು ಲಾಭ ಮಾಡುವ ಅವಕಾಶವನ್ನು ಹೊಂದಿದ್ದಾಗ ಸರಕಾರ ಮಧ್ಯಪ್ರವೇಶ ಮಾಡುತ್ತೆ ಎಂಬುದು. ಅವರು ರಾಜಕೀಯ ಸಂಕೇತಗಳನ್ನು ಅರ್ಥಶಾಸ್ತ್ರಜ್ಞರಿಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ.

ಯೋಗೇಂದ್ರ ಯಾದವ್
(ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾçಧ್ಯಕ್ಷರು. ರೈತ ಸಮಸ್ಯೆಗಳನ್ನು ಒಳಗೊಂಡಂತೆ ಪ್ರಸಕ್ತ ದೇಶದ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಯೋಗೇಂದ್ರ ಅವರು ಜನಪರ ಹೋರಾಟಗಳಲ್ಲಿ ಭಾಗಿಯಾಗುವಂತೆಯೇ ಅವುಗಳ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಸಲು ಜನಪ್ರಿಯ ಪತ್ರಿಕೆಗಳಿಗೆ ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.)

– ಕನ್ನಡಕ್ಕೆ: ರಾಜಶೇಖರ್ ಅಕ್ಕಿ


ಇದನ್ನೂ ಓದಿ: ರಾಜ್ಯಾದ್ಯಂತ ಸಿಡಿದೆದ್ದ ರೈತರು: ಕರ್ನಾಟಕ ಬಂದ್ ಯಶಸ್ವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....