Homeಮುಖಪುಟಬ್ರಾಹ್ಮಣ್ಯ ಮತ್ತು ಪುರುಷಾಧಿಪತ್ಯ: ಟ್ವಿಟರ್‌ನಲ್ಲಿ ಬೆತ್ತಲಾದ ಭಾರತ!

ಬ್ರಾಹ್ಮಣ್ಯ ಮತ್ತು ಪುರುಷಾಧಿಪತ್ಯ: ಟ್ವಿಟರ್‌ನಲ್ಲಿ ಬೆತ್ತಲಾದ ಭಾರತ!

- Advertisement -
- Advertisement -

ಮಲ್ಲಿಗೆ ಸಿರಿಮನೆ |

Smash Brahminical Patriarchy- ಚಹರೆ 1
ಸಂಗಪಲ್ಲಿ ಅರುಣಾ ಎಂಬ ಯುವತಿ ಟ್ವಿಟರ್ ಸಿಇಓ ಜಾಕ್ ಡಾರ್ಸೆಗೆ ಒಂದು ಉಡುಗೊರೆ ನೀಡಿದರು. ಅದನ್ನು ಕೈಯ್ಯಲ್ಲಿ ಹಿಡಿದು ಅಲ್ಲಿದ್ದ ಇನ್ನಿತರ ಕೆಲವರೊಂದಿಗೆ ಜಾಕ್ ಒಂದು ಫೋಟೋಗೆ ಪೋಸ್ ನೀಡಿದರು. ಆ ಫೋಟೋವನ್ನು ಮೊದಲೇ ಪಡೆದಿದ್ದ ಅನುಮತಿಯ ಮೇರೆಗೆ ಆ ಸಂದರ್ಭದಲ್ಲಿ ಅಲ್ಲಿದ್ದ ಕೆಲವರು ತಮ್ಮ ಟ್ವಿಟರ್ ಖಾತೆಗಳಲ್ಲಿ ಪ್ರಕಟಿಸಿದರು. ಅದಾದ ತಕ್ಷಣ ಭಾರತ ಮತ್ತೊಮ್ಮೆ ತನ್ನ ಬ್ರಾಹ್ಮಣ್ಯದ ಪೂರ್ತಿ ವಿಕೃತತೆಯೊಂದಿಗೆ ಬೆತ್ತಲಾಯಿತು.

ನಡೆದದ್ದಿಷ್ಟು…..

ನ.18ರಂದು ಟ್ವಿಟರ್‌ನ ದೆಹಲಿ ಕಛೇರಿಯಲ್ಲಿ ಒಂದು ಸಭೆ ನಡೆಯಿತು. ಟ್ವಿಟರ್‌ನ ಸಿಇಓ ಜಾಕ್ ಡಾರ್ಸೆ ಮತ್ತು ಭಾರತದಲ್ಲಿನ ಮತ್ತೊಬ್ಬ ಟ್ವಿಟರ್ ಉನ್ನತಾಧಿಕಾರಿ ವಿಜಯಾ ಗದ್ದೆ ಈ ಅನೌಪಚಾರಿಕ ಸಭೆಯನ್ನು ಕರೆದಿದ್ದರು. ಈ ಸಭೆಗೆ ಭಾರತದಲ್ಲಿ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಆಯಾಮಗಳಿಂದ ಸಕ್ರಿಯವಾಗಿರುವ 7ಮಂದಿ ಮಹಿಳೆಯರನ್ನು ಕರೆಯಲಾಗಿತ್ತು. ಪತ್ರಕರ್ತೆ ಬರ್ಖಾ ದತ್, ಸಾಮಾಜಿಕ ಕಾರ್ಯಕರ್ತೆ ರಿತುಪರ್ಣಾ ಚಟರ್ಜಿ, ಅನ್ನಾ ಎಂಎಂ ವೆಟ್ಟಿಕಾಡ್, ನಿಲಾಂಜನಾ ಎಸ್.ರಾಯ್, ಜಾಲತಾಣದಲ್ಲಿ ‘ದಲಿತ್ ವಿಮೆನ್ ಫೈಟ್’ ಎಂಬ ಸಾಕಷ್ಟು ಪರಿಚಿತ ಖಾತೆಯನ್ನು ನಿರ್ವಹಿಸುವವರಲ್ಲಿ ಒಬ್ಬರಾದ ಸಂಗಪಲ್ಲಿ ಅರುಣಾ ಮೊದಲಾದವರು. ಈ ಸಭೆಯ ಉದ್ದೇಶ ಟ್ವಿಟರ್‌ನಲ್ಲಿ ಮಹಿಳೆಯರು ತಮ್ಮ ಅನುಭವ, ಆತಂಕ, ನಿಲುವುಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳಲು ಸಾಧ್ಯವಾಗುವಂತೆ, ಟ್ವಿಟರ್ ಮತ್ತು ಇನ್ನಿತರ ಜಾಲತಾಣಗಳಲ್ಲಿ ‘ಟ್ರೋಲ್’ ಎಂದು ಕರೆಯಲ್ಪಡುವ ಹಿಂಸೆಯಿಂದ ಮುಕ್ತವಾಗುವಂತೆ ಟ್ವಿಟರ್ ಏನು ಮಾಡಬೇಕು…. ಇದೇ ಮೊದಲಾದ ಮಹಿಳಾ ಸುರಕ್ಷತೆಯ ವಿಚಾರಗಳನ್ನು ಚರ್ಚಿಸುವುದಾಗಿತ್ತು. ಆದ್ದರಿಂದಲೇ ಟ್ವಿಟರ್‌ನ ಅತ್ಯುನ್ನತ ಅಧಿಕಾರಿ ಜಾಕ್ ಡಾರ್ಸೆಯ ಭಾರತ ಭೇಟಿಯ ಸಂದರ್ಭದಲ್ಲಿ ಈ ಸಭೆಯನ್ನು ಟ್ವಿಟರ್ ಏರ್ಪಡಿಸಿತ್ತು.

ಈ ಸಭೆಯ ಬಗ್ಗೆ ಅನ್ನಾ ಎಂಎಂ ವೆಟ್ಟಿಕಾಡ್, ರಿತುಪರ್ಣಾ ಚಟರ್ಜಿ, ನಿಲಾಂಜನಾ ರಾಯ್ ಮತ್ತು ಅರುಣಾ ಸೇರಿಕೊಂಡು ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಹೀಗೆ ವಿವರಿಸಲಾಗಿದೆ. ‘ಅದೊಂದು ಅನೌಪಚಾರಿಕ ಸಭೆಯಾಗಿತ್ತು. ಅಲ್ಲಿ ಯಾವುದೂ ಕೂಡಾ ಉದ್ದೇಶಪೂರ್ವಕವಾಗಿ ಮೊದಲೇ ಯೋಜಿತವಾಗಿ ನಡೆಯುವಂತಿರಲಿಲ್ಲ. ಅಂದು ನಮ್ಮೆಲ್ಲರಿಗೂ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಟ್ವಿಟರ್ ತಮ್ಮ ಬದ್ಧತೆಯನ್ನು ಹೇಗೆ ತೋರಬಹುದೆಂಬ ವಿಚಾರ, ಟ್ವಿಟರ್ ಸೇರಿದಂತೆ ಜಾಲತಾಣಗಳಲ್ಲಿ ಪ್ರದರ್ಶಿತವಾಗುವ ಮಹಿಳೆಯರ ಮೇಲೆ ದಾಳಿ ಮಾಡುವ ಮನೋಭಾವ, ಇಂತಹದ್ದರ ಬಗ್ಗೆ ನಮ್ಮ ಅನಿಸಿಕೆ, ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ತಿಳಿಸಲಾಗಿತ್ತು. ಟ್ವಿಟರ್‌ನ ಸಿಇಓ ಜಾಕ್ ಡಾರ್ಸೆ ಸೇರಿದಂತೆ ಇಡೀ ತಂಡ ಬಹಳ ಆತ್ಮೀಯವಾಗಿ, ತಾಳ್ಮೆಯಿಂದ ನಮ್ಮೆಲ್ಲರ ಅನುಭವ, ಅನಿಸಿಕೆ, ಸಲಹೆಗಳನ್ನು ಕೇಳಿ, ಬರೆದುಕೊಂಡರು. ಇದೇ ಸಂದರ್ಭದಲ್ಲಿ ದಲಿತ ಮಹಿಳಾ ವಿಚಾರಗಳ ಬಗ್ಗೆ ಹೆಚ್ಚು ಒಡನಾಟವಿರುವ ಅರುಣಾರವರು, ತಳಸಮುದಾಯಗಳನ್ನು, ಅದರಲ್ಲೂ ದಲಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಜಾಲತಾಣಿಗರು ನಡೆಸುವ ದಾಳಿಗಳ ಬಗ್ಗೆ ಅನುಭವ ಹಂಚಿಕೊಂಡರು. ಜಾತ್ಯಾಧಾರಿತ ಹೇಳಿಕೆಗಳನ್ನು ಟ್ವಿಟರ್ ಕಂಪೆನಿಗೆ ರಿಪೋರ್ಟ್ ಮಾಡಲು ಬೇಕಾದ ಅವಕಾಶ ಕೂಡಾ ಅದರಲ್ಲಿ ಇಲ್ಲ ಎಂಬುದನ್ನು

ಗಮನಕ್ಕೆ ತಂದರು. ವಿಸ್ತಾರವಾಗಿ ಜಾತ್ಯಾಧಾರಿತ ಪಿತೃಪ್ರಧಾನತೆ ಹೇಗೆ ದಲಿತ ಮಹಿಳೆಯರ ಎಲ್ಲ ಸ್ವತಂತ್ರ ಅಭಿವ್ಯಕ್ತಿಯನ್ನು ಕಸಿಯುತ್ತದೆ ಎಂಬುದನ್ನು ವಿವರಿಸಿದರು. ಇಡೀ ಸಂವಾದ ಪರಿಣಾಮಕಾರಿಯಾಗಿ ನಡೆಯಿತು. ಕೊನೆಗೆ ಅರುಣಾ ಸಿಇಓಗೆ ಒಂದು ಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ಆ ಚಿತ್ರದ ಜೊತೆಯಲ್ಲೇ ಆ ಚರ್ಚೆಯಲ್ಲಿ ಪಾಲ್ಗೊಂಡ ನಮ್ಮೆಲ್ಲರ ಜೊತೆ ಜಾಕ್ ಡಾರ್ಸೆ ಫೋಟೋ ತೆಗೆಸಿಕೊಂಡರು, ಮತ್ತು ಟ್ವಿಟ್ಟರ್‌ನ ಉದ್ಯೋಗಿಗಳಿಂದಲೇ ನಮಗೂ ತಲುಪಿದ ಆ ಚಿತ್ರವನ್ನು ಹಂಚಿಕೊಳ್ಳಲೂ ಕೇಳಲಾಗಿತ್ತು.

ಆದರೆ ಯಾವ ಬಗೆಯ ದಾಳಿ ಮತ್ತು ಬೆದರಿಕೆಗಳ ಬಗ್ಗೆ ಸಭೆ ನಡೆದಿತ್ತೋ, ಅಂತಹದ್ದೇ ದಾಳಿ ಈ ಚಿತ್ರದ ಸುತ್ತ ಟ್ವಿಟರ್‌ನಲ್ಲಿ ನಡೆಯಿತು. ‘ಬ್ರಾಹ್ಮಣೀಯ ಪುರುಷಾಧಿಪತ್ಯವನ್ನು ಧ್ವಂಸಗೊಳಿಸಿ’ (Smash Brahminical Patriarchy) ಎಂಬ ಕರೆಕೊಡುತ್ತಿದ್ದ ಆ ಪೇಂಟಿಂಗ್‌ನ್ನು ಜಾಕ್ ಕೈಯ್ಯಲ್ಲಿ ಹಿಡಿದುಕೊಂಡಿದ್ದು, ಹಲವು ಟ್ವಿಟರ್ ಬಳಕೆದಾರರಿಗೆ ಜನಾಂಗೀಯ ದ್ವೇಷದಂತೆ ಕಂಡು ಅವರು ನಮೆಲ್ಲರ ಮೇಲೆ ದಾಳಿಗಿಳಿದರು. ಈ ದಾಳಿಯಲ್ಲಿ ಭಾರತ ಮತ್ತು ಹೊರಗೆ ನೆಲೆಸಿರುವ ಬ್ರಾಹ್ಮಣ/ಮೇಲ್ಜಾತಿ ಟ್ವಿಟರಿಗರೆಲ್ಲ ಭಾಗಿಯಾದರು (ಕೆಲವು ಹೆಸರಾಂತ ಚಿಂತಕರು, ಬರಹಗಾರರನ್ನೂ ಒಳಗೊಂಡಂತೆ). ಇದು ಎಷ್ಟು ತೀವ್ರವಾಗಿ ನಡೆಯಿತೆಂದರೆ, ಜಾಕ್ ಡಾರ್ಸೆ ಕ್ಷಮೆ ಕೇಳಿದರು ಮಾತ್ರವಲ್ಲ ಟ್ವಿಟರ್ ಈ ಕುರಿತು ವಿಷಾದ ವ್ಯಕ್ತಪಡಿಸಿ ಅಧಿಕೃತ ಹೇಳಿಕೆ ಹೊರಡಿಸಿತು. ಎಲ್ಲಿಂದ ಆರಂಭವಾಯಿತೋ ಕೊನೆಗೆ ನೋಡಿದರೆ ನಾವು ಮತ್ತೆ ಅಲ್ಲಿಗೇ ಬಂದು ನಿಂತಿದ್ದೆವು………” ಎಂದು ರಿತುಪರ್ಣಾ ಹೇಳಿದ್ದಾರೆ.

ಈ ಎಲ್ಲ ದಾಳಿಗಳ ಗುರಿಯಾದ ಸಂಗಪಲ್ಲಿ ಅರುಣಾ ಮತ್ತು ಆಕೆ ನೀಡಿದ ಪೇಂಟಿಂಗ್‌ಅನ್ನು ರಚಿಸಿದ ಭಾರತ ಸಂಜಾತ ಕಲಾವಿದೆ ಕನಿಮೋಳಿ ಸಹಾ ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅರುಣಾ ಈ ಬಗ್ಗೆ ಬರೆಯುತ್ತಾ, ಈಗ ನಡೆದಿರುವ ದಾಳಿಯೇ ಸಾಕ್ಷಿ, ನಾನು ಆ ಸಭೆಯಲ್ಲಿ ಹಂಚಿಕೊಂಡ ನನ್ನ ಅನುಭವಗಳು ಸಂಪೂರ್ಣ ಸತ್ಯ ಎಂಬುದಕ್ಕೆ. ಟ್ವಿಟರ್ ಮಾತ್ರವಲ್ಲ ಎಲ್ಲ ಜಾಲತಾಣಗಳಲ್ಲೂ ದಲಿತ ಮಹಿಳೆಯರು ತಮ್ಮನ್ನು ತಾವು ಅಭಿವ್ಯಕ್ತಿಸಲು ಮುಕ್ತ ಅವಕಾಶ ಆಗಲೇಬೇಕು, ಅಂತಹ ವೇದಿಕೆಗಳು ಬಹಳ ಮುಖ್ಯ ಎಂದಿದ್ದಾರೆ. ಕನಿಮೋಳಿ ಸಾಮಾಜಿಕ ಜಾಲತಾಣಗಳಲ್ಲಿ ‘ದಲಿತ್ ದಿವಾ’ ಹೆಸರಿನಲ್ಲಿ ಸಕ್ರಿಯವಾಗಿದ್ದಾರೆ. ಅವರು ಇಂತಹ ಎಷ್ಟೇ ದಾಳಿ ನಡೆದರೂ ನಮ್ಮ ವಾದವನ್ನು ನಾವು ಮುಂದಿಡಲೇಬೇಕಿದೆ. ಒಂದು ವೇಳೆ ಟ್ವಿಟರ್ ಅದಕ್ಕೆ ಅವಕಾಶ ನೀಡುವಷ್ಟು ಮುಕ್ತವಾಗಿಲ್ಲವಾದರೆ ಅದನ್ನು ತೊರೆದು ಪರ್ಯಾಯ ಹುಡುಕಿಕೊಳ್ಳಲೂ ಕೂಡಾ ಸಿದ್ಧ ಎಂದು ದಿಟ್ಟವಾದ ಸಂದೇಶ ನೀಡಿದ್ದಾರೆ.

ಇದೆಲ್ಲಕ್ಕಿಂತ, ಆಘಾತಕಾರಿಯಾದದ್ದು ಟ್ವಿಟರ್‌ನ ನಡವಳಿಕೆ. ಅದನ್ನು ಹೇಳಿಕೆಗೆ ಸಹಿ ಮಾಡಿರುವ ಈ ಎಲ್ಲ ಮಹಿಳೆಯರು ಟೀಕಿಸಿದ್ದಾರೆ. ಈ ಸಭೆಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಜಯಾ ಗದ್ದೆ ಅವರು ವಿವಾದ ಆರಂಭವಾಗುತ್ತಿದ್ದಂತೆಯೇ, ‘ಈ ಮಹಿಳೆಯರು ದ್ವೇಷ ಹರಡುತ್ತಿದ್ದಾರೆ’ ಎಂದು ಆರೋಪಿಸಿದ ಟ್ವಿಟರ್ ಹ್ಯಾಂಡಲ್‌ಗಳ ಕ್ಷಮೆ ಕೇಳಿದರು, ಅಲ್ಲಿ ತೆಗೆಯಲಾಗಿದ್ದ ಗುಂಪು ಫೋಟೋ ಖಾಸಗಿಯಾಗಿತ್ತು ಎಂದು ಸತ್ಯಕ್ಕೆ ದೂರವಾದ ಮಾತು ಹೇಳಿದರು ಹಾಗೂ ತಕ್ಷಣವೇ ದಲಿತ ಮತ್ತು ಮಹಿಳಾ ಕಾಳಜಿಗಳಿಂದ ದೂರ ಸರಿದರು. ಆಕೆ ಮಾತ್ರವಲ್ಲ, ಇನ್ನಿತರ ದೇಶಗಳಲ್ಲಿ ಮಹಿಳಾ ಮತ್ತು ಅಂಚಿಗೊತ್ತಲ್ಪಟ್ಟ ಸಮುದಾಯಗಳ ಕಾಳಜಿಗಳ ಬಗ್ಗೆ ಬಹಳ ಸೂಕ್ಷ್ಮತೆ ಪ್ರದರ್ಶಿಸುವ ಟ್ವಿಟರ್ ಇಲ್ಲಿ ಮಾತ್ರ ಹೇಗೆ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿತು? ಲೈಂಗಿಕ ಹಿಂಸಾಚಾರವನ್ನು ಅಥವಾ ವರ್ಣನಿಂದನೆಯನ್ನು ಪರೋಕ್ಷವಾಗಿ ಸಮರ್ಥಿಸುವ ಕೆಲವು ಹೇಳಿಕೆಗಳು ಅಥವಾ ಚಿತ್ರಗಳು ಬಂದಷ್ಟಕ್ಕೇ, ಇತರ ದೇಶಗಳಲ್ಲಿ ಇದಕ್ಕಾಗಿ ಪಶ್ಚಾತ್ತಾಪವಾಗಿದೆ, ಇದನ್ನು ತಡೆಯುತ್ತೇವೆ ಎಂದು ಸೂಕ್ಷ್ಮತೆ ತೋರಿದ್ದ ಸಿಇಓ ಅವರಿಗೆ, ಭಾರತದಲ್ಲಿ ಈ ಒಂದು ಪೋಸ್ಟರ್ ಕಾರಣಕ್ಕೆ ಮಹಿಳೆಯರ ಮೇಲೆ ನಡೆದ ದಾಳಿ ಅಸಮರ್ಪಕ ಅನ್ನಿಸಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಟ್ವಿಟರ್ ನಿಜಕ್ಕೂ ಈ ಸಂದರ್ಭದಲ್ಲಿ ಧೈರ್ಯವಹಿಸಬೇಕು ಮತ್ತು ತಾನು ಈವರೆಗೆ ಏನನ್ನು ಹೇಳಿಕೊಂಡು ಬಂದಿದೆಯೋ ಅಂತಹ ನ್ಯಾಯನಿಷ್ಠುರತೆಯನ್ನು ಪ್ರದರ್ಶಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

Smash Brahminical Patriarchy- ಚಹರೆ 2

ಬ್ರಾಹ್ಮಣೀಯ ಪಿತೃಪ್ರಧಾನತೆಯನ್ನು ಮುರಿಯದೆ ಬೇರೆಯೇ ದಾರಿಯೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ!

ಭಾರತದ ಸಂದರ್ಭದಲ್ಲಿ ಜಾತಿ, ವರ್ಗ ಮತ್ತು ಲಿಂಗಗಳು ಬೇರ್ಪಡಿಸಲಾಗದಂತೆ ಹೆಣೆದುಕೊಂಡಿವೆ. ಅವು ಒಂದನ್ನೊಂದು ಪ್ರಭಾವಿಸುವುದು ಮಾತ್ರವಲ್ಲ, ಒಂದರಿಂದೊಂದು ರೂಪು ತಾಳಿವೆ. ಮದುವೆ ಮತ್ತು ಕುಟುಂಬ ವ್ಯವಸ್ಥೆ, ಮಹಿಳೆಯ ಲೈಂಗಿಕತೆ ಹಾಗೂ ಸಂತಾನೋತ್ಪತ್ತಿಗಳಿಗೆ ಬಿಗಿಯಲಾಗಿರುವ ಕಟ್ಟುಪಾಡುಗಳೇ ಭಾರತದ ಜಾತಿವ್ಯವಸ್ಥೆಯನ್ನು ಉಳಿಸಿಕೊಂಡಿರುವ ಅಡಿಪಾಯಗಳು. ಪುರುಷಾಧಿಪತ್ಯವನ್ನು ಖಾತ್ರಿಗೊಳಿಸುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ರಚನೆಗಳು ಜಾತಿವ್ಯವಸ್ಥೆಯ ಹುಟ್ಟು ಮತ್ತು ಅಸ್ತಿತ್ವಕ್ಕೂ ಕಾರಣವಾಗಿರುವಂಥವು. ಹಾಗೆಯೇ, ತನ್ನ ಸರದಿಯಲ್ಲಿ ಜಾತಿವ್ಯವಸ್ಥೆ ಪಿತೃಪ್ರಧಾನ ಮೌಲ್ಯವ್ಯವಸ್ಥೆಯನ್ನು ಬಲವಾಗಿ ಉಳಿಸಿಕೊಂಡು ಬಂದಿದೆ; ತುಳಿಯುವವರು ಮಾತ್ರವಲ್ಲ, ತುಳಿತಕ್ಕೊಳಗಾದವರೂ ಕೂಡಾ ಅವೇ ಮೌಲ್ಯಗಳನ್ನು ಒಪ್ಪಿ ಅನುಸರಿಸಿಕೊಂಡು ಹೋಗುವಂತೆ ಮಾಡಿದೆ.

‘ಬ್ರಾಹ್ಮಣೀಯ ಪಿತೃಪ್ರಧಾನತೆ’ಯ ಪರಿಕಲ್ಪನೆಯನ್ನು ಭಾರತದ ಸಾಮಾಜಿಕ ವಾಸ್ತವಗಳ ಹಿನ್ನೆಲೆಯಲ್ಲಿ ಅತ್ಯಂತ ಸರಿಯಾಗಿ ಕಟ್ಟಿಕೊಟ್ಟವರು ಡಾ. ಅಂಬೇಡ್ಕರ್. ತನ್ನ ಪ್ರಕಾರ ಬ್ರಾಹ್ಮಣವಾದ ಎಂದರೆ ಏನು ಎಂಬುದನ್ನೂ ವಿವರಿಸುತ್ತಾರೆ. ಎಲ್ಲ ಬಗೆಯ ಶ್ರೇಣೀಕೃತ ಅಸಮಾನತೆಗಳಿಗೆ ಜನ್ಮ ಕೊಟ್ಟಿರುವ ಈ ಚಿಂತನಾಕ್ರಮ, ಮೂಲತಃ ಪ್ರತಿಯೊಂದನ್ನೂ ಶ್ರೇಷ್ಠ-ಕನಿಷ್ಠಗಳೆಂದು ವಿಭಜಿಸುತ್ತದೆ; ಆ ವಿಭಜನೆಯನ್ನು ಹುಟ್ಟುಹಾಕಿ, ಉಳಿಸಿ, ಬೆಳೆಸುವ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಂರಚನೆಗಳನ್ನು ನಿರ್ಮಿಸುತ್ತದೆ. ಆದ್ದರಿಂದ, ಯಾವುದೇ ಶೋಷಣೆಯ/ಅಸಮಾನತೆಯ ಸ್ವರೂಪವನ್ನು ಕೆದಕುತ್ತಾ ಹೋದರೂ ಅದರ ಮೂಲದಲ್ಲಿ ನಾವು ಬ್ರಾಹ್ಮಣವಾದ ಅಥವಾ ಬ್ರಾಹ್ಮಣೀಯ ಚಿಂತನೆಗಳಿಗೇ ಬಂದು ತಲುಪುತ್ತೇವೆ ಎಂದು ಅಂಬೇಡ್ಕರ್ ಹೇಳುತ್ತಾರೆ.

1916ರಲ್ಲಿ ಅಂಬೇಡ್ಕರರ ಒಂದು ಭಾಷಣ-ಪ್ರಬಂಧದಲ್ಲಿ ಭಾರತದ ‘ಅಂತರ್ವಿವಾಹ’ ಪದ್ಧತಿಯನ್ನು (ಆಯಾ ಜಾತಿಗಳ/ ಪಂಗಡಗಳ ಒಳಗೆ ಮಾತ್ರವೇ ವಿವಾಹ ಸಂಬಂಧ ಬೆಳೆಸುವ ಪದ್ಧತಿ) ಟೀಕಿಸುತ್ತಾ, ಅವರು ಭಾರತದ ಪುರುಷಾಧಿಪತ್ಯವು ‘ಬ್ರಾಹ್ಮಣೀಯವಾದದು’ ಅಥವಾ ‘ಶ್ರೇಣೀಕೃತವಾದದ್ದು’ ಎಂದು ಗುರುತಿಸುತ್ತಾರೆ. ಅಂದರೆ, ಮೇಲ್ಜಾತಿಗಳ ಮಹಿಳೆಯರ ದೇಹ, ಲೈಂಗಿಕತೆ ಮತ್ತು ಸಂತಾನಗಳು ಜಾತಿ ಶುದ್ಧತೆಯನ್ನು ಕಾಪಾಡುವ ಒತ್ತಡಕ್ಕೆ ಸಿಲುಕಿ ಶೋಷಣೆಗೊಳಪಟ್ಟರೆ, ತಳಸಮುದಾಯಗಳ ಹೆಣ್ಣುಮಕ್ಕಳ ದೇಹ, ಶ್ರಮ ಮತ್ತು ಲೈಂಗಿಕತೆಗಳು ಜಾತಿ-ವರ್ಗಾಧಿಕಾರಗಳ ಕಾರಣಕ್ಕೆ ಶೋಷಣೆಗೊಳಪಡುತ್ತವೆ. ಬ್ರಾಹ್ಮಣಶಾಹಿ ವ್ಯವಸ್ಥೆ ಮತ್ತು ಚಿಂತನಾಕ್ರಮ ಹೇಗೆ ಇಡೀ ಸಮಾಜದ ಎಲ್ಲ ಜಾತಿಗಳನ್ನು ಒಂದರ ಮೇಲೊಂದರಂತೆ ಪೇರಿಸಿಕೊಂಡು ಹೋಗಿವೆಯೋ ಹಾಗೆಯೇ, ಮಹಿಳಾ ಸಮುದಾಯವನ್ನೂ ಕೂಡಾ ಶ್ರೇಣೀಕರಿಸಲಾಗಿದೆ; ಆದರೆ, ಇಲ್ಲಿನ ವಿಪರ್ಯಾಸವೆಂದರೆ, ಸ್ವತಃ ಜಾತಿ ಪರಿಶುದ್ಧತೆಯ ತತ್ವದ ಕಾರಣಕ್ಕೆ ಶೋಷಣೆಗೊಳಗಾಗಿದ್ದರೂ ಮೇಲ್ಜಾತಿಗಳ ಮಹಿಳೆಯರು, ಪುರುಷಾಧಿಪತ್ಯ ಮತ್ತು ಜಾತಿ ವ್ಯವಸ್ಥೆಯನ್ನು ಕಾಪಾಡುವ ಬ್ರಾಹ್ಮಣೀಯ ವ್ಯವಸ್ಥೆಯ ಜೊತೆ ಹೆಚ್ಚು ಸೇರಿಕೊಳ್ಳುತ್ತಾರೆ ಎಂಬುದನ್ನೂ ಡಾ.ಅಂಬೇಡ್ಕರ್ ವಿಸ್ತಾರವಾಗಿ ಹೇಳುತ್ತಾರೆ.

ಹೀಗೆ, ಬ್ರಾಹ್ಮಣೀಯ ಪುರುಷಾಧಿಪತ್ಯ ಎಂಬ ಪರಿಕಲ್ಪನೆ, ಭಾರತದ ಪಿತೃಪ್ರಧಾನತೆಯ ಎಲ್ಲ ಲಕ್ಷಣಗಳು, ಕಾರಣಗಳು ಮತ್ತು ಅದು ವ್ಯಕ್ತಗೊಳ್ಳುವ ಬಗೆಗಳನ್ನೂ ಒಳಗೊಂಡಂತೆ ಎಲ್ಲವನ್ನೂ ಸಮಗ್ರವಾಗಿ ವಿವರಿಸುವಂಥದ್ದು. ಆದ್ದರಿಂದ, ಪಾಶ್ಚಾತ್ಯ ದೇಶಗಳ ಕಪ್ಪು ಮಹಿಳಾ ಹೋರಾಟಗಾರ್ತಿಯರಂತೆಯೇ, ಭಾರತದ ದಲಿತ ಸ್ತ್ರೀವಾದಿ ಮಹಿಳೆಯರು ‘ಬ್ರಾಹ್ಮಣೀಯ ಪಿತೃಪ್ರಧಾನತೆ’ ಎಂಬ ಗಹನವಾದ ಪರಿಕಲ್ಪನೆಯನ್ನು ಸಾಕಷ್ಟು ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದಾರೆ. ಆದರೂ, ಈ ಸಂಘರ್ಷ ದಿನೇ ದಿನೇ ತೀಕ್ಷ್ಣಗೊಳ್ಳುತ್ತಲೇ ಇದೆ. ಇಲ್ಲದಿದ್ದರೆ, ಈಚೆಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಫೋಟೋ ಒಂದರಲ್ಲಿದ್ದ ಪೋಸ್ಟರ್ ಮೇಲಿನ ಘೋಷಣೆಯ ಕಾರಣಕ್ಕೆ ಟ್ವಿಟರಿಗರು ಗದ್ದಲವೆಬ್ಬಿಸುವ ಸಂದರ್ಭ ಬರುತ್ತಿರಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...