HomeUncategorizedಪ್ರತ್ಯೇಕ ರಾಜ್ಯದ ಕೂಗು ಅಭಿವೃದ್ಧಿಗೋ? ಲೂಟಿಗಾಗಿಯೋ?

ಪ್ರತ್ಯೇಕ ರಾಜ್ಯದ ಕೂಗು ಅಭಿವೃದ್ಧಿಗೋ? ಲೂಟಿಗಾಗಿಯೋ?

- Advertisement -
- Advertisement -

ಒಡೆದು ಆಳುವ ಹುಕಿಯು ಹಠವಾಗಿ ಮಾರ್ಪಡುವುದು ಯಾವಾಗೆಂದರೆ ನಾಡಿನ ಸಂಪತ್ತನ್ನು ಬಳಿದು ಆಪೋಶನ ಮಾಡುವ ಕ್ರೌರ್ಯ ಹೆಚ್ಚಾದಾಗ. ಸಂಪತ್ತಿನ ಲೂಟಿಗಾಗಿಯೇ ಅಧಿಕಾರ ಹಿಡಿಯುವ ದುಷ್ಟ ಆಟಗಳು ಶುರುವಿಟ್ಟುಕೊಳ್ಳುತ್ತವೆ. ಇದಕ್ಕೆ ಸಾಕ್ಷಿ ಏನೆಂದರೆ ಪ್ರತಿ ಸಾರಿಯೂ ಹೈದರಾಬಾದ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿನ ಕೂಗು ಏಳುವುದು ಗಮನಿಸಬೇಕು. ಹಿಂದೆ ವೈಜನಾಥ ಪಾಟೀಲರು ಹೈದರಾಬಾದ ಕರ್ನಾಟಕದ ಅಭಿವೃದ್ಧಿಯ ಪ್ರಶ್ನೆ ಮಾಡಿ ಹೋರಾಟ ನಡೆಸಿದ್ದರು. ಮಾತ್ರವಲ್ಲ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ಕೊಟ್ಟಿದ್ದರು. ಆದರೆ ಹೈದರಾಬಾದ ಕರ್ನಾಟಕದಿಂದ ಈವರೆಗೆ ಆರಿಸಿಹೋದ ರಾಜಕಾರಣಿಗಳು ಯಾಕೆ ಕೆಲಸ ಮಾಡಿಲ್ಲ ಎಂಬ ಪ್ರಶ್ನೆ ಮಾಡಿದ್ದಾರೆಯೇ? ಮಾಡಿಕೊಂಡಿದ್ದಾರೆಯೇ? ವೈಜನಾಥ ಪಾಟೀಲರು ಕಡೆಪಕ್ಷ ಹೈದರಾಬಾದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳೇನು ಎಂಬುದಕ್ಕೆ ಉದ್ಯೋಗ, ಶಿಕ್ಷಣ ಮುಂತಾದ ಸಂಗತಿಗಳನ್ನು ತುಲನಾತ್ಮಕವಾಗಿ ನಾಡಿನ ಮುಂದೆ ಮಂಡಿಸಿದ್ದರು. ಆದರೆ ಈಗ ಪ್ರತ್ಯೇಕತೆಯ ಮಾತಾಡುತ್ತಿರುವವರು ಅದಾವುದನ್ನೂ ಮಾತಾಡದೆ ಭಾವನಾತ್ಮಕ ಸಂಗತಿಗಳನ್ನು ಮುಂದೆ ಮಾಡುತ್ತಿದ್ದಾರೆ. ಹೈದರಾಬಾದ ಕರ್ನಾಟಕದಲ್ಲಿನ ಪ್ರಮುಖ ಸಮಸ್ಯೆಗಳು ಏನು ಎಂಬುದನ್ನು ಈವರೆಗೂ ಕಿಂಚಿತ್ತು ಸಹ ಆಲೋಚಿಸದ ಮತ್ತು ಸಮಸ್ಯೆಗೆ ಪರಿಹಾರ ಕಂಡುಹಿಡಿಯದ ಇವರು ಇದ್ದಕ್ಕಿದ್ದಂತೆ ಪ್ರತ್ಯೇಕ ರಾಜ್ಯ ಬೇಕೆಂಬ ಅಂಶ ಯಾಕೆ ಮುಂದೆ ಮಾಡುತ್ತಿದ್ದಾರೆ? ವೈರುದ್ದ್ಯದ ಸಂಗತಿ ಎಂದರೆ ನಮ್ಮ ನಾಡಿನ ಗಣಿಗಳನ್ನು ಲೂಟಿ ಮಾಡಿದ ಶ್ರೀರಾಮುಲು ರೆಡ್ಡಿಗಳು ಪ್ರತ್ಯೇಕ ರಾಜ್ಯಕ್ಕಾಗಿನ ಹೋರಾಟದ ನಾಯಕರಂತೆ. ಈಗ ಈ ಲೂಟಿಕೋರರು ಬಿಜೆಪಿ ಪಕ್ಷದ ನಾಯಕರೂ ಹೌದು.
ಹೈದರಾಬಾದ ಕರ್ನಾಟಕವು ಅತಿದೊಡ್ಡ ಸಂಖ್ಯೆಯಲ್ಲಿ ಕೃಷಿಕೂಲಿಕಾರ್ಮಿಕರನ್ನು ಹೊಂದಿದೆ. ಬಡರೈತರು ಇಲ್ಲಿಯೇ ಇರುವರು. ದಲಿತ ದಮನಿತ ಜನತೆಯ ಜೀವನದ ತಲಾ ಆದಾಯವು ದಿನಕ್ಕೆ ಖಂಡಿತ ಇಪ್ಪತ್ತು ರೂಪಾಯಿ ದಾಟುವುದಿಲ್ಲ. ವಲಸೆ ಪ್ರಮಾಣವು ಅಧಿಕವಾಗಿದೆ. ಹೀಗೆ ಕಿತ್ತು ತಿನ್ನುವ ಬಡತನದಲ್ಲಿಯೂ ಜನರು ಉರಿವ ಬಿಸಿಲು ಮತ್ತು ಬಾರದ ಮಳೆಯನ್ನು ಸಹಿಸುತ್ತ ಬದುಕಿನ ಬಂಡಿ ಓಡಿಸುತ್ತಿದ್ದಾರೆ. ಪ್ರತ್ಯೇಕ ರಾಜ್ಯದ ಪ್ರಶ್ನೆ ಎತ್ತುವವರು ಭೂಮಿ ಇಲ್ಲದವರಿಗೆ ಭೂಮಿ ಕೊಡಿ, ಹೊಟ್ಟೆ ಹೊರೆಯಲಿಕ್ಕಾಗಿ ಗುಳೆ ಹೋಗುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಿ, `ಮನರೇಗಾ’ ಜಾರಿ ಮಾಡಿ ಉದ್ಯೋಗ ಸೃಷ್ಟಿಸಿ ಎಂಬ ಮುಂತಾದ ಸಾಮಾನ್ಯ ಜನತೆಯ ಸಮಸ್ಯೆಗಳನ್ನು ಪ್ರಧಾನವಾಗಿಟ್ಟುಕೊಳ್ಳುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರೆ ಖಂಡಿತ ಇಲ್ಲ. ಇವರಿಗೆ ಬೇಕಿರುವುದು ಅಧಿಕಾರ. ಅಧಿಕಾರ ಹಿಡಿಯಲು ಜನತೆಯನ್ನು ಭಾಷೆಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಪ್ರತ್ಯೇಕತೆಯ ಹೆಸರಿನಲ್ಲಿ ಭಾವನಾತ್ಮಕವಾಗಿ ಅಣಿನೆರೆಸುವ ಹುನ್ನಾರನ್ನ ಮಾತ್ರ ಮಾಡುತ್ತಿದ್ದಾರೆ.
ಹಾಗೆ ನೋಡಿದರೆ ಕಾಂಗ್ರೆಸ್, ಜನತಾದಳ ಮತ್ತು ಬಿಜೆಪಿ ಪಕ್ಷಗಳು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಈ ಮೂರೂ ಪಕ್ಷಗಳಲ್ಲಿನ ಹಲವರು ಒಂದರ್ಥದಲ್ಲಿ ರಾಜ್ಯವನ್ನು ಲೂಟಿ ಮಾಡಿದವರೆ. ಇವರು ತಮ್ಮ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಮಾಡಿದ ಕೆಲಸವೇನು? ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಮಾಡಿದ ಪ್ರಯತ್ನಗಳೇನು? ಎಂಬುದನ್ನು ಹೇಳಬೇಕು. ಇವರದೇ ಪಕ್ಷದ ಎಂ.ಎಲ್.ಸಿ.ಯಾಗಿದ್ದ ಕಲಬುರಗಿಯ ಶಶಿಲ ಜಿ ನಮೋಶಿಯವರು 2008ರಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ.ಡಿ.ಎಂ.ನಂಜುಂಡಪ್ಪ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿದ್ದರು. ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹಣವನ್ನು ಆದ್ಯತೆಯನುಸಾರ ಅಸಮಾನತೆ ನಿವಾರಣೆಗೆ ಹಣ ವಿನಿಯೋಗ ಮಾಡುವುದು ಪ್ರಮುಖ ಜವಾಬ್ದಾರಿಯಾಗಿತ್ತು. ಆದರೆ ಶಶಿಲ ನಮೋಶಿಯವರು ತಮ್ಮ ಹೊಣೆಯನ್ನು ನಿಭಾಯಿಸಲೇ ಇಲ್ಲ. ಅವರೇನಾದರೂ ತಮ್ಮ ಅವಧಿಯಲ್ಲಿ ವಹಿಸಿಕೊಂಡ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದರೆ ಅಸಮಾನತೆ ಕೊಂಚವಾದರೂ ನಿವಾರಣೆಯಾಗುತ್ತಿತ್ತು. ಇಂದಿಗೆ ಹತ್ತು ವರ್ಷಗಳು ಮುಗಿದುಹೋದವು. ಯಾಕೆ ಇನ್ನೂ ಸಮಸ್ಯೆಗಳು ಪರಿಹಾರವಾಗಿಲ್ಲ? ಕನಿಷ್ಠಪಕ್ಷ ಸರಿಯಾಗಿ ಯೋಜನೆ ಮಾಡಿ ತಳಹಂತದಿಂದ ಸಾಮಾನ್ಯ ಜನತೆಯ ತಲಾ ಆದಾಯ ಹೆಚ್ಚಳವಾಗುವಂತೆ ಕ್ರಮ ವಹಿಸುವಲ್ಲಿ ಮುತುವರ್ಜಿ ವಹಿಸಲಿಕ್ಕಾಗದ ಪಕ್ಷವು ಈಗ ಪ್ರತ್ಯೇಕ ರಾಜ್ಯದ ಬೆಂಕಿ ಹಚ್ಚುವಲ್ಲಿ ತೊಡಗಿದೆ. ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹಣವನ್ನು ವಿನಿಯೋಗ ಮಾಡಿದ್ದು ಅನುತ್ಪಾದನಾ ಕ್ರಮಗಳಿಗೆ ಹೆಚ್ಚು. ಇದರ ಬಹುದೊಡ್ಡ ವಿಮರ್ಶೆ ವಿಶ್ಲೇಷಣೆ ನಡೆಯಬೇಕಾದ ಜರೂರಿ ಇದೆ.
ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿ ಸಾಮಾನ್ಯ ಜನತೆಯ ತಲಾ ಆದಾಯವು ಕುಸಿಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಚುನಾಯಿತ ಜನತೆಯ ಪ್ರತಿನಿಧಿಗಳ, ಶಿಕ್ಷಣ ಸಂಸ್ಥೆ ಮಾಲಿಕರ, ದಲ್ಲಾಳಿಗಾರರ ಆದಾಯವು ಸಾವಿರಾರು ಪಟ್ಟು ಹೆಚ್ಚಳವಾಗುತ್ತಿದೆ. ಇದು ಹೇಗೆ ಸಾಧ್ಯವಾಯಿತು? ಇವರಿಗೆ ನಿಜವಾಗಿಯೂ ತಮ್ಮದೇ ಪ್ರದೇಶವು ಅಭಿವೃದ್ಧಿ ಆಗಬೇಕೆಂಬ ಹೆಬ್ಬಯಕೆ ಇದ್ದರೆ ಈ ನೆಲ ಮುಗಿಲಿನಂತಹ ಅಂತರ ಇರುತ್ತಿತ್ತೇ? ರೈತರ ಆತ್ಮಹತ್ಯೆಯು (ಕೊಲೆ) ಬೀದರನಿಂದ ಆರಂಭವಾಗಿ ಇಲ್ಲಿವರೆಗೆ ಸಾವಿರಾರು ರೈತರು ಕೊಲೆಯಾಗಿದ್ದಾರೆ. ಇದೇ ಬಿಜೆಪಿ ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದಾಗ 1,077 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದೂ ಪತ್ರಿಕೆಯ ವರದಿ ಪ್ರಕಾರ ಸರಾಸರಿ ತಿಂಗಳಿಗ ಇಪ್ಪತ್ಯೈದು ರೈತರು ಆತ್ಮಹತ್ಯೆಯ ಒತ್ತಡಕ್ಕೆ ಒಳಗಾಗಿದ್ದಾರೆ. ಇದಕ್ಕೆ ಇರುವ ಮೂಲಭೂತ ಕಾರಣಗಳನ್ನು ಯಾವತ್ತೂ ಚರ್ಚಿಸದ ಬಿಜೆಪಿಯು ಈಗ ಪ್ರತ್ಯೇಕತೆಯ ದನಿ ಎತ್ತುತ್ತಿದೆ. ಚರಿತ್ರೆಯ ಪ್ರಜ್ಞೆ ಇಲ್ಲದ ಯುವಜನತೆಯನ್ನು ಪ್ರತ್ಯೇಕತೆಯ ಭಾವನಾತ್ಮಕತೆಯ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಕುತಂತ್ರವಲ್ಲದೆ ಮತ್ತೇನೂ ಅಲ್ಲ.
ಕರ್ನಾಟಕವು ಹೈದರಾಬಾದ ಮುಂಬೈ ಮದ್ರಾಸ್ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿತ್ತು. ದೇಶದಾದ್ಯಂತ ಭಾಷಾವಾರು ಪ್ರಾಂತಗಳ ರಚನೆಗಾಗಿ ಹೋರಾಟ ನಡೆದವು. ಕಾಂಗ್ರೆಸ್, ಕಮ್ಯುನಿಸ್ಟ್ ಸೋಶಿಯಲಿಸ್ಟ್ ಪಕ್ಷಗಳು ಭಾಷಾವಾರು ಪ್ರಾಂತ ರಚನೆಯ ಪರವಾಗಿದ್ದವು. ಆದರೆ ಅಂದಿನ ಜನಸಂಘ ಮತ್ತು ಇಂದಿನ ಬಿಜೆಪಿಯು ಹಾಗೂ ಆರ್ ಎಸ್ ಎಸ್ ಭಾಷಾವಾರು ಪ್ರಾಂತ ರಚನೆಯ ವಿರೋಧವಾಗಿದ್ದವು. ಐವತ್ತರ ದಶಕದಲ್ಲಿ ಭಾಷಾವಾರು ಪ್ರಾಂತ ರಚನೆಗಾಗಿ ಚಳುವಳಿಗಳು ತೀವ್ರಗೊಂಡವು. ಆಂದ್ರಪ್ರದೇಶದಲ್ಲಿ ಅಮರಣ ನಿರಶನ ನಡೆಸಿದ್ದ ಪೊಟ್ಟಿ ಶ್ರೀರಾಮುಲು ಸಾವಿಗೀಡಾದರು. ಆಗ ಕೇಂದ್ರ ಸರಕಾರವು ಭಾಷಾವಾರು ಪ್ರಾಂತ ರಚನೆಗೆ ಅನುಮತಿಸಿತು. ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು ಅಸ್ತಿತ್ವಕ್ಕೆ ಬಂತು. ಅಂತೆಯೇ ಕರ್ನಾಟಕದಲ್ಲಿಯೂ ಸಮಾವೇಶ ಹೋರಾಟಗಳು ನಡೆದವು. ನಂತರ ಕರ್ನಾಕಟ ರಾಜ್ಯವು ಅಸ್ತಿತ್ವಕ್ಕೆ ಬಂತು. ಅಸ್ತಿತ್ವಕ್ಕೆ ಬಂದ ಕರ್ನಾಟಕವನ್ನು ದೀರ್ಘ ಕಾಲ ಆಳ್ವಿಕೆ ಮಾಡಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಯಾಕೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯನ್ನು ಕಡೆಗಣಿಸಿವೆ ಎಂಬುದಕ್ಕೆ ಉತ್ತರ ಕೊಡಬೇಕು. ಇದಕ್ಕೆ ಇವರೇ ನೇರವಾಗಿ ಹೊಣೆಗಾರರಾಗಿದ್ದಾರೆ. ಹಿಂದಿಯಲ್ಲಿ ಒಂದು ಮಾತಿದೆ ‘ಉಲ್ಟಾ ಚೋರ್ ಕೋತವಾ¯ಕೊ ಡಾಟಾ’ ಅಂತ. ಕಳ್ಳನೇ ಪೊಲೀಸ್‍ಗೆ ತಿರುಗಿ ಬೈದಂತೆ. ಕಳ್ಳತನ ಮಾಡಿದ್ದು ತಾವೇ ಮತ್ತು ಈಗ ಹೈದರಾಬಾದ ಕರ್ನಾಟಕಕ್ಕೆ ಅನ್ಯಾಯವಾಗಿ ಪ್ರತ್ಯೇಕ ರಾಜ್ಯ ಬೇಕು ಎಂದು ಕೂಗುವುದೂ ತಾವೇ.
ಯಾಕೆ ಈಗ ಬಿಜೆಪಿಯು ಪ್ರತ್ಯೇಕ ರಾಜ್ಯದ ಪ್ರಶ್ನೆ ಮುಂದೆ ಮಾಡಿದೆ? ಮತ್ತು ಈ ಪ್ರತ್ಯೇಕತೆಯ ಬೇಡಿಕೆಗೆ ಗಣಿಗಳ್ಳ ಶ್ರೀರಾಮುಲುನನ್ನೆ ನಾಯಕನನ್ನಾಗಿ ಮಾಡಿದ್ದು ಯಾಕೆ? ಹಾಗೆ ನೋಡಿದರೆ ಬಿಜೆಪಿಗೆ ಕರ್ನಾಟಕದ ಅಭಿವೃದ್ಧಿ ಖಂಡಿತ ಬೇಕಿಲ್ಲ. ಅಸೆಂಬ್ಲಿ ಚುನಾವಣೆಯ ಫಲಿತಾಂಶವು ಅದನ್ನು ಚಿಂತೆಗೆ ಹಚ್ಚಿದೆ. ವಿಧಾನಸಭಾ ಚುನಾವಣೆಯಲ್ಲಿ ಮೋದಿ ಹೆಸರಲ್ಲಿ ಸರಳ ಬಹುಮತ ಪಡೆಯುವ ಭರವಸೆ ಇಟ್ಟುಕೊಂಡಿದ್ದ ಬಿಜೆಪಿಗೆ ಅಧಿಕಾರ ಕೈ ತಪ್ಪಿದ್ದು ಆಘಾತವನ್ನುಂಟು ಮಾಡಿದೆ. ಹಣಬಲ, ಕೋಮುದಂಗೆ, ಅನಾಚಾರ, ಧರ್ಮದ ಹೆಸರಿನಲ್ಲಿ ಮಂಕುಬೂದಿ, ಭಯೋತ್ಪಾದನೆ ಹೀಗೆ ಏನೆಲ್ಲ ಮಾಡಿದರೂ ಕರ್ನಾಟಕದ ಜನತೆ ಬಿಜೆಪಿಗೆ ಬಹುಮತ ನೀಡಲಿಲ್ಲ. ಬಿಜೆಪಿಯ ತನ್ನ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರ ಬಳಸಿದ ಮೇಲೆಯೂ ಅಧಿಕಾರ ಸರಳವಾಗಿ ಸಿಗಲಿಲ್ಲ ಅಂತಾದರೆ ಮುಂದಕ್ಕೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಏನು ಮಾಡಬೇಕು? ಹೌದು ಬಿಜೆಪಿಯು ಸ್ವತ: ಕನ್ನಡದ ಕರ್ನಾಟಕದ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡಿದೆ. ಅಂದರೆ ಕನ್ನಡದ ಬಾವುಟ ಮತ್ತು ಭಾಷೆಯ ವಿಷಯ ಬಂದಾಗ ನೇರವಾಗಿ ಬಿಜೆಪಿ ವಿರೋಧಿಸಿದೆ. ಅದು ಹಿಂದಿ ಹೇರಿಕೆಯನ್ನು ಪುರಸ್ಕರಿಸುತ್ತದೆ. ಸಂಸ್ಕøತ ಪೂಜೆ ಬಯಸುತ್ತದೆ. ಕನ್ನಡ ನಾಡಿನ ಮೊದಲ ಧರ್ಮವಾದ ಲಿಂಗಾಯತ ಧರ್ಮ ಮಾನ್ಯತೆಯ ಪ್ರಶ್ನೆ ಬಂದಾಗ ಬಿಜೆಪಿಯು ಬಹಿರಂಗವಾಗಿ ವಿರೋಧಿಸಿದೆ. ಕನ್ನಡದ ಭಾಷೆ, ಬಾವುಟ, ಬಹುಸಂಸ್ಕøತಿಯನ್ನು ವಿರೋಧಿಸುವ ಬಿಜೆಪಿಯು ಅದು ಹೇಗೆ ಕರ್ನಾಟಕವನ್ನು ಪ್ರೀತಿಸಲು ಸಾಧ್ಯ? ಆದ್ದರಿಂದಲೇ ಅದು ಕರ್ನಾಟಕವನ್ನು ಒಡೆಯಬಯಸುತ್ತದೆ. ಲಿಂಗಾಯತ ಪ್ರಶ್ನೆ ಬಂದಾಗ ವೀರಶೈವರೊಳಗೆ ಆರ್ ಎಸ್ ಎಸ್ ಕಮಂಗಿಗಳನ್ನು ಸೇರಿಸಿ ವೀರಶೈವರನ್ನೂ ದಿಕ್ಕುತಪ್ಪಿಸಿದೆ. ಹಾಗೆ ನೋಡಿದರೆ ಲಿಂಗಾಯತ ಮತ್ತು ವೀರಶೈವರನ್ನು ನಿಜವಾಗಿಯೂ ಒಡೆದಿದ್ದು ಬಿಜೆಪಿ. ತಾನೊಂದು ರಾಜಕೀಯ ಪಕ್ಷ. ಅಂತಹದೇನೂ ತಾನು ಮಾಡಿಲ್ಲ ಎಂದು ಅದು ಹೇಳುವಂತಿಲ್ಲ. ಅದು ಯಾವತ್ತೂ ಕರ್ನಾಟಕದ ನೆಲದ ದನಿಯಾದ ರಾಜಕೀಯ ಪಕ್ಷವಾಗಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಅದು ಯಾವತ್ತೂ ಕನ್ನಡ ನೆಲವನ್ನು ಆಪೋಷನ ಮಾಡಲು ಹವಣಿಸುತ್ತದೆ. ಅದು ಎಷ್ಟು ಭಂಡತನಕ್ಕೆ ಇಳಿದಿದೆ ಎಂದರೆ ಕರ್ನಾಟಕದ ಗಣಿ ಲೂಟಿ ಮಾಡಿದ ಕಳ್ಳರಿಗೆ ಅದು ಚುನಾವಣೆಯ ನೇತೃತ್ವ ಕೊಡುತ್ತದೆ, ಮತ್ತು ಪ್ರತ್ಯೇಕ ರಾಜ್ಯಕ್ಕಾಗಿ ಅಂತ ದುಷ್ಟನಾಯಕತ್ವವನ್ನೇ ಮುಂದು ಮಾಡುತ್ತದೆ.
ಹೋಗಲಿ ಈವರೆಗೆ ಸಣ್ಣ ಸಣ್ಣ ರಾಜ್ಯಗಳಾಗಿ ಒಡೆದುಹೋದ ರಾಜ್ಯಗಳೆಲ್ಲ ನಿಜವಾಗಿಯೂ ಅಭಿವೃದ್ಧಿ ಹೊಂದಿವೆಯೇ? ಪಕ್ಕದ ತೆಲಂಗಾಣ ರಾಜ್ಯದಲ್ಲಿ ಸರಕಾರಿ ನೌಕರರಿಗೆ ಕೊಡಲು ಖಜಾನೆಯಲ್ಲಿ ಹಣವಿಲ್ಲ. ಪ್ರತ್ಯೇಕ ರಾಜ್ಯಕ್ಕಾಗಿ ಬಡಿದಾಡಿ ಒಡೆದುಹೋದ ರಾಜ್ಯಗಳ ನೈಜ ಅಭಿವೃದ್ಧಿಯ ಚಿತ್ರಣವನ್ನು ಜನತೆಯ ಮುಂದೆ ಇಡಲಿ. ಆಗ ಇವರ ನಿಜ ಬಣ್ಣ ಬಯಲಾಗುವುದು. ಸಣ್ಣ ರಾಜ್ಯಗಳು ತಮ್ಮ ಆದಾಯದ ಬಹು ಭಾಗವನ್ನು ಕೇಂದ್ರಕ್ಕೆ ಕೊಟ್ಟು ಎಲ್ಲದಕ್ಕೂ ಕೇಂದ್ರ ಸರಕಾರದ ಮುಂದೆ ಮಂಡಿಯೂರಬೇಕು ಎಂಬ ಷಡ್ಯಂತ್ರವೂ ಇದರಲ್ಲಿ ಅಡಗಿದೆ. ಆದ್ದರಿಂದಲೇ ರಾಜ್ಯವನ್ನು ಭಾವನಾತ್ಮಕವಾಗಿ ಒಡೆದು ಅಧಿಕಾರ ಗಿಟ್ಟಿಸಿಕೊಳ್ಳುವ ಚುನಾವಣಾ ಕುತಂತ್ರ ಇದರಲ್ಲಿ ಅಡಗಿದೆ. ಇವರಿಗೆ ಸುಸ್ಥಿರ ಅಭಿವೃದ್ಧಿಯ ಕಾಳಜಿ ಇದ್ದಿದ್ದರೆ, ತಮ್ಮ ಅಧಿಕಾರದ ಅವಧಿಯಲ್ಲಿ ಬಡತನ, ನಿರುದ್ಯೋಗ, ಅನಕ್ಷರತೆ, ರೈತರ ಆತ್ಮಹತ್ಯೆ, ಹೊಟ್ಟೆಗಾಗಿ ವಲಸೆ ತೊಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಇದಾವುದರ ಬಗ್ಗೆಯೂ ಚಕಾರವೆತ್ತದೆ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ ಎಂದರೆ ಅದು ರಾಜ್ಯದ ಜನತೆಗಾಗಿ ಅಲ್ಲ, ತಾವು ಅಧಿಕಾರ ಹಿಡಿಯಲಿಕ್ಕಾಗಿ ಎಂಬುದು ಸ್ಪಷ್ಟ. ಹಾಗಾಗಿ ಬಿಜೆಪಿಯ ಈ ದುಷ್ಟರ ಖೆಡ್ಡಾಕ್ಕೆ ಉತ್ತರ ಕರ್ನಾಟಕದ ಜನತೆ ಬಲಿ ಬೀಳಬಾರದು.

  • ಕೆ.ನೀಲಾ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...