| ಗೌರಿ ಲಂಕೇಶ್ |
08 ಜೂನ್, 2008 (ಸಂಪಾದಕೀಯದಿಂದ)
ಪೆಟ್ರೋಲ್ ಬೆಲೆಯನ್ನು ಇನ್ನಿಲ್ಲದಂತೆ ಏರಿಸಿರುವ ಕೇಂದ್ರ ಸರ್ಕಾರ ಅದಕ್ಕೆ ಹಲವಾರು ಸಮಜಾಯಿಷಿಗಳನ್ನು ನೀಡುತ್ತಿದೆ. ಅವುಗಳಲ್ಲಿ ತೈಲ ಉತ್ಪಾದನಾ ಕಂಪನಿಗಳ ನಷ್ಟ 42 ಸಾವಿರ ಕೋಟಿಯಿಂದ 60 ಸಾವಿರ ಕೋಟಿ ರೂಪಾಯಿಗಳಿಗೆ ಏರದಂತೆ ತಡೆಯಲೆಂದು ಬೆಲೆಯನ್ನು ಹೆಚ್ಚಿಸಬೇಕಾಯಿತು ಎಂಬುದು ಒಂದು.
ಆದರೆ ವಿಚಿತ್ರ ಸಂಗತಿ ಯಾವುದೆಂದರೆ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಗ್ಯಾಸ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಕಳೆದ ವರ್ಷ ಇಷ್ಟೊಂದು ನಷ್ಟವನ್ನು ಕಂಡಿದ್ದರೆ, ಅದೇ ಸಾಲಿನಲ್ಲಿ ರಿಲೆಯನ್ಸ್ ಕಂಪನಿಯು ಇದೇ ತೈಲ ಉತ್ಪಾದನೆಯಲ್ಲಿ 10,372 ಕೋಟಿ ರೂಪಾಯಿಗಳಷ್ಟು ಲಾಭವನ್ನು ಕಂಡಿದೆ. ಇದು ಹೇಗೆ ಸಾಧ್ಯವಾಯಿತು?
ಇನ್ನೊಂದು ಸಂಗತಿ ಯಾವುದೆಂದರೆ ಇವತ್ತು ತೈಲ ಬೆಲೆಯನ್ನು ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿರುವ ಕೇಂದ್ರ ಸರ್ಕಾರ ತನ್ನ 2008ನೇ ಬಜೆಟ್ನಲ್ಲಿ ಹೇಳಿದ್ದೇನೆಂದರೆ 2007-08ನೇ ಆರ್ಥಿಕ ವರ್ಷದಲ್ಲಿ ಕಾಪೆರ್Çರೇಟ್ ಕಂಪೆನಿಗಳಿಗೆ ನೀಡಿದ ತೆರಿಗೆ ರಿಯಾಯಿತಿಯಿಂದಾಗಿ 58,655 ಕೋಟಿ ರೂಪಾಯಿಗಳ ನಷ್ಟ ಮತ್ತು ಅಬಕಾರಿ ಶುಲ್ಕ ರಿಯಾಯಿತಿಯಿಂದಾಗಿ 87,992 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು. ಇವೆರಡರ ಒಟ್ಟು ಮೊತ್ತ 1,46,642 ಕೋಟಿ ರೂಪಾಯಿಗಳು.
ಆ ಹಣವನ್ನು ವಸೂಲಿ ಮಾಡದ ಸರ್ಕಾರ ಇಂದು ತೈಲ ಬೆಲೆಯನ್ನು ಏರಿಸಿ ಈಗಾಗಲೇ ಹಣದುಬ್ಬರದಿಂದ ತತ್ತರಿಸುತ್ತಿರುವ ಜನಸಾಮಾನ್ಯರ ಮೇಲೆ ಮತ್ತಷ್ಟು ಒತ್ತಡ ಹೇರುತ್ತಿದೆ ಎಂದರೆ ಈ ಸರ್ಕಾರಕ್ಕೆ ಜನ ಏನು ಮಾಡಬೇಕು?
ಇಲ್ಲಿಯ ತನಕ ಸಿನಿಮಾ, ಆರ್ಟ್ ಗ್ಯಾಲರಿ, ನಾಟಕ ಇಂತಹವುಗಳ ಮೇಲೆ ದಾಳಿ ಇಡುತ್ತಿದ್ದ ಕೋಮುವಾದಿಗಳು ಈಗ ಪತ್ರಿಕಾ ಕಚೇರಿಗಳ ಮೇಲೂ ದಾಳಿ ಮಾಡಲಾರಂಭಿಸಿವೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ `ಲೋಕಸತ್ತಾ’ ಎಂಬ ಮರಾಠಿ ಪತ್ರಿಕೆಯ ಸಂಪಾದಕ ಕುಮಾರ್ ಕೇಟ್ಕರ್ರವರ ಮನೆಯ ಮೇಲೆ ಶಿವಸಂಗ್ರಾಮ್ ಪಾರ್ಟಿ ಎಂಬ ಸಂಘಟನೆಯ ಸದಸ್ಯರು ದಾಳಿ ಮಾಡಿದರು.
ಅದಕ್ಕೆ ಕಾರಣ ಕೇಟ್ಕರ್ರವರು ಬರೆದಿದ್ದ ಒಂದು ಲೇಖನ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿದಂತೆಯೇ ಮುಂಬೈನ ಸಮುದ್ರದಲ್ಲಿ ಶಿವಾಜಿಯ ದೊಡ್ಡ ಪ್ರತಿಮೆಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಎತ್ತಿಕೊಂಡಿತು. ಆ ಪ್ರತಿಮೆಯನ್ನು ಸ್ಥಾಪಿಸಲು ಹಲವು ಕೋಟಿ ರೂಪಾಯಿಗಳು ವೆಚ್ಚವಾಗುತ್ತದೆಂದು ಅಂದಾಜಿಸಲಾಗಿತ್ತು.
ಹೇಳಿಕೇಳಿ ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ನೂರಾರು ಅಸಹಾಯಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇತರೆಡೆ ಬಡತನ ತಾಂಡವವಾಡುತ್ತಿದೆ, ಜನ ಸಾಮಾನ್ಯರಿಗೆ ಕುಡಿಯುವ ನೀರೂ ಅಲಭ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಯನ್ನು ನೀಗಿಸುವ ಬದಲಾಗಿ ಒಂದು ಪ್ರತಿಮೆಗೆ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುವುದು ಸರಿಯೇ? ಎಂದು ಕೇಟ್ಕರ್ ತಮ್ಮ ಲೇಖನದಲ್ಲಿ ಪ್ರಶ್ನಿಸಿದರು. ಅವರ ಪ್ರಶ್ನೆ ಸರಿಯಾಗಿಯೇ ಇತ್ತು. ಆದರೆ ಶಿವಸಂಗ್ರಾಮ್ ಪಾರ್ಟಿಯವರಿಗೆ ಕೇಟ್ಕರ್ ಶಿವಾಜಿಗೆ ಅವಮಾನ ಮಾಡಿದ್ದಾರೆ ಎನಿಸಿತು. ಶಿವಾಜಿಯ ಪ್ರತಿಮೆ ಅಗತ್ಯವಿಲ್ಲ ಎಂದೇ ಆತ ಹೇಳಿದ್ದಾರೆಂದು ಭಾವಿಸಿದ ಅವರು ಕೇಟ್ಕರ್ರವರ ಮನೆಯ ಮೇಲೆ ದಾಳಿ ಮಾಡಿದರು. ಆದರೆ ಶಿವಸಂಗ್ರಾಮ್ ಪಾರ್ಟಿಯವರು ಶರದ್ ಪವಾರ್ರವರ ಎನ್ಸಿಪಿ ಪಕ್ಷದ ಅಂಗ ಸಂಸ್ಥೆಯಾಗಿರುವುದರಿಂದ ಅವರ ವಿರುದ್ಧ ಯಾವ ಕಾನೂನು ಕ್ರಮವನ್ನು ಅಲ್ಲಿನ ಸರ್ಕಾರ ತೆಗೆದುಕೊಂಡಿಲ್ಲ.
ಈ ವಾರ ನಡೆದಿರುವ ಈ ಪ್ರಕರಣಗಳು ಮೊದಲ ಬಾರಿಗೆ ನಡೆದಿರುವಂತಹದ್ದೇನಲ್ಲ. ಕಳೆದ ವರ್ಷ `ದಿನಸುಡರ್’ ಪತ್ರಿಕೆ ನಡೆಸಿದ ಸಮೀಕ್ಷೆಯೊಂದರಿಂದ ಉದ್ರೇಕಗೊಂಡ ಕರುಣಾನಿಧಿಯ ಬೆಂಬಲಿಗರು ಆ ಪತ್ರಿಕೆಯ ಕಚೇರಿಯ ಮೇಲೆ ದಾಳಿ ನಡೆಸಿ ಇಬ್ಬರ ಸಾವಿಗೆ ಕಾರಣರಾಗಿದ್ದರು. ಹಾಗೆಯೇ ಸರ್ವೋಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಬರ್ವಾಲ್ರ ಬಗ್ಗೆ ತನಿಖಾ ವರದಿಗಳನ್ನು ಪ್ರಕಟಿಸಿದ್ದಕ್ಕೆ ದೆಹಲಿ ನ್ಯಾಯಾಲಯ ಮಿಡ್ ಡೆ ಪತ್ರಿಕೆಯ ಮೂವರು ಪತ್ರಕರ್ತರಿಗೆ ಜೈಲು ಶಿಕ್ಷೆಯನ್ನು ನೀಡಿತ್ತು.
ಪ್ರಜಾಪ್ರಭುತ್ವದ ನಾಲ್ಕನೆ ಸ್ತಂಭವಾಗಿರುವ ಪತ್ರಿಕೋದ್ಯಮದ ಮೇಲೆ ಹೀಗೆ ಒಂದೆಡೆಯಿಂದ ಕೋಮುವಾದಿಗಳಿಂದ ದಾಳಿ, ಇನ್ನೊಂದೆಡೆ ವ್ಯವಸ್ಥೆಯಿಂದ ದಾಳಿ ನಡೆದರೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಾದರೂ ಉಳಿಯುವುದಾದರೂ ಹೇಗೆ?


