| ಆಕಾಶ್ ಕೆರೆಕಟ್ಟೆ |
ಈ ಸರ್ಕಾರ ಇರುತ್ತಾ ಅಥವಾ ಉರುಳುತ್ತಾ? ರಾಜೀನಾಮೆಗಳು ಸ್ವೀಕಾರ ಆಗ್ತಾವಾ ಅಥವಾ ಶಾಸಕರೇ ಅನರ್ಹರಾಗ್ತಾರಾ? ಅನ್ನೋ ಹೈಡ್ರಾಮಾಗಳ ನಡುವೆ ಗಮನಿಸಲೇಬೇಕಾದ ಇನ್ನೊಂದು ರಾಜಕೀಯ ವಿದ್ಯಮಾನ ನಡೆದಿದೆ. ಅದು ಜೆಡಿಎಸ್ಗೆ ನೂತನ ರಾಜ್ಯಾಧ್ಯಕ್ಷರ ಆಯ್ಕೆ. ವಿಶೇಷ ಅಂದ್ರೆ ಜೆಡಿಎಸ್ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ದಲಿತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದೊಂದನ್ನು ಹೊರತುಪಡಿಸಿದರೆ ಈ ಆಯ್ಕೆಯಲ್ಲಿ ಇನ್ನ್ಯಾವ ವಿಶೇಷವೂ ಇಲ್ಲ. ಯಾಕೆಂದರೆ ದೇವೇಗೌಡರ ಕುಟುಂಬದ ಹೊರತಾಗಿ ಜೆಡಿಎಸ್ಗೆ ಯಾರೇ ಅಧ್ಯಕ್ಷರಾದರು ಅವರು ಡಮ್ಮಿಯಾಗಿರಬೇಕಾಗುತ್ತೆ ಅನ್ನೋದನ್ನು ನಿರ್ಗಮಿತ `ಬಾಂಬೆಹಕ್ಕಿ’ ಎಚ್.ವಿಶ್ವನಾಥ್ ಸಾಬೀತು ಮಾಡಿಹೋಗಿದ್ದಾರೆ.
ಸಿದ್ರಾಮಯ್ಯನವರ ಹೊರತಾಗಿ ಅಧ್ಯಕ್ಷರಾದ ಗೌಡರ ಕುಟುಂಬೇತರ ವ್ಯಕ್ತಿಗಳಾದ ತಿಪ್ಪಣ್ಣ, ಮಿರಾಜುದ್ದೀನ್ ಪಟೇಲ್, ಕೃಷ್ಣಪ್ಪ ಇವರೆಲ್ಲ ಹೆಸರಿಗಷ್ಟೇ ಅಧ್ಯಕ್ಷರಾಗಿದ್ದರೆ ವಿನಾಃ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಯಾವ ಸ್ವತಂತ್ರವೂ ಅವರಿಗಿರಲಿಲ್ಲ. ರಾಜೀನಾಮೆ ಗೀಚಿ ಬಾಂಬೆ ಹೊಟೇಲ್ ಸೇರಿಕೊಂಡಿರುವ ಎಚ್.ವಿಶ್ವನಾಥ್ ಕೆ.ಆರ್.ನಗರದ ಪುರಸಭೆ ಎಲೆಕ್ಷನ್ಗೆ ತನಗೆ ಬೇಕಾದವರಿಗೆ ಟಿಕೇಟು ಕೊಡಿಸುವುದಕ್ಕೂ ಸಾಧ್ಯವಾಗಿರಲಿಲ್ಲ ಅಂದಮೇಲೆ `ಜೆಡಿಎಸ್ ಅಧ್ಯಕ್ಷ’ ಹುದ್ದೆ ಅದಿನ್ನೆಷ್ಟು ಗಟ್ಟಿಯದ್ದಾಗಿರಬೇಡ!
ಅಂಥಾ ಸ್ಥಾನಕ್ಕೆ ಈಗ ಎಚ್.ಕೆ.ಕುಮಾರಸ್ವಾಮಿಯನ್ನು ತಂದು ಕೂರಿಸಲಾಗಿದೆ. ನೋ ಡೌಟ್, ಇಂದಿನ ನಿದರ್ಶನಗಳಂತೆ ಅವರೂ ಡಮ್ಮಿ ಅಧ್ಯಕ್ಷರಾಗೇ ಕಾಲ ತಳ್ಳಬೇಕಾಗುತ್ತೆ. ಯಾಕೆಂದರೆ ಬರೋಬ್ಬರಿ ಐದು ಬಾರಿ ಶಾಸಕರಾಗಿರುವ ಸದ್ರಿ ಕುಮಾರಸ್ವಾಮಿ ಈ ಮೈತ್ರಿ ಸರ್ಕಾರದಲ್ಲಿ ತನಗೊಂದು ಮಂತ್ರಿ ಸ್ಥಾನ ಕೊಡಿ ಎಂದು ಕೇಳಿ ಗಿಟ್ಟಿಸಿಕೊಳ್ಳಲಾಗದಷ್ಟು ಮೆತ್ತೆ ಮನುಷ್ಯ. ಇಂಥಾ ವ್ಯಕ್ತಿ ಜೆಡಿಎಸ್ ಅಧ್ಯಕ್ಷಗಿರಿಗಿರುವ ಹಳೇ ಸಂಪ್ರದಾಯ ಮುರಿಯುವ ಯಾವ ಸಾಧ್ಯತೆಯೂ ಇಲ್ಲ. ರಾಜ್ಯ ರಾಜಕಾರಣದ ಮಾತು ಒತ್ತಟ್ಟಿಗಿರಲಿ ತವರು ಜಿಲ್ಲೆ ಹಾಸನದಲ್ಲೇ ಅವರ ಮಾತು ನಡೆಯೋದಿಲ್ಲ ಅನ್ನೋದನ್ನು ಜೆಡಿಎಸ್ ಕಾರ್ಯಕರ್ತರೇ ಮಾತಾಡಿ ಕೊಳ್ಳುತ್ತಿದ್ದಾರೆ. ಯಾಕೆಂದರೆ ಹಾಸನದ ಇಡೀ ರಾಜಕಾರಣವನ್ನು ಮುಷ್ಠಿಯಲ್ಲಿ ಹಿಡಿದು ಕೂತಿರೋದು ಎಚ್.ಡಿ.ರೇವಣ್ಣ. ಅವರ ಮುಂದೆ ಎಚ್.ಕೆ.ಕುಮಾರಸ್ವಾಮಿ ಗಟ್ಟಿಯಾಗಿ ದನಿಬಿಚ್ಚುವ ಧೈರ್ಯ ತೋರುವುದೇ ಡೌಟು.
ಹಾಸನದಲ್ಲಿ ತನ್ನ ಬಿಟ್ಟರೆ ಮತ್ತ್ಯಾವ ಶಕ್ತಿಕೇಂದ್ರಗಳೂ ಸೃಷ್ಟಿ ಆಗಬಾರದೆನ್ನುವ ಕಾರಣಕ್ಕೇ ರೇವಣ್ಣ, ಎಚ್ಕೆ ಕುಮಾರಸ್ವಾಮಿ ಮಂತ್ರಿಯಾಗುವುದಕ್ಕೆ ಅಡ್ಡಗಾಲು ಹಾಕಿದ್ದು ಎನ್ನಲಾಗುತ್ತಿದೆ. ಆರಂಭದಲ್ಲಿ ಕುಮಾರಸ್ವಾಮಿ ಹೆಸರು ಮಂತ್ರಿಯಾಗುವವರ ಯಾದಿಯಲ್ಲಿ ಕೇಳಿಬಂದದ್ದು ಸುಳ್ಳಲ್ಲ. ದಲಿತ ವ್ಯಕ್ತಿಗೆ ಮಂತ್ರಿಯಾಗುವ ಅವಕಾಶ ತಪ್ಪಿಸಿ, ಈಗ ಅದೇ ವ್ಯಕ್ತಿಗೆ ಅಧ್ಯಕ್ಷ ಪಟ್ಟ ಕಟ್ಟಿ ದಲಿತರ ಮೂಗಿಗೆ ತುಪ್ಪ ಸವರುವ ಯತ್ನವೂ ಇದರ ಹಿಂದಿದೆ. ಆದರೆ ಗೌಡರ ಹಟ್ಟಿಯ ಪಾರ್ಟಿಯ ಅಧ್ಯಕ್ಷಗಿರಿಯ ವಜನ್ನು ಎಂತದ್ದು ಎಂಬುದು ಗೊತ್ತಿರುವ ಸತ್ಯವಾಗಿರೋದ್ರಿಂದ ದಲಿತರ್ಯಾರು ಈ ಆಯ್ಕೆಯಿಂದ ಹಿಗ್ಗಿಲ್ಲ ಅನ್ನೋದು ವಾಸ್ತವ.
ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷರಾಗಿದ್ದರಿಂದ ಆದ ಒಂದೇ ಲಾಭ ಅಂದ್ರೆ, ಜೆಡಿಎಸ್ ಶಾಸಕರು ತಾಜ್ವೆಸ್ಟ್ಎಂಡ್ನಿಂದ ದೇವನಹಳ್ಳಿ ರೆಸಾರ್ಟ್ಗೆ ಹೊರಡುವಾಗ ಮಾಧ್ಯಮಗಳ ಫೋಟೋಗ್ರಾಫರ್ಗಳಿಗೆ ಪ್ರಮುಖವಾಗಿ ಕಾಣಲೆಂದು ಅವರಿಗೆ ಬಸ್ನಲ್ಲಿ ಮುಂದಿನ ಸೀಟ್ ಸಿಕ್ಕಿದ್ದಷ್ಟೇ!
ಈ ಆಯ್ಕೆಯಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಪಕ್ಷದ ಯುವ ಘಟಕದ ಅಧ್ಯಕ್ಷರನ್ನಾಗಿ ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡಿರೋದು. ಅಂತೂ ದೇವೇಗೌಡರು ಕುಟುಂಬ ರಾಜಕಾರಣದ ಹಳಿ ಬಿಟ್ಟು ಪಕ್ಕಕ್ಕೆ ಸರಿಯಲಾರರು ಎಂಬುದು ಇದರಿಂದ ಸಾಬೀತಾಗಿದೆ. ಜೊತೆಗೆ ರೇವಣ್ಣನವರ ಮಗ ಪ್ರಜ್ವಲ್ ಗೆದ್ದು ಸಂಸದನಾದ ನಂತರ ಕುಟುಂಬದೊಳಗೆ ಹುಟ್ಟಿಕೊಂಡಿದ್ದ ದಾಯಾದಿ ಅಸಮಾಧಾನವನ್ನು ಈ ರೀತಿ ಸರಿದೂಗಿಸಲಾಗಿದೆ. ಆದ್ರೆ ಒಂದಂತೂ ಸತ್ಯ, ಹಾಲಿ ಜೆಡಿಎಸ್ ಅಧ್ಯಕ್ಷ ಎಚ್ಕೆ ಕುಮಾರಸ್ವಾಮಿ ದೊಡ್ಡ ಗೌಡರು, ರೇವಣ್ಣ, ಕುಮಾರಣ್ಣನ ಎದುರು ಗಟ್ಟಿ ದನಿಯಾಗುವ ಮಾತಂತಿರಲಿ, ನಿಖಿಲ್ ಎದುರೂ ಗಡುಸಾಗಿ ಮಾತಾಡುವುದಕ್ಕೆ ಸಾಧ್ಯವಿಲ್ಲ.


