- ಗಿರೀಶ್ ತಾಳಿಕಟ್ಟೆ |
`ಆ ದಿನಗಳು’ ಖ್ಯಾತಿಯ ನಟ ಚೇತನ್ ಈ ದಿನಗಳಲ್ಲೂ ಸದ್ದು ಮಾಡುತ್ತಿರೋದು ಕರ್ನಾಟಕದ ಆ್ಯಕ್ಟಿವಿಸ್ಟ್ ವಲಯಕ್ಕೆ ಹೊಸ ವಿಚಾರವೇನೂ ಅಲ್ಲ. ಸಿಲ್ವರ್ ಸ್ಕ್ರೀನ್ ಮೇಲೆ ಉದ್ದುದ್ದ ಡೈಲಾಗ್ ಉದುರಿಸಿ, ಮೇಕಪ್ಪು ತೆಗೆಯುತ್ತಿದ್ದಂತೆಯೇ ತನಗೂ ಈ ಸಮಾಜಕ್ಕೂ ಸಂಬಂಧವೇ ಇಲ್ಲ; ಹಣ-ಖ್ಯಾತಿ ಬಂದರೆ ಸಾಕು ಅನ್ನೋ ನಟರುಗಳ ಪರಂಪರೆಯ ನಡುವೆ ಚೇತನ್ ಪ್ರಾಮಿಸಿಂಗ್ ಹೀರೊ ಅನ್ನಿಸೋದು ಅವರ ಜನಪರ ಹೋರಾಟಗಳು ಮತ್ತು ನಿರ್ಭೀತ ನಡವಳಿಕೆಯ ಮೂಲಕ. ಇದೀಗ ತಮ್ಮ ವ್ಯಕ್ತಿತ್ವಕ್ಕೆ ಹೆಚ್ಚು ಹೋಲಿಕೆಯಾಗುವಂತಹ ಪಾತ್ರದಲ್ಲೇ ಅವರು ನಟಿಸುತ್ತಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ. ಅದು ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿರುವ ರಣಂ ಸಿನಿಮಾ. ಅದರಲ್ಲಿ ಚೇತನ್ ಮಾಡುತ್ತಿರುವ ಪಾತ್ರ, ಕ್ರಾಂತಿಕಾರಿ ಚೆಗುವೇರಾರನ್ನು ಹೋಲುತ್ತದಂತೆ. ಕ್ಯೂಬಾ ಅನ್ನೋ ಪುಟ್ಟ ದೇಶದ ಕ್ರಾಂತಿಗಾಥೆ ಗೊತ್ತಿರುವ ಎಂತವರಿಗೇ ಆದರೂ ಚೆಗುವೆರಾ ಹೆಸರು ಚಿರಪರಿಚಿತ. ಫಿಡೆಲ್ ಕ್ಯಾಸ್ಟ್ರೋ, ರೌಲ್ರಂತಹ ಲೀಡರುಗಳ ಜೊತೆಗೂಡಿ ತಮ್ಮ ಕ್ರಾಂತಿಕಾರಿ ಹೋರಾಟದ ಮೂಲಕ ಅಮೆರಿಕಾದಂತ ಅಮೆರಿಕವನ್ನೇ ಬೆಚ್ಚಿಬೀಳಿಸಿದ್ದ ಚೆಗುವೆರಾ ಇವತ್ತಿಗೂ ಕ್ರಾಂತಿಯ ಇತಿಹಾಸದಲ್ಲಿ ನವತಾರೆಯಂತೆ ಮಿನುಗುತ್ತಿದ್ದಾರೆ. ಸ್ವತಃ ನಟ ಚೇತನ್, ಚೆಗುವೇರಾ ಅಭಿಮಾನಿಯಾಗಿರೋದ್ರಿಂದ ತುಂಬಾ ಇಷ್ಟಪಟ್ಟು ಈ ಸಿನಿಮಾವನ್ನು ಒಪ್ಪಿಕೊಂಡಿರೋದಾಗಿ ಚೇತನ್ ಹೇಳಿ ಕೊಂಡಿದ್ದಾರೆ. ರೈತರ ಪರವಾಗಿ ನಿಂತು, ಅನ್ಯಾಯ-ಅಕ್ರಮಗಳ ವಿರುದ್ಧ ಹೋರಾಡುವ ಕಥಾಹಂದರವಿರುವ ಈ ಸಿನಿಮಾಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ವಿ.ಸಮುದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಏಕಕಾಲದಲ್ಲಿ ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಇದು ತಯಾರಾಗಲಿದೆ. ಕನ್ನಡದಲ್ಲಿ ಚೇತನ್ ಮಾಡುತ್ತಿರುವ ಪಾತ್ರಕ್ಕೆ ತೆಲುಗಿನಲ್ಲಿ ಇನ್ನೂ ಯಾವ ನಟ ಅನ್ನೋದು ಫೈನಲ್ ಆಗಿಲ್ಲ. ಅಂದಹಾಗೆ, ಈ ಸಿನಿಮಾದ ಕನ್ನಡ ವರ್ಷನ್ನಲ್ಲಿ ದರ್ಶನ್ ಮತ್ತು ಉಪೇಂದ್ರ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಅದಿನ್ನೂ ನಿಕ್ಕಿಯಾಗಿಲ್ಲ. ರಾಯಲಸೀಮೆಯ ಅಬ್ಬರ, ಆರ್ಭಟಗಳಿಂದ ಹೊರಬಂದು ತೆಲುಗಿನ ನಿರ್ದೇಶಕ ಸಮುದ್ರ ಈ ಸಿನಿಮಾ ಮಾಡಿದರೆ ನಿಜಕ್ಕೂ ಒಂದು ಅದ್ಭುತ ಚಿತ್ರ ಇದಾಗಬಹುದು.