Homeಮುಖಪುಟಡಾಕ್ಟರ್ಸ್ ಸ್ಟ್ರೈಕ್ ‘ಜನಸಾಮಾನ್ಯರ ಅವೈಜ್ಞಾನಿಕ’ ನಡವಳಿಕೆ ಮತ್ತು ವೈದ್ಯಲೋಕದ ದ್ವಂದ್ವ

ಡಾಕ್ಟರ್ಸ್ ಸ್ಟ್ರೈಕ್ ‘ಜನಸಾಮಾನ್ಯರ ಅವೈಜ್ಞಾನಿಕ’ ನಡವಳಿಕೆ ಮತ್ತು ವೈದ್ಯಲೋಕದ ದ್ವಂದ್ವ

- Advertisement -
- Advertisement -

| ಡಾ.ವಾಸು ಎಚ್.ವಿ |

ವೈದ್ಯ ಸಮುದಾಯ ಒಂದು ರೀತಿಯ ‘ವಿಕ್ಟಿಮ್‍ಹುಡ್’ನಿಂದ ನರಳುತ್ತಿದೆ. ತಮಗೆ ಎಲ್ಲಿಲ್ಲದ ಅನ್ಯಾಯ ಆಗುತ್ತಿದೆ. ತಮ್ಮಿಂದ ಚಿಕಿತ್ಸೆ ಪಡೆದ ರೋಗಿಗಳೂ ತಮ್ಮ ಸಹಾಯಕ್ಕೆ ಬರುವುದಿಲ್ಲ. ಇದೊಂದು ಕೃತಘ್ನ ಸಮಾಜ. ಇನ್ನು ಮುಂದೆ ನಾವೂ, ನಮ್ಮ ಕುಟುಂಬಕ್ಕೆ, ವ್ಯಕ್ತಿಗತ ಸಂತೋಷಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂಬ ಹಳಹಳ ಹೆಚ್ಚಾಗುತ್ತಿದೆ. ಎಲ್ಲರೂ ತಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಭಾವನೆ ಹಲವರಲ್ಲಿದೆ. ಇದೊಂದು ಥರಾ ಪ್ರಿವಿಲೆಜ್ಡ್ ಬ್ರಾಹ್ಮಣ ಸಮುದಾಯ ವಿಕ್ಟಿಮ್‍ಹುಡ್‍ನಲ್ಲಿ ಇರುವ ರೀತಿಯದ್ದು.

ಪಶ್ಚಿಮ ಬಂಗಾಳದ ಎನ್‍ಆರ್‍ಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಘಟನೆಯಿಂದಷ್ಟೇ ದೇಶಾದ್ಯಂತ ವೈದ್ಯರು ಮುಷ್ಕರ ನಡೆಸಲು ನಿರ್ಧರಿಸಿದರೇ? ಅಥವಾ ಮಮತಾ ಬ್ಯಾನರ್ಜಿಯವರು ತೋರಿದ ಅಹಂಕಾರದ ವರ್ತನೆಯಿಂದ ಪರಿಸ್ಥಿತಿ ಹದಗೆಟ್ಟಿತೇ? ಇದಕ್ಕೆ ರಾಜಕೀಯ ಆಯಾಮವಿದ್ದು, ಮಮತಾ ಬ್ಯಾನರ್ಜಿಯ ವಿರುದ್ಧ ಬಿಜೆಪಿ ವೈದ್ಯರನ್ನು ಎತ್ತಿ ಕಟ್ಟುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅದಕ್ಕೆ ‘ಸಾಕ್ಷಿ’ ಒದಗಿಸಲೆಂಬಂತೆ, ಭಾರತೀಯ ವೈದ್ಯಕೀಯ ಸಂಘದ ಕ್ರಿಯಾ ಸಮಿತಿಯ ಅಧ್ಯಕ್ಷ ಡಾ.ಮಾರ್ತಾಂಡ ಪಿಳ್ಳೈ ಆರೆಸ್ಸೆಸ್ ಪದಾಧಿಕಾರಿಯೆಂತಲೂ, ಅವರು ಇತ್ತೀಚೆಗೆ ನಡೆದ ಶಬರಿಮಲೆ ‘ಹೋರಾಟ’ದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರೆಂತಲೂ ಕೆಲವು ವಾಟ್ಸಾಪ್ ಸಂದೇಶಗಳು ಓಡಾಡುತ್ತಿವೆ. ಅದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಜಿ ಡಿಜಿಪಿ ಸೆನ್‍ಕುಮಾರ್ ಜೊತೆ ಪಿಳ್ಳೈ ಸಹಾ ಇದ್ದರು ಎಂತಲೂ ಆ ಫಾರ್ವರ್ಡ್ ಸಂದೇಶಗಳು ಹೇಳುತ್ತವೆ.

ಹಾಗಾದರೆ, ಈ ಸಾರಿ ನಡೆದ ವೈದ್ಯರ ಮುಷ್ಕರವು ಸಂಪೂರ್ಣವಾಗಿ ರಾಜಕೀಯ ಪ್ರೇರಿತವೇ? ಮೊದಲನೆಯದಾಗಿ ಡಾ.ಮಾರ್ತಾಂಡ ಪಿಳ್ಳೈ ಅವರ ಕುರಿತ ಮೇಲಿನ ಸುದ್ದಿಯೇ ನಿಜವಲ್ಲ. ಬಿಜೆಪಿ ಮತ್ತು ಆರೆಸ್ಸೆಸ್‍ನ ಐಟಿ ಸೆಲ್‍ಗಳು ಸಾಮಾನ್ಯವಾಗಿ ಹರಿಯಬಿಡುವ ಸುಳ್ಳುಗಳ ರೀತಿಯಲ್ಲೇ ‘ಪರಿಣಿತ ಸುಳ್ಳು ಸೃಷ್ಟಿಗಾರರು’ ಹುಟ್ಟಿಸಿದ ಸುದ್ದಿ ಅದು. ಆದರೆ, ದೇಶದಲ್ಲಿ ವೈದ್ಯರುಗಳಲ್ಲಿ ಹೆಚ್ಚಿನವರು ‘ಬಿಜೆಪಿ ಮನಸ್ಥಿತಿ’ ಹೊಂದಿದ್ದು, ಬಹುತೇಕರು ಬಿಜೆಪಿಗೆ ಮತ ಹಾಕಿರುವ ಸಾಧ್ಯತೆಯೂ ಇದೆ. ಮಮತಾ ಬ್ಯಾನರ್ಜಿಯಂತಹ ವ್ಯಕ್ತಿಯು ತೋರುವ ಅನಾದರ ಅವರನ್ನು ರೊಚ್ಚಿಗೆಬ್ಬಿಸಿರಲಿಕ್ಕೂ ಸಾಕು. ಈ ಪ್ರಕರಣವನ್ನು ಬಿಜೆಪಿಯು ಸಾಧ್ಯವಾದಷ್ಟು ರಾಜಕೀಯವಾಗಿ ಬಳಸಿಕೊಂಡಿದೆ ಮತ್ತು ತನ್ನ ಸಾಮಾಜಿಕ ನೆಲೆಯ ಭಾಗವಾಗಿರುವ ಈ ವರ್ಗದ ಹಿತಾಸಕ್ತಿಯನ್ನು ಕಾಯುವುದರ ಕುರಿತು ಅದು ಕ್ರಿಯಾಶೀಲವಾಗಿರುತ್ತದೆ ಎಂದು ಹೇಳಬಹುದು.

ಆದರೆ, ವೈದ್ಯರು ಈ ರೀತಿ ದೇಶವ್ಯಾಪಿ ಪ್ರತಿಭಟನೆ ಮಾಡುವುದಕ್ಕೆ ದೀರ್ಘಕಾಲಿಕವಾದ ಮತ್ತು ಆಳವಾದ ಕಾರಣಗಳಿವೆ. ಈಗ ಆಗಿರುವ ಮುಷ್ಕರ ಏನೇನೂ ಅಲ್ಲ; ಇದು ಇನ್ನೂ ದೊಡ್ಡದಾಗಿ ಸಿಡಿಯಲು ಕಾದಿದೆ. ಆ ಆಳವಾದ ಕಾರಣವನ್ನು ರಾಜಕೀಯ ಹುನ್ನಾರದ ಕಾರಣ ಹೇಳಿ ಮರೆಮಾಚಬಾರದು. ವೈದ್ಯರು ಮತ್ತು ರೋಗಿಗಳಿಬ್ಬರೂ ಈ ವಿಚಾರದಲ್ಲಿ ಬಲಿಪಶುಗಳೇ. ಜೊತೆಗೆ, ವೈದ್ಯರುಗಳ ಧೋರಣೆಯಲ್ಲಿನ ದ್ವಂದ್ವವು ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವೆಲ್ಲಾ ಸಂಗತಿಗಳ ಕಡೆಗೆ ನೋಡೋಣ.

ಈ ವರ್ಷದ ಮೊದಲ ಆರು ತಿಂಗಳಲ್ಲಿ ಪ.ಬಂಗಾಳದಲ್ಲಿ 100ಕ್ಕೂ ಹೆಚ್ಚು ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ವರದಿಯಾಗಿದೆಯೆಂದು ಇಂಡಿಯನ್ ಎಕ್ಸ್‍ಪ್ರೆಸ್‍ನ ವರದಿ ಹೇಳುತ್ತದೆ. ಇದಲ್ಲದೇ ಲ್ಯಾನ್ಸೆಟ್ ಎಂಬ ವೈದ್ಯಕೀಯ ಜರ್ನಲ್ ಪ್ರಕಾರ 75% ವೈದ್ಯರು ಒಂದಲ್ಲಾ ಒಂದು ಬಗೆಯ (ದೈಹಿಕ ಅಥವಾ ಮೌಖಿಕ) ದಾಳಿಯನ್ನು ಎದುರಿಸಿರುತ್ತಾರೆ. ಇದನ್ನು ನಾವು ಈ ದೇಶದಲ್ಲಿ ವಿವಿಧ ಶೋಷಿತ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳ ಪ್ರಮಾಣಕ್ಕೆ ಹೋಲಿಸಿ, ಇದು ಅಂತಹ ದೊಡ್ಡ ಸಂಖ್ಯೆಯಲ್ಲ ಎಂದು ಹೇಳಲಾಗದು. ಇತರ ದೌರ್ಜನ್ಯಗಳ ಕುರಿತು ವೈದ್ಯರುಗಳ ಸಂವೇದನಾಹೀನತೆ ಏನೇ ಇರಲಿ, ಎರಡು ಕಾರಣಗಳಿಂದಾಗಿ ಈ ಹೋಲಿಕೆ ಮಾಡಬಾರದು. ಒಂದು, ಯಾವುದೇ ಸಮುದಾಯ ತಾನು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟಾಗ ಇನ್ನೊಂದು ಸಮುದಾಯದ ಉದಾಹರಣೆ ಕೊಟ್ಟು ಅದನ್ನು ಹತ್ತಿಕ್ಕಬಾರದು. ಎರಡು, ವೈದ್ಯರು ಪ್ರತಿನಿತ್ಯ ರೋಗಿಗಳ ದೈಹಿಕ, ಮಾನಸಿಕ ಸ್ಥಿತಿಯನ್ನು ಸರಿ ಮಾಡುವ ಕಾಯಕದಲ್ಲಿರುವವರು. ಅವರು ಭಯದಲ್ಲಿ ಕಾರ್ಯನಿರ್ವಹಿಸುವಂತೆ ಇರಬಾರದು.

ಹಾಗಾಗಿ ವೈದ್ಯರುಗಳ ಮೇಲೆ ನಡೆಯುವ ದೌರ್ಜನ್ಯ ಅತ್ಯಂತ ಖಂಡನೀಯವಷ್ಟೇ ಅಲ್ಲ; ಅದು ಅಂತಿಮವಾಗಿ ರೋಗಿಗಳಿಗೇ ಮಾರಕ. ಸಮಾಜದ ಆರೋಗ್ಯದ ದೃಷ್ಟಿಯಿಂದ ಇದನ್ನು ಖಂಡಿಸುವಲ್ಲಿ ಎಲ್ಲರೂ ವೈದ್ಯರ ಜೊತೆ ಕೈ ಜೋಡಿಸಬೇಕು. ವೈದ್ಯರಿಂದ ತಪ್ಪಾಗಿದೆಯೇ ಇಲ್ಲವೇ ಎಂಬುದನ್ನು ಆಸ್ಪತ್ರೆಯೊಂದರಲ್ಲಿ ರೋಗಿಗೆ ಸಂಬಂಧಪಟ್ಟವರು ತಾವೇ ನಿರ್ಧರಿಸಿ, ಅದಕ್ಕೆ ಶಿಕ್ಷೆಯನ್ನೂ ಸ್ಥಳದಲ್ಲೇ ಜಾರಿ ಮಾಡುವುದಾದರೆ ಅದೂ ಸಹಾ ಮಾಬ್ ಲಿಂಚಿಂಗ್‍ನಂತಹುದೇ ಮನಸ್ಥಿತಿ. ತಪ್ಪು ಸರಿಯನ್ನು ತಮಗಿಷ್ಟ ಬಂದ ಹಾಗೆ ಗುಂಪೊಂದು ತೀರ್ಮಾನ ಮಾಡಲಾಗದು, ಮಾಡಬಾರದು. ಈ ವಿಚಾರದಲ್ಲಿ ಬೇಷರತ್ತಾದ ಬೆಂಬಲವನ್ನು ವೈದ್ಯ ಸಮುದಾಯಕ್ಕೆ ಎಲ್ಲರೂ ನೀಡಬೇಕು.
ಸಮಸ್ಯೆ ಇರುವುದು ಏನೆಂದರೆ, ಸದರಿ ‘ವೈದ್ಯರ ಮೇಲಿನ ದಾಳಿ’ಯನ್ನು ತಡೆಗಟ್ಟಲು ವೈದ್ಯರು ಕೇಳುತ್ತಿರುವುದು, ‘ಕಠಿಣ ಕಾನೂನು ಮತ್ತು ಭದ್ರತೆಯನ್ನು’. ಖಂಡಿತವಾಗಿ ಇಂತಹ ದಾಳಿಯನ್ನು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಕಠಿಣ ಕಾನೂನು ಬೇಕು ಮತ್ತು ಭದ್ರತೆಯನ್ನೂ ಹೆಚ್ಚಿಸಬೇಕು. ಆದರೆ, ಇದು ದಾಳಿಯನ್ನು ಕಡಿಮೆ ಮಾಡುತ್ತದಾ? ಯೂಟ್ಯೂಬರ್ ಧ್ರುವ್ ರಾಠಿ ತನ್ನ ವಿಡಿಯೋದಲ್ಲಿ ಹೇಳಿರುವಂತೆ, ಆಸ್ಟ್ರೇಲಿಯಾದಲ್ಲಿ ಇಂತಹ ಕಾನೂನು ಬಂದ ಮೇಲೆ ದಾಳಿಗಳ ಸಂಖ್ಯೆ ಹೆಚ್ಚಾಗಿದೆ! ಏಕೆಂದರೆ, ಆವೇಶದಲ್ಲಿ ಯುಕ್ತಾಯುಕ್ತ ವಿವೇಚನೆ ಇಲ್ಲದೇ ಮಾಡುತ್ತಿರುವ ದಾಳಿಯನ್ನು ಕಾನೂನು ತಡೆಯುವುದು ಅಸಾಧ್ಯ. ಕರ್ನಾಟಕದಲ್ಲೇ ‘2009ರ ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿ ಮೇಲಿನ ಹಿಂಸಾಚಾರವನ್ನು ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಕಾಯ್ದೆ’ ಅಸ್ತಿತ್ವದಲ್ಲಿದೆ. ಈ ಕಾಯ್ದೆಯನ್ನು ಪ್ರಚುರಪಡಿಸುವ ಬೋರ್ಡುಗಳು ಬಹುತೇಕ ಆಸ್ಪತ್ರೆಗಳಲ್ಲಿವೆ. ಅದರ ನಂತರ ವೈದ್ಯರುಗಳ ಮೇಲೆ ದಾಳಿಗಳು ಹೆಚ್ಚಾದವೋ, ಕಡಿಮೆಯಾದವೋ?

ಅಂತಹ ಆವೇಶ ಉಂಟಾದಾಗಲೂ, ತಮ್ಮ ಪ್ರೀತಿಪಾತ್ರರಾದ ಸಾವಿಗೆ ಎದುರಿಗಿರುವ ವೈದ್ಯರು ಕಾರಣರಲ್ಲ ಎಂದು ರೋಗಿಗಳ ಕಡೆಯವರು ಏಕೆ ಭಾವಿಸುತ್ತಿಲ್ಲ? ಇದನ್ನು ವೈದ್ಯರು ವ್ಯಕ್ತಿಗತವಾಗಿಯಾಗಲೀ, ಸಾಮೂಹಿಕವಾಗಲೀ ಯೋಚಿಸುತ್ತಲೇ ಇಲ್ಲ. 75 ವರ್ಷದ ವೃದ್ಧ ರೋಗಿ ಸತ್ತಾಗ, ಕೊಲ್ಕೊತ್ತಾದ ಮೆಡಿಕಲ್ ಕಾಲೇಜಿನ ಯುವವೈದ್ಯರ ಮೇಲೆ ದಾಳಿ ಮಾಡಲಾಗಿದೆ ಎಂದು ಪದೇ ಪದೇ ಎಲ್ಲಾ ಕಡೆಯೂ ಹೇಳುತ್ತಿರುವ ವೈದ್ಯ ವಕ್ತಾರರ ಸಂವೇದನಾಶೂನ್ಯತೆಯೇ ಅದಕ್ಕೆ ಸಾಕ್ಷಿಯಾಗಿದೆ. ವೃದ್ಧ ರೋಗಿ ಸಾಯುವುದು ಸಾಮಾನ್ಯ; ಬಾಳಿ ಬದುಕಬೇಕಾದ, ಅದರಲ್ಲೂ ಸಮಾಜದಲ್ಲಿ ಗಣ್ಯಮಾನ್ಯರಾಗಿ ಮೆರೆಯಬೇಕಾದ ಯುವ ವೈದ್ಯರ ಮೇಲೆ ದಾಳಿ ಮಾಡುವುದು ಸರಿಯಲ್ಲ ಎನ್ನುವುದು ಅದರ ಹಿಂದಿನ ಧೋರಣೆ.

ವೈದ್ಯ ಕುಲದಿಂದ ಇಂತಹ ಧೋರಣೆ ಹಲವು ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಅದೊಂದು ರೀತಿಯ ಯಾಜಮಾನ್ಯದ, ಬ್ರಾಹ್ಮಣೀಯ ಧೋರಣೆಯೇ ಆಗಿದೆ. ಹಾಗಾಗಿಯೇ ಮೂರು ಮುಖ್ಯ ಪ್ರಶ್ನೆಗಳನ್ನು ಹಲವರು ಕೇಳುತ್ತಿದ್ದಾರೆ. ಗೋರಖ್‍ಪುರದ ಸರ್ಕಾರೀ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಚಿಕ್ಕಮಕ್ಕಳ ಸರಣಿ ಸಾವು ಸಂಭವಿಸಿದಾಗ, ಸರ್ಕಾರವು ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಇದರ ಬಗ್ಗೆ ಎಚ್ಚರಿಸಿದ್ದ, ತನ್ನ ವ್ಯಕ್ತಿಗತ ಪ್ರಯತ್ನದಿಂದ ಮಕ್ಕಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಡಾ.ಕಫೀಲ್ ಖಾನ್‍ರ ಮೇಲೆ ಯೋಗಿ ಆದಿತ್ಯನಾಥ್ ಸರ್ಕಾರದ ವ್ಯವಸ್ಥಿತ ದಾಳಿ ನಡೆಯಿತು. ಆಗ ವೈದ್ಯಕುಲ ಏಕೆ ಅವರ ಪರವಾಗಿ ದನಿಯೆತ್ತಲಿಲ್ಲ? ಮುಂಬೈನ ಆಸ್ಪತ್ರೆಯಲ್ಲಿ ಭಿಲ್ ಸಮುದಾಯದ ಮೊದಲ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಪಾಯಲ್ ತಡ್ವಿ ಆತ್ಮಹತ್ಯೆ ಮಾಡಿಕೊಂಡರು. (ಈ ಭಿಲ್ ಸಮುದಾಯ ಬ್ರಿಟಿಷರ ವಿರುದ್ಧ ವೀರೋಚಿತ ಸಂಗ್ರಾಮ ನಡೆಸಿದ ಆದಿವಾಸಿ ಸಮುದಾಯಗಳಲ್ಲೊಂದು) ಆಗ ಆಕೆಯ ಪರವಾಗಿ ವ್ಯಾಪಕವಾಗಿ ವೈದ್ಯ ಸಮುದಾಯ ಪ್ರಶ್ನೆ ಮಾಡಲಿಲ್ಲವೇಕೆ? ಮೂರನೆಯದಾಗಿ, ಬಿಜೆಪಿಯ ಸಂಸದ ಅನಂತಕುಮಾರ್ ಹೆಗಡೆ ತನ್ನದೇ ಕ್ಷೇತ್ರ ವ್ಯಾಪ್ತಿಯಲ್ಲಿ ವೈದ್ಯರೊಬ್ಬರನ್ನು ಓಡಾಡಿಸಿಕೊಂಡು ಹೊಡೆದದ್ದು ವಿಡಿಯೋ ಸಹಾ ಎಲ್ಲೆಡೆ ಹರಿದಾಡಿದಾಗಲೂ ವೈದ್ಯರು ಏಕೆ ಪ್ರಶ್ನೆ ಮಾಡಲಿಲ್ಲ?

ವೈದ್ಯರಲ್ಲಿ ಹೆಚ್ಚಿನವರು ಮೇಲ್ಜಾತಿಯವರಿರಬಹುದಾದರೂ, ಎಲ್ಲಾ ಸಮುದಾಯಗಳಿಗೆ ಸೇರಿದವರು ಇರುವುದೂ ವಾಸ್ತವ. ಆದರೆ, ಇಡೀ ವೈದ್ಯ ಸಮುದಾಯವು ತಾನು ಮಿಕ್ಕ ‘ನರಮನುಷ್ಯ’ರಿಗಿಂತ ಮೇಲಿನದ್ದು ಎಂದುಕೊಳ್ಳುವುದಂತೂ ನಿಜ. ಹಾಗಾಗಿ ‘ನರಮನುಷ್ಯರಿಗಿಂತ ಮೇಲಿರುವ’ ಅಧಿಕಾರಸ್ಥರು, ಬಲಾಢ್ಯ ಪಕ್ಷಗಳ ಜನ, ಬಲಾಢ್ಯ ಜಾತಿ-ಧರ್ಮಗಳ ಜನರ ಪರವಾಗಿ ಮಾತ್ರ ಅದು ನಿಲ್ಲುತ್ತದಾ? ಕೊಳೆ ಬಟ್ಟೆ ಹಾಕಿಕೊಂಡು ಬರುವ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಸಮಾನ ಹಕ್ಕುಗಳಿಲ್ಲ ಎಂದು ಭಾವಿಸುತ್ತದಾ ಎಂಬ ಪ್ರಶ್ನೆಗಳೂ ಉದ್ಭವಿಸುತ್ತವೆ.

ವೈದ್ಯರ ಕುರಿತು ರೋಗಿಗಳಿಗೆ ವಿಪರೀತ ನಿರೀಕ್ಷೆಗಳಿರುವುದೊಂದು ದೊಡ್ಡ ಸಮಸ್ಯೆ. ವೈದ್ಯರೂ ಮನುಷ್ಯರೇ. ಒಂದು ವಿಶಿಷ್ಟ ವೃತ್ತಿಯಲ್ಲಿರಬಹುದಾದರೂ, ಅವರು ಅತಿಮಾನುಷರೇನೂ ಅಲ್ಲ. ಇದನ್ನು ರೋಗಿಗಳಿಗೆ ಅರ್ಥ ಮಾಡಿಸಬೇಕೆನ್ನುವುದು ಎಷ್ಟು ನಿಜವೋ, ವೈದ್ಯರುಗಳಿಗೂ ಅರ್ಥ ಪಡಿಸಬೇಕು. ತಾವು ದೇವಲೋಕದಿಂದ ಇಳಿದುಬಂದಿರುವ ರೀತಿ ನಡೆದುಕೊಳ್ಳದೇ, ಗ್ರಾಹಕರ ಜೊತೆಗೆ ವ್ಯಾಪಾರಿಗಳು ನಡೆದುಕೊಳ್ಳುವಷ್ಟು ವಿನಯದಿಂದಾದರೂ ಇರಬೇಕಲ್ಲವೇ? ವಿನಾಯಿತಿ ಕೇಳಬೇಕಾದರೆ ನಮ್ಮದೂ ಒಂದು ವ್ಯಾಪಾರ ಅಷ್ಟೇ ಎಂದು ಹೇಳುವ ವೈದ್ಯರುಗಳು, ಮಿಕ್ಕಂತೆ ಬೇರಾವ ವ್ಯಾಪಾರಿಗೂ ಇಲ್ಲದ ಗೌರವವನ್ನಂತೂ ಬಯಸುತ್ತಾರೆ. ಹಾಗಿದ್ದ ಮೇಲೆ ಅಷ್ಟೇ ಪ್ರಮಾಣದ ಜವಾಬ್ದಾರಿಯನ್ನೂ ತೋರಬೇಕಾಗುತ್ತದೆ.

ವೈದ್ಯರುಗಳು ಹಲವು ಬಗೆಯ ಒತ್ತಡಗಳನ್ನು ಅನುಭವಿಸುತ್ತಾರೆ. ಕೆಲಸದ ಒತ್ತಡ, ಕುಟುಂಬಕ್ಕೆ ಸಮಯ ಕೊಡಲಾಗದ ಒತ್ತಡ, ಕ್ಲಿಷ್ಟಕರ ಸನ್ನಿವೇಶಗಳನ್ನು ಬಗೆಹರಿಸಬೇಕಾದ ಒತ್ತಡ ಇತ್ಯಾದಿ ಇತ್ಯಾದಿ. ಹಾಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯ ವೈದ್ಯರು ತಯಾರಾಗಬೇಕು ಎಂಬ ಮಾತಿದೆ. ಆದರೆ, ಈಗಿರುವ ವೈದ್ಯರು ಇನ್ನೂ ಹೆಚ್ಚಿನ ವೈದ್ಯರು ತಯಾರಾಗುವುದರ ಬಗ್ಗೆ ಸದಭಿಪ್ರಾಯ ಹೊಂದಿಲ್ಲ. ಇದು ತಮಗೇ ಹೆಚ್ಚಿನ ಗ್ರಾಹಕರು ಸಿಗಲಿ ಎಂಬ ವ್ಯಾಪಾರಿ ಬುದ್ಧಿಯಲ್ಲದೇ ಬೇರೇನೂ ಅಲ್ಲ.

ಇದರ ಜೊತೆಗೆ ಬ್ರಾಂಡ್ ಬಿಲ್ಡಿಂಗ್ ದಿನೇ ದಿನೇ ಹೆಚ್ಚಾಗುತ್ತಿದೆ. ನಂಬರ್ 1 ಡಾಕ್ಟರ್, ನಂಬರ್ 2 ಡಾಕ್ಟರ್ ಭ್ರಮೆಯನ್ನು ಬಿತ್ತುವಲ್ಲಿ ವೈದ್ಯಕೀಯ ವ್ಯವಸ್ಥೆಯ ಪಾತ್ರ ಬಹಳ ಇದೆ. ಇದೆಷ್ಟು ಅರ್ಥಹೀನ ಎಂದು ಹೇಳುವ ಬದಲು, ತಾವೂ ಟಾಪ್‍ಟೆನ್‍ನಲ್ಲಿ ಒಬ್ಬರಾಗಬೇಕೆಂಬ ತಹತಹವು ಇಂತಹ ಧೋರಣೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ.

ಇಂತಹ ಗಂಭೀರ ಪ್ರಶ್ನೆಗಳನ್ನು ಹಾಕಿಕೊಳ್ಳದ ವೈದ್ಯ ಸಮುದಾಯ ಒಂದು ರೀತಿಯ ‘ವಿಕ್ಟಿಮ್‍ಹುಡ್’ನಿಂದ ನರಳುತ್ತಿದೆ. ತಮಗೆ ಎಲ್ಲಿಲ್ಲದ ಅನ್ಯಾಯ ಆಗುತ್ತಿದೆ. ತಮ್ಮಿಂದ ಚಿಕಿತ್ಸೆ ಪಡೆದ ರೋಗಿಗಳೂ ತಮ್ಮ ಸಹಾಯಕ್ಕೆ ಬರುವುದಿಲ್ಲ. ಇದೊಂದು ಕೃತಘ್ನ ಸಮಾಜ. ಇನ್ನು ಮುಂದೆ ನಾವೂ, ನಮ್ಮ ಕುಟುಂಬಕ್ಕೆ, ವ್ಯಕ್ತಿಗತ ಸಂತೋಷಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂಬ ಹಳಹಳ ಹೆಚ್ಚಾಗುತ್ತಿದೆ. ಎಲ್ಲರೂ ತಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಭಾವನೆ ಹಲವರಲ್ಲಿದೆ. ಇದೊಂದು ಥರಾ ಪ್ರಿವಿಲೆಜ್ಡ್ ಬ್ರಾಹ್ಮಣ ಸಮುದಾಯ ವಿಕ್ಟಿಮ್‍ಹುಡ್‍ನಲ್ಲಿ ಇರುವ ರೀತಿಯದ್ದು. ಅವರ ‘ಗಾಯದ ಮೇಲೆ ಬರೆ’ ಇಟ್ಟಂತೆ ರೋಗಿಗಳ ಸಂಬಂಧಿಕರಿಂದ ದಾಳಿಗಳು ನಡೆಯುತ್ತವೆ. ಆಗ ಅವರಿಗೆ ವಿಪರೀತ ಸಿಟ್ಟು ಮತ್ತು ನೋವು ಉಂಟಾಗಿ, ಆಕ್ರೋಶವಾಗಿ ಹೊರಬೀಳುತ್ತದೆ. ಮೊನ್ನೆ ನಡೆದದ್ದು ಅದೇ.

ಈಗ ಆಗಬೇಕಿರುವುದು ಇಷ್ಟೇ. ಮೊಟ್ಟಮೊದಲಿಗೆ ಮಾಬ್ ಲಿಂಚಿಂಗ್ ಮಾದರಿಯ ವೈದ್ಯರ ಮೇಲಿನ ದಾಳಿಯನ್ನು ಎಲ್ಲರೂ ಖಂಡಿಸಬೇಕು. ವೈದ್ಯ ಸಮುದಾಯದ ಜೊತೆಗೆ ನಿಲ್ಲಬೇಕು. ಆ ನಂತರ ವೈದ್ಯರಿಗೆ ಮೇಲಿನ ಪ್ರಶ್ನೆಗಳನ್ನೂ ಕೇಳಬೇಕು. ಸಮುದಾಯವು ಗಂಭೀರವಾದ ಆತ್ಮಾವಲೋಕನಕ್ಕೆ ಇಳಿಯಬೇಕು. ಇದು ಕೇವಲ ವೈದ್ಯವೃತ್ತಿಯ ವಾಣಿಜ್ಯೀಕರಣ ಮಾತ್ರವಲ್ಲದೇ, ವೈದ್ಯಕೀಯ ಶಿಕ್ಷಣದ ವಾಣಿಜ್ಯೀಕರಣವನ್ನೂ ಪ್ರಶ್ನಿಸುವ ಮಟ್ಟಕ್ಕೆ ಒಟ್ಟಾರೆ ಚರ್ಚೆಯನ್ನು ಒಯ್ಯಬೇಕು. ಅದಿಲ್ಲದೇ ಹೋದರೆ, ವ್ಯಕ್ತಿಗತವಾಗಿ ವೈದ್ಯರನ್ನು ಗುರಿ ಮಾಡುತ್ತಾ ಹೋಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಸಮಾಜದ ಮುಂದಿರುವ ಕರ್ತವ್ಯ.

ಅದೇ ರೀತಿ ವೈದ್ಯರೂ ಸಹಾ ಈ ವಿಕ್ಟಿಮ್‍ಹುಡ್‍ನಿಂದ ಹೊರಬರಬೇಕು. ದಾಳಿಗಳು ನಡೆಯುತ್ತಿರುವುದು ವೈದ್ಯರ ಮೇಲೆ ಮಾತ್ರ ಅಲ್ಲ (ಅದು ವೈದ್ಯರ ಮೇಲೆ ದಾಳಿ ಮಾಡಬಹುದೆಂಬುದಕ್ಕೆ ಸಮರ್ಥನೆಯಲ್ಲ). ಪತ್ರಕರ್ತ ರಿಷಿಕೇಷ್ ಬಹದೂರ್ ದೇಸಾಯಿಯವರು ಹೇಳಿರುವ ಒಂದು ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ‘ಪಶ್ಚಿಮ ಬಂಗಾಳದಲ್ಲಿ ವೈದ್ಯನನ್ನು ಥಳಿಸಿದ್ದಕ್ಕೆ ದೇಶಾದ್ಯಂತ ಮುಷ್ಕರ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಬಾಯಲ್ಲಿ ಮೂತ್ರ ಮಾಡಿಸಿಕೊಂಡ ಪತ್ರಕರ್ತ ಬಾಯಿ ತೊಳೆದುಕೊಂಡು ವಾಪಸ್ ಕೆಲಸಕ್ಕೆ ಹಾಜರಾಗಿದ್ದಾನೆ. ದೇಶಾದ್ಯಂತ ಅವನ ವೃತ್ತಿ ಬಾಂಧವರು ವೈದ್ಯರ ಮುಷ್ಕರದ ಸುದ್ದಿ ಮಾಡುತ್ತಾ ಓಡಾಡುತ್ತಿದ್ದಾರೆ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...