ಮುಂಬೈನಲ್ಲಿ ರೆನಾಸನ್ಸ್ ಹೊಟೆಲ್ ಮುಂದೆ ಡಿ.ಕೆ ಶಿವಕುಮಾರ್ ಬೆಳಿಗ್ಗೆಯಿಂದ ಪಟ್ಟು ಬಿಡದೇ ನಿಂತಿದ್ದಾರೆ. ಹೋಟೆಲ್ ಒಳಗೆ ಹೋಗಲು ಮಹಾರಾಷ್ಟ್ರ ಪೊಲೀಸರು ತಡೆ ಒಡ್ಡಿದ್ದಾರೆ ಮಾತ್ರವಲ್ಲ ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಧರಣಿಯಲ್ಲಿ ನಿರತವಾಗಿವೆ.
ಸ್ಪೀಕರ್ ರಮೇಶ ಕುಮಾರ್ ಬೇಕೆಂತಲೇ ರಾಜಿನಾಮೆ ಸ್ವೀಕಾರವನ್ನು ತಡೆಹಿಡಿಯುತ್ತಿದ್ದಾರೆ ಎಂದು ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಈಗ ಸ್ಪೀಕರ್ ನಡೆ ವಿರೋಧಿಸಿ ರಾಜ್ಯಪಾಲರ ಬಳಿ ಒಂದು ಗಂಟೆ ಸಮಾಲೋಚನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಯಡಿಯೂರಪ್ಪ, ರಾಜ್ಯಪಾಲರಿಗೆ ವಸ್ತು ಸ್ಥಿತಿಯನ್ನು ವಿವರಿಸಿದ್ದೇವೆ, ಸರ್ಕಾರದ ಬಲ 103ಕ್ಕೆ ಕುಸಿದಿದೆ, ಸ್ಪೀಕರ್ ಅವರು ಶಾಸಕರ ರಾಜೀನಾಮೆಗಳನ್ನು ತ್ವರಿತವಾಗಿ ಅಂಗೀಕರಿಸಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾಗಿ ಹೇಳಿದ್ದಾರೆ. ಆದರೆ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ನಿರ್ದೇಶನ ಮಾಡುವಂತೆ ಮನವಿ ಮಾಡಿಲ್ಲ, ಆ ಪ್ರಶ್ನೆ ಈಗ ಉದ್ಭವಿಸುವುದಿಲ್ಲ ಎಂದಿದ್ದಾರೆ.
ಈ ನಡವೆ ಅತೃಪ್ತ ಶಾಸಕರು ಸುಪ್ರಿಂಕೋರ್ಟ್ ಮೊರೆ ಹೋಗಿದ್ದು , ಸ್ಪೀಕರ್ ತಮ್ಮ ರಾಜಿನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದ್ದು, ಸುಪ್ರಿಂಕೋರ್ಟ್ ಈ ವಿಷಯವನ್ನು ಬೇಗನೆ ಎತ್ತಿಕೊಂಡು ಸ್ಪೀಕರ್ ಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಹಿರಿಯ ವಕೀಲ ಮುಕುಲ್ ರೋಹಟಗಿ ಮೂಲಕ ಅರ್ಜಿ ಸಲ್ಲಿಸಿರುವ ಅತೃಪ್ತರು ಸ್ಪೀಕರ್ ರಮೇಶಕುಮಾರ್ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸದೇ ಪಕ್ಷಪಾತ ತೋರುತ್ತಿದ್ದಾರೆಂದು ಅರ್ಜಿಯಲ್ಲಿ ದೂರಿದ್ದಾರೆ.
ಬೆಂಗಳೂರಿನಲ್ಲಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಕೂಡ ಸ್ಪೀಕರ್ ರಮೇಶ್ಕುಮಾರ್ ಬೇಕೆಂತಲೇ ರಾಜೀನಾಮೆ ಅಂಗೀಕಾರವನ್ನು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮೈತ್ರಿ ಪಕ್ಷಗಳು ಮೋದಿ ಮತ್ತು ಅಮಿತ್ ಶಾ ತಮ್ಮ ಶಾಸಕರನ್ನು ಮುಂಬೈಯಲ್ಲಿ ಕೂಡಿಟ್ಟಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ತಂದೆಯ ರಾಜೀನಾಮೆ ಪತ್ರವನ್ನು ಮತ್ತೊಮ್ಮೆ ಸ್ಪೀಕರ್ ರವರಿಗೆ ಸಲ್ಲಿಸಿ ಬಂದಿದ್ದಾರೆ, ಶಿವರಾಮ್ ಹೆಬ್ಬಾರ್ ರಾಜಿನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ನಿನ್ನೆ ಹೇಳಿದ್ದರು.
ಅತೃಪ್ತ ಶಾಸಕರ ರಾಜಿನಾಮೆಗೂ ನಮಗೂ ಸಂಬಂಧವಿಲ್ಲ ಎನ್ನುತ್ತಲೇ ಬಂದಿರುವ ಬಿಜೆಪಿ ನಾಯಕರು ಸತತವಾಗಿ ಅವರ ಸಂಪರ್ಕದಲ್ಲಿರುವುದು, ಅವರಿಗೆ ರಕ್ಷಣೆ ಮತ್ತು ಬೆಂಬಲ ನೀಡುತ್ತಿರುವುದು ಪದೇ ಪದೇ ಬಯಲಾಗುತ್ತಿದೆ. ನಿನ್ನೆ ರಾತ್ರಿ ಬಿಜೆಪಿಯ ಆರ್ ಅಶೋಕ್, ಮಾಜಿ ಸ್ಪೀಕರ್ ಬೋಪಯ್ಯ ಮುಂಬೈ ಹೊಟೆಲ್ನಲ್ಲಿ ಅತೃಪ್ತ ಶಾಸಕರನ್ನು ಭೇಟಿಯಾಗಿ ಅವರಿಂದ ಬಿಜೆಪಿಗೆ ಬೆಂಬಲದ ಪತ್ರಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
ಸಂಜೆವರೆಗೂ ಈ ಎಲ್ಲ ಹೈಡ್ರಾಮಾಗಳು ಮುಂದುವರೆಯುವ ಲಕ್ಷಣಗಳಿವೆ.