Homeಅಂಕಣಗಳುಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

ಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

- Advertisement -
- Advertisement -

| ಯಾಹೂ |

ಹಠಾತ್ತನೆ ಮನೆ ಕುಸಿಯತೊಡಗಿ ಜೆಡಿಎಸ್ ಕುಟೀರದ ಗೋಡೆ ಬಿರುಕು ಕಾಣಿಸಿಕೊಂಡ ಕೂಡಲೇ ಅನಾಹುತದ ನಿಖರತೆಯನ್ನು ಗುರುತಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಎಂದು ಘೋಷಿಸಿಬಿಟ್ಟಿದ್ದಾರಲ್ಲಾ. ಅರೆ ಸಮ್ಮಿಶ್ರ ಸಂಸಾರ ಬಿಗಡಾಯಿಸಿಕೊಂಡು ಅಲ್ಲಿಂದ ಹೊರಬಿದ್ದವರೊಂದಿಗೆ ಕೂಡಿಕೆ ಮಾಡಿಕೊಂಡು ಸಂಸಾರ ಹೂಡುವ ಬಗ್ಗೆ, ಎಡೂರಪ್ಪನನ್ನು ತಡೆದವರಾರು. ಎಡೂರಪ್ಪನ ಬಾಯಲ್ಲಿ ಇಂತಹ ಮಾತು ಸುಮ್ಮಸುಮ್ಮನೆ ಬರಲಾರದು. ಯಾರೊ ಚಡ್ಡಿಗಳ ಪೈಕಿ ಎಡೂರಪ್ಪನಿಗೆ ವಯಸ್ಸಾಯ್ತು ಎಂದಿರಬಹುದು ಅಥವಾ ಅವರ ಸರದಿ ಮುಗಿಯಿತಲ್ಲಾ ಎಂದಿರಬಹುದು. ಈ ಎಲ್ಲಾ ವಾಸನೆ ಗ್ರಹಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಸಂಸಾರಿ ಎಂದಿರುವುದು. ಅದಿರಲಿ, ಎಡೂರಪ್ಪ ಆಧುನಿಕ ಜಗತ್ತಿನ ಸನ್ಯಾಸಿಗಳನ್ನ ನೋಡಿಲ್ಲ ಅನ್ನಿಸುತ್ತದೆ. ಅವರೆಲ್ಲಾ ಗುಪ್ತ ಸಮಾಲೋಚನಾ ಪ್ರಿಯರಾಗಿ ಬಹಳ ವರ್ಷಗಳಾದವು. ಉಡುಪಿ ಮಠಗಳನ್ನೆ ಆದರ್ಶವಾಗಿ ಗ್ರಹಿಸಿ ಬದುಕನ್ನು ಇಡಿಯಾಗಿ ಮುಕ್ಕುವ ಕಲೆಯನ್ನು ಕರಗತ ಮಾಡಿಕೊಂಡು ಶತಮಾನವೇ ಸರಿಯಿತು. ತೀರ ಇತ್ತೀಚಿನ ತಾಜಾ ಉದಾಹರಣೆಯೆಂದರೆ ನಮ್ಮ ಸಿರಿಗೆರೆಯ ಶಿವಾಚಾರ್ಯ ಮಹಾಸ್ವಾಮಿಗಳವರು ಪೀಠದ ಸಂವಿಧಾನದ ರೀತಿ ಅರವತ್ತು ವರ್ಷಕ್ಕೆ ಪೀಠಬಿಟ್ಟು, ಹಿಂದೆ ಬಂದ ಮರಿಯನ್ನ ಸ್ಥಾಪಿಸಿ ಪಕ್ಕಕ್ಕೆ ನಿಲ್ಲಬೇಕಿತ್ತು. ಆದರೇನು ಭೂಪ ಇನ್ನ ಅಲ್ಲಾಡಿಲ್ಲ. ಇಂತಿರುವಾಗ ಎಡೂರಪ್ಪ ತಮ್ಮ ರಾಜಕಾರಣದ ಉದಾಹರಣೆಗೆ ನಾನು ಸನ್ಯಾಸಿಯಲ್ಲ ಎಂದಿದ್ದಾರಲ್ಲಾ, ಥೂತ್ತೇರಿ..

ಕರ್ನಾಟಕದ ಇವತ್ತಿನ ಸ್ಥಿತಿಯ ಬಗ್ಗೆ ಯಾರಿಗೆ ಫೋನು ಮಾಡಲಿ, ಕುಮಾರಣ್ಣ ಕನಲಿ ಕೆಂಡವಾಗಿದ್ದಾರೆ, ಸಿದ್ದು ಆತಂಕ ತೋರಿಕೆಯಂತೆ ಕಾಣುತ್ತಿದೆ. ಬಿಜೆಪಿಗಳು ಶುದ್ಧ ಕಿಡಿಗೇಡಿಗಳಂತೆ ಕಾಣುತ್ತಿದ್ದಾರೆ. ವಿಶ್ವನಾಥ್ ಈ ಶತಮಾನದ ಮೀರ್‍ಸಾದಿಕನಂತೆ ಗೋಚರಿಸಿದರೆ, ಕೆ.ಆರ್.ಪೇಟೆ ನಾರಾಯಣಗೌಡ ನಿಜಕ್ಕೂ ನೊಂದಂತೆ ಕಾಣುತ್ತಿದ್ದಾನೆ. ಇವೆಲ್ಲಾ ಸಂಗತಿಗಳನ್ನ ಚರ್ಚಿಸಲು ಸೂಕ್ತ ವ್ಯಕ್ತಿಗಾಗಿ ತಪಾಸಣೆ ಮಾಡುತ್ತಿದ್ದಾಗ ವಾಟಿಸ್ಸೆ ಹೆಸರು ಹೊಳೆಯಬೇಕೆ? ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು…

ರಿಂಗ್‍ಟೋನ್ “ಹೋಗದಿರೀ ಸೋದರರೇ.. ಹೋಗದಿರೀ ಬಂಧುಗಳೇ.. ಮನೆಯನು ತೊರೆದು ಹೋಗುವಿರಾ?” ಹಲೊ ಗುಡಾಪ್ಟರ್ ನೂನ್ ಸರ್”
“ವಾಟಿಸ್ಸೆ ಎಲ್ಲಿದ್ದೀ”
“ಎಲ್ಯಾರ ಇದ್ರೂ ನಿಮ್ಮೆದುರಿಗೆ ನಿಂತಂಗಲವ ಸಾ, ಅದ್ಕೆ ಹಂಡ್ರೆಂಡ್ ರುಪೀಸ್ ಕರೆನ್ಸಿ ಹಾಕ್ಸಿ”
“ಹಾಕುಸ್ತಿನಿ ಕರ್ನಾಟಕದ ರಾಜಕಾರಣ ಏನನ್ನಸ್ತಾ ಅದೆ”
“ಏನಾಗಬೇಕೊ ಅದಾಯ್ತ ಅದೆ ಸಾ”
“ಎಮ್ಮೆಲ್ಲೆಗಳ ರಾಜೀನಾಮೆ ಬಗ್ಗೆ ಏನೇಳ್ತಿ”
“ಅವೊಂತರಾ ಬ್ರಾಂಬ್ರು ಕೇರಿಯ ನಾಯಿದ್ದಂಗೆ ಸಾ”
“ಅಂದ್ರೆ”
“ಈ ಬ್ರಾಂಬ್ರು ಕೇರಿ ನಾಯಿಗಳು ಅಕಸ್ಮಾತ್ ಶೂದ್ರ ಕೇರಿಗೋಯ್ತವೆ. ಅಲ್ಲಿ ಚರಂಡೀಲಿ ಕುರಿ, ಆಡಿನ ಮೂಳೆ, ಕೋಳಿ ಮೂಳೆ ರುಚಿ ನೋಡಿದೂ ಅಂದ್ರೇ ತಿರಗಿ ಬ್ರಾಂಬ್ರು ಕೇರಿಗೋಗದಿಲ್ಲ”
“ಅಂಗಂತಿಯಾ”
“ಹೂ ಮತ್ತೆ. ಆ ಬಿಜೆಪಿಗಳು ಕೊಡೋ ದುಡ್ಡಿಗೆ, ಅಧಿಕಾರಕ್ಕೆ, ಮನಸು ಕೊಟ್ಟವೆ ಅನ್ನಸ್ತದೆ ಅದ್ಕೆ ಹೋದೊ ಬುಡಿ ಅತ್ತಗೆ”
“ಹೋಗಿಲ್ಲ ಇನ್ನ ಇಲ್ಲೆ ಇದ್ದಿವಿ ಅಂತಾರಲ್ಲಾ”
“ಇನ್ನ ಇಲ್ಲೇ ಇದ್ದಿವಿ ಅಂದ್ರೆ ಅವುರಿಗೇನಾಗ್ಯದೆ ಕೇಳಬೇಕು ಸಾ.”
“ಯಾರು ಕೇಳಬೇಕು.”
“ಇನ್ಯಾರು ಮುಖ್ಯಮಂತ್ರಿನೇ ಕೇಳಬೇಕು. ಇವುನು ಗ್ರಾಮ ವಾಸ್ತವ್ಯಕ್ಕೋದ್ರೆ ಹಿಂಗೆ ಆಗದು”
“ಈಗೇನಾಗಬವುದು”
“ಅಲ್ಲ ಸಾ, ಬೆಂಗಳೂರಲ್ಲಿರೊ ನೀವು ಹೇಳಬೇಕು.”
“ಜನಗಳಭಿಪ್ರಾಯ ಹೇಳು.”
“ಜನಗಳು ವಿಶ್ವನಾಥನ್ನ ಉಗೀತಾ ಅವುರೆ ಸಾ”
“ಯಾಕೆ?”
“ಯಾಕೆ ಅಂದ್ರೆ ಸಿದ್ದರಾಮಯ್ಯ ಇವುನೇಗ್ತಿ ನೋಡಿ ಕುರಿ ಕ್ವಟಗೆ ಒಳಿಕೆ ನೂಕಿದ್ದ. ದ್ಯಾವೇಗೌಡ ಹೋಗಿ ಕರದು ತಲೆ ಸವುರಿದ. ಆಗ ತನ್ನ ತಲೇನೆ ಸವುರಿಕೊಂಡಂಗಾಯ್ತು. ಕೂಡ್ಳೆ ಪಾರ್ಟಿ ಪ್ರೆಸಿಡೆಂಟ್ ಮಾಡಿ ಎಮ್ಮೆಲ್ಲೆ ಮಾಡಿದ್ರೆ, ಇವುನು ಕೈ ಕೊಡದ ಅಂತ ಅವುರೆ”
“ನಿನಗೇನನ್ಸುತ್ತೆ”
“ಮಂತ್ರಿ ಮಾಡಿದ್ರೆ ಖಾತೆ ಚನ್ನಾಗಿ ನಿಭಾಯಿಸೋನು, ಅಂಗೆ ನೋಡಿದ್ರೆ ಸಾ.ರಾ. ಮಯೇಶ, ಪುಟ್ಟರಾಜ, ತಮ್ಮಣ್ಣ ಇಂತ ಸ್ಕ್ರಾಪ್ ಮಾಲಿಗಿಂತ ವಿಶ್ವನಾಥ್ ಯೋಗ್ಯ, ಈಗ ಮಾತ್ರ ಅಯೋಗ್ಯ”
“ಕೆ.ಆರ್.ಪೇಟೆ ನಾರಾಯಣಗೌಡನ ಬಗ್ಗೆ ಏನೇಳ್ತಿ’.’
“ಅವುನು ಬಾಂಬೆಯಿಂದ ತಪ್ಪಿಸಿಕೊಂಡು ಬಂದ ಮಾರವಾಡಿ ಹುಡುಗನಂಗೆ ಕಾಣ್ತನೆ ಸಾರ್. ಜೆಡಿಎಸ್‍ಗೆ ಬೇಕಾದಷ್ಟು ಮಾಡ್ಯವುನೆ, ಚುಂಚನಗಿರಿ ಮಠಕ್ಕೆ ಬೊಂಬಾಯಿಲೆ ಜಾಗ ಕೊಡಿಸ್ಯಾವುನೆ, ಅಂಥೊನ್ನ ದ್ಯಾವೇಗೌಡನ ಮನೆವ್ರು ಚಪ್ರಾಸಿಯಂಗೆ ನ್ಯಡಿಸಿಕೊಬಾರದಿತ್ತು.”
“ಒಟ್ಟಾರೆ ಈ ರಾಜೀನಾಮೆ ಪ್ರಕರಣ ಏನನ್ನಸುತ್ತೆ”
“ನನಿಗೇನನ್ನಸ್ತದೆ ಅಂದ್ರೆ, ಒಂದು ಅವಿಭಕ್ತ ಕುಟುಂಬದಲ್ಲಿ ಅತೃಪ್ತ ಜನ ಏನೇನೊ ನಾಟಗ ಮಾಡ್ತರೆ. ಹೊಟ್ಟೆನೊವ್ವು ಅಂತರೆ, ಬೇಧಿ ಅಂತರೆ, ಹಲ್ಲುನೋವು ಅಂತರೆ, ಸುಮ್ಮನೆ ಮೂಲೇಲಿ ಮನಿಕತ್ತರೆ, ಅದು ಅವುರ ಪ್ರತಿಭಟನೆ ಸಾ. ಈಗ್ಲು ನ್ಯಡದಿರದು ಈ ಕುಮಾರಸ್ವಾಮಿ ಬ್ಯಾಡ ಅನ್ನೊ ಪ್ರತಿಭಟನೆ ಅಷ್ಟೆ ಸಾ”
“ಅಂಗಾರೆ ಕುಮಾರಣ್ಣ ಬ್ಯಾಡವಾ”
“ಇವುನು ಹೋಯ್ತನೆ ಅಂದ್ರೆ ಯಾರಿಗೂ ಫೀಲಾಗಲ್ಲ ಸಾರ್, ಯಾಕಂದ್ರೆ ಇವುರಿಂದ್ಲೆ ಹಾರವರು ಲಕ್ಕಪತಿಗಳಾದ್ರು, ಅದೇನು ಯಜ್ಞ – ಅದೇನು ಯಾಗ, ಅದೇನು ಹೋಮ, ಅದಿರ್ಲಿ ಯಾರಾರ ತಲೆಯಿದ್ದೋರು, ನಾಮಪತ್ರ ತಗಂಡೋಗಿ ಶೃಂಗೇರೀಲಿ ಪೂಜೆ ಮಾಡಿಸಿಗಂಡು ಬತ್ತರ ಸಾ”
“ಇಲ್ಲ ಬುಡು ಇತಿಹಾಸದಲ್ಲಿ ಯಾರು ಅಂಗೆ ಮಾಡಿಲ್ಲ”
“ದ್ಯಾವೇಗೌಡ್ರು ಫ್ಯಾಮಿಲಿ ಪವರಿಂದ ಇಳದ್ರೆ ಬ್ರಾಂಬ್ರಿಗೆ ಲಾಸಾಗಬಹುದು. ನನಿಗಂತು ಯಾವ ನಷ್ಟನೂ ಇಲ್ಲ ಸಾ”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...