Homeರಾಜಕೀಯಉಡುಪಿಯ ಮರಳು ಮಾಫಿಯಾಕ್ಕೆ ಅರಳು-ಮರಳು ಪೇಜಾವರರ ಕೃಪಾಶೀರ್ವಾದ!

ಉಡುಪಿಯ ಮರಳು ಮಾಫಿಯಾಕ್ಕೆ ಅರಳು-ಮರಳು ಪೇಜಾವರರ ಕೃಪಾಶೀರ್ವಾದ!

- Advertisement -
- Advertisement -

 ಶುದ್ಧೋಧನ |

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮರಳುಗಾರಿಕೆ ಖತರ್‍ನಾಕ್ ಮಾಫಿಯಾ ಪಾರುಪತ್ಯದಲ್ಲಿದೆ. ಎತ್ತಿಂದೆತ್ತ ಲೆಕ್ಕ ಹಾಕಿ ತಾಳೆ ನೋಡಿದರೂ ಇದೊಂದು ಸಾವಿರಾರು ಕೋಟಿ ರೂಪಾಯಿಗಳ ಕಡುಕಪ್ಪು ದಂಧೆ ಎಂಬುದು ಖಾತ್ರಿಯಾಗುತ್ತದೆ. ಹೀಗಾಗಿ ಈ ಮಾಫಿಯಾಕ್ಕೆ ಎಂ.ಪಿ-ಎಮ್ಮೆಲ್ಲೆ-ಮಂತ್ರಿ-ಪೇಜಾವರರಂಥ ಸ್ವಾಮೀಜಿಗಳ ಕೃಪಾಶೀರ್ವಾದವೂ ಸಿಕ್ಕಿದೆ. ಮರಳಿನ ಸುತ್ತ ನಡೆಯುತ್ತಿರುವ ಅನಾಚಾರ, ಅವ್ಯವಹಾರ, ಅವಾಂತರ ಉಡುಪಿ ಜಿಲ್ಲೆ ಮಟ್ಟಿಗೆ ಒಂಚೂರು ವಿಭಿನ್ನ. ಉಡುಪಿಯ ಮರಳು ಭಾನ್ಗಡಿಯಲ್ಲಿ ಜಿಲ್ಲೆಯ ಅಷ್ಟೂ ಅಕ್ಕಲ್‍ಗೇಡಿ ಬಿಜೆಪಿ ಶಾಸಕ-ಸಂಸದರು ಮತ್ತವರ ರಾಜಗುರು ಪೇಜಾವರ ಸ್ವಾಮಿ ಎಂಟ್ರಿ ಹೊಡೆದಿರುವುದರಿಂದ ಚಿತ್ರ-ವಿಚಿತ್ರ ಸೀನ್ ಸೃಷ್ಟಿಯಾಗಿಬಿಟ್ಟಿವೆ!
ಉಡುಪಿ ಜಿಲ್ಲೆ ಉಪ್ಪು ನೀರಿನ ಸಿಆರ್‍ಝಡ್ ಮರಳುಗಾರಿಕೆ ಮತ್ತು ಸಿಹಿ ನೀರಿನ ನಾನ್ ಸಿಆರ್‍ಝಡ್ ಮರಳುಗಾರಿಕೆಯಲ್ಲಿ ಮಾಫಿಯಾ ಹಾವಳಿ ಮಿತಿಮೀರಿ ಹೋಗಿತ್ತು. ಮರಳು ರೌಡಿಗಳು ಲಂಗುಲಗಾಮಿಲ್ಲದೆ ಪುಂಡಾಟ ಶುರುಹಚ್ಚಿಕೊಂಡಿದ್ದರು. ಎರಡು-ಮೂರು ಸಾವಿರಕ್ಕೆ ಮನೆ ಬಾಗಿಲಿಗೆ ಬಂದು ಬೀಳುತ್ತಿದ್ದ ಲೋಡ್ ಮರಳಿಗೆ ಬರೋಬ್ಬರಿ ಇಪ್ಪತ್ತೈದು ಸಾವಿರ ಆಗಿಬಿಟ್ಟಿತು! ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿಗೆ ಹೋಗಿದ್ದ ನಿಷ್ಠೂರ ನಿಯತ್ತಿನ ಜಿಲ್ಲಾಧಿಕಾರಿಣಿ ಪ್ರಿಯಾಂಕ ಮೇರಿ ಮೇಲೆ ಹಲ್ಲೆಗೂ ಪ್ರಯತ್ನ ನಡೆದುಹೋಗಿತ್ತು! ಯಾವಾಗ ಸುಪ್ರೀಂ ಕೋರ್ಟ್ ಹಸಿರು ನ್ಯಾಯಾಧಿಕರಣದ ಮುಂದೆ ಅಕ್ರಮ ಮರಳುಗಾರಿಕೆ ವಿರುದ್ಧ ಅಹವಾಲು ಸಲ್ಲಿಕೆಯಾಯ್ತೋ ಆಗ ಕಳ್ಳರಿಗೆ ಕಡಿವಾಣ ಬಿತ್ತು. ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧ ಮಾಡಬೇಕಾಗಿ ಬಂತು.
ಹೊಸ ಕಾನೂನಿನಿಂದ ಅಕ್ರಮ ಮರಳುಗಾರಿಕೆ ಕೊಟ್ಟಿದ್ದ ಧಾರಾಳ ಲೈಸೆನ್ಸ್ ಪದ್ದತಿ ನಿಂತಿತು. ಹಸಿರು ಪೀಠದಲ್ಲಿ ಕೇಸು ನಡೆಯುತ್ತಿದ್ದರಿಂದ ಮರಳುಗಾರಿಕೆಗೆ ಒಂದಿಷ್ಟು ಕಾಲ ನಿಷೇಧವೂ ಹಾಕಲಾಗಿತ್ತು. ಮಾಫಿಯಾದ ಕಳ್ಳ ಮರಳು ದಾಸ್ತಾನು ಖಾಲಿಯಾಗುತ್ತಿದ್ದಂತೆಯೇ ಕೃತಕ ಹಾಹಾಕಾರ ಶುರುವಾಯ್ತು. ಬಡವರಿಗೆ ಮನೆ ಕಟ್ಟಿಕೊಳ್ಳಲು ಮರಳು ಸಿಗುತ್ತಿಲ್ಲ; ಪಾಪದ ಮರಳು ಕಾರ್ಮಿಕರು ದಂಧೆಯಿಲ್ಲದೆ ಉಪವಾಸ-ವನವಾಸ ಬಿದ್ದಿದ್ದಾರೆಂದು ಶಾಸಕ ರಘುಪತಿ ಭಟ್ಟ, ಎಡಬಿಡಂಗಿ ಸಂತ ಪೇಜಾವರ ಸ್ವಾಮಿ ಗುರು-ಶಿಷ್ಯ ಜೋಡಿ ನೆಲ-ಮುಗಿಲು ಒಂದು ಮಾಡಿ ತುಂಡು ಗುಪ್ವಳ ಹೊಡೆಯತೊಡಗಿತು. ಬೇಕಂತಲೇ ಜಿಲ್ಲಾಧಿಕಾರಿಣಿ ಪ್ರಿಯಾಂಕ ಮೇರಿ ಮರಳುಗಾರಿಕೆಗೆ ಅವಕಾಶ ಕೊಡುತ್ತಿಲ್ಲ. ಆಕೆ ರಾಜಿನಾಮೆ ಕೊಡಬೇಕು; ಇಲ್ಲದಿದ್ದರೆ ಸರ್ಕಾರ ಎತ್ತಂಗಡಿ ಮಾಡಬೇಕೆಂದು ಎಡವಟ್ಟು ಎಮ್ಮೆಲ್ಲೆ ರಘುಪತಿ ಭಟ್ಟ ಬೊಬ್ಬಿರಿದು ಹೀರೋ ಆಗಲು ಹವಣಿಸಿದ್ದೇ ಹವಣಿಸಿದ್ದು. ಇದ್ಯಾವುದಕ್ಕೂ ಖಡಕ್ ಜಿಲ್ಲಾಧಿಕಾರಿಣಿ ಪ್ರಿಯಾಂಕ ಸೊಪ್ಪುಹಾಕಲಿಲ್ಲ. ಪಕ್ಕದ ಮಂಗಳೂರಿನ ಬೆಂಕಿ ಬ್ರಾಂಡಿನ ಸಂಸದ ನಳಿನ್‍ಕುಮಾರ್ ಕಟೀಲ್, ಕಾರ್ಕಳದ ಭಜರಂಗಿ ಶಾಸಕ ಸುನೀಲ್‍ಕುಮಾರ್, ಕಾಪುದ ಮಂಡೆಯಿಲ್ಲದ ಲಾಲಾಜಿ ಮೆಂಡನ್, ಬೈಂದೂರಿನ ಸಿಡಿಮಿಡಿ ಮುದುಕ ಸುಕುಮಾರ್ ಶೆಟ್ಟಿ ಮತ್ತು ಕುಂದಾಪುರದ ಆಜನ್ಮ ಬ್ರಹ್ಮಚಾರಿ ಹಾಲಾಡಿ ಶ್ರೀನಿವಾಸ್ ಶೆಟ್ಟಿಯನ್ನು ಬೆನ್ನಿಗಿಟ್ಟುಕೊಂಡು ರಘುಪತಿ ಭಟ್ಟ ಡಿಸಿ ಕಛೇರಿ ಬಳಿ ಆಹೋರಾತ್ರಿ ಧರಣಿ ಡ್ರಾಮಾ ಎಂಟು ದಿನ ನಡೆಸಿದ. ಗಣಿ ಇಲಾಖೆಯ ಕಾರ್ಯದರ್ಶಿ ಕೊಠಾರಿಯೂ ಬಂದು “ಸಾಂತ್ವನ” ಹೇಳುತ್ತಿದ್ದಂತೆಯೇ ಧರಣಿ ಟೆಂಟು ಕಿತ್ತುಕೊಂಡು ಹೋದ ಸಂಸದ-ಶಾಸಕರ ಅಸಲಿಯತ್ತು ಜಿಲ್ಲೆಯ ಜನರಿಗೀಗ ಅರ್ಥವಾಗಿ ಹೋಗಿದೆ.
ಬಡವರ ಮರಳು ಕಾರ್ಮಿಕರ ಹಿತೈಷಿಯಂತೆ ಪೋಸು ಕೊಡುತ್ತಿರುವ ರಘುಪತಿ ಭಟ್ಟ ಹುಸಿ ಹೋರಾಟದ ಮೂಲ ಉದ್ದೇಶ ಮರಳು ಮಾಫಿಯಾದ ಲೂಟಿಗೆ ನೆರವಾಗುವುದಷ್ಟೇ. ಕಳೆದ ಅಸೆಂಬ್ಲಿ ಇಲೆಕ್ಷನ್ ಹೊತ್ತಲ್ಲಿ ಈ ಭಟ್ಟನಿಗೆ ಮರಳು ಮಾಫಿಯಾ ದೊಡ್ಡ ಗಂಟು ಕೊಟ್ಟಿತ್ತು. ಅಂದು ಉಡುಪಿ ಶಾಸಕನೂ, ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದ ಪ್ರಮೋದ್ ಮಧ್ವರಾಜ್ ಎಂಬ ಮೊದ್ಮಣಿ ವಿರುದ್ಧ ಮರಳು ಮಾಫಿಯಾ ಮುರಕೊಂಡು ಬಿದ್ದಿತ್ತು. ಪ್ರಮೋದ್‍ನ ಮತ್ಸ್ಯೋದ್ಯಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಉದಯ ಸುವರ್ಣ ಅಕ್ರಮ ಮರಳುಗಾರಿಕೆ ಬಗ್ಗೆ ಹಸಿರು ನ್ಯಾಯಾಧೀಕರಣಕ್ಕೆ ದೂರು ಸಲ್ಲಿಸಿದ್ದರು. ಹಾಗಾಗಿ ಇದು ಪ್ರಮೋದರದೇ ಕಿತಾಪತಿ ಎಂಬ ತರ್ಕಕ್ಕೆ ಬಿದ್ದಿದ್ದ ಮರಳು ಮಾಫಿಯಾ ಆತನ ಎದುರಾಳಿ ರಘುಪತಿ ಭಟ್ಟನಿಗೆ ಎಲೆಕ್ಷನ್‍ನಲ್ಲಿ ಫೈನಾನ್ಸ್ ಮಾಡಿತ್ತು. ಮರಳು ಮಾಫಿಯಾ ಭಟ್ಟನಿಂದ ಈಗದರ ಕೂಲಿಯನ್ನು ಪಡೆಯಲು ಯತ್ನಿಸುತ್ತಿದೆ.

raghupathi bhat, BJP mla

ಮರಳುಗಾರಿಕೆ ನಿಂತಿರುವುದು ಕೇಂದ್ರ ಸರ್ಕಾರದ ಕಾನೂನು-ನಿಯಮದಿಂದ ಎಂಬುದು ಮರೆಮಾಚಿ ಪ್ರಾಮಾಣಿಕ ಜಿಲ್ಲಾಧಿಕಾರಿಣಿ ಮತ್ತು ಕಾಂಗ್ರೆಸ್ ಮೇಲೆ ಪೆದ್ದು ಆರೋಪ ಹೊರಿಸುತ್ತಿರುವ ಭಟ್ಟ ಮರಳು ತೆಗೆಯುತ್ತೇವೆಂದು ಪೊಕ್ಕು ಪೌರುಷ ತೋರಿಸುತ್ತಿದ್ದಾನೆ. ಇನ್ನು ಸಂಸದ ನಳಿನ್ ತನ್ನದೇ ಪಕ್ಷದ ಕೇಂದ್ರ ಸರ್ಕಾರದ ಪರಿಸರ ಮಂತ್ರಿಯ ಮೂಗು ಹಿಡಿದು ತನಗೆ ಬೇಕಾದಂತೆ “ಮರಳು ನೀತಿ” ಮಾಡಿಕೊಳ್ಳಬಹುದಾದರೂ, ಆ ತಾಕತ್ತಿಲ್ಲದ ಆತ ರಾಜ್ಯ ಸರ್ಕಾರ, ಜಿಲ್ಲಾಡಳಿತದತ್ತ ಬೆಟ್ಟು ತೋರಿಸುತ್ತಾ ತನ್ನತ್ತಲೇ ಇತರ ಮೂರು ಬೆರಳುಗಳನ್ನು ತಿರುಗಿಸಿಕೊಂಡಿದ್ದಾನೆ.
ಕಳೆದ ವರ್ಷ ಈ ಮರಳು ಮಾಫಿಯಾ ಎಂಥ ಹಗಲು ದರೋಡೆ ಮಾಡಿದೆ, ಎಂತೆಂಥ ಗೂಂಡಾಗಿರಿ ಮಾಡಿದೆ. ಬಡವರಿಗೆ ಮರಳು ಸಿಗದಂತೆ ಮಾಡಿ ಮಲ್ಟಿ ಎಕ್ಸಲ್ ಲಾರಿಗಳಲ್ಲಿ ಮರಳು ತುಂಬಿ ಯಾವ್ಯಾವ ಜಿಲ್ಲೆಗೆ-ರಾಜ್ಯಕ್ಕೆ ಕಳಿಸಿದೆ ಎಂಬುದೆಲ್ಲಾ ಬಿಜೆಪಿ ಶಾಸಕ, ಸಂಸದರಿಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಪೋಸು ಕೊಡುತ್ತಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ 9,67,179 ಮೆಟ್ರಿಕ್ ಟನ್ ಮರಳು ಎತ್ತಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಇದರ ದುಪ್ಪಟ್ಟು ಮರಳು ತೆಗೆಯಲಾಗಿದೆ. ಇದರಲ್ಲಿ ಶೇಕಡ ಹದಿನೈದರಷ್ಟು ಉಡುಪಿ ಜಿಲ್ಲೆಯವರಿಗೆ ಮನೆ ಕಟ್ಟಲು ಸಿಕ್ಕಿಲ್ಲ!
ಉಳಿದ ಮರಳನ್ನು ಪ್ರತಿ ಲೋಡ್‍ಗೆ ಇಪ್ಪತ್ತೈದು ಸಾವಿರದಂತೆ ಬೇರೆ-ಬೇರೆ ಜಿಲ್ಲೆಗೆ ಕಳ್ಳಸಾಗಾಣಿಕೆ ಮಾಡಲಾಗಿದೆ. ಕಳೆದ ಒಂದೇ ವರ್ಷದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬರೋಬ್ಬರಿ ಹದಿನಾಲ್ಕುವರೆ ಸಾವಿರ ಕೋಟಿ ರೂಪಾಯಿ ಮರಳಿನ ದಂಧೆ ನಡೆದಿದೆಯೆಂದು ಪರಿಸರ ಹೋರಾಟಗಾರರು ಅಂದಾಜಿಸಿದ್ದಾರೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಜಿಲ್ಲೆಯಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದೆ. ಆದರೆ ಮೀನುಗಾರಿಕೆ ದೋಣಿಗಳಿಗೆ ಗಂಡಾಂತರಕಾರಿಯಾದ ನದಿಯೊಳಗಿನ ಮರಳು ದಿಬ್ಬ ತೆಗೆಯಲು ಶರತ್ತಿನ ಅವಕಾಶ ನೀಡಲಾಗಿದೆ. ಮರಳಿನ ದಿಬ್ಬಗಳನ್ನು ನೀರಿನ ಮೇಲ್ಮಟ್ಟದಿಂದ ಒಂದು ಮೀಟರ್ ಆಳದವರೆಗಷ್ಟೇ ತೆರವುಗೊಳಿಸಲು ಸಾಂಪ್ರದಾಯಿಕ ಮರಳುಗಾರಿಕೆ ಕಸುಬಿನವರಿಗೆ ಪರವಾನಗಿ ನೀಡಲು ಹೇಳಿದೆ.
ಈ ಅವಕಾಶ ಬಳಸಿಕೊಂಡು ಮರಳು ಮಾಫಿಯಾ ನೀರಿನ ಮೇಲ್ಮಟ್ಟದಿಂದ 25-30 ಅಡಿ ಆಳದವರೆಗೆ ಮರಳು ತೆಗೆದಿದೆ. ಕೇಂದ್ರ ಪರಿಸರ ಇಲಾಖೆಯ ನಿಯಮದಂತೆ ಮರಳು ಕಸುಬಿನವರು ನದಿಯಲ್ಲಿ ಮುಳುಗಿ ಬುಟ್ಟಿಯಲ್ಲಿ ಮರಳು ತುಂಬಿ ನಾಡದೋಣಿಗೆ ಹಾಕಬೇಕು. ಆದರೆ ಮರಳಿನ ದಿಬ್ಬ ತೆರವು ಮಾಡುವಾಗ ದೊಡ್ಡ-ದೊಡ್ಡ ಫೈಬರ್, ಕಬ್ಬಿಣದ ದೋಣಿ ಬಳಸಲಾಗಿದೆ; ಜೆಸಿಬಿ, ಜರಡಿಯಿಂದ ಮರಳು ಲೂಟಿ ಮಾಡಲಾಗಿದೆ. ಹಸಿರು ಪೀಠ ಮರಳು ದಿಬ್ಬ ತೆರವುಗೊಳಿಸಲು ಸಾಂಪ್ರದಾಯಿಕ ಮರಳು ಕರ್ಮಚಾರಿಗಳಿಗಷ್ಟೇ ಲೈಸೆನ್ಸ್ ಕೊಡಬೇಕೆಂದು ಹೇಳಿದೆ. ಆದರೆ ಮರಳು ಕಸುಬು ಎಂದೂ ಮಾಡದ ದುಡ್ಡಿನ ಕುಳಗಳು ಅಕ್ರಮವಾಗಿ ಪರವಾನಗಿ ಪಡೆದಿದ್ದಾರೆ. ಮಾಫಿಯಾ ಬಿಹಾರ, ಉತ್ತರ ಪ್ರದೇಶದ ಕೂಲಿಗಳನ್ನು ತಂದು ದೇಖಾದಂಧೆ ನಡೆಸುತ್ತಿದೆ.
ತಾವು ಮಾತ್ರ ದೇಶೋದ್ಧಾರಕರು ದೇಶಭಕ್ತರೆಂದು ಬೊಬ್ಬಿರಿಯುವ ಬಿಜೆಪಿ ಭೂಪರಿಗೆ ಮರಳು ಕಳ್ಳದಂಧೆಯಲ್ಲಿ ಸಿಗುವ ಪಾಲು ಎಷ್ಟು? ಹಸಿರು ನ್ಯಾಯಪೀಠದ ಆದೇಶ ಉಲ್ಲಂಘಿಸಿ ಮರಳು ಕಳ್ಳರ ನರವಿಗೆ ಜಿಲ್ಲಾಧಿಕಾರಣಿ ಬರುವಂತೆ ಮಾಡಲೆಂದೇ ಶಾಸಕ ರಘುಪತಿ ಭಟ್ಟ, ಪೇಜಾವರ ಸ್ವಾಮಿ ಬಳಗ ಧರಣಿ ತಂತ್ರಗಾರಿಕೆ ಮಾಡಿತ್ತಲ್ಲವಾ? ಇಂಥ ಪ್ರಶ್ನೆಗಳೀಗ ಉಡುಪಿ ಜಿಲ್ಲೆಯ ಜನರನ್ನು ಕಾಡಲಾರಂಭಿಸಿವೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...